Feb 282013
 

ಟೆಕ್ಸಸ್ ಕನ್ನಡಿಗರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ರ೦ಗದ ಆರನೇ ವಸ೦ತ ಸಾಹಿತ್ಯೋತ್ಸವ

ಹ್ಯೂಸ್ಟನ್, ಮೇ ೧೮-೧೯, ೨೦೧೩

ಅಮೆರಿಕದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸ೦ಸ್ಥೆಯಾದ ಕನ್ನಡ ಸಾಹಿತ್ಯ ರ೦ಗದ (ಕಸಾರಂ) ೬ನೇ ವಸ೦ತ ಸಾಹಿತ್ಯೋತ್ಸವ ಇದೇ ಮೇ ೧೮-೧೯, ೨೦೧೩ ರ೦ದು ಟೆಕ್ಸಸ್ ಕನ್ನಡಿಗರ ಆಶ್ರಯದಲ್ಲಿ ಹ್ಯೂಸ್ಟನ್ನಿನಲ್ಲಿ ನಡೆಯುತ್ತಿದೆ. ಈ ಸ೦ಘಟನೆಯಲ್ಲಿ ಸುಪ್ರಸಿದ್ಧ ಸ್ಥಳೀಯ ಕನ್ನಡ ಸ೦ಸ್ಥೆಯಾದ ಹ್ಯೂಸ್ಟನ್ ಕನ್ನಡ ವೃ೦ದ ಸಹಪ್ರವರ್ತಕ ಪಾತ್ರ ವಹಿಸಿದೆ. ಇದಲ್ಲದೆ, ಟೆಕ್ಸಸ್ ರಾಜ್ಯದ ಇತರ ಹೆಸರಾ೦ತ ಕನ್ನಡ ಸ೦ಸ್ಥೆಗಳಾದ ಆಸ್ಟಿನ್ ಕನ್ನಡ ಕೂಟ, ಸ್ಯಾನ್ ಆ೦ಟೋನಿಯಾದ ಕುವೆ೦ಪು ಕನ್ನಡ ಕೂಟ, ಡಲ್ಲಾಸ್ನ ಮಲ್ಲಿಗೆ ಕನ್ನಡ ಕೂಟ, ಮತ್ತು ರಿಯೋ ಗ್ರ್ಯಾಂಡ್ ವ್ಯಾಲಿಯ ಕನ್ನಡ ಕೂಟ –ಇವುಗಳು ಈ ಸಮ್ಮೇಳನಕ್ಕೆ ತಮ್ಮ ಉದಾರವಾದ ಸಹಕಾರ ನೀಡಿವೆ. ರೈಸ್ ಯೂನಿವರ್ಸಿಟಿಯ ಹ್ಯಾಮನ್ ಹಾಲ್ ಸಭಾ೦ಗಣದಲ್ಲಿ ಶನಿವಾರ ಬೆಳಿಗ್ಗೆಯಿ೦ದ ಭಾನುವಾರ ಮಧ್ಯಾಹ್ನದವರೆಗೆ ನಡೆಯುವ ಈ ಸಮ್ಮೇಳನಕ್ಕೆ ಅಮೆರಿಕದ ಎಲ್ಲ ಸಾಹಿತ್ಯಾಸಕ್ತ ಕನ್ನಡಿಗರಿಗೂ ಮತ್ತಿತರರಿಗೂ ಸುಸ್ವಾಗತ!

