May 252015
 

KSR-Logo

 

ಸೇಯಿಂಟ್ ಲೂಯಿಸ್ಸಿನ ಸಂಗಮದ ಆಶ್ರಯದಲ್ಲಿ, ಮಧ್ಯವಲಯದ ಇತರ ಕನ್ನಡ ಕೂಟಗಳ ಸಹಕಾರದೊಂದಿಗೆ ಇದೇ ಮೇ 30 ಮತ್ತು 31ರಂದು ನಡೆಯಲಿರುವ ಕಾರ್ಯಕ್ರಮಗಳಲ್ಲಿ ತಪ್ಪದೇ ಬಾಗವಹಿಸಿ ಎಂದು ರಂಗದ ಪರವಾಗಿ ಮತ್ತು ಸಂಗಮದ ಪದಾಧಿಕಾರಿಗಳ ಪರವಾಗಿ ತಮ್ಮನ್ನೆಲ್ಲ ಆಹ್ವಾನಿಸಲು ನಮಗೆ ತುಂಬಾ ಸಂತಸವಾಗುತ್ತಿದೆ. ಈ ಬಾರಿಯ ನಮ್ಮ ಸಮ್ಮೇಳನದ ಮುಖ್ಯ ವಿಷಯ “ಅನುವಾದ ಸಾಹಿತ್ಯ.” ಕನ್ನಡ ಅನುವಾದ ಸಾಹಿತ್ಯ ಪ್ರಪಂಚದಲ್ಲಿ ಮುಖ್ಯರಾದ ಡಾ|| ಪ್ರಧಾನ್ ಗುರುದತ್ತರು ಮುಖ್ಯ ಅತಿಥಿಗಳಾಗಿ ಭಾರತದಿಂದ ಆಗಮಿಸಿದ್ದಾರೆ, “ಅನುವಾದದ ಆಗುಹೋಗುಗಳು” ಎಂಬ ವಿಷಯದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ನಮ್ಮವರೇ ಆದ ಪ್ರಸಿದ್ಧ ಭಾಷಾವಿಜ್ಞಾನಿ, ಡಾ|| ಎಸ್.ಎನ್ ಶ್ರೀಧರ್ ಮತ್ತು ಅನುವಾದದ ವಿಷಯದಲ್ಲಿ ಪ್ರಾವೀಣ್ಯ ಗಳಿಸಿರುವ ಆಂಗ್ಲಭಾಷಾ ಪ್ರಾಧ್ಯಾಪಕ ಡಾ|| ನಾರಾಯಣ ಹೆಗ್ಡೆ ಅವರುಗಳು ವಿಶೇಷ ಅತಿಥಿಗಳಾಗಿ ಆಗಮಿಸಿ “ಅನುವಾದ ಕಮ್ಮಟ” ಮತ್ತು “ಸಂವಾದ” ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದವಾದ ಲೇಖನಗಳನ್ನೊಳಗೊಂಡ “ಅನುವಾದ ಸಂವಾದ” ಎಂಬ ಕನ್ನಡ ಪುಸ್ತಕ, ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದವಾದ ಲೇಖನಗಳನ್ನೊಳಗೊಂಡ “A Little Taste of Kannada-in English” ಎಂಬ ಆಂಗ್ಲ ಪುಸ್ತಕಗಳನ್ನು ರಂಗ ಲೋಕಾರ್ಪಣೆ ಗೊಳಿಸಲಿದೆ. ಇವೇ ಅಲ್ಲದೆ, ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಅವರು ಸಂಪಾದಿಸಿರುವ “ಅಮೆರಿಕನ್ನಡ ಬರಗಾರರ ಮಾಹಿತಿ ಕೋಶ” ಸಹ ಲೋಕಾರ್ಪಣೆಗೊಳ್ಳಲಿದೆ. ಸಂಗಮದ ಮುಂದಾಳತ್ವದಲ್ಲಿ “ಸೊಬಗು” ಎಂಬ ಸ್ಮರಣ ಸಂಚಿಕೆ ಸಹ ಸಿದ್ಧವಾಗುತ್ತಿದೆ. ರಂಗದ ಸಂಸ್ಥಾಪಕರಲ್ಲಿ ಮೊದಲಿಗರಾದ ಎಚ್.