Apr 032018
 

ಕನ್ನಡ ಸಾಹಿತ್ಯರಂಗದ ಸಂಸ್ಥಾಪಕರಲ್ಲೊಬ್ಬರಾದ ಮತ್ತು ಕಸಾರಂ ನ ಬೆಳವಣಿಗೆಯಲ್ಲಿ ಅತ್ಯಮೂಲ್ಯ ಪಾತ್ರವಹಿಸಿದ ಡಾ. ಎಚ್. ವೈ. ರಾಜಗೋಪಾಲ್ ಅವರು ಈ ದಿನ ಬೆಳಿಗ್ಗೆ ಇಹಲೋಕವನ್ನು ತ್ಯಜಿಸಿ ದಿವಂಗತರಾದರೆಂದು ತಿಳಿಸಲು ತೀವ್ರ ವಿಷಾದವಾಗುತ್ತಿದೆ. ಕನ್ನಡ ಸಾಹಿತ್ಯ ರಂಗದ ಪ್ರೇರಕ ಶಕ್ತಿಯಾಗಿದ್ದ ರಾಜಗೋಪಾಲ್ ಅವರನ್ನು ಕಳೆದುಕೊಂಡ ನೋವು ನಮ್ಮದು. ಕನ್ನಡ ಸಾಹಿತ್ಯ ರಂಗವು ಈ ಮೂಲಕ ಎಚ್.ವೈ .ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತಿದೆ.

ಏಪ್ರಿಲ್ 2 ರ ಬೆಳಿಗ್ಗೆ University of Pennsylvania Main Hospital ನಲ್ಲಿ ನಿಧನರಾದ ರಾಜಗೋಪಾಲ್ ಅವರು ಪತ್ನಿ ವಿಮಲಾ ರಾಜಗೋಪಾಲ್, ಮಕ್ಕಳಾದ ಮಾಧವಿ ರಿಜ್ಜೊ, ರಾಮ್ ರಾಜಗೋಪಾಲ್, ಚೇತನಾ ಜೋಯ್ಸ್ ಮತ್ತು ಅಪಾರ ಕನ್ನಡ ಬಳಗವನ್ನು ಅಗಲಿದ್ದಾರೆ. ರಾಜಗೋಪಾಲ್ ಅವರ ಕುಟುಂಬಕ್ಕೆ ಸಾಂತ್ವನ, ಅಗಲಿದ ಚೇತನಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸುತ್ತೇವೆ! 🙏

 

 Posted by at 5:55 PM
Aug 022010
 

ಗುರುಹರಿಗೆ ಸಂಧ್ಯಾರವಿ ಗುರುವಂದನೆ

ಆವತ್ತು ನಮ್ಮ ಮನೆಗೆ ಹರಿಹರೇಶ್ವರ ಮತ್ತು ನಾಗಲಕ್ಷ್ಮಿ ಬಂದಿದ್ದರು. ಅವರು ಬರುತ್ತಾರೆ ಎಂದರೆ ನನಗೆ ಎಲ್ಲಿಲ್ಲದ ಸಡಗರ, ಉತ್ಸಾಹ. ಮನೆಗೆ ಹಿರಿಯ ದಂಪತಿಗಳು ಬರುವರೆಂದು ಮಾತ್ರವಲ್ಲ, ಪ್ರೀತಿಪಾತ್ರರಾದ ಸ್ನೇಹಿತರು. ಕನ್ನಡದ ಬಗ್ಗೆ ಹುರುಪು ತುಂಬುವವರು, ಬದುಕಿಗೆ ಚೇತನ ತುಂಬುವ ಮಾರ್ಗದರ್ಶಿಗಳು ನಮ್ಮಂಥವರ ಮನೆಗೆ ಬರುವುದು ಕಡಲು ತೊರೆ ಅರಸಿ ಬಂದಂತೆ.

ಅವರು ಬಂದ ಕ್ಷಣದಿಂದ ಪ್ರಾರಂಭವಾಗುವ ನಮ್ಮ ಸಂಭಾಷಣೆ ಎಡೆತಡೆಯಿಲ್ಲದೆ ಸಾಗುವುದು. ಒಂದು ಕ್ಷಣವೂ ಸುಮ್ಮನೆ ಇರುವುದಿಲ್ಲ, ಬೇಸರದ ಸುಳಿವೇ ಇಲ್ಲ. ಹರಿಹರೇಶ್ವರ ಅವರು ವಿವಿಧ ವಿಷಯಗಳಲ್ಲಿ ಹೊಂದಿದ್ದ ಅಗಾಧವಾದ ಜ್ಞಾನದಿಂದ ನಮ್ಮ ಸಂಭಾಷಣೆಗಳು ಶಾಲೆಯಲ್ಲಿ ಕುಳಿತು ಗುರುಗಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವಂತೆ ಇರುತ್ತಿತ್ತು. ಏಕವ್ಯಕ್ತಿ ವಿಶ್ವವಿದ್ಯಾಲಯ ಎಂದು ಕರೆಯುವುದು ಇಂಥವರಿಗೇ.

ಕಳೆದ ಗುರುವಾರ ನಮ್ಮನ್ನಗಲಿದ ಶಿಕಾರಿಪುರ ಹರಿಹರೇಶ್ವರ ತಾವು ಓದಿದ ಪ್ರತಿಯೊಂದು ಪುಸ್ತಕವನ್ನೂ ಪತ್ನಿ ನಾಗಲಕ್ಷ್ಮಿಯವರೊಡನೆ ಹಂಚಿಕೊಳ್ಳುತ್ತಿದ್ದರು. ಸಾಹಿತ್ಯ, ನಿರೂಪಣೆ, ಪದಬಳಕೆ ಬಗೆಗೆ ಅವರವರಲ್ಲಿ ಚರ್ಚೆ ಸಾಗುತ್ತಿತ್ತು. ಹರಿ ಅವರೇ ಹೇಳಿದಂತೆ ತಾವು ಬರೆಯುವ ಪ್ರತಿಯೊಂದು ಬರಹವನ್ನೂ ನಾಗಲಕ್ಷ್ಮಿ ವಿಮರ್ಶಿಸುತ್ತಿದ್ದರು. ಅವರದ್ದು ಅನುರೂಪ, ಅಪರೂಪದ ದಾಂಪತ್ಯ. ಇಬ್ಬರ ಆಸೆ, ಆಸಕ್ತಿಗಳು ಒಂದೇ ಆದ್ದರಿಂದ ಜೀವನ ಸುಗಮ, ಸರಾಗ, ಸ್ನೇಹಮಯ. ಅವರಿಬ್ಬರ ಹೆಸರೂ ಅನುರೂಪವಾಗಿಯೇ ಇದೆ, ಅವರು ಹರಿ ಆದರೆ ಇವರು ಲಕ್ಷ್ಮಿಯಾಗುತ್ತಾರೆ, ಅವರು ಹರೇಶ್ವರರಾದರೆ, ಇವರು ನಾಗ!

ಹರಿ ನಾಗಲಕ್ಷಿಯವರದ್ದು ಕೊಡುವ ಕೈ. ಇವರು ಇಲ್ಲಿ, ಅಂದರೆ ಅಮೇರಿಕಾದಲ್ಲಿ ಇದ್ದಾಗ ಮಾಡಿದ ಕನ್ನಡ ಪರ ಕೆಲಸಗಳು ಅನೇಕ. ಅಮೆರಿಕನ್ನಡ ಪತ್ರಿಕೆ ಪ್ರಾರಂಭಿಸುವುದರ ಮೂಲಕ 1980ರ ದಶಕದಲ್ಲಿ ಅಮೇರಿಕಾದಾದ್ಯಂತ ಮನೆಮಾತಾಗಿದ್ದರು. ಕನ್ನಡವೇ ಕಾಣದ, ಕೇಳದ ಈ ಪರಿಸರದಲ್ಲಿ, ಆ ಸಮಯದಲ್ಲಿ ನನ್ನಂತಹ ಕನ್ನಡಪ್ರೇಮಿಗಳಿಗೆ ಅಮೆರಿಕನ್ನಡ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್‌ನಂತೆ ಇತ್ತು.