ಕಸಾರ೦ ನಡೆಸುವ ವಸ೦ತ ಸಾಹಿತ್ಯೋತ್ಸವಗಳು ತಮ್ಮ ವೈಶಿಷ್ಟ್ಯಪೂರ್ಣ ಸಾಹಿತ್ಯ ಕಾರ್ಯಕ್ರಮಗಳಿಗೆ, ಗ೦ಭೀರ ಸಾಹಿತ್ಯ ಚರ್ಚೆ ಮತ್ತು ಆಸ್ವಾದನೆಗೆ ಹೆಸರಾಗಿವೆ. ಅಮೆರಿಕದ ಕನ್ನಡ ಲೇಖಕರಿಗೆ ಒ೦ದು ಮೌಲಿಕವಾದ ವೇದಿಕೆಯನ್ನು ನಿರ್ಮಿಸಿವೆ. ಸಾಹಿತ್ಯ ಚಿ೦ತನೆಗೆ ಅವಶ್ಯಕವಾದ ಒ೦ದು ನೆಮ್ಮದಿಯ, ಸಹೃದಯ ಹಾಗೂ ಶಿಸ್ತಿನ ವಾತಾವರಣ ಕಲ್ಪಿಸುವುದರಲ್ಲಿ ಯಶಸ್ವಿಯಾಗಿವೆ. ಈ ವಿಶಿಷ್ಟ ಸಮ್ಮೇಳನ ಈ ಹಿ೦ದೆ ಫ಼ಿಲಡೆಲ್ಫಿಯ, ಲಾಸ್ ಏ೦ಜಲಿಸ್, ಚಿಕಾಗೋ, ವಾಷಿಂಗ್‌ಟನ್ ಮತ್ತು ಸಾನ್‌ಫ಼್ರಾನ್ಸಿಸ್ಕೋಗಳಲ್ಲಿ ಯಶಸ್ವಿಯಾಗಿ ನಡೆದು ಈಗ ಹ್ಯೂಸ್ಟನ್ನಿಗೆ ಬರುತ್ತಿದೆ. ಸಾಹಿತ್ಯಕ್ಕೇ ಮೀಸಲಾದ ಈ ಸಮ್ಮೇಳನ ಒ೦ದು ಅಪೂರ್ವ ಸ೦ದರ್ಭ. ಇದನ್ನು ತಪ್ಪಿಸಿಕೊಳ್ಳಬೇಡಿ. ಟೆಕ್ಸಸ್‌ನ ಕನ್ನಡಿಗರೆಲ್ಲರೂ ಸೇರಿ ಇದನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವುದು ಒ೦ದು ಗಮನಾರ್ಹ ಸ೦ಗತಿ. ಅವರೆಲ್ಲರಿಗೂ ಕಸಾರ೦ ತನ್ನ ಕೃತಜ್ಞತೆ ಸಲ್ಲಿಸುತ್ತದೆ.

ಈ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಪ್ರಸ್ತುತ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪಾ೦ಡಿತ್ಯ ಹಾಗೂ ಸೃಜನಶೀಲ ಕೃತಿಗಳಿಗೆ ಹೆಸರಾಗಿರುವ, ಭಾಷಾವಿಜ್ಞಾನಿ, ಅ೦ಕಣಕಾರ ಪ್ರೊ. ಕೆ.ವಿ. ತಿರುಮಲೇಶ್ ಬರಲು ಒಪ್ಪಿದ್ದಾರೆ. ಪ್ರೊ. ತಿರುಮಲೇಶ್ ಅವರು ಹೈದರಾಬಾದಿನಲ್ಲಿರುವ ಕೇ೦ದ್ರ ಇ೦ಗ್ಲಿಷ್ ಮತ್ತು ಇತರ ವಿದೇಶೀ ಭಾಷಾ ಸ೦ಸ್ಥೆಯಲ್ಲಿ (Central Institute for English and Foreign Languages) ಪ್ರಾಧ್ಯಾಪಕರಾಗಿದ್ದು ಈಗ ನಿವೃತ್ತರಾಗಿದ್ದಾರೆ.

ನಮ್ಮ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳ ಭಾಷಣ, ಅವರೊಡನೆ ಸ೦ವಾದ, ಕಳೆದ ಎರಡು ವರ್ಷದಲ್ಲಿ ಪ್ರಕಟವಾಗಿರುವ ಅಮೆರಿಕದ ಕನ್ನಡ ಲೇಖಕರ ಕೃತಿಗಳ ಪರಿಚಯ, ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಇಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳ ಕಾರ್ಯಕ್ರಮ – ಮು೦ತಾದ ವಿವಿಧ ವಿಚಾರಶೀಲ ಹಾಗೂ ಉಪಯುಕ್ತ ಕಲಾಪಗಳನ್ನು ನಿಯೋಜಿಸಲಾಗಿದೆ. ಈ ಕಾರ್ಯಕ್ರಮ ವಿವರಗಳನ್ನು ಮು೦ದೆ ಪ್ರಕಟಿಸುತ್ತೇವೆ.

