Mar 232015
 

೨೦೧೩ರ ಮೇ ೧೮ ಮತ್ತು ೧೯ರಂದು ನಾನು ಹ್ಯೂಸ್ಟನ್’ನ ಕನ್ನಡದ ಸಾಹಿತ್ಯಾಭಿಮಾನಿಗಳ ಜತೆಯಲ್ಲಿ ಕಳೆದ ಕ್ಷಣಗಳು ಕರ್ನಾಟಕಕ್ಕಿಂತ ಒಂದು ಭಿನ್ನವಾದ, ಆದರೆ ಕನ್ನಡದ ವರ್ತಮಾನ ಮತ್ತು ಭವಿಷ್ಯದ ಗತಿಯನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ತೀರಾ ಉಪಯುಕ್ತವಾದ ಕ್ಷಣಗಳಾಗಿ ಇಂದಿಗೂ ಉಳಿದಿರುವುದನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅಂದಿನ ಕನ್ನಡ ಸಾಹಿತ್ಯ ರಂಗದ ಎಲ್ಲರಿಗೆ ಮತ್ತು ನನ್ನನ್ನು ಅಲ್ಲಿಗೆ ಕರೆಸಿಕೊಳ್ಳಲು ಕಾರಣರಾದ ಮಿತ್ರ ಡಾ. ಎಚ್.ವೈ. ರಾಜಗೋಪಾಲ ಹಾಗೂ ನ್ಯೂ ಜರ್ಸಿಯ ಇತರ ಸ್ನೇಹಿತರಿಗೆ ನಾನು ಕೃತಜ್ಞನಾಗಿರಲೇ ಬೇಕು. ಕರ್ನಾಟಕದಲ್ಲಿ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನಗಳಿಗಿಂತ ತೀರ ಭಿನ್ನವಾದ, ಹೆಚ್ಚು ಪರಿಶುದ್ಧವಾದ ಕನ್ನಡ ಮನಸ್ಸುಗಳು ತಮ್ಮ ಭಿನ್ನತೆಗಳನ್ನೆಲ್ಲಾ ಬದಿಗಿಟ್ಟು ಕನ್ನಡ ಬಂಧುಗಳ ಹೃದಯಗಳು ಒಂದುಗೂಡಿ, ಒಂದೇ ಕುಟುಂಬವಾಗಿ ಆನಂದಿಸುವ ಕ್ಷಣಗಳನ್ನು ನಾನಲ್ಲಿ ಕಂಡುಕೊಂಡೆ.
ಕರ್ನಾಟಕದ ಸಮ್ಮೇಳನಗಳಲ್ಲಿ ಅಧ್ಯಕ್ಷರ ಆಯ್ಕೆಯಲ್ಲೇ ಆರಂಭವಾಗುವ “ಸಾಮಾಜಿಕ ನ್ಯಾಯ”ದ ಹೆಸರಿನಲ್ಲಿ ಎದ್ದುಕಾಣುವ ಜಾತಿ, ಲಿಂಗ- ಇತ್ಯಾದಿಗಳ ವಾದಗಳ ಸುಳಿವು ಅಮೆರಿಕದ ನೆಲದಲ್ಲಿ ನಮ್ಮ ಕನ್ನಡದ ಸೋದರ ಸೋದರಿಯರಲ್ಲಿ ನಾನು ಕಾಣದೇ ಇದ್ದದ್