ನನ್ನ ಗುರು, ನಮಗೆಲ್ಲ ಗುರು : ಅವರು ಕ್ಯಾಲಿಫೋರ್ನಿಯಾಗೆ ಬಂದ ಮೇಲಂತೂ ನನ್ನ ಬರವಣಿಗೆಗೆ ಅವರಿಂದ ತುಂಬು ಹೃದಯದ ಬೆಂಬಲ ದೊರಕಿತು. ಪ್ರತಿವಾರ ಒಂದಲ್ಲ ಒಂದು ಕಾರ್ಯಕ್ರಮ ಹೂಡುತ್ತಿದ್ದರು. ಅವರು ಹೋಮ್‌ವರ್ಕ್ ಕೊಟ್ಟು ನನ್ನ ಕನ್ನಡದ ಬರವಣಿಗೆಗೆ ಪ್ರೋತ್ಸಾಹವಿತ್ತರು. ಹೀಗೆ ಇಲ್ಲಿನ ಕನ್ನಡಿಗರಿಗೆ ಕನ್ನಡ ಸಾರುವುದಕ್ಕೆ, ಬೆಳೆಸುವುದಕ್ಕೆ ಹರಿ ಊರುಗೋಲಾಗಿದ್ದರು. ಅವರು ಮೈಸೂರಿಗೆ ಮರಳಿದ ಮೇಲೆ ಊರುಗೋಲು ಖಂಡಾಂತರದ ಸೇತುವೆಯಾಯಿತು. ನಾನು ಮೈಸೂರಿನಿಂದ ನಿಮ್ಮ ಕನ್ನಡಪರ ಕಾರ್ಯಕ್ರಮಗಳಿಗೆ ಹೇಗೆ ಸಹಾಯ ಮಾಡಲಿ? ಎನ್ನುವುದು ಅವರು ಪ್ರತಿಸಲಿ ನನ್ನೊಡನೆ ಮಾತನಾಡಿದಾಗ ಕೇಳುವ ಪ್ರಶ್ನೆ! ನನ್ನ ಸಣ್ಣಕಥೆಗಳ ಸಂಗ್ರಹ ಬೆಳಕು ಕಾಣುವುದಕ್ಕೆ ಈ ದಂಪತಿಗಳೇ ಕಾರಣ. ಹಲವಾರು ವರುಷಗಳಿಂದ ಬರೆದಿದ್ದ ಕಥೆಗಳು ಒಂದು ಪುಸ್ತಕವಾಗಿ ಹೊರಹೊಮ್ಮಿತು. ಉತ್ತರ ಕ್ಯಾಲಿಫೋರ್ನಿಯಾದಿಂದ ನಾನು ಕಳಿಸಿದ ಕಥೆಗಳನ್ನು ಮೂರು ವಾರಗಳಲ್ಲಿ ಅಚ್ಚು ಮಾಡಲು, ಪ್ರಕಟಗೊಳಿಸಲು ಸಿದ್ಧಗೊಳಿಸಿ, ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನೂ ಅಚ್ಚುಕಟ್ಟಾಗಿ ಮಾಡಿಬಿಟ್ಟರು.
ಅಧ್ಯಯನಶೀಲ : ಹರಿಯವರು ಯಾವ ವಿಷಯವನ್ನೇ ತೆಗೆದುಕೊಂಡರೂ ಅದನ್ನು ಆಮೂಲಾಗ್ರವಾಗಿ ಓದಿ, ಸಂಶೋಧಿಸಿ, ಅದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಗುಬ್ಬಿ ಕುರಿತೇ ಇರಲಿ ಅಥವಾ ಮಹಾಲಕ್ಷ್ಮಿ ಬಗ್ಗೆಯೇ ಇರಲಿ. ವೇದ, ವೇದಾಂತ, ಜಾನಪದ, ಸಾಹಿತ್ಯಲೋಕದಲ್ಲಿ ಎಲ್ಲೆಲ್ಲಿ ಅದರ ಉಲ್ಲೇಖನವಿರುತ್ತದೋ ಅದೆಲ್ಲವು ಹರಿಯವರಿಗೆ ಕರತಲಾಮಲಕ. ಅವರೇ ಬರೆದಿರುವ ಅನೇಕ ಪುಸ್ತಕಗಳಲ್ಲಿರುವ ಟಿಪ್ಪಣಿಗಳಿಂದ ಇದು ನಮಗೆ ತಿಳಿದು ಬರುತ್ತದೆ. ಹರಿಯವರು ಹಲವಾರು ವಿಷಯಗಳ ಕುರಿತು 20ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹರಿಯವರ ಕನ್ನಡ ಪ್ರೀತಿಗೆ ಇನ್ನೊಂದು ಉದಾಹರಣೆಯೆಂದರೆ ಅವರೇ ಹಣ ಕೊಟ್ಟು ಇತರರ ಪುಸ್ತಕಗಳನ್ನು ಪ್ರಕಟಿಸುವುದು. ಕನ್ನಡದಲ್ಲಿ ಬರೆಯುವವರಿಗೆ ಇವರು ಈ ರೀತಿ ಪ್ರೋತ್ಸಾಹಿಸುವುದಲ್ಲದೆ, ಓದುವವರಿಗೆ ಬಿಟ್ಟಿ ಪುಸ್ತಕಗಳನ್ನು ಕೊಟ್ಟು ಓದುವಂತೆ ಕೋರಿಕೊಳ್ಳುತಿದ್ದರು! ಬಂದೆಡೆಯೆಲ್ಲ ಅವರು ಬರಿಯ ಕೈಯಲ್ಲಿ ಬರುವ ವ್ಯಕ್ತಿಯಲ್ಲ. ಇತರರಿಗೆ ಕೊಡುವುದಕ್ಕೆ ಕೃತಿಗಳು ಜೋಳಿಗೆಯಲ್ಲಿ ಸದಾ ಇರುತ್ತಿದ್ದವು. ಹರಿ ದಂಪತಿಗಳು ತಾಯ್ನಾಡಿಗೆ ಮರಳಿದ ಮೇಲೆ ಅನೇಕ ರೀತಿಯಲ್ಲಿ ಸಮಾಜಸೇವೆಯನ್ನು ಜತೆಜತೆಯಾಗಿ ಮಾಡುತ್ತಿದ್ದರು. ಅವರ ನೆರವಿನಿಂದ ಅನೇಕರು ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮುಂದುವರೆಸಲು ಸಾಧ್ಯವಾಗಿದೆ. ಅನ್ನದಾನ, ವಸ್ತ್ರದಾನ, ವಿದ್ಯಾದಾನ ನೀಡುವ ಅನೇಕ ಕಾರ್ಯಕ್ರಮಗಳಿಗೆ ತಮ್ಮ ತನು, ಮನ, ಧನವನ್ನು ಮುಡಿಪಾಗಿಟ್ಟಿದ್ದರು. ತಾಯ್ನಾಡಿಗೆ ಒಂದು ನಿರ್ದಿಷ್ಟ ಉದ್ದಿಶ್ಯವಿಟ್ಟುಕೊಂಡು ವಾಪಸ್ಸು ಹೋಗಿದ್ದರು. ಉದ್ದೇಶ ಸ್ಪಷ್ಟ, ಶ್ರದ್ಧೆ ಅಚಲ, ಫಲಿತಾಂಶ ಸಾರ್ಥಕತೆ. ಹರಿ ಮತ್ತು ನಾಗಲಕ್ಷ್ಮಿ ಅವರ ವೈವಾಹಿಕ ಜೀವನಕ್ಕೆ ಇದೇ ಆಗಸ್ಟ್ ಗೆ 40 ವರ್ಷ ತುಂಬುತ್ತದೆ. ಆ ದಿವಸಕ್ಕಾಗಿ ಅವರ ಮಕ್ಕಳು ಸುಮನಾ ಮತ್ತು ನಂದಿನಿ ಹಾಗೂ ನಾವೆಲ್ಲ ಸೇರಿ ಹರಿ ನಾಗೂ ಅವರಿಗೆ ಸರ್ ಪ್ರೈಸ್ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ನಮಗೆ ಆ ಪುಣ್ಯ ಇಲ್ಲದಂತಾಯಿತು. ಹರಿಯನ್ನು ವಿಧಿ ಕರೆಸಿಕೊಂಡಿತು. ಅನ್ಯ ಮಾರ್ಗವಿಲ್ಲ. ಹಾಗಂತ ಪತ್ನಿ ನಾಗು ಅವರಾಗಲೀ, ನನ್ನಂಥ ಹರಿ ಅಭಿಮಾನಿಗಳಾಗಲೀ ಅನಾಥರಾದೆವೆಂದು ಭಾವಿಸಬೇಕಿಲ್ಲ. ಬದುಕಿರುವವರೆಗೂ ಭಾವನಾತ್ಮಕ ನೆಲೆಯಲ್ಲಿ ಒಟ್ಟಿಗೇ ಇರುವ ನೇಮವನ್ನು ತಾವು ತೊರೆಯುವುದಿಲ್ಲ.

