Jan 102020
 

ಕನ್ನಡ ಸಾಹಿತ್ಯರಂಗವು ಅಮೆರಿಕದ ವಿವಿಧ ನಗರಗಳಲ್ಲಿ ನಡೆಸಲಿರುವ ಸಾಹಿತ್ಯ ಶಿಬಿರಗಳು-ಉಪನ್ಯಾಸ ಮಾಲಿಕೆ!! – ಉಪನ್ಯಾಸಕರು – ಡಾ.
ನರಹಳ್ಳಿ ಬಾಲಸುಬ್ರಹ್ಮಣ್ಯ !

ಕನ್ನಡ ಸಾಹಿತ್ಯ ರಂಗ
ಸಂಚಾರೀ ಸಾಹಿತ್ಯ ಶಿಬಿರ
ಪ್ರಕಟಣೆ: ಸುತ್ತೋಲೆ-೧

ಅಮೆರಿಕದ ಕನ್ನಡ ಸಾಹಿತ್ಯೋತ್ಸಾಹಿಗಳಿಗೆ ಶುಭ ಸಮಾಚಾರ!
ಕೆಲ ವರುಷಗಳ ಹಿಂದೆ ಸಾಹಿತ್ಯ ರಂಗವು ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೂಲವಸ್ತುವಾಗಿ ಉಳ್ಳ ಒಂದು ಸಂಚಾರೀ ಶಿಬಿರವನ್ನು ಹತ್ತಾರು ಊರುಗಳಲ್ಲಿ ನಡೆಸಿದ್ದ ವಿಷಯ ಅನೇಕರ ನೆನಪಿನಲ್ಲಿ ಉಳಿದಿರಬಹುದು. ಪ್ರಸಿದ್ಧ ಕನ್ನಡ ವಿದ್ವಾಂಸರೂ ಖ್ಯಾತ ಕವಿಗಳೂ ಆದ ಡಾ. ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟರು ಉಪನ್ಯಾಸ ನೀಡಿ ಕನ್ನಡ ಸಾಹಿತ್ಯದ ಮೊದಲ ಹೆಜ್ಜೆಯಿಂದ ಹಿಡಿದು ಆಧುನಿಕ ಕಾಲದವರೆಗಿನ ಎನ್ ಎಸ್ ಎಲ್ವಿವರಗಳನ್ನು ಮಂಡಿಸಿದ್ದರು. ಅವರ ಪಠ್ಯದ ಮುಖ್ಯಾಂಶಗಳನ್ನುಳ್ಳ ಸುದೀರ್ಘ ಧ್ವನಿ ಸಂಪುಟಗಳನ್ನು ಸಹ ಶಿಬಿರದಲ್ಲಿ ಭಾಗವಹಿಸಿದವರಿಗೆ ಹಂಚಲಾಗಿತ್ತು.

ಈಗ, 2020 ರ ವಸಂತ ಋತುವಿನಲ್ಲಿ ನಮ್ಮ ಎರಡನೇ ಸಂಚಾರೀ ಶಿಬಿರವನ್ನು ನಡೆಸಬೇಕೆಂದು ರಂಗದ ಆಡಳಿತ ಮಂಡಲಿ ನಿರ್ಧರಿಸಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದಿರುವ
ಮತ್ತು ಇಂದು ನಡೆಯುತ್ತಿರುವ ಪ್ರಮುಖ ವಿಷಯಗಳನ್ನು ಮಂಡಿಸುವ ಯತ್ನ ಇದಾಗಿರುತ್ತದೆ. ಕನ್ನಡದ ಪ್ರಸಿದ್ಧ ಬರಹಗಾರರೂ, ಖ್ಯಾತ ವಿಮರ್ಶಕರೂ, ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡವನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ಮೂರು ದಶಕಗಳಿಗೂ ಹೆಚ್ಚು ಬೋಧಿಸಿ ನಿವೃತ್ತರಾಗಿರುವ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ನಮ್ಮ ಶಿಬಿರವನ್ನು ನಡೆಸಿಕೊಡಲು ಒಪ್ಪಿದ್ದಾರೆಂದು ತಿಳಿಸಲು
ಸಂತಸ ಮತ್ತು ಹೆಮ್ಮೆ ಆಗುತ್ತಿದೆ. ಒಂದು ಅಥವಾ ಎರಡು ದಿನಗಳ ಶಿಬಿರದ ಮೂಲವಸ್ತು ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು, ಮುಖ್ಯ ಕೊಡುಗೆಗಳನ್ನು ಮತ್ತು ಮುನ್ನಡೆಯ ವಿವಿಧ ಮಜಲುಗಳನ್ನೂ ಒಳಗೊಂಡಿರುತ್ತದೆ. ಪಠ್ಯದ ಸುದೀರ್ಘ ಟಿಪ್ಪಣಿಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಹಾಗೂ ಶಿಬಿರದಲ್ಲಿ ಭಾಗಿಯಾಗುವ ಸರ್ವರಿಗೂ ಹಂಚುವ ತೀರ್ಮಾನ ನಮ್ಮದು.