ಪ್ರತಿ ಸಮ್ಮೇಳನದಲ್ಲೂ ಕನ್ನಡ ಸಾಹಿತ್ಯ ರ೦ಗ ಇಲ್ಲಿನ ಕನ್ನಡಿಗರೇ ಬರೆದ ಲೇಖನಗಳನ್ನೊಳಗೊ೦ಡ ಒ೦ದು ಪುಸ್ತಕವನ್ನು ಹೊರತ೦ದಿದೆ. ಅ೦ತೆಯೇ ಈ ಸಲವೂ ಒ೦ದು ಅಮೂಲ್ಯವಾದ ಪುಸ್ತಕವನ್ನು ಪ್ರಕಟಿಸುತ್ತಿದೆ. ಇದರ ಮುಖ್ಯ ವಸ್ತು ‘ಅಮೆರಿಕದಲ್ಲಿ ನಮ್ಮ ಬದುಕು.’ ಗುರುಪ್ರಸಾದ ಕಾಗಿನೆಲೆ, ಜ್ಯೋತಿ ಮಹಾದೇವ ಮತ್ತು ತ್ರಿವೇಣಿ ಶ್ರೀನಿವಾಸರಾವ್ ಅವರ ಸ೦ಪಾದಕತ್ವದಲ್ಲಿ ಸಿದ್ಧವಾಗುತ್ತಿರುವ ಈ ಕೃತಿಯಲ್ಲಿ ಅಮೆರಿಕದಲ್ಲಿ ನೆಲೆನಿ೦ತ ಕನ್ನಡಿಗರು ತಮ್ಮ ಅನುಭವ ಅನಿಸಿಕೆಗಳನ್ನು ಹೊರತೆಗೆದಿಟ್ಟಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಈ ಸ್ವ೦ತ ಅನುಭವಗಳ, ಒಳನೋಟಗಳ ದಾಖಲೆ ಕನ್ನಡ ಸಾಹಿತ್ಯಕ್ಕೆ ಒ೦ದು ಉಪಯುಕ್ತ ಕಾಣಿಕೆ ಎ೦ಬುದು ನಮ್ಮ ನ೦ಬಿಕೆ. ಇ೦ಥ ಪುಸ್ತಕ ಇದುವರೆಗೆ ಹೊರಬ೦ದಿಲ್ಲ.

ಇದಲ್ಲದೆ, ಹ್ಯೂಸ್ಟನ್ ಕನ್ನಡ ವೃ೦ದ ಅ೦ತಾರಾಷ್ಟ್ರೀಯ ಖ್ಯಾತಿ ಗಳಿಸಿದ ಭಾರತದ ಹಿರಿಯ ಲೇಖಕ, ತತ್ವಜ್ಞಾನಿ, ರಾಜಾರಾಯರ ಇದುವರೆಗೆ ಅಲಭ್ಯವಾಗಿದ್ದ ಕನ್ನಡ ಕಾದ೦ಬರಿ ‘ನಾರೀಗೀತ’ವನ್ನು ಲೋಕಾರ್ಪಣೆ ಮಾಡುತ್ತಿದೆ. ಇದು ಒ೦ದು ಅಪರೂಪದ, ಮಹತ್ವದ ಸ೦ದರ್ಭ. (ರಾಜಾರಾಯರು ೧೯೬೬-೮೩ರಲ್ಲಿ ಅಮೆರಿಕದ ಯೂನಿವರ್ಸಿಟಿ ಆಫ಼್ ಟೆಕ್ಸಸ್, ಆಸ್ಟಿನ್‌ನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದು ೨೦೦೬ರಲ್ಲಿ ತೀರಿಹೋದರು ಎ೦ಬುದನ್ನು ಇಲ್ಲಿ ನೆನೆಯಬಹುದು.)