 Posted by at 11:44 PM
Aug 022010
 

“ಅಮೆರಿಕನ್ನಡದ ಹರಿಯವ್ರು ಹೋದ್ರು ಎಂದೆನಬೇಡಿ

ಹೋದ್ರೂ ಇಲ್ಲೇ ಕುಂತವ್ರೆ ಪುಣ್ಯಾತ್ಮರು

ಬಿತ್ತಿ ಹೋಗವ್ರೆ ಇಲ್ಲಿ ಕನ್ನಡವಾ”

ಇದು ನನ್ನ ಮನಸ್ಸಿನಲ್ಲಿ ಮೂಡಿ ಬಂದ ಭಾವನೆ, ಹರಿಹರೇಶ್ವರರ ನಿಧನ ವಾರ್ತೆ ಕೇಳಿ. ಅಂದು ಗೆಳೆಯ ಶ್ರೀನಿವಾಸ ಭಟ್ಟರು ದೂರವಾಣಿಯಲ್ಲಿ ನನಗೆ ಹರಿಯವರ ನಿಧನದ ವಾರ್ತೆ ಮುಟ್ಟಿಸಿದಾಗ ಡಾ.ಪಿ.ಕೆ.ರಾಜಶೇಖರ ಅವರು ಸಂಪಾದಿಸಿದ ‘ಜನಪದ ಮಹಾಭಾರತ”ವನ್ನು ಓದುತ್ತಿದ್ದೆ. ಆ ಗ್ರಂಥವನ್ನು ಹರಿಹರೇಶ್ವರರು ನಾನು ಮೈಸೂರಿನಲ್ಲಿ ಸರಸ್ವತೀಪುರದ ಅವರ ಮನೆಯಲ್ಲಿ ಕಳೆದ ಜನವರಿಯಲ್ಲಿ ಭೇಟಿ ಮಾಡಿದಾಗ ಉಡುಗೊರೆಯಾಗಿ ನನಗೆ ಕೊಟ್ಟಿದ್ದರು. ಅದೊಂದು ಕಾಕತಾಳೀಯ ನ್ಯಾಯವೆಂದರೂ ಸರಿಯೇ!

ಆ ಗ್ರಂಥವನ್ನು ತಮ್ಮ ಸ್ವಹಸ್ತದಲ್ಲಿ, ‘ಆತ್ಮೀಯ ಡಾ. ಎಚ್.ಎನ್. ಐತಾಳ್ ಅವರಿಗೆ’ ಎಂದು ಪ್ರೀತಿಯಿಂದ ಬರೆದು ಕೊಟ್ಟಿದ್ದರು. (ನನ್ನ ಹೆಸರು ನಾಗ ಐತಾಳ ಎಂತಿದ್ದರೂ, ಅವರು ನನ್ನನ್ನು ಎಚ್.ಎನ್. ಐತಾಳ ಎಂದೇ ಸಂಬೋಧಿಸುತ್ತಿದ್ದರು.) ಅಂದು ಅವರೊಡನೆ ಮಾತಾಡುತ್ತ ನಾನು ಆ ಗ್ರಂಥದ ಮೇಲಿನ ಆಸಕ್ತಿಯನ್ನು ವ್ಯಕ್ತಪಡಿಸಿದ್ದೆ. ಹರಿಹರೇಶ್ವರರು ತಟ್ಟನೆ ಎದ್ದು ಮಹಡಿಯಿಂದ ಆ ಗ್ರಂಥದ ಪ್ರತಿಯೊಂದನ್ನು ತಂದು, ‘ಐತಾಳ್ರೇ…, ನಿಮಗೆ ಜಾನಪದದ ಮೇಲಿನ ಆಸಕ್ತಿ ಇರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಬಳಿ ಹೆಚ್ಚಿನ ಪ್ರತಿಯೊಂದಿದೆ. ಇಗೊಳ್ಳಿ, ಅದನ್ನು ಅಮೆರಿಕಕ್ಕೆ ಕೊಂಡು ಹೋಗಿ; ಓದಿ ಆನಂದ ಪಡಿರಿ, ಹಾಗೂ ಆ ಬಗ್ಗೆ ಸ್ವಲ್ಪ ಪ್ರಚಾರ ಮಾಡಿ…’ ಎಂದು ಹೇಳಿ ಕೊಟ್ಟಿದ್ದರು. ಅದರಲ್ಲಿ ಉಲ್ಲೇಖಿತವಾದ:

“ಸತ್ಯವಂತ ಪಾಂಡವರು ಸತ್ತರೆಂದೆನಬ್ಯಾಡಿ

ಸತ್ತರೆ ಲೋಕ ಉಳಿಯಾವು – ಪಾಂಡವರು

ಬಿತ್ತಿ ಹೋಗವರೆ ಅವರೇಯ”

