Oct 182010
 

ಕನ್ನಡ ಸಾಹಿತ್ಯ ಪ್ರೇಮಿಗಳಿಗೆಲ್ಲ ಆದರಪೂರ್ವಕ ನಮಸ್ಕಾರಗಳು. ಈಗಾಗಲೇ ನಾವು ಪ್ರಕಟಿಸಿರುವಂತೆ, ಕನ್ನಡ ಸಾಹಿತ್ಯ ರಂಗದ ಮುಂದಿನ ಅಧಿವೇಶನ 2011ರ ಮೇ ತಿಂಗಳಿನಲ್ಲಿ, ಅಮೆರಿಕದ ಪ್ರಮುಖ ಕನ್ನಡ ಕೂಟಗಳಲ್ಲಿ ಒಂದಾಗಿರುವ ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ (KKNC) ಸಹಯೋಗದೊಂದಿಗೆ ಮತ್ತು ಸ್ಥಳೀಯ ಸಾಹಿತ್ಯಾಸಕ್ತರ ಬಳಗ ‘ಸಾಹಿತ್ಯಗೋಷ್ಠಿ’ಯ ಸಹಕಾರದೊಂದಿಗೆ ಸ್ಯಾನ್ ಫ಼್ರಾನ್ಸಿಸ್ಕೋ – ಬೇ ಏರಿಯ ಬಳಿ ನಡೆಯಲಿದೆ. ಈ ಸಂದರ್ಭದಲ್ಲಿ ಹಿಂದಿನ ಸಮ್ಮೇಳನಗಳಂತೆ ಈ ಸಲವೂ ಬಹುಮಟ್ಟಿಗೆ ಅಮೆರಿಕದ ಕನ್ನಡಿಗರೇ ಬರೆದಿರುವ ಕನ್ನಡ ಪುಸ್ತಕವೊಂದನ್ನು ಹೊರತರುತ್ತಿದ್ದೇವೆ. ಈ ಬಾರಿ ಲಲಿತ ಪ್ರಬಂಧಗಳಿಂದ ಕೂಡಿದ ಸಂಕಲನವೊಂದನ್ನು ಹೊರತರುವ ಯೋಜನೆ ನಮ್ಮದು. ಈ ಸಂಕಲನದ ಸಂಪಾದಕತ್ವವನ್ನು ಶ್ರೀಮತಿ ತ್ರಿವೇಣಿ ಶ್ರೀನಿವಾಸರಾವ್ ಮತ್ತು ಶ್ರೀ ಎಂ. ಆರ್. ದತ್ತಾತ್ರಿಯವರು ವಹಿಸಿಕೊಂಡಿದ್ದಾರೆ.

ಬಿಗಿಯಾಗಿರುವುದನ್ನು ಲಘುವಾಗಿ ಹೇಳುವುದೇ ಲಲಿತ ಪ್ರಬಂಧಗಳ ವೈಶಿಷ್ಟ್ಯವೆನ್ನಬಹುದು. ಲಲಿತ ಪ್ರಬಂಧಗಳು ಲಘುವಾಗಿದ್ದರೂ ಅದರ ದೃಷ್ಟಿಕೋನ ಮಾತ್ರ ಲಘುವಲ್ಲ. ಎರಡು ಸಂಸ್ಕೃತಿಗಳನ್ನು ಕಂಡವರಿಗೆ, ಹೊಸ ದೇಶಗಳನ್ನು ಕಂಡವರಿಗೆ ಅನೇಕ ಹೊಸ ಅನುಭವಗಳಾಗಿರುತ್ತವೆ, ಹೊಸ ವಿಚಾರಗಳು ಮನಸ್ಸಿಗೆ ಹೊಳೆದಿರುತ್ತವೆ. ಅವನ್ನು ಅವರು ನೋಡುವ, ತಮ್ಮದಾಗಿಸಿಕೊಳ್ಳುವ ರೀತಿಯೂ ಹೊಸದಾಗಿರಲು ಸಾಧ್ಯ. ಇಂಥವೆಲ್ಲ ಈ ಲಲಿತ ಪ್ರಬಂಧಗಳಿಗೆ ತಕ್ಕ ವಸ್ತುವಾಗಬಲ್ಲವು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಂತೂ ಲಲಿತ ಪ್ರಬಂಧಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಎ.ಎನ್. ಮೂರ್ತಿರಾವ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅ.ರಾ. ಮಿತ್ರರಿಂದ ಹಿಡಿದು ಈಚೆಗಿನ ವಸುಧೇಂದ್ರರವರೆಗೂ ಲಲಿತ ಪ್ರಬಂಧ ಸುಲಲಿತವಾದ ಹಾದಿಯಲ್ಲಿ ಸಾಗಿಬಂದಿದೆ. ಹಾಗಾಗಿ, ಸಾಹಿತ್ಯ ರಂಗ ತನ್ನ ಈ ಬಾರಿಯ ಪ್ರಕಟಣೆಗೆಂದು ‘ಲಲಿತ ಪ್ರಬಂಧ’ ಪ್ರಕಾರವನ್ನೇ ಆರಿಸಿಕೊಂಡಿದ್ದು, ಈ ಮೂಲಕ ನಿಮ್ಮ ಪ್ರಬಂಧಗಳನ್ನು ಪ್ರಕಟನೆಗೆಂದು ಆಹ್ವಾನಿಸುತ್ತಿದೆ.