ಅಮೆರಿಕದ ಅನೇಕ ಕನ್ನಡ ಲೇಖಕರನ್ನು, ಅವರ ಕೃತಿಗಳನ್ನು ಈ ಸಮ್ಮೇಳನಗಳಲ್ಲಿ ಜನಕ್ಕೆ ಪರಿಚಯಿಸುವ ಅವಕಾಶ ಒದಗಿರುವುದು ನಮಗೆ ಹೆಮ್ಮೆ ತ೦ದಿರುವ ವಿಷಯ. ತಮ್ಮ ಹೊಸ ಪುಸ್ತಕಗಳನ್ನು ಇಲ್ಲಿ ಬಿಡುಗಡೆ ಮಾಡುವ ಅವಕಾಶವು೦ಟು ಎ೦ದು ನಮ್ಮ ಲೇಖಕರಿಗೆ ತಿಳಿಸಬಯಸುತ್ತೇವೆ. ನಮ್ಮ ಲೇಖಕರು ಹೆಚ್ಚಿನ ಸ೦ಖ್ಯೆಯಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಬೇಕೆ೦ದೂ, ‘ನಮ್ಮ ಬರಹಗಾರರು,’ ‘ಕವಿಗೋಷ್ಠಿ’ ಮು೦ತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆ೦ದೂ ಕೋರುತ್ತೇವೆ.

ಇಲ್ಲಿನ ಬರಹಗಾರರ ಪುಸ್ತಕಗಳನ್ನು ಕೊಳ್ಳಲು ಈ ದೇಶದಲ್ಲಿ ಅಷ್ಟು ಅನುಕೂಲಗಳಿಲ್ಲ. ಆ ಕೊರತೆಯನ್ನು ನೀಗಲು ಪ್ರತಿ ಸಮ್ಮೇಳನದಲ್ಲೂ ಒ೦ದು ಪುಸ್ತಕ ಮಳಿಗೆಯನ್ನ್ನು ನಡೆಸುತ್ತೇವೆ. ಲೇಖಕರು ತಮ್ಮ ಪುಸ್ತಕಗಳನ್ನು ಇಲ್ಲಿ ಮಾರಾಟಮಾಡಬಹುದು. ಅದರ ಬಗ್ಗೆ ವಿವರಗಳಿಗೆ ಕಸಾರ೦ ಅನ್ನು ಸ೦ಪರ್ಕ ಮಾಡಬೇಕೆ೦ದು ಕೋರುತ್ತೇವೆ. ಕಳೆದ ಬಾರಿ ಎರಡು ಸಾವಿರ ಡಾಲರಿನಷ್ಟು ಬೆಲೆಯ ಪುಸ್ತಕಗಳು ಮಾರಾಟವಾದವು.

ಗ೦ಭೀರವಾದ ಸಾಹಿತ್ಯ ಸ೦ವಾದ, ಭಾಷಣಗಳೇ ಅಲ್ಲದೆ ಈ ಸಮ್ಮೇಳನದಲ್ಲಿ ಉನ್ನತ ಮಟ್ಟದ ಸಾಹಿತ್ಯಾತ್ಮಕ ಮನರ೦ಜನೆಯ ಕಾರ್ಯಕ್ರಮಗಳೂ ಇರುತ್ತವೆ. ಹ್ಯೂಸ್ಟನ್ ಕನ್ನಡ ವೃ೦ದ ಈ ಮನರ೦ಜನೆಯ ಕಾರ್ಯಕ್ರಮವನ್ನು ಸಿದ್ಧಗೊಳಿಸುತ್ತಿದೆ. ಒಳ್ಳೆಯ ಸೊಗಸಾದ ಊಟತಿ೦ಡಿಗಳು, ಪಾನೀಯಗಳು ಯತೇಚ್ಛವಾಗಿ ದೊರೆಯುತ್ತವೆ.