ಎಂಬ ತ್ರಿಪದಿಯನ್ನು ಉಲ್ಲೇಖಿಸಿದ್ದರು ಅಂದು. ಅದು ನನ್ನ ಮನಸ್ಸಿನಲ್ಲಿ ಕಂತಿ ಹೋಗಿತ್ತು. ಹರಿಹರೇಶ್ವರರು ಸ್ವರ್ಗಸ್ಥರಾದ ವಾರ್ತೆ ಕೇಳಿದ ನನ್ನಲ್ಲಿ ತಟ್ಟನೆ ಈ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿದ (‘ಅಮೆರಿಕನ್ನಡದ ಹರಿಯವ್ರು…’) ಸಾಲುಗಳು ಮೂಡಿ ಬಂದುವು. ಅದಕ್ಕೆ ಬಲವಾದ ಕಾರಣವಿದೆ. ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಹರಿಹರೇಶ್ವರರ ಕೊಡುಗೆ ಅಪಾರವಾದದ್ದು. ಎಷ್ಟೋ ಮಂದಿ ಹವ್ಯಾಸಿ ಕನ್ನಡಿಗರನ್ನು ಹುರಿದುಂಬಿಸಿ, ಅವರಲ್ಲಿ ಸಾಹಿತ್ಯಾಸಕ್ತಿ ಹುಟ್ಟಿಸಿದ ‘ಹರಿಕಾರ’ರು, ಹರಿಹರೇಶ್ವರರು. ಅದು ತಮ್ಮ ಕರ್ತವ್ಯವೆಂದೇ ತಿಳಿದಿದ್ದರು ಅವರು. ಅವರ ಈ ನಿಸ್ವಾರ್ಥ ಸೇವೆಯನ್ನು ನಾವು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಅಂಥ ಮಹಾಕಾರ್ಯ, ಹರಿಯವರು ಇಲ್ಲಿ ಬಿಟ್ಟು ಹೋದ, ಬಿತ್ತಿ ಹೋದ ಪರಂಪರೆ, ಉಡುಗೊರೆ, ಬಳುವಳಿ! ಅದಕ್ಕಾಗಿ ಅವರಿಗೆ ಅಮೆರಿಕನ್ನಡಿಗರು ಸದಾ ಕೃತಜ್ಞರೇ!

ನನ್ನ ಮತ್ತು ಹರಿಹರೇಶ್ವರರ ಸಂಪರ್ಕ ಸುಮಾರು 30 ವರ್ಷಗಳಿಗೂ ಮಿಕ್ಕಿದ್ದುದು. ಈ ಕಾಲಾವಧಿಯಲ್ಲಿ ಅವರು ನನಗೆ ನೀಡಿದ ಹಲವು ವಿಧದ ಪ್ರೋತ್ಸಾಹಗಳನ್ನು ನಾನಿಲ್ಲಿ ಕೃತಜ್ಞತಾ ಭಾವನೆಯಿಂದ ನೆನೆದುಕೊಳ್ಳುತ್ತಿದ್ದೇನೆ. ಅವುಗಳಲ್ಲಿ ಒಂದೆರಡು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನ್ನಲ್ಲಿ ಲೇಖನಗಳನ್ನು ಬರೆಯಲು ಉತ್ತೇಜಿಸಿದ್ದರು. ನಾನು ಸಂಪಾದಿಸಿದ ‘ಕಾರಂತ ಚಿಂತನ…’ ಗ್ರಂಥಕ್ಕೆ ತಮ್ಮೆಲ್ಲ ಸಹಕಾರವನ್ನೂ ಕೊಟ್ಟು, ಅದರ ಸಹಸಂಪಾದಕರಾಗಿಯೂ, ಗ್ರಂಥಕ್ಕೆ ಲೇಖಕನವನ್ನು ಒದಗಿಸುವ ಇತರ ಲೇಖಕರನ್ನು ಸೂಚಿಸುವಲ್ಲಿಯೂ ನೆರವಾಗಿದ್ದರು. ಇದು ನನ್ನ ಸಾಹಿತ್ಯ ಸಂಪರ್ಕವನ್ನು ಬೆಳೆಸಿಕೊಳ್ಳಲು ತುಂಬಾ ಸಹಾಯವಾಗಿತ್ತು. ಶಿಕಾಗೋದಲ್ಲಿ ನಾನು ಅಭಿನಯಿಸಿದ ಸಂಸ್ಕೃತ ನಾಟಕ ‘ಅಭಿಜ್ಞಾನ ಶಾಕುಂತಲ’ದಲ್ಲಿ ನನ್ನ ಕಣ್ವ ಋಷಿಯ ಪಾತ್ರವನ್ನು ಮೆಚ್ಚಿ ನುಡಿದ ಉತ್ತೇಜಿತ ಮಾತುಗಳನ್ನು ನಾನೆಂದಿಗೂ ಮರೆಯುವಂತಿಲ್ಲ. ಆ ಸಂದರ್ಭದಲ್ಲಿ ಕಾಳಿದಾಸನ ಕೃತಿಯೊಂದನ್ನೂ ಉಡುಗೊರೆಯಾಗಿ ಕೊಟ್ಟಿದ್ದರು. ಒಂದು ವಿಧದಲ್ಲಿ ಅವರು ನನ್ನ ಸಾಹಿತ್ಯ ಕ್ಷೇತ್ರದ mentor ಎಂದರೂ ಸರಿಯೇ.

ಅವರು ‘ಅಮೆರಿಕನ್ನಡ’ ದ್ವೈಮಾಸಪತ್ರಿಕೆ ಪ್ರಾರಂಬಿಸುವ ಮೊದಲು, ಶಿಕಾಗೋಗೆ ಬಂದು (ಆಗ ನಾನು ಶಿಕಾಕಾಗೋ ನಿವಾಸಿಯಾಗಿದ್ದೆ) ನನ್ನ ಸಹಕಾರ ಕೋರಿದ್ದರು. ನಾನು ಅವರಿಗೆ ಆ ಬಗ್ಗೆ ನನ್ನ ಬೆಂಬಲ ಕೊಟ್ಟುದಲ್ಲದೆ, ಹಲವು ಚಂದಾದಾರರನ್ನೂ ಗಳಿಸಿಕೊಟ್ಟಿದ್ದೆ. ಆ ಪತ್ರಿಕೆಯ ‘ಬಿಡುಗಡೆ’ ದೇಶದ ವಿವಿಧ ಕಡೆಗಳಲ್ಲಿ ನಡೆದಿದ್ದು, ಮಧ್ಯವಲಯದಲ್ಲಿ ನಮ್ಮ ಮನೆಯಲ್ಲಿ ಆ ಸಮಾರಂಭವನ್ನು ಏರ್ಪಡಿಸಿದ್ದೆ. ಆ ಬಗ್ಗೆ ಈಗಲೂ ನನ್ನಲ್ಲಿ ಹೆಮ್ಮೆ ಹುಟ್ಟಿಸುತ್ತಿದೆ. ಮುಂದೆ ಮೈ.ಶ್ರೀ.ನಟರಾಜ ಅವರ ‘ನಾನೂ ಅಮೆರಿಕನಾಗಿಬಿಟ್ಟೆ’ ಕವನ ಸಂಗ್ರಹ ಪ್ರಕಟವಾದಾಗ (ಅದು ಅಮೆರಿಕನ್ನಡದ ಪ್ರಕಾಶನವಾಗಿತ್ತು) ನನಗೆ ಕೆಲವು ಪುಸ್ತಕಗಳನ್ನು ಕಳುಹಿಸಿ, ಆ ಗ್ರಂಥದ ಬಗ್ಗೆ ಪ್ರಚಾರ ಮಾಡಲು ಆದೇಶ ಕೊಟ್ಟಿದ್ದರು. ಅದನ್ನು ನಾನು ಸೈಂಟ್ ಲೂಯಿಸ್ ಕನ್ನಡ ಕೂಟದ ಸ್ಥಾಪನೆಯ ಸಮಯದಲ್ಲಿ ಅಲ್ಲಿಗೆ ಕೊಂಡು ಹೋಗಿ ಕೆಲವು ಪ್ರತಿಗಳನ್ನು ಮಾರಾಟ ಮಾಡಿದ ನೆನಪು ಇನ್ನೂ ಹಸಿರಾಗಿ ಉಳಿದಿದೆ.