ಅದಕ್ಕಾಗಿ ನಾವು ರೂಪಿಸಿರುವ ಕೆಲವು ನಿಯಮಗಳು ಈ ರೀತಿಯಾಗಿವೆ:

* ಲಲಿತ ಪ್ರಬಂಧಗಳಿಗೆ ವಿಷಯದ ಮಿತಿಯಿಲ್ಲ. ಆದರೂ ನೀವು ಆರಿಸಿಕೊಳ್ಳುವ ವಿಷಯ ಸಾರ್ವಕಾಲಿಕವಾಗಿದ್ದು, ಸರ್ವತ್ರ ಅನ್ವಯವಾಗುವಂತಿದ್ದರೆ ಒಳಿತು.

* ಅನಿವಾಸಿ ಕನ್ನಡಿಗರ ಬರಹಗಳಿಗೆ ಆದ್ಯತೆ. ಇತರರ ಬರಹಗಳನ್ನು ಯುಕ್ತವಾದಲ್ಲಿ ಸ್ವೀಕರಿಸಲಾಗುವುದು.

* ನಮಗೆ ಕಳಿಸುವ ಪ್ರಬಂಧಗಳು ಈ ಮೊದಲು ಬೇರೆಲ್ಲೂ ಪ್ರಕಟವಾಗಿರಬಾರದು, ಪ್ರಕಟನೆಗೆಂದು ಇನ್ನೆಲ್ಲಿಗೂ ಕಳುಹಿಸಿರಬಾರದು.

* ನಮಗೆ ಬರುವ ಎಲ್ಲಾ ಪ್ರಬಂಧಗಳಿಂದ, ಸಂಪಾದಕ ಮಂಡಲಿ ಅತ್ಯುತ್ತಮವೆಂದು ತೀರ್ಮಾನಿಸುವ ಇಪ್ಪತ್ತೈದು-ಮೂವತ್ತು ಪ್ರಬಂಧಗಳನ್ನು ಆಯ್ದುಕೊಳ್ಳಲಾಗುತ್ತದೆ. ಈ ಆಯ್ಕೆಯಲ್ಲಿ ಸಂಪಾದಕ ವರ್ಗದ ತೀರ್ಮಾನವೇ ಅಂತಿಮವಾದದ್ದು.

* ನಿಮ್ಮ ಪ್ರಬಂಧಗಳು ಸುಮಾರು ಎಂಟು ಪುಟಗಳ ಮಿತಿಯಲ್ಲಿರಬೇಕು (ಸಾಲುಗಳ ನಡುವೆ ಒಂದು ಅಂತರ ಮಾತ್ರ -‘ಸಿಂಗಲ್ ಸ್ಪೇಸಿಂಗ್’ ಮತ್ತು ಬರಹ ಫ಼ಾಂಟ್ ೧೪, ಒಟ್ಟಿನಲ್ಲಿ, ಸುಮಾರು ೨೫೦೦ ಪದಗಳು).

* ಲೇಖನಗಳನ್ನು ‘ಬರಹ’ ತಂತ್ರಾಂಶ ಉಪಯೋಗಿಸಿ, ವಿ-ಅಂಚೆಯ ಮೂಲಕ ಕಳುಹಿಸಬೇಕು.