ನಮ್ಮ ಹಿಂದಿನ ಅನುಭವವನ್ನನುಸರಿಸಿ, ಪಶ್ಚಿಮ ತೀರದ, ದಕ್ಷಿಣ ಮತ್ತು ಉತ್ತರ ಕ್ಯಾಲಿಫ಼ೋರ್ನಿಯ, ಮಧ್ಯವಲಯದ ಶಿಕಾಗೋ ಮತ್ತು ಸೇಯಿಂಟ್ ಲೂಯಿಸ್, ಈಶಾನ್ಯದ ಬಾಸ್ಟನ್, ನ್ಯೂಯಾರ್ಕ್/ನ್ಯೂಜೆರ್ಸಿ, ಪೂರ್ವ ತೀರದ ಮೇರೀಲ್ಯಾಂಡ್/ವರ್ಜೀನ್ಯಾ, ಉತ್ತರ ಕೆರೊಲಿನ, ದಕ್ಷಿಣದ ಡಲ್ಲಸ್, ಹ್ಯೂಸ್ಟನ್ ಮತ್ತು ಫ಼್ಲಾರಿಡಾ ಪ್ರದೇಶಗಳಲ್ಲಿ ಮೇ-ಜೂನ್ ತಿಂಗಳುಗಳ ಸುಮಾರು ಐದಾರು ವಾರಾಂತ್ಯಗಳಲ್ಲಿ ನಡೆಸಬಹುದೆಂಬುದು ನಮ್ಮ ಅಂದಾಜು (ಇನ್ನೂ ಹೆಚ್ಚಿನ ವಿವರಗಳನ್ನು
ಸಧ್ಯದಲ್ಲೇ ನಿರೀಕ್ಷಿಸಿ). ಶಿಬಿರದಲ್ಲಿ ನೋಂದಾಯಿಸಿಕೊಳ್ಳುವರಿಗೆ ಒಂದು ಸುಲಭಶುಲ್ಕವನ್ನು ನಿಗದಿ ಪಡಿಸಲಾಗುವುದು. ಶಿಬಿರವನ್ನು ಸ್ಥಳೀಯ ಕನ್ನಡ ಸಂಘದ ಸಹಕಾರದೊಂದಿಗೆ, ಸ್ವಯಂಸೇವಕರ ಮನೆಯ
ನೆಲಮಾಳಿಗೆಯಲ್ಲೋ, ಗ್ರಂಥಾಲಯದ ಅಥವಾ ದೇಗುಲದ ಸಭಾ-ಕೊಠಡಿಗಳಲ್ಲೋ ನಡೆಸಲಾಗುವುದು.

ಮುಂದಿನ ಏರ್ಪಾಟುಗಳನ್ನು ಖಚಿತಗೊಳಿಸಲು ಮೊದಲು ನಮಗೆ ಆಸಕ್ತರ ಸಂಖ್ಯೆಯ ಅಂದಾಜು ಮತ್ತು ಸ್ವಯಂಸೇವಕರ ಉಮೇದುಗಳ ಬಗ್ಗೆ ವಿವರಗಳು ಬೇಕಾಗಿವೆ. ಸಾಹಿತ್ಯವನ್ನು ನೇರವಾಗಿ ಅಭ್ಯಾಸಮಾಡಿರದ ಆದರೆ, ಸಾಹಿತ್ಯದಲ್ಲಿ ಆಸಕ್ತಿಯುಳ್ಳವರನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಈ ನಮ್ಮ ಯೋಜನೆಗೆ, ತಮ್ಮೆಲ್ಲರ ತನು-ಮನ-ಧನಗಳ
ಪ್ರೋತ್ಸಾಹ ದೊರಕುವುದೆಂದು ನಂಬಿದ್ದೇವೆ.
ಮೈ.ಶ್ರೀ. ನಟರಾಜ Mysore Nataraja
ಅಧ್ಯಕ್ಷ, ಕಸಾರಂ

ವಿ.ಸೂ: ಆಸಕ್ತರು ರಂಗದ ಆಡಳಿತ ಮಂಡಲಿಯ ಸದಸ್ಯರನ್ನು ಸಾಧ್ಯವಾದಷ್ಟು ಬೇಗ ಸಂಪರ್ಕಿಸಿದರೆ ನಮ್ಮ ಮುಂದಿನ ಕೆಲಸಗಳಿಗೆ ಅನುಕೂಲವಾಗುವುದು. ಹಾಗೂ ಈ ಸುತ್ತೋಲೆಯನ್ನು ತಮ್ಮ ಬಂಧು-ಮಿತ್ರರಲ್ಲಿ ಹಂಚಿಕೊಳ್ಳಬೇಕೆಂದು ವಿನಂತಿ.
ಸಿರಿಗನ್ನಡಂ ಗೆಲ್ಗೆ.

 Posted by at 10:42 AM