ವೈ. ರಾಜಗೋಪಾಲರು ಅನುವಾದಿಸಿರುವ “ಸೃಷ್ಟಿ” (ಅಮೆರಿಕದ ರೆಡ್ ಇಂಡಿಯನ್ ಕಥೆಗಳು) ಎಂಬ ಪುಸ್ತಕವನ್ನು ನೋಂದಾಯಿಸಿಕೊಂಡವರಿಗೆಲ್ಲ ರಂಗದ ವತಿಯಿಂದ ವಿತರಿಸಲಾಗುವುದು. ಪ್ರತಿ ಬಾರಿಯೂ ನಾವು ನಡೆಸುವ ಕವಿಗೋಷ್ಠಿ, ಬರಹಗಾರರ ಮತ್ತು ಅವರ ಇತ್ತೀಚಿನ ಪ್ರಕಟಣೆಗಳ ಪರಿಚಯ, ಇವುಗಳ ಜೊತೆಗೆ, ಈ ಬಾರಿ ಸ್ವಾರಸ್ಯಕರವಾದ ಒಂದು ಅನುವಾದ ಕಮ್ಮಟವನ್ನೂ ಏರ್ಪಡಿಸಲಾಗಿದೆ. ಕೇವಲ ಸಾಹಿತ್ಯ ಮಾತ್ರ ಎಂದು ದಿಗಿಲುಪಡದಿರಿ, ಸಂಗಮದ ನಾಟ್ಯಪಟು ಪ್ರಸನ್ನ ಕಸ್ತೂರಿಯವರ ನಿರ್ದೇಶನದಲ್ಲಿ ಗೀತ-ನಾಟ್ಯ-ನಟನ-ನಾಟಕ-ಪ್ರಿಯರ ಮನಸ್ಸನ್ನು ಸೂರೆಗೊಳ್ಳುವ ಮನರಂಜನಾ ಕಾರ್ಯಕ್ರಮಗಳಲ್ಲಿ ಮತ್ತು ಮಕ್ಕಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಂಗಮದ ಜೊತೆಗೆ ಕೈಜೋಡಿಸಲು ಸಿನ್ಸಿನ್ಯಾಟಿ, ಶಿಕಾಗೋ, ಇಂಡಿಯನಾಪೊಲಿಸ್, ಲಿಟಲ್ ರಾಕ್, ನ್ಯಾಷವಿಲ್, ಮಿಲ್ವಾಕಿ, ಬ್ಲೂಮಿಂಗ್ ಟನ್ ಮುಂತಾದ ನಗರಗಳ ಕನ್ನಡ ಕೂಟಗಳೂ ಸಿದ್ಧವಾಗಿ ನಿಂತಿವೆ! ಮಕ್ಕಳಿಗಾಗಿ ಸವಿತಾ ರವಿಶಂಕರ್ ಅವರ “ಚಿಲಿಪಿಲಿ ಕನ್ನಡ ಕಲಿ” ಧ್ವನಿ ಸಂಪುಟ ಸಹ ಲೋಕಾರ್ಪಣೆಯಾಗಲಿದೆ. ಕನ್ನಡ ಪುಸ್ತಕಗಳ ಮಳಿಗೆಯಲ್ಲಿ ನಮ್ಮವರೇ ಬರೆದು ಪ್ರಕಟಿಸಿರುವ ಪುಸ್ತಕಗಳನ್ನು ಮಾರಾಟಕ್ಕೆ ಇಡಲಾಗುತ್ತದೆ, ಕೊಂಡು ಓದಿ ಸಂತಸಪಡಲು ಇದೊಂದು ಉತ್ತಮ ಅವಕಾಶ. ಕೊನೆಯದಾಗಿ, ಆದರೆ ಮುಖ್ಯವಾಗಿ, ಉತ್ತಮ ಊಟೋಪಚಾರಗಳ ಏರ್ಪಾಟು ಭರದಿಂದ ಸಾಗಿದೆ! ಸಾಹಿತ್ಯಪ್ರಿಯರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ ಸತ್ಕರಿಸಲು ಸಂಗಮದ ಜ್ಯೋತಿ ಮೈಸೂರ್ ಮತ್ತು ಶುಭಾ ಭಾಸ್ಕರ್ ಅವರ ತಂಡದ ಸ್ವಯಂಸೇವಕರು ತವಕದಿಂದ ಕಾದಿದ್ದಾರೆ. ಕಾರ್ಯಕ್ರಮಗಳ ಪಕ್ಷಿನೋಟವನ್ನು ಕೆಳಗೆ ಕೊಡಲಾಗಿದೆ, ಹೆಚ್ಚಿನ ವಿವರಗಳಿಗೆ kannadasahityaranga.org ಮತ್ತು sangamastl.com ಈ ಜಾಲತಾಣಗಳಿಗೆ ಭೇಟಿ ಕೊಡಿ.

] ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮದು!

ಮೈ.ಶ್ರೀ. ನಟರಾಜ, ಕನ್ನಡ ಸಾಹಿತ್ಯ ರಂಗದ ಕಾರ್ಯಕಾರೀ ಸಮಿತಿಯ ಅಧ್ಯಕ್ಷ

ನಾಗ ಐತಾಳ, ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಲಿಯ ಅಧ್ಯಕ್ಷ

 

 

 Posted by at 9:53 PM
May 252015
 

KSR-Logoಕಾರ್ಯಕ್ರಮಗಳ ವಿವರಗಳು ಹೀಗಿವೆ.

ಶನಿವಾರ

(1) ಮಧ್ಯಾಹ್ನ 12:00-1:00 – ಆಗಮನ ಮತ್ತು ನೋಂದಣಿ

(2) 1:00-2:00 – ಸ್ವಾಗತ ಗೀತೆ, ಉದ್ಘಾಟನೆ, ಅತಿಥಿಗಳ ಸ್ವಾಗತ ಮತ್ತು ಪರಿಚಯ, ಪುಸ್ತಕಗಳ ಲೋಕಾರ್ಪಣೆ ಮತ್ತು ಬರಹಗಾರರಿಗೆ ವಿತರಣೆ

(3) 2:00-3:00 – ಪ್ರಾಸ್ತಾವಿಕ ಭಾಷಣ, “ಅನುವಾದದ ಆಗುಹೋಗುಗಳು” ಮುಖ್ಯ ಅತಿಥಿ ಪ್ರಧಾನ ಗುರುದತ್ತರಿಂದ

(4) 3:00-3:30 – ಚಹಾ ವಿರಾಮ

(5) 3:30-5:00 – ಸಾಹಿತ್ಯ ಗೋಷ್ಠಿ, ಸ್ವಂತ ಹಾಗು ಅನುವಾದಿತ ಕೃತಿಗಳ ಪ್ರಸ್ತುತಿ (ನಡೆಸಿಕೊಡುವವರು: ನಳಿನಿ ಮೈಯ ಮತ್ತು ವೈಶಾಲಿ ಹೆಗ್ಡೆ)

(6) 5:05-5:15 – ಕವಿ ನಮನ (ಸಂಗಮ ಕಲಾವಿದರಿಂದ)

(7) 5:15-5:30 – ಶ್ರದ್ಧಾಂಜಲಿ (ಅಗಲಿದ ಹಿರಿಯರ ಸ್ಮರಣೆ; ನಡೆಸಿಕೊಡುವವರು: ಎಚ್.ಕೆ. ಚಂದ್ರಶೇಖರ್ ಮತ್ತು ನಳಿನಿ ಕುಕ್ಕೆ)

(8) 5:30-6:00 – ಪುಸ್ತಕದಂಗಡಿಗೆ ಭೇಟಿ (ಮಂಜುನಾಥ್ ಮತ್ತು ಶಂಕರ ಹೆಗ್ಡೆ)