* ನಿಮ್ಮ ಪ್ರಬಂಧಗಳು ನಮ್ಮನ್ನು ತಲುಪಲು ಕೊನೆಯ ದಿನಾಂಕ: ಡಿಸೆಂಬರ್, ೧೫, ೨೦೧೦

* ಪ್ರಬಂಧಗಳನ್ನು ಕಳಿಸಬೇಕಾದ ವಿಳಾಸ – sritri@gmail.com

ಈ ಹಿಂದಿನಂತೆಯೇ, ಕನ್ನಡ ಸಾಹಿತ್ಯರಂಗಕ್ಕೆ ನಿಮ್ಮೆಲ್ಲರ ಬೆಂಬಲ, ಉತ್ತೇಜನಗಳನ್ನು ನೀಡುತ್ತೀರೆಂಬ ಭರವಸೆ ನಮಗಿದೆ. ಈ ಸಂಬಂಧವಾಗಿ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ, ತ್ರಿವೇಣಿ ಶ್ರೀನಿವಾಸರಾವ್ (sritri@gmail.com ), ಎಂ. ಆರ್. ದತ್ತಾತ್ರಿ(dattathri_m_r@yahoo.com ) ಅಥವಾ ಕೆಳಕಾಣಿಸಿರುವ ಸಂಪಾದಕ ಮಂಡಲಿಯ ಯಾರನ್ನಾದರೂ ಸಂಪರ್ಕಿಸಬಹುದು: ಎಚ್.ವೈ. ರಾಜಗೋಪಾಲ್ (hyr1195@aol.com ), ಎಂ.ಎಸ್. ನಟರಾಜ (mysreena@aol.com ), ನಳಿನಿ ಮೈಯ (nmaiya@gmail.com), ನಾಗ ಐತಾಳ  (nagaaithal@yahoo.com ), ಮತ್ತು ಎಚ್.ಕೆ. ಚಂದ್ರಶೇಖರ್ (hkcssd@gmail.com ).

ಧನ್ಯವಾದಗಳು.

ಕನ್ನಡ ಸಾಹಿತ್ಯ ರಂಗದ ಪರವಾಗಿ,

ತ್ರಿವೇಣಿ ಶ್ರೀನಿವಾಸರಾವ್

ಎಂ.ಆರ್. ದತ್ತಾತ್ರಿ

 Posted by at 3:37 PM
Sep 242010
 

ಉತ್ತರ ಅಮೆರಿಕದ ಕನ್ನಡ ಸಾಹಿತ್ಯ ರಂಗ ತನ್ನ ಐದನೆಯ ವಸಂತ ಸಾಹಿತ್ಯೋತ್ಸವವನ್ನು ಈ ಮೂಲಕ ಉದ್ಘೋಷಿಸುತ್ತ ಕನ್ನಡ ಸಾಹಿತ್ಯಾಭಿಮಾನಿಗಳೆಲ್ಲರೂ ತಪ್ಪದೆ ಆ ಸಮ್ಮೇಳನಕ್ಕೆ ಬರಬೇಕೆಂದು ಅತ್ಯಂತ ವಿಶ್ವಾಸದಿಂದ ಕೋರುತ್ತಿದೆ.  ಈ ಸಮ್ಮೇಳನ ಬರುವ ವರ್ಷದ  ಮೇ ತಿಂಗಳಲ್ಲಿ (May, 2011) ಉತ್ತರ ಕ್ಯಾಲಿಫ಼ೋರ್ನಿಯಾದ ಸಾನ್ ಫ಼್ರಾನ್ಸಿಸ್ಕೋ ಸಮೀಪದಲ್ಲಿ ಅಲ್ಲಿನ ಅತ್ಯಂತ ಪ್ರತಿಷ್ಠಿತ ಕನ್ನಡ ಸಂಸ್ಥೆಯಾದ ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟದ (KKNC) ಸಹಪ್ರಾಯೋಜಕತೆಯಿಂದ ನಡೆಯಲಿದೆ. ಅದೇ ಪ್ರದೇಶದಲ್ಲಿರುವ ಸಾಹಿತ್ಯ ಗೋಷ್ಠಿ ಸಂಸ್ಥೆಯೂ ಈ ಸಮ್ಮೇಳನಕ್ಕೆ ತನ್ನ ಬೆಂಬಲ ನೀಡಿದೆ.  ಸಮ್ಮೇಳನದ ವಿವರಗಳನ್ನು ಅವು ಸಿದ್ಧವಾದಂತೆಲ್ಲ ನಿಮಗೆ ದಟ್ಸ್ ಕನ್ನಡ.ಕಾಂ ಮುಂತಾದ ಮಾಧ್ಯಮಗಳ ಮೂಲಕ ತಿಳಿಸುತ್ತೇವೆ. ದಯವಿಟ್ಟು ಅವನ್ನು ಗಮನಿಸಿ.