ಮುಂದೆ ಅವರು ವೈ.ಆರ್. ಮೋಹನ್ ಅವರ ‘ನೆನಪುಗಳು’ ಗ್ರಂಥದ ಪ್ರಕಟಣೆಗೂ ಸಹಾಯ ಮಾಡಿದ್ದರು. ಹೀಗೆ ಅವರು ಹಲವು ಅಮೆರಿಕನ್ನಡಿಗರಿಗೆ ನೀಡಿದ ಪ್ರೋತ್ಸಾಹದ ನೆನಪನ್ನು ಮರೆಯಲು ಸಾಧ್ಯವಿಲ್ಲ. ತಾವು ನಿರ್ವಹಿಸಿದ ಕಾರ್ಯಗಳಲ್ಲಿ ಬೇರೆಯವರನ್ನೂ ಜೊತೆಗೂಡಿಸಿಕೊಂಡು, ಅಂಥವರಲ್ಲಿ ಸಾಹಿತ್ಯ ಸೇವೆಯ ಆಸಕ್ತಿಯನ್ನು ಕೆರಳಿಸುತ್ತಿದ್ದುದು ಹರಿಯವರ ಒಂದು ವಿಶೇಷ ಗುಣ.

ಹರಿಹರೇಶ್ವರರ ಬಗ್ಗೆ ಬರೆಯುತ್ತ ಹೋದಲ್ಲಿ ಪುಟಗಟ್ಟಲೆ ಬರೆಯಬಹುದು. ಎಲ್ಲ ಸೂಚಿಸುವುದೂ ಒಂದನ್ನೇ; ಅವರ ನಿಸ್ವಾರ್ಥ ಸೇವೆ. ಒಂದೇ ಮಾತಿನಲ್ಲಿ ‘ಹರಿಹರೇಶ್ವರ, ನೀವೊಬ್ಬ ಆದರ್ಶ ನಿಸ್ವಾರ್ಥ ಕನ್ನಡಿಗ’ ಎಂದಿಷ್ಟೇ ಹೇಳಬಹುದು. ಅಷ್ಟೇ ಸಾಕು ಅವರ ವ್ಯಕ್ತಿತ್ವವನ್ನು ಸಂಪೂರ್ಣ ವರ್ಣಿಸಲು. ಅಷ್ಟೇ ಹೇಳಿ ನನ್ನ ಗೌರವವನ್ನು ಈ ಮೂಲಕ ಅವರಿಗೆ ಸಲ್ಲಿಸುತ್ತಿದ್ದೇನೆ.

ಮುಗಿಸುವ ಮುನ್ನ, ಅವರೇ ತಮ್ಮ ಲೇಖನವೊಂದರಲ್ಲಿ ತಿಳಿಸಿದಂತೆ, ನಮ್ಮ ಸಂಸ್ಕೃತಿಯಲ್ಲಿ ಯಾವುದಾದರೂ ಶುಭವನ್ನು ಮೂರು ಬಾರಿ ಹೇಳುವ, ಉದಾಹರಣೆಗೆ ಓಂ ಶಾಂತಿ ಶಾಂತಿ ಶಾಂತಿಃ, ಪದ್ಧತಿಯನ್ನು ಇಲ್ಲಿ ಜ್ಞಾಪಿಸಿಕೊಳ್ಳುತ್ತಿದ್ದೇನೆ. ಅವರ ಹೆಸರೇ ದೇವರನ್ನು ಮೂರು ಬಾರಿ ನೆನೆಯುವಂತಿದೆ. ಆ ಮೂರು ನಾಮವನ್ನು ನೆನೆಸಿಕೊಂಡೇ ಅವರಿಗೆ ವಿದಾಯ ಹೇಳಬಯಸುತ್ತೇನೆ: ಹರಿ ಹರ ಈಶ್ವರಃ!

*  ಕೃಪೆ : ದಟ್ಸ್‌ಕನ್ನಡ.ಕಾಂ

 

 Posted by at 11:26 PM
Aug 022010
 

ಕಣ್ಮರೆಯಾದ ಒಬ್ಬ ಅಚ್ಚ ಕನ್ನಡಿಗ ಎಸ್.ಕೆ. ಹರಿಹರೇಶ್ವರ

ನಮ್ಮ ಮಾನ್ಯ ಗೆಳೆಯರಾದ ಶ್ರೀ ಎಸ್.ಕೆ. ಹರಿಹರೇಶ್ವರರು ಕಳೆದ ಜುಲೈ ೨೩ರಂದು ಮೈಸೂರಿನಲ್ಲಿ  ತೀರಿಹೋದ ಸುದ್ದಿ ಅವರ ‘ಅಮೆರಿಕನ್ನಡ’ ಬಂಧುಗಳೆಲ್ಲರಿಗೂ ಅಪಾರವಾದ ವ್ಯಥೆ ಉಂಟುಮಾಡಿದೆ. ಅಮೆರಿಕದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿಯೇ  ಸ್ಥಾಪಿತವಾಗಿರುವ ಕನ್ನಡ ಸಾಹಿತ್ಯ ರಂಗದ ಸದಸ್ಯರೆಲ್ಲರ ಪರವಾಗಿ ಶ್ರೀ ಹರಿಹರೇಶ್ವರರ ಪತ್ನಿ ಶ್ರೀಮತಿ ನಾಗಲಕ್ಷ್ಮಿಯವರಿಗೂ, ಅವರ ಮಕ್ಕಳಿಗೂ, ಆಪ್ತ ಬಂಧುಗಳಿಗೂ ನಮ್ಮ ಸಂತಾಪವನ್ನು ಈ ಮೂಲಕ ತಿಳಿಸಬಯಸುತ್ತೇನೆ.೧೯೭೦, ೮೦ರ ದಶಕಗಳಲ್ಲಿ ಇಲ್ಲಿ ಬಂದು ನೆಲಸಿದ ಬಹು ಮಂದಿ ಕನ್ನಡಿಗರಿಗೆ ಹರಿಹರೇಶ್ವರರ ಪರಿಚಯ ಇದ್ದೇ ಇರುತ್ತದೆ. ಹರಿಹರೇಶ್ವರರು ಈ ನೆಲದಲ್ಲಿ ಕನ್ನಡಕ್ಕಾಗಿ ಮಾಡಿದ ಕೆಲಸಗಳು ಹಲವಾರು. ಅವರು ಮೊದಲು ಈ ದೇಶಕ್ಕೆ ಬಂದು ನೆಲಸಿದಾಗ ಪೆನ್ಸಿಲ್ವೇನಿಯ ಮತ್ತು ನ್ಯೂ ಜೆರ್ಸಿ ಪ್ರದೇಶದಲ್ಲಿದ್ದರು. ಆ ಸಮಯದಲ್ಲಿ ಇಲ್ಲಿನ ತ್ರಿವೇಣಿ ಕನ್ನಡ ಸಂಘದ ಅಧ್ಯಕ್ಷರಾಗಿದ್ದು ಅನೇಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿದ್ದರು. ಒಂದು ಕನ್ನಡ ಸಮ್ಮೇಳನವನ್ನೂ ನಡೆಸಿದ್ದರು. ಆದರೆ ಇವೆಲ್ಲಕ್ಕಿಂತ ಬಹುಶಃ ಜನ ಅವರನ್ನು ನೆನೆಯುವುದು ಅವರು ಸ್ಥಾಪಿಸಿದ ‘ಅಮೆರಿಕನ್ನಡ’ ಪತ್ರಿಕೆಗಾಗಿ. ಅಮೆರಿಕದ ಕನ್ನಡ ಸಮಾಜದ ಬೆಳವಣಿಗೆಯಲ್ಲಿ ಇದೊಂದು ಮುಖ್ಯವಾದ ಮೈಲಿಗಲ್ಲು.