(9) 6:00-8:30 – ಸಾಂಸ್ಕೃತಿಕ ಕಾರ್ಯಕ್ರಮ (ಪ್ರಸನ್ನ ಕಸ್ತೂರಿ ಅವರ ನಿರ್ದೇಶನದಲ್ಲಿ ಸಂಗಮ ಹಾಗು ಇತರ ಮಧ್ಯವಲಯದ ಕನ್ನಡ ಕೂಟಗಳಿಂದ ನೃತ್ಯ ಮತ್ತು ನಾಟಕ ಪ್ರದರ್ಶನ)

(10) 8:00-10:00 – ಭೋಜನ

ಭಾನುವಾರ

(1) 8:00-9:00 – ಬೆಳಗಿನ ಉಪಾಹಾರ

(2) 9:00-9:10 – ಪ್ರಾರ್ಥನೆ ಮತ್ತು ವಾದ್ಯಗೋಷ್ಠಿ (ಸಂಗಮ ಮಕ್ಕಳಿಂದ)

(3) 9:10-10:40 – ಅನುವಾದ ಕಮ್ಮಟ (ಅನುವಾದಕ್ರಿಯೆಯ ಒಂದು ಮಿಂಚುನೋಟ; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ)

(4) 10:40-10:55 – ವಿವಿಧ ವಿಶೇಷಗಳು (ನಡೆಸಿಕೊಡುವವರು ಮೈ.ಶ್ರೀ. ನಟರಾಜ)

(5) 11:00-12:00 – ನಮ್ಮ ಬರಹಗಾರರು (ಇತ್ತೀಚೆಗೆ ಪ್ರಕಟವಾದ ಪುಸ್ತಕಗಳ ಮತ್ತು ಬರಹಗಾರರ ಪರಿಚಯ; ನಡೆಸಿಕೊಡುವವರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಮೀರಾ ರಾಜಗೋಪಾಲ್)

(6) 12:00-1:00 – ಮಧ್ಯಾಹ್ನದ ಭೋಜನ

(7) 1:00-1:30 – ಪುಸ್ತಕದಂಗಡಿಗೆ ಭೇಟಿ

(8) 1:30-2:30 – ಅತಿಥಿಗಳೊಂದಿಗೆ ಸಂವಾದ (ಪ್ರಧಾನ ಗುರುದತ್ತ, ಎಸ್.ಎನ್. ಶ್ರೀಧರ್ ಮತ್ತು ನಾರಾಯಣ ಹೆಗ್ಡೆ ಅವರೊಂದಿಗೆ ಪ್ರಶ್ನೋತ್ತರಗಳು; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ ಮತ್ತಿತರರು)

(9) 2:30-2:45 – ಚಹಾ ವಿರಾಮ

(10) 2:45-3:45 – ಮಧ್ಯವಲಯದ ವಿವಿಧ ಕನ್ನಡ ಕೂಟಗಳ ಮಕ್ಕಳಿಂದ ಮನರಂಜನೆ ಮತ್ತು ಸವಿತಾ ರವಿಶಂಕರ್ ಅವರ “ಚಿಲಿಪಿಲಿ ಕನ್ನಡ ಕಲಿ” ಧ್ವನಿ ಸಂಪುಟ ಬಿಡುಗಡೆ

(11) 3:45-4:30 – ಸ್ವಯಂಸೇವಕರ ಪರಿಚಯ, ವಂದನಾರ್ಪಣೆ ಮತ್ತು ಸಮಾರೋಪ

(12) 4:30ಕ್ಕೆ ವಿದಾಯ!