ಕನ್ನಡ ಸಾಹಿತ್ಯ ರಂಗ ಉತ್ತರ ಅಮೆರಿಕದಲ್ಲಿರುವ ಹಲವಾರು ಕನ್ನಡ ಸಂಸ್ಥೆಗಳಲ್ಲಿ ಸಾಹಿತ್ಯಕ್ಕೇ ಮೀಸಲಾದ ಏಕೈಕ ರಾಷ್ಟ್ರೀಯ ಸಂಸ್ಥೆ. ಸಂಪೂರ್ಣವಾಗಿ ಸ್ವಾವಲಂಬಿಯಾದ, ಸ್ವತಂತ್ರವಾಗಿ ವ್ಯವಹರಿಸುವ, ಆರ್ಥಿಕ ಲಾಭೋದ್ದೇಶವಿಲ್ಲದ ಸಂಸ್ಥೆ ಇದು. ಸಂಸ್ಥೆ ಚಿಕ್ಕದು, ಆದರೆ ಅದರ ಧ್ಯೇಯಗಳು, ಆಶೋತ್ತರಗಳು  ದೊಡ್ಡವು. ಇದುವರೆಗೆ ನೀವೆಲ್ಲ ಈ ಸಂಸ್ಥೆಯನ್ನು ಪ್ರೀತಿಯಿಂದ ನೋಡಿ ಅದಕ್ಕೆ ನಿಮ್ಮ ಬೆಂಬಲ ನೀಡಿದ್ದೀರಿ, ಅದಕ್ಕೆ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ಇನ್ನು ಮುಂದೆಯೂ ನೀವು ಅದೇ ರೀತಿ ನಿಮ್ಮ ಬೆಂಬಲ ನೀಡುವಿರೆಂದು ಆಶಿಸುತ್ತೇವೆ.

ಉತ್ತರ ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟ ಅಮೆರಿಕದ ಸ್ಥಳೀಯ ಕನ್ನಡ ಕೂಟಗಳಲ್ಲೆಲ್ಲ ಅತಿ ದೊಡ್ಡ ಸಂಸ್ಥೆ. ೧೯೭೩ರಲ್ಲಿ ಸ್ಥಾಪನೆಯಾದ ಈ ಕೂಟ ಸಾನ್ ಫ಼್ರಾನ್ಸಿಸ್ಕೋ ಕೊಲ್ಲಿಯ ಪ್ರದೇಶದ ಸಹಸ್ರಾರು ಕನ್ನಡಿಗರಿಗೆ ಮಮತೆಯ ಮನೆಯಾಗಿದೆ. ವಿವಿಧ ರೀತಿಯ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಲ್ಲದೆ, ಸುತ್ತಲಿನ ಸಮಾಜದೊಂದಿಗೆ ನಿಕಟ ವ್ಯವಹಾರವನ್ನೂ ಇಟ್ಟುಕೊಂಡು ಅದರ ಚಟುವಟಿಕೆಗಳಲ್ಲೂ ಭಾಗವಹಿಸುವ ಸಂಸ್ಥೆ ಇದು. ಹೊಸ ರೀತಿಯ ಕಾರ್ಯಕ್ರಮಗಳನ್ನು ನಡೆಸುವ ಉತ್ಸಾಹವಿರುವ ಈ ಸಂಸ್ಥೆಯ ಪದಾಧಿಕಾರಿಗಳು ಕನ್ನಡ ಸಾಹಿತ್ಯ ರಂಗದೊಂದಿಗೆ ಬರುವ ವರ್ಷದ ವಸಂತ ಸಾಹಿತ್ಯೋತ್ಸವನ್ನು ನಡೆಸುವ ಯೋಜನೆಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿ, ಅದಕ್ಕೆ  ತಮ್ಮ ಪೂರ್ಣ ಸಹಕಾರ ಬೆಂಬಲಗಳನ್ನು ನೀಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ರಂಗ ಅತ್ಯಂತ ಋಣಿಯಾಗಿದೆ.