ಅಮೆರಿಕನ್ನಡ ಒಂದು ವಿಶಿಷ್ಟವಾದ ಕೊಡುಗೆ ಎಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ. ಅದು ಮೊದಲು ಹೊರಬಂದಾಗ ಅದಕ್ಕೆ ಸಿಕ್ಕ ಸ್ವಾಗತ ಅಭೂತಪೂರ್ವವಾಗಿತ್ತು. ದೇಶಾದ್ಯಂತ ನಾನಾ ಕನ್ನಡ ಸಂಘಗಳಲ್ಲಿ ಅದರ ಲೋಕಾರ್ಪಣೆಯಾಯಿತು. ಹರಿಹರೇಶ್ವರ ದಂಪತಿಗಳು ಹತ್ತಾರು ಕಡೆ ಹೋಗಿ ಆ ಸಮಾರಂಭಗಳಲ್ಲಿ ಭಾಗವಹಿಸಿದರು.

ಈ ಪತ್ರಿಕೆಗೆ ಮುಂಚೆ ಇಲ್ಲಿ ಕನ್ನಡ ಪತ್ರಿಕೆಗಳು ಇರಲೇ ಇಲ್ಲ ಎನ್ನಲಾಗದು. ಅನೇಕ ಕನ್ನಡ ಸಂಘಗಳು ಪತ್ರಿಕೆಗಳನ್ನು ಹೊರತರುತ್ತಿದ್ದರು. ಇದು ಸ್ತುತ್ಯವಾದ ಕೆಲಸವೇ ಆದರೂ ಅವು ಆಯಾ ಸಂಘಗಳ ಸದಸ್ಯವರ್ಗಕ್ಕೆ ಮಾತ್ರ ಸೀಮಿತವಾಗಿದ್ದುದರಿಂದಲೂ, ಅವು  ಹೆಚ್ಚಾಗಿ ಕೈಬರಹದ ಪತ್ರಿಕೆಗಳಾಗಿರುತ್ತಿದ್ದುದರಿಂದಲೂ ಅವುಗಳ ವ್ಯಾಪ್ತಿ ತೀರ ಸಂಕುಚಿತವಾಗಿತ್ತಿತ್ತು.  ಅದಕ್ಕಿಂತ ಮುಖ್ಯವಾಗಿ ಅವು ಮುಖ್ಯವಾಗಿ ವಾರ್ತಾವಾಹಿನಿಗಳಾಗಿರುತ್ತಿದ್ದವು. ಅವಕ್ಕೆ ಯಾವ ಸಾಹಿತ್ಯಕ ಉದ್ದೇಶಗಳೂ ಇರುತ್ತಿರಲಿಲ್ಲ. ಅದರಿಂದಾಗಿ ಅವಕ್ಕೆ ಇಲ್ಲಿನ ಕನ್ನಡ ಜನತೆಯನ್ನು ಸಂಘಟಿಸುವ ಸಾಮರ್ಥ್ಯವಿರಲಿಲ್ಲ. ಆದರೆ ಅಮೆರಿಕನ್ನಡದ ದೃಷ್ಟಿ ಮೊದಲಿಂದಲೂ ಇಡೀ ಅಮೆರಿಕವನ್ನು ಒಳಗೊಂಡಿತ್ತು. ಅದರ ದೃಷ್ಟಿ ಸಾಂಸ್ಕೃತಿಕವೂ. ಸಾಹಿತ್ಯಾತ್ಮಕವೂ ಆಗಿತ್ತು. ಅದೊಂದು ಧೀರ ನಿಲುವು. ಸಣ್ಣಸಣ್ಣ ಕಕೂನುಗಳಿಂದ ಹೊರಬಂದು ಕನ್ನಡ ಇಡೀ ದೇಶವನ್ನು ನೋಡತೊಡಗಿತ್ತು. ಇದೊಂದು ಗಮನಾರ್ಹ ಸಂಗತಿ.

ಅಮೆರಿಕನ್ನಡ ಇಲ್ಲಿನ ನಮ್ಮ ಕನ್ನಡಿಗರನೇಕರಲ್ಲಿ ಹುದುಗಿದ್ದ ಸಾಹಿತ್ಯ ಸಾಮರ್ಥ್ಯವನ್ನು ಹೊರಗೆಳೆಯಿತು. ಅವರ ಬರವಣಿಗೆಗೆ ಒಂದು ಒಳ್ಳೆಯ ವೇದಿಕೆಯನ್ನು  ಕಲ್ಪಿಸಿತು. ದೇಶದ ನಾನಾಕಡೆಗಳಿಂದ ಸಾಹಿತ್ಯಾಸಕ್ತರು ಅದರಲ್ಲಿ ಬರೆಯತೊಡಗಿದರು. ಅಂದು ಅದರಲ್ಲಿ ಬರೆಯತೊಡಗಿದ ಅನೇಕರು ಇಂದು ಇಲ್ಲಿನ ಪ್ರಮುಖ ಲೇಖಕರಾಗಿದ್ದಾರೆ. ಈ ರೀತಿ ಲೇಖಕರನ್ನು ಬೆಳಸುವ ಕಾರ್ಯ ಸಾಮಾನ್ಯವಲ್ಲ.

ಅಮೆರಿಕನ್ನಡದ ಇನ್ನೊಂದು ವೈಶಿಷ್ಟ್ಯ ಅದು ಮೊದಲಿಂದಲೂ ಕಂಪ್ಯೂಟರ್ ಬಳಕೆಯ ಬಗ್ಗೆ ಗಮನವಿತ್ತದ್ದು.  ಅಂದರೆ ಎಲ್ಲ ಕೆಲಸವೂ ಗಣಕಯಂತ್ರದ ಸಹಾಯದಿಂದಲೇ ನಡೆಯುತ್ತಿತ್ತೆಂದಲ್ಲ. ಹಲವು ಪುಟಗಳನ್ನಾದರೂ ಕಂಪ್ಯೂಟರ್ ಸಹಾಯದಿಂದ ತಯಾರಿಸುತ್ತಿದ್ದರು.  ಆಗಿನ್ನೂ ಬರಹ, ನುಡಿ ಇತ್ಯಾದಿ ಸಾಫ಼್ಟ್‌ವೇರ್ ಸಿದ್ಧವಾಗಿರಲಿಲ್ಲ. ಕೆಲವು ಪುಟಗಳನ್ನು ಕರ್ನಾಟಕದಲ್ಲಿ ಮುದ್ರಿಸಿ ತರಿಸುತ್ತಿದ್ದರು. ಹೀಗೆ ಪುಟಗಳಲ್ಲಿ ಏಕರೂಪತೆ (uniformity)  ಇಲ್ಲದಿದ್ದರೂ, ಒಟ್ಟಿನಲ್ಲಿ ಪತ್ರಿಕೆ ಆಕರ್ಷಕವಾಗಿಯೇ ಇರುತ್ತಿತ್ತು.