 

ಒನ್.ಇಂಡಿಯಾದಲ್ಲಿ ಪ್ರಕಟವಾಗಿರುವ ಕಾರ್ಯಕ್ರಮಗಳ ಪಟ್ಟಿ:-

http://kannada.oneindia.com/nri/article/7th-vasantha-sahityotsava-program-details-093906.html

 Posted by at 9:39 PM
May 112015
 

ಕನ್ನಡ ಸಾಹಿತ್ಯರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಸಾಹಿತಿ ಎಸ್.ಎನ್ ಶ್ರೀಧರ್ ಅವರ ಕಿರುಪರಿಚಯ ಇಲ್ಲಿದೆ:-

S.N.Sridhar

ಪ್ರೊಫೆಸರ್ ಎಸ್.ಎನ್ ಶ್ರೀಧರ್ ಅವರು ೧೯೫೦ರಲ್ಲಿ ಶಿವಮೊಗ್ಗದಲ್ಲಿ ಜನಿಸಿ, ಬೆಂಗಳೂರು, ಕೋಲಾರ, ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ನಡೆಸಿದರು. ೧೯೮೦ರಲ್ಲಿ, ಇಲಿನಾಯ್ ರಾಜ್ಯದ ‘ಯೂನಿವರ್ಸಿಟಿ ಆಫ್ ಇಲಿನಾಯ್’ನಿಂದ ಭಾಷಾಶಾಸ್ತ್ರದ ಪದವಿ ಪಡೆದು, ಸದ್ಯ ನ್ಯೂಯಾರ್ಕಿನ ‘ಸ್ಟೋನಿಬ್ರೂಕ್’ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ೧೯೯೭ರಲ್ಲಿ, ಭಾರತೀಯ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿದ್ದಾರೆ. 2001-2008ರವರೆಗೆ ಸ್ಟೋನಿಬ್ರೂಕ್‍ನ ಏಷ್ಯಾ ಹಾಗೂ ಏಷ್ಯನ್ ಅಮೆರಿಕನ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ೨೦೧೧ರಲ್ಲಿ, ‘ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್’ ಪ್ರೊ ಶ್ರೀಧರ್ ಅವರನ್ನು ಆ ಸಂಸ್ಥೆಯ ಅತ್ಯುಚ್ಚ ಪದವಿಯಾದ ಗೌರವಾನ್ವಿತ ಪ್ರಾಧ್ಯಾಪಕ ಶ್ರೇಣಿಗೆ ನೇಮಕ ಮಾಡಿ ಗೌರವಿಸಿತು.

ಶ್ರೀಧರ್ ಅವರು ಕನ್ನಡ ಭಾಷೆ ಹಾಗೂ ಕರ್ನಾಟಕ ಭಾಷಾ ಸಂದರ್ಭವನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ವಿಭಾಗಗಳಲ್ಲಿ ಸಂಶೋಧನೆಗಳನ್ನು ನಡೆಸಿದ್ದಾರೆ. ಅವರ ‘ಕನ್ನಡ: ಡಿಸ್ಕ್ರಿಪ್ಟಿವ್ ಗ್ರಾಮರ್’ ಆಧುನಿಕ ಕನ್ನಡದ ಅತ್ಯಂತ ವಿಸ್ತಾರವಾದ ವ್ಯಾಕರಣ. ‘ಇಂದಿನ ಕನ್ನಡ: ರಚನೆ ಮತ್ತು ಬಳಕೆ’ ಕನ್ನಡ ಭಾಷೆಯ ಪದ ರಚನೆ, ವಾಕ್ಯ ರಚನೆ, ಇತರ ಭಾಷೆಗಳ ಮೇಲಿನ ಪ್ರಭಾವ, ಇತ್ಯಾದಿಗಳ ವಿಶ್ಲೇಷಣೆ. ಹತ್ತು ಭಾಷೆಗಳ ತುಲನಾತ್ಮಕ ಮನೋವೈಜ್ಞಾನಿಕ ಅಧ್ಯಯನ ಅವರ ‘ಕಾಗ್ನಿಷೆನ್ಸ್ ಎಂಡ್ ಸೆಂಟೆನ್ಸ್ ಪ್ರೊಡಕ್ಷನ್’ ಗ್ರಂಥದ ವಿಷಯ. ಭಾರತೀಯ ನಾಗರೀಕತೆಯ ಅನೇಕ ಮುಖಗಳ ಪ್ರೌಢ ಪರಿಚಯ ಅವರು ಸಹ ಸಂಪಾದಕರಾಗಿರುವ ಉದ್ಗ್ರಂಥ ‘ಅನನ್ಯ: ಎ ಪೊರ್ಟ್ರೈಟ್ ಆಫ್ ಇಂಡಿಯ’ ಎನ್ನುವುದರ ಅಶಯ. ‘ಲಾಂಗ್ವೇಜ್ ಇನ್ ಸೌಥ್ ಏಷಿಯ’ ಶ್ರೀಧರ್ ಅವರು ಸಹಸಂಪಾದಕರಾಗಿ ಹೊರತಂದಿರುವ ಇನ್ನೊಂದು ಕೃತಿ. ಇದರಲ್ಲಿ ದಕ್ಷಿಣ ಏಷ್ಯಾದ ಭಾಷೆಗಳ ಅಧ್ಯಯನವಿದೆ.