ಈ ಸಮ್ಮೇಳನದ ಮುಖ್ಯ ಗುರಿ ಇಲ್ಲಿನ ಎಲ್ಲ ಕನ್ನಡ ಸಾಹಿತ್ಯಾಸಕ್ತರನ್ನೂ, ಬರಹಗಾರರನ್ನೂ ಒಂದೆಡೆ ಸೇರಿಸಿ ಅವರು ತಂತಮ್ಮ ವಿಚಾರಗಳನ್ನು ಮಂಡಿಸಲು, ಆಲೋಚನೆಗಳನ್ನು ಹಂಚಿಕೊಳ್ಳಲು ಅನುವಾಗುವಂಥ ಒಂದು ಗದ್ದಲವಿಲ್ಲದ, ನೆಮ್ಮದಿಯ, ಸಂತೋಷದ ವೇದಿಕೆಯನ್ನು ಕಲ್ಪಿಸುವುದು. ಇಲ್ಲಿನವರು ಬರೆದ ಹೊಸ ಪುಸ್ತಕಗಳನ್ನು ಕುರಿತು ಚರ್ಚಿಸುವುದು, ಈ ನಾಡಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಯೋಚಿಸುವುದು, ಕರ್ನಾಟಕದಿಂದ ಬರುವ ಅತಿಥಿ ಸಾಹಿತಿಗಳೊಂದಿಗೆ ಸಾವಧಾನವಾಗಿ, ಮನಸಾರೆ ಮಾತನಾಡುವುದು  – ಇಂಥ ಎಲ್ಲಕ್ಕೂ ಒಂದು ಉತ್ತಮ ಅವಕಾಶವನ್ನು ಕೊಡುತ್ತದೆ ಈ ಸಮ್ಮೇಳನ. ಇವಲ್ಲದೆ ಸಾಹಿತ್ಯಾತ್ಮಕವಾದ ಉತ್ತಮ ಮನರಂಜನೆಯ ಕಾರ್ಯಕ್ರಮಗಳೂ ಇರುತ್ತವೆ. ಈ ಹಿಂದೆ ನಡೆದ ವಸಂತ ಸಾಹಿತ್ಯೊತ್ಸವಗಳಲ್ಲಿ ಪಾಲುಗೊಂಡವರೆಲ್ಲ ತಮ್ಮ ಅನುಭವಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಮುಂದಿನ ಸಮ್ಮೇಳನದಲ್ಲಿ ಇನ್ನೂ ಹೆಚ್ಚು ಮಂದಿ ಪಾಲುಗೊಂಡು ಕನ್ನಡ ಸಾಹಿತ್ಯಸುಧೆಯನ್ನು ಆಸ್ವಾದಿಸುವರೆಂದು ನಂಬಿದ್ದೇವೆ.

ಪ್ರತಿ ಸಮ್ಮೇಳನದ ಸಂದರ್ಭದಲ್ಲೂ ಕನ್ನಡ ಸಾಹಿತ್ಯ ರಂಗ ಒಂದೊಂದು ಹೊಸ ಪುಸ್ತಕ ಹೊರತಂದಿದೆ. ಈ ಪುಸ್ತಕ ಯೋಜನೆಯಲ್ಲಿ ಅಮೆರಿಕದ ಕನ್ನಡ ಲೇಖಕರಿಗೇ ಅಗ್ರಸ್ಥಾನವಿರುತ್ತದೆ.  ಈ ಸಲದ ಪುಸ್ತಕ ಯೋಜನೆಯ ಬಗ್ಗೆ ಸದ್ಯದಲ್ಲೇ ಪ್ರಕಟನೆ ಹೊರಡಲಿದೆ. ಅದನ್ನೂ, ಸಮ್ಮೇಳನದ ಬಗ್ಗೆ ಮುಂದೆ ಬರಲಿರುವ  ವಾರ್ತಾ ಪ್ರಕಟನೆಗಳನ್ನೂ ದಯವಿಟ್ಟು ಎದುರುನೋಡಿ.

ಮತ್ತೊಮ್ಮೆ ಎಲ್ಲ ಕನ್ನಡ ಸಾಹಿತ್ಯಾಭಿಮಾನಿಗಳಿಗೂ ಐದನೇ ವಸಂತ ಸಾಹಿತ್ಯೋತ್ಸವಕ್ಕೆ ಸುಸ್ವಾಗತ ಕೋರುತ್ತೇವೆ.

ವಿವರಗಳಿಗೆ ಎಚ್.ವೈ. ರಾಜಗೋಪಾಲ್ (hyrajagopal@gmail.com ) ಅವರನ್ನು ಸಂಪರ್ಕಿಸಬಹುದು.

ಎಚ್.ವೈ. ರಾಜಗೋಪಾಲ್

ಅಧ್ಯಕ್ಷ, ಕನ್ನಡ ಸಾಹಿತ್ಯ ರಂಗ ಕಾರ್ಯಕಾರೀ ಸಮಿತಿ

 Posted by at 3:36 AM