ಅಮೆರಿಕನ್ನಡದಲ್ಲಿ ವಿಷಯವೈವಿಧ್ಯತೆಯಿತ್ತು. ಸಂಪಾದಕೀಯ, ಸಾಹಿತ್ಯಕ, ವೈಚಾರಿಕ, ಹಾಸ್ಯ ಲೇಖನಗಳು, ಕವಿತೆಗಳು, ಪುಸ್ತಕ ವಿಮರ್ಶೆಗಳಿಂದ ಹಿಡಿದು ನಾಗಲಕ್ಷ್ಮಿಯವರು ಮಕ್ಕಳಿಗಾಗಿ ತಯಾರಿಸುತ್ತಿದ್ದ ಕನ್ನಡ ಪಾಠಗಳವರೆಗೂ ವಿಷಯದ ಹರವಿತ್ತು,  ಸಮೃದ್ಧಿಯಿತ್ತು. ಸಂಪಾದಕರ ಸಾಮರ್ಥ್ಯಕ್ಕೆ, ಅವರ ಸೃಜನಶೀಲತೆಗೆ, ಕಲ್ಪನಾಸಾಮರ್ಥ್ಯಕ್ಕೆ ಅಲ್ಲಿ ಏನೂ ಕೊರತೆಯಿರಲಿಲ್ಲ. ಅವರಿಗಿದ್ದ ಕೊರತೆ ಮುಖ್ಯವಾಗಿ ಆರ್ಥಿಕವಾದದ್ದು. ಪತ್ರಿಕೆ ಬೆಳೆಯುತ್ತಿದ್ದಂತೆ ಸಾಕಷ್ಟು ದ್ರವ್ಯಸಹಾಯ ಇಲ್ಲದೇಹೋದದ್ದು. ಆ ಬಗ್ಗೆ ಅವರು ಸಾಕಷ್ಟು ಎಚ್ಚರಿಕೆ ವಹಿಸದೇಹೋದದ್ದು ವಿಷಾದಕರ. ಮೊದಮೊದಲು ಲೇಖಕರಿಗೆ ಒಂದು ಸಣ್ಣ ಗೌರವಧನವನ್ನು ಸಹ ಕೊಡುತ್ತಿದ್ದರು. (ಇದು ತುಂಬ professional  ಆದ ಪದ್ಧತಿ. ಕರ್ನಾಟಕದಲ್ಲೇ ಎಷ್ಟೋ ಘನ ಪತ್ರಿಕೆಗಳು ಇದನ್ನು ಆಚರಿಸುವುದಿಲ್ಲ.) ಅಥವ ಅದಕ್ಕೆ ಬದಲು ಕರ್ನಾಟಕದಿಂದ ತರಿಸಿದ ಪುಸ್ತಕಗಳನ್ನು ಕಳಿಸುತ್ತಿದ್ದರು. (ಇಂಥ ಒಂದು ಸಂದರ್ಭದಲ್ಲಿ ಅವರು ನನಗೆ ಕಳಿಸಿದ ಕನ್ನಡ ರತ್ನಕೋಶ (ಹಾ.ಮಾ. ನಾಯಕರು ಸಂಪಾದಿಸಿದ ಕನ್ನಡ-ಕನ್ನಡ ನಿಘಂಟು) ಈಗಲೂ ನನ್ನ ಬಳಿ ಇದೆ. ಅದನ್ನು ತೆರೆದಾಗೆಲ್ಲ ಹರಿಹರೇಶ್ವರರನ್ನು ನೆನೆಯುತ್ತೇನೆ.) ಅಮೆರಿಕನ್ನಡದ ನಿಲುಗಡೆಗೆ ಬಹುಶಃ ಜನಸಹಾಯವೂ ಅವರಿಗೆ ಸಾಹಷ್ಟು ಸಿಕ್ಕದೇಹೋಯಿತು ಎನ್ನಿಸುತ್ತದೆ. ಅವರು ಕೈಗೆತ್ತಿಕೊಂಡಿದ್ದ ಕೆಲಸಕ್ಕೆ  ತುಂಬಾ ಶ್ರದ್ಧೆ ಬೇಕು, ಸಹನೆ, ನಿಷ್ಠೆ, ಪರಿಶ್ರಮ ಬೇಕು. ಅವು ಸುಲಭವಾಗಿ ಸಿಕ್ಕುವ ವಸ್ತುಗಳಲ್ಲ. ಸುಮಾರು ಐದಾರು ವರ್ಷ ನಡೆದ ಆ ಪತ್ರಿಕೆಯನ್ನು ಅವರು ಈ ಎಲ್ಲ ಕಾರಣಗಳಿಂದಾಗಿ ನಿಲ್ಲಿಸಬೇಕಾಯಿತು. ಪತ್ರಿಕೆ ಇಂದು ನಮ್ಮ ಕಣ್ಣೆದುರಿಗಿಲ್ಲ, ನಿಜ, ಆದರೆ ಅದರ ನೆನಪು ನಮ್ಮೆಲ್ಲರ ಮನಸ್ಸಿನಲ್ಲಿ ಉಳಿಯುವುದು ಖಂಡಿತ.

ಈ ಎಲ್ಲ ಕೆಲಸದಲ್ಲೂ ಅವರಿಗೆ ಸಹವರ್ತಿನಿಯಾಗಿ ಅಷ್ಟೇ ಶ್ರದ್ಧೆಯಿಂದ ದುಡಿದವರು ಅವರ ಪತ್ನಿ ಶ್ರೀಮತಿ ನಾಗಲಕ್ಷ್ಮಿಯವರು. ಅವರಿಬ್ಬರನ್ನೂ ಕಂಡಾಗ ಅವರ ಮದುವೆಯಲ್ಲಿ ಸಪ್ತಪದಿ ನಡೆದಾಗ ‘ಈ ಮುಂದಿನ ಹೆಜ್ಜೆಯನ್ನು ನಾವು ಕನ್ನಡಕ್ಕಾಗಿ ಇಡೋಣ’ ಎಂದು ಹೇಳಿದ್ದರೇನೋ ಅನ್ನಿಸುತ್ತದೆ! ಡಾಕ್ಟರು, ಇಂಜಿನಿಯರು, ಅಥವಾ ಬ್ಯಾಂಕಿನ (ಈಗ ಈಟಿ/ಬೀಟಿ) ಕೆಲಸ ಇರುವವಳನ್ನೇ ಮದುವೆಯಾಗಬೇಕು ಎನ್ನುವ ಧೋರಣೆಯಿರುವ ಸಮಾಜದಲ್ಲಿ ಹರಿಹರೇಶ್ವರ ಕನ್ನಡ ಎಂ.ಎ. ಮಾಡಿದವಳನ್ನೇ ಮದುವೆಯಾಗುವ ಮನಸ್ಸುಮಾಡಿದ್ದರಂತೆ! ಅವರ ಮನಸ್ಸಿಗೆ, ಮನೋಧರ್ಮಕ್ಕೆ ತಕ್ಕವರೇ ದೊರಕಿದರು. ಅದು ಅವರ ಸುಕೃತ. ಇಲ್ಲಿ ನಾನೊಂದು ಸ್ವಂತ ವಿಷಯ ಹೇಳಿಕೊಳ್ಳೋಣವೆನಿಸುತ್ತದೆ, ತಪ್ಪು ತಿಳಿಯಬಾರದು. ನಾನೊಂದು ಲೇಖನ ಬರೆದು ಅಮೆರಿಕನ್ನಡಕ್ಕೆ ಕಳಿಸಿದ್ದೆ. ಅದನ್ನು ಓದಿ ಆ ದಂಪತಿಗಳಿಗೆ ಎಷ್ಟು ಸಂತೋಷವಾಗಿತ್ತೆಂದರೆ ಆ ದಿನ ಅವರು ಪಾಯಸದ ಅಡಿಗೆ ಮಾಡಿ ಉಂಡರಂತೆ. ಇದನ್ನು ನಾಗಲಕ್ಷ್ಮಿಯವರೇ ನನಗೆ ಹೇಳಿದ್ದು. ಜೊತೆಯ ಲೇಖಕನೊಬ್ಬನಿಗೆ ಮತ್ತೊಬ್ಬ ಕೊಡಬಹುದಾದ ಒಂದು ದೊಡ್ಡ ಸಂಭ್ರಮದ ಉಡುಗೊರೆ ಅದು. ಅದನ್ನು ಎಂದಿಗೂ ವಿಶ್ವಾಸದಿಂದ ನೆನೆಯುತ್ತೇನೆ.