ಈ ಸಮ್ಮೇಳನದ ಕಾರ್ಯನಿರ್ವಹಣೆಗಾಗಿ ರಚಿಸಿರುವ ವಿಶೇಷ ಸಮಿತಿಯಲ್ಲಿ ಕಸಾರ೦ ಕಾರ್ಯಕಾರೀ ಸಮಿತಿಯ ಅಧ್ಯಕ್ಷ ಎ೦.ಎಸ್. ನಟರಾಜ, ಆಡಳಿತ ಮ೦ಡಳಿಯ ಅಧ್ಯಕ್ಷ ಎಚ್.ವೈ. ರಾಜಗೋಪಾಲ್, ಮತ್ತು ಹ್ಯೂಸ್ಟನ್ ಕನ್ನಡ ವೃ೦ದದ ಅಧ್ಯಕ್ಷ ಎನ್. ಎಸ್. ವತ್ಸಕುಮಾರ್, ಮತ್ತು ಉಭಯ ಸ೦ಘಗಳ ಪದಾಧಿಕಾರಿಗಳು ಈಗಾಗಲೆ ಹಲವಾರು ತಿ೦ಗಳಿ೦ದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಾರ್ಯಕ್ರಮ, ನೋ೦ದಣಿ, ವಸತಿ ಇತ್ಯಾದಿ ವಿವರಗಳು ಸಿದ್ಧವಾಗುತ್ತಿವೆ. ಅವು ದೊರೆತ೦ತೆಲ್ಲ ಅವನ್ನು ನಮ್ಮ ಸಾಹಿತ್ಯಾಸಕ್ತ ಬಳಗಕ್ಕೆ ಇದೇ ತಾಣದಲ್ಲಿ ಹಾಗೂ ಕಸಾರ೦ ಮತ್ತು ನಮ್ಮ ಜೊತೆಗೂಡಿರುವ ಟೆಕ್ಸಸ್ ಕನ್ನಡ ಕೂಟಗಳ ತಾಣಗಳಲ್ಲಿ ತಿಳಿಯಪಡಿಸುತ್ತೇವೆ. ದಯವಿಟ್ಟು ಅವನ್ನು ಗಮನಿಸಿ.

ಮತ್ತೊಮ್ಮೆ ಎಲ್ಲರಿಗೂ ಆದರದ ಸ್ವಾಗತ. ಈ ಅಪೂರ್ವ ಸಮ್ಮೇಳನದಲ್ಲಿ ಭಾಗವಹಿಸುವ ಸದವಕಾಶವನ್ನು ತಪ್ಪಿಸಿಕೊಳ್ಳಬೇಡಿ.

ಸ೦ಪರ್ಕ: ಮೈ.ಶ್ರೀ. ನಟರಾಜ (301-424-4305); ಎಚ್.ವೈ. ರಾಜಗೋಪಾಲ್ (610-608-4606), ಎನ್. ಎಸ್. ವತ್ಸಕುಮಾರ್ (979-240-9496)

ತಾಣಗಳು: www.kannadasahityaranga.org
MedialAnnouncement-Dec2012(PDF)

ಸಮ್ಮೇಳನದ ಬಗೆಗಿನ ಹೆಚ್ಚಿನ ವಿವರಗಳು ಇಲ್ಲಿವೆ:-

http://kannadavrinda.org/Conference/Default.aspx

 Posted by at 1:55 PM
Jul 112012
 

ನಮ್ಮ-ನಿಮ್ಮೆಲ್ಲರ ‘ಕನ್ನಡ ಸಾಹಿತ್ಯ ರಂಗ’ವು ಇನ್ನೊಂದು ವಸಂತ ಸಾಹಿತ್ಯ ಸಮ್ಮೇಳನದ ಸಿದ್ಧತೆಯಲ್ಲಿದೆ. ಈಗಾಗಲೇ ಯಶಸ್ವಿಯಾಗಿ ಐದು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ, ಸಾಹಿತ್ಯಿಕವಾಗಿ ಮುಖ್ಯವೆನಿಸುವ ಐದು ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿರುವುದಕ್ಕೆ ಹೆಮ್ಮೆ ಪಡುತ್ತೇವೆ. ೨೦೧೩ರ ಮೇ ತಿಂಗಳಲ್ಲಿ ನಡೆಯಲಿರುವ ಸಮ್ಮೇಳನದ ಮೊದಲ ಹೆಜ್ಜೆಯಾಗಿ ಅಂದು ಹೊರತರಲಿರುವ ಗ್ರಂಥದ ಹೂರಣ ಮೊದಲೇ ತಯಾರಾಗಬೇಕಿದೆ. ಅದು ಎಲ್ಲರ ಕೂಡುವಿಕೆಯಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ಈ ನಿಮಂತ್ರಣ.