ಶ್ರೀಧರ್ ಅವರು, ಶಂಕರ್ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ಯನ್ನೂ, ಕುಮಾರವ್ಯಾಸ ಭಾರತವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

 Posted by at 5:00 PM
May 112015
 

ಕನ್ನಡ ಸಾಹಿತ್ಯರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಸಾಹಿತಿ ಪ್ರಧಾನ್ ಗುರುದತ್ ಅವರ ಕಿರುಪರಿಚಯ ಇಲ್ಲಿದೆ:-

 

ಪ್ರಧಾನ್ ಗುರುದತ್ತ (ಮೇ, ೩೦, ೧೯೩೮) ಅವರು ಅನುವಾದ ಸಾಹಿತ್ಯ ಪ್ರಕಾರದಲ್ಲಿ ಪ್ರಮುಖ ಹೆಸರು. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥರಾದ, ಗುರುದತ್ತರು ಬಹುಭಾಷಾ ವಿದ್ವಾಂಸರು. ಕನ್ನಡ, ಹಿಂದಿ, ಸಂಸ್ಕೃತ, ತೆಲುಗು, ತಮಿಳು, ಮರಾಠಿಗಳ ಜೊತೆ ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿಯೂ ಪರಿಣತರು. ಗುರುದತ್ತ ಅವರು ಕನ್ನಡ, ಹಿಂದಿ ಭಾಷೆಗಳಲ್ಲಿ ಎಂ.ಎ. ‘ಅನುವಾದ’ವಿಷಯದಲ್ಲಿ ಡಾಕ್ಟರೇಟ್ ಪದವಿಗಳಿಸಿದ್ದಾರೆ. ಅನುವಾದವಲ್ಲದೆ, ಸ್ವತ: ಲೇಖಕರಾಗಿಯೂ, ಸಂಪಾದಕರಾಗಿಯೂ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ. ಇವರ ಪುಸ್ತಕಗಳನ್ನು ಹಲವಾರು ಪ್ರಮುಖ ಪ್ರಕಾಶನಗಳು ಹೊರತಂದಿವೆ. ನೂರೈವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವುದಲ್ಲದೆ, ೨೫೦ ಸಂಶೋಧನಾ ಲೇಖನಗಳಲ್ಲದೆ, ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.

ಬೋಧಕರಾಗಿಯೂ ಮೂರು ದಶಕಗಳ ಅಪಾರ ಅನುಭವ ಇವರದು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಕರಾಗಿಯಲ್ಲದೆ, ಕೆಲವು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಗುರುದತ್ ಅವರು ಸಲ್ಲಿಸಿರುವ ಸಾಹಿತ್ಯ ಸೇವೆಯನ್ನು ಗುರುತಿಸಿ ಅವರಿಗೆ ಹಲವಾರು ಗೌರವಗಳು ಸಲ್ಲಿಸಲಾಗಿದೆ. ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’(೧೯೯೪), ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(೨೦೦೩)’, ‘ಆರ್ಯಭಟ’ ‘ದೇಜಗೌ’ ಪ್ರಶಸ್ತಿಗಳೂ ಸೇರಿದಂತೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಗುರುದತ್ತರನ್ನು ಅರಸಿಬಂದಿವೆ.Pradhan Gurudatta-2

 Posted by at 12:04 PM