ಹರಿಹರೇಶ್ವರ ಇಲ್ಲಿ ಬರುವವರೆಗೂ ಇಲ್ಲಿ ಕನ್ನಡ ಕೆಲಸ ಏನೂ ನಡೆಯುತ್ತಿರಲಿಲ್ಲ ಅಂದುಕೊಳ್ಳಬಾರದು ಎಂದು ಈ ಮೊದಲೇ ಸೂಚಿಸಿದ್ದೆ. ಅವರು ಬಂದಮೇಲೂ ಸಹ ಅನೇಕರು ಆ ಕೆಲಸ ಮಾಡುತ್ತಿದ್ದರು. ಆದರೆ ಹರಿಹರೇಶ್ವರರ ವೈಶಿಷ್ಟ್ಯವೆಂದರೆ ಅವರ ಕೆಲಸದಲ್ಲಿ ಕಾಣುತ್ತಿದ್ದ ಅಪರಿಮಿತ ಉತ್ಸಾಹ, ಅದಕ್ಕಿಂತ ಹೆಚ್ಚಾಗಿ ತೀವ್ರತೆ, ‘ಇದಕ್ಕೆ ಯಾಕಿನ್ನು ತಡ’ ಎನ್ನುವ ಆತುರ; ಜನರನ್ನು ಆಹ್ವಾನಿಸಿ, ಬೇಡಿ, ಕಾಡಿ, ಹುರಿದುಂಬಿಸಿ, ತಳ್ಳಿ – ಎಲ್ಲ ರೀತಿಯಲ್ಲೂ ಅವರ ಮನಸ್ಸನ್ನು ಕನ್ನಡದ ಕಡೆಗೆ ತಿರುಗಿಸುತ್ತಿದ್ದ ರೀತಿ. ಇಗೋ,  ಕನ್ನಡ ನಮ್ಮ ಕಣ್ಣೆದುರಿಗಿದೆ, ಅದನ್ನು ನೋಡೋಣ ಬನ್ನಿ ಎನ್ನುವ ಅವರ ಧಾಟಿ. ಅವರು ವೃತ್ತಿಯಲ್ಲಿ ಇಂಜಿನಿಯರು. ದಿನದಲ್ಲಿ ಸುಮಾರು ಹತ್ತು-ಹನ್ನೊಂದು ಗಂಟೆ ಕಡ್ಡಾಯವಾಗಿ ಆ ವೃತ್ತಿಗೆ ಮೀಸಲಾಗಿಡಬೇಕಿತ್ತು. ಇನ್ನು ಉಳಿದ ಸಮಯದಲ್ಲಿ, ವಾರಾಂತ್ಯದಲ್ಲಿ (ಆಗಲೂ ಎಷ್ಟೋ ಸಲ ಆಫ಼ೀಸಿನ ಕರೆ ಬರುವುದುಂಟು) ಮಾತ್ರ ಮಾಡಲಾಗುತ್ತಿದ್ದ ಕೆಲಸ ಇದು. ಅಂಥ ಪರಿಸ್ಥಿತಿಯಲ್ಲಿ ಇಷ್ಟು ಕೆಲಸ ಅವರು ಸಾಧಿಸಿದ್ದು ಗಮನಾರ್ಹ. ಅವರ ತೀವ್ರತೆಗೆ ತಕ್ಕ ಆಸರೆ, ಪ್ರತಿಸ್ಪಂದನ ದೊರೆಯದಿದ್ದಾಗ ಅಥವಾ ನಿಧಾನವಾದಾಗ, ಅವರಿಗೆ ತಾಳ್ಮೆಗೆಡುತ್ತಿದ್ದುದೂ ಉಂಟು.

ಹರಿಹರೇಶ್ವರರು ತಮ್ಮ ವೃತ್ತಿಯನ್ನರಸಿ ಅಮೆರಿಕದ ಪೂರ್ವ, ಮಧ್ಯಮ, ಮತ್ತು ಪಶ್ಚಿಮ ಭಾಗಗಳಲ್ಲಿದ್ದವರು. ಹೋದೆಲ್ಲ ಕಡೆಯೂ ಅನೇಕ ಗೆಳೆಯರ ಸಂಪರ್ಕ, ಸ್ನೇಹ ಪ್ರೀತಿಗಳನ್ನು ಗಳಿಸಿಕೊಂಡವರು.   ಪತ್ನಿ ನಾಗಲಕ್ಷ್ಮಿಯವರ ಸೂಚನೆಯಂತೆ ಭಾರತಕ್ಕೆ – ಮೈಸೂರಿಗೆ – ತೆರಳಿದ ಹರಿಹರೇಶ್ವರ ಅಲ್ಲಿಯೂ ತಮ್ಮ ಕೆಲಸಗಳನ್ನು ಮುಂದುವರೆಸುತ್ತಲೇ ಇದ್ದರು. ಅನೇಕ ಯುವಜನರು ಅವರ ಮಾರ್ಗದರ್ಶನದಿಂದ ಲಾಭ ಪಡೆದಿದ್ದಾರೆ. ಹೊಸ ಲೇಖಕರ ಪುಸ್ತಕಗಳನ್ನು ಒಂದಲ್ಲ ಹತ್ತು ಪ್ರತಿ ಕೊಂಡು, ಅವನ್ನು ತಮಗೆ ಬೇಕಾದವರಿಗೆಲ್ಲ ಹಂಚಿ ಆ ಲೇಖಕರನ್ನು ಪ್ರೋತ್ಸಾಹಿಸಿದ್ದಾರೆ. ಇಲ್ಲಿ ನಡೆಯುವ ಅಕ್ಕ ಸಮ್ಮೇಳನ ಮುಂತಾದ ವಿಶೇಷ ಕಾರ್ಯಕ್ರಮಗಳಲ್ಲಿ  ಕೆಲವು ವೇಳೆ ಪ್ರತ್ಯಕ್ಷವಾಗಿ, ಬಹು ವೇಳೆ ಪರೋಕ್ಷವಾಗಿ ಭಾಗವಹಿಸಿದ್ದಾರೆ.

ನಮ್ಮಲ್ಲಿ ಕನ್ನಡ ಪ್ರೇಮ, ಉತ್ಸಾಹ, ಪಾಂಡಿತ್ಯ, ಕೈಂಕರ್ಯ ಇವುಗಳ ಮಾತು ಬಂದಾಗ ಸಾಮಾನ್ಯವಾಗಿ ನೆನಪಿಗೆ ಬರುವವರು ಜಿ. ಪಿ. ರಾಜರತ್ನಂ. ಹರಿಹರೇಶ್ವರರೂ ಅದೇ ಅಚ್ಚಿನವರು. ಜನ ಅವರಿಗೆ ಸಲ್ಲಿಸುತ್ತಿರುವ ಗೌರವವನ್ನು  ಸಂಪೂರ್ಣವಾಗಿ ಅವರೇ ಗಳಿಸಿಕೊಂಡದ್ದು.   ಹರಿಹರೇಶ್ವರ ಇನ್ನೂ ಬಹು ಕಾಲ ನಮ್ಮೊಂದಿಗಿರಬಹುದಿತ್ತು.  ಆದರೆ ಮತ್ತೆ ಕನ್ನಡ ತಾಯ ಮಡಿಲಲ್ಲಿ ಮುಖವಿಟ್ಟು ಚಿರಶಾಂತಿ ಪಡೆಯುವ ಸೌಭಾಗ್ಯ ಅವರದಾಗಿತ್ತು. ಅದು ಅವರು ಪಡೆದುಕೊಂಡ ಧನ್ಯತೆಯೆಂದೇ ಅನ್ನಿಸುತ್ತದೆ.

ಎಚ್. ವೈ. ರಾಜಗೋಪಾಲ್
ಅಧ್ಯಕ್ಷ, ಕನ್ನಡ ಸಾಹಿತ್ಯ ರಂಗ

 Posted by at 11:20 PM