Jul 112012
 

ನಮ್ಮ-ನಿಮ್ಮೆಲ್ಲರ ‘ಕನ್ನಡ ಸಾಹಿತ್ಯ ರಂಗ’ವು ಇನ್ನೊಂದು ವಸಂತ ಸಾಹಿತ್ಯ ಸಮ್ಮೇಳನದ ಸಿದ್ಧತೆಯಲ್ಲಿದೆ. ಈಗಾಗಲೇ ಯಶಸ್ವಿಯಾಗಿ ಐದು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ, ಸಾಹಿತ್ಯಿಕವಾಗಿ ಮುಖ್ಯವೆನಿಸುವ ಐದು ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿರುವುದಕ್ಕೆ ಹೆಮ್ಮೆ ಪಡುತ್ತೇವೆ. ೨೦೧೩ರ ಮೇ ತಿಂಗಳಲ್ಲಿ ನಡೆಯಲಿರುವ ಸಮ್ಮೇಳನದ ಮೊದಲ ಹೆಜ್ಜೆಯಾಗಿ ಅಂದು ಹೊರತರಲಿರುವ ಗ್ರಂಥದ ಹೂರಣ ಮೊದಲೇ ತಯಾರಾಗಬೇಕಿದೆ. ಅದು ಎಲ್ಲರ ಕೂಡುವಿಕೆಯಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ಈ ನಿಮಂತ್ರಣ.

ಈ ಬಾರಿ ನಮ್ಮ ವಿಷಯ, ಸ್ಥೂಲವಾಗಿ: ಅಮೇರಿಕಾದಲ್ಲಿ ನಮ್ಮ ಬದುಕು.

ಈಗಾಗಲೇ ಹಲವಾರು ಕಡೆಗಳಲ್ಲಿ, ಕೆಲವಾರು ರೀತಿಯಲ್ಲಿ, ಹತ್ತಾರು ಲೇಖಕರಿಂದ ಈ ಭಾವ-ಬಣ್ಣಗಳು ಬಣ್ಣಿಸಲ್ಪಟ್ಟಿರಬಹುದು. ‘ಅದನ್ನೇ ಮತ್ತೆ ಮತ್ತೆ ಏನು ಬರೆಯೋದು’ ಅನ್ನುವ ಔದಾಸೀನ್ಯ ಬದಿಗಿರಿಸಿ, ನಮ್ಮ ವಲಸೆ-ಜೀವನದ ಆಸು-ಪಾಸುಗಳನ್ನು ಹತ್ತು ಹಲವು ಮಗ್ಗುಲುಗಳನ್ನು ಒಂದೇ ಧಾರೆಯಲ್ಲಿ ಎರಡು ರಟ್ಟುಗಳ ನಡುವೆ ದಾಖಲಿಸೋಣ. ನಾವೆಲ್ಲ ಯಾವ್ಯಾವುದೋ ಕಾಲ ಘಟ್ಟಗಳಲ್ಲಿ ಪೆಟ್ಟಿಗೆ ಹೊತ್ತು ಹೊಸ ಪಟ್ಟು ಕಲಿಯುವ ಜಟ್ಟಿಗಳಾಗಿ ಹೊಸ ದೇಶದ ಹೊಸ ನೆಲವನ್ನು ಮುಟ್ಟಿದವರು. ನಮ್ಮೆಲ್ಲರ ಅನುಭವ-ಅನುಭಾವಗಳೂ ಅಷ್ಟೇ ವಿಭಿನ್ನ, ವೈವಿಧ್ಯತರ. ಅಂತೆಯೇ, ನಮ್ಮೆಲ್ಲರ ಅಭಿವ್ಯಕ್ತಿಯ ದಾರಿಗಳೂ ಭಿನ್ನ. ಆ ಭಿನ್ನತೆಗೆ ಅನುಗುಣವಾಗಿಯೇ ಅಭಿವ್ಯಕ್ತಿಸೋಣ. ಈ ವೈವಿಧ್ಯವೇ ಈ ಗ್ರಂಥದ ವಿಶೇಷವಾಗಲಿ. ಸಾಮಾಜಿಕವಾಗಿ ಮತ್ತು ಚಾರಿತ್ರಿಕವಾಗಿ ಅಮೆರಿಕನ್ನಡ ವಲಸೆಯ ಈ ಭಾವಗಳು, ಸ್ವರಗಳು, ಮುಖಗಳು ಅತಿ ಮುಖ್ಯವಾಗಲಿವೆ.