ಈ ಬಾರಿ ನಮ್ಮ ವಿಷಯ, ಸ್ಥೂಲವಾಗಿ: ಅಮೇರಿಕಾದಲ್ಲಿ ನಮ್ಮ ಬದುಕು.

ಈಗಾಗಲೇ ಹಲವಾರು ಕಡೆಗಳಲ್ಲಿ, ಕೆಲವಾರು ರೀತಿಯಲ್ಲಿ, ಹತ್ತಾರು ಲೇಖಕರಿಂದ ಈ ಭಾವ-ಬಣ್ಣಗಳು ಬಣ್ಣಿಸಲ್ಪಟ್ಟಿರಬಹುದು. ‘ಅದನ್ನೇ ಮತ್ತೆ ಮತ್ತೆ ಏನು ಬರೆಯೋದು’ ಅನ್ನುವ ಔದಾಸೀನ್ಯ ಬದಿಗಿರಿಸಿ, ನಮ್ಮ ವಲಸೆ-ಜೀವನದ ಆಸು-ಪಾಸುಗಳನ್ನು ಹತ್ತು ಹಲವು ಮಗ್ಗುಲುಗಳನ್ನು ಒಂದೇ ಧಾರೆಯಲ್ಲಿ ಎರಡು ರಟ್ಟುಗಳ ನಡುವೆ ದಾಖಲಿಸೋಣ. ನಾವೆಲ್ಲ ಯಾವ್ಯಾವುದೋ ಕಾಲ ಘಟ್ಟಗಳಲ್ಲಿ ಪೆಟ್ಟಿಗೆ ಹೊತ್ತು ಹೊಸ ಪಟ್ಟು ಕಲಿಯುವ ಜಟ್ಟಿಗಳಾಗಿ ಹೊಸ ದೇಶದ ಹೊಸ ನೆಲವನ್ನು ಮುಟ್ಟಿದವರು. ನಮ್ಮೆಲ್ಲರ ಅನುಭವ-ಅನುಭಾವಗಳೂ ಅಷ್ಟೇ ವಿಭಿನ್ನ, ವೈವಿಧ್ಯತರ. ಅಂತೆಯೇ, ನಮ್ಮೆಲ್ಲರ ಅಭಿವ್ಯಕ್ತಿಯ ದಾರಿಗಳೂ ಭಿನ್ನ. ಆ ಭಿನ್ನತೆಗೆ ಅನುಗುಣವಾಗಿಯೇ ಅಭಿವ್ಯಕ್ತಿಸೋಣ. ಈ ವೈವಿಧ್ಯವೇ ಈ ಗ್ರಂಥದ ವಿಶೇಷವಾಗಲಿ. ಸಾಮಾಜಿಕವಾಗಿ ಮತ್ತು ಚಾರಿತ್ರಿಕವಾಗಿ ಅಮೆರಿಕನ್ನಡ ವಲಸೆಯ ಈ ಭಾವಗಳು, ಸ್ವರಗಳು, ಮುಖಗಳು ಅತಿ ಮುಖ್ಯವಾಗಲಿವೆ.