ನಮ್ಮ ನಿತ್ಯ ಜೀವನ, ವೃತ್ತಿ ಜೀವನ, ಮನೆ/ನೆರೆಹೊರೆ, ಶಾಲೆ/ಕಾಲೇಜು ಪರಿಸರ, ಕಂಡದ್ದು, ಕೇಳಿದ್ದು, ಆಡಿದ್ದು, ಹಾಡಿದ್ದು, ತಿರುಗಿದ್ದು, ಮರುಗಿದ್ದು, ಹೊರಳಿದ್ದು, ನರಳಿದ್ದು, ಬಿದ್ದದ್ದು, ಎದ್ದದ್ದು… ಇನ್ನೂ ಏನೇನನ್ನು ಮಾಡಿದ್ದೇವೆ ಯಾ ಮಾಡಿಲ್ಲ! ಈ ಹೊಸ ನೆಲೆಯಿಂದ ನಾವು ಪಡೆದದ್ದೆಷ್ಟು, ನಮ್ಮ ಹೊಸ ಬೇರೂರಲು ಬೆಲೆ ತೆತ್ತದ್ದೆಷ್ಟು! ಎಲ್ಲವನ್ನೂ ಪ್ರಾಮಾಣಿಕವಾಗಿಯೂ ರಸವತ್ತಾಗಿಯೂ ತೆರೆದಿಡೋಣ. ಇದಂತೂ ನಮ್ಮದೇ ಚಾವಡಿ. ಇಲ್ಲಿ ನಮ್ಮದೇ ಕಲರವ. ಹರಟೆ, ಪ್ರಬಂಧ, ಕಥೆ, ಕವನ- ಯಾವ ಪ್ರಕಾರವಾದರೂ ಸರಿಯೇ, ಬರವಣಿಗೆ ಹರಿದು ಬರಲಿ. ಬನ್ನಿ, ಮನದ ಪಟಲ ತೆರೆದು, ನೆನಪ ಖಜಾನೆ ಕೆದಕಿ, ಸುರುಳಿ ಬಿಡಿಸಿ ನಿನ್ನೆಯನ್ನು ಇಂದಿನ ಅಕ್ಷರವಾಗಿಸೋಣ.

ನಿಮ್ಮ ಈ ಜೀವನಚಿತ್ರಗಳ ಕಡತ ಸಂಪಾದಕರ ಕೈಸೇರಲು ಇದೇ ವರ್ಷ- ೨೦೧೨- ನವೆಂಬರ್ ಮೂವತ್ತನೇ ತಾರೀಕು ಕೊನೆಯ ದಿನಾಂಕ; ಸಾಕಷ್ಟು ಸಮಯವನ್ನೇ ನೀಡುತ್ತಿದ್ದೇವೆ. ಅದಕ್ಕೂ ಮುಂಚಿತವಾಗಿ ಕಳುಹಿಸಿದರೆ ವಿವರಣೆ-ವಿಶ್ಲೇಷಣೆಗಳು ಬೇಕಾದಲ್ಲಿ ಅವಕಾಶವಿರುತ್ತದೆ. ಹಾಗೇ, ಅದರೊಂದಿಗೇ ನಿಮ್ಮ ಪುಟ್ಟ ಪರಿಚಯ ಪತ್ರವನ್ನೂ ಭಾವಚಿತ್ರವನ್ನೂ ಕಳುಹಿಸಿಕೊಡಿ.

ಮತ್ತೆ ಮತ್ತೆ ಹೇಳಿಸಿಕೊಳ್ಳದೇ ಕೀಲಿಮಣೆಯಲ್ಲಿ ಬೆರಳತುದಿಯಾಡಿಸಿ; ಕಡತ ನಮಗೆ ಕಳಿಸಿ.

* ವಿಷಯ: ಅಮೆರಿಕದ ನೆಲದಲ್ಲಿ ವಲಸಿಗರಾಗಿ ನಮ್ಮ ಬದುಕು

* ಅಕ್ಷರದ ಗಾತ್ರ ೧೪ರಲ್ಲಿ ಸುಮಾರು ಎಂಟು ಹತ್ತು ಪುಟಗಳ ಬರಹ ಅಥವಾ ಎಮ್.ಎಸ್.ವರ್ಡ್. ಕಡತ.

* ನವೆಂಬರ್ ಮೂವತ್ತು ೨೦೧೨- ಕೊನೆಯ ದಿನಾಂಕ.

* ಸಂಪಾದಕರ ಆಯ್ಕೆಯೇ ಅಂತಿಮ.

* ಕಡತಗಳನ್ನು ಕಳುಹಿಸಬೇಕಾಗಿರುವ ವಿಳಾಸ: ksrsammelana2013@gmail.com

* ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಗುರು ಕಾಗಿನೆಲೆ, ತ್ರಿವೇಣಿ ಶ್ರೀನಿವಾಸ ರಾವ್, ಜ್ಯೋತಿ ಮಹಾದೇವ್
gkaginele@gmail.com, sritri@gmail.com, jyothimahadev@gmail.com

 Posted by at 12:11 PM