ನಮ್ಮ ನಿತ್ಯ ಜೀವನ, ವೃತ್ತಿ ಜೀವನ, ಮನೆ/ನೆರೆಹೊರೆ, ಶಾಲೆ/ಕಾಲೇಜು ಪರಿಸರ, ಕಂಡದ್ದು, ಕೇಳಿದ್ದು, ಆಡಿದ್ದು, ಹಾಡಿದ್ದು, ತಿರುಗಿದ್ದು, ಮರುಗಿದ್ದು, ಹೊರಳಿದ್ದು, ನರಳಿದ್ದು, ಬಿದ್ದದ್ದು, ಎದ್ದದ್ದು… ಇನ್ನೂ ಏನೇನನ್ನು ಮಾಡಿದ್ದೇವೆ ಯಾ ಮಾಡಿಲ್ಲ! ಈ ಹೊಸ ನೆಲೆಯಿಂದ ನಾವು ಪಡೆದದ್ದೆಷ್ಟು, ನಮ್ಮ ಹೊಸ ಬೇರೂರಲು ಬೆಲೆ ತೆತ್ತದ್ದೆಷ್ಟು! ಎಲ್ಲವನ್ನೂ ಪ್ರಾಮಾಣಿಕವಾಗಿಯೂ ರಸವತ್ತಾಗಿಯೂ ತೆರೆದಿಡೋಣ. ಇದಂತೂ ನಮ್ಮದೇ ಚಾವಡಿ. ಇಲ್ಲಿ ನಮ್ಮದೇ ಕಲರವ. ಹರಟೆ, ಪ್ರಬಂಧ, ಕಥೆ, ಕವನ- ಯಾವ ಪ್ರಕಾರವಾದರೂ ಸರಿಯೇ, ಬರವಣಿಗೆ ಹರಿದು ಬರಲಿ. ಬನ್ನಿ, ಮನದ ಪಟಲ ತೆರೆದು, ನೆನಪ ಖಜಾನೆ ಕೆದಕಿ, ಸುರುಳಿ ಬಿಡಿಸಿ ನಿನ್ನೆಯನ್ನು ಇಂದಿನ ಅಕ್ಷರವಾಗಿಸೋಣ.

ನಿಮ್ಮ ಈ ಜೀವನಚಿತ್ರಗಳ ಕಡತ ಸಂಪಾದಕರ ಕೈಸೇರಲು ಇದೇ ವರ್ಷ- ೨೦೧೨- ನವೆಂಬರ್ ಮೂವತ್ತನೇ ತಾರೀಕು ಕೊನೆಯ ದಿನಾಂಕ; ಸಾಕಷ್ಟು ಸಮಯವನ್ನೇ ನೀಡುತ್ತಿದ್ದೇವೆ. ಅದಕ್ಕೂ ಮುಂಚಿತವಾಗಿ ಕಳುಹಿಸಿದರೆ ವಿವರಣೆ-ವಿಶ್ಲೇಷಣೆಗಳು ಬೇಕಾದಲ್ಲಿ ಅವಕಾಶವಿರುತ್ತದೆ. ಹಾಗೇ, ಅದರೊಂದಿಗೇ ನಿಮ್ಮ ಪುಟ್ಟ ಪರಿಚಯ ಪತ್ರವನ್ನೂ ಭಾವಚಿತ್ರವನ್ನೂ ಕಳುಹಿಸಿಕೊಡಿ.

ಮತ್ತೆ ಮತ್ತೆ ಹೇಳಿಸಿಕೊಳ್ಳದೇ ಕೀಲಿಮಣೆಯಲ್ಲಿ ಬೆರಳತುದಿಯಾಡಿಸಿ; ಕಡತ ನಮಗೆ ಕಳಿಸಿ.

* ವಿಷಯ: ಅಮೆರಿಕದ ನೆಲದಲ್ಲಿ ವಲಸಿಗರಾಗಿ ನಮ್ಮ ಬದುಕು

* ಅಕ್ಷರದ ಗಾತ್ರ ೧೪ರಲ್ಲಿ ಸುಮಾರು ಎಂಟು ಹತ್ತು ಪುಟಗಳ ಬರಹ ಅಥವಾ ಎಮ್.ಎಸ್.ವರ್ಡ್. ಕಡತ.

* ನವೆಂಬರ್ ಮೂವತ್ತು ೨೦೧೨- ಕೊನೆಯ ದಿನಾಂಕ.

* ಸಂಪಾದಕರ ಆಯ್ಕೆಯೇ ಅಂತಿಮ.

* ಕಡತಗಳನ್ನು ಕಳುಹಿಸಬೇಕಾಗಿರುವ ವಿಳಾಸ: ksrsammelana2013@gmail.com

* ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಗುರು ಕಾಗಿನೆಲೆ, ತ್ರಿವೇಣಿ ಶ್ರೀನಿವಾಸ ರಾವ್, ಜ್ಯೋತಿ ಮಹಾದೇವ್
gkaginele@gmail.com, sritri@gmail.com, jyothimahadev@gmail.com

 Posted by at 12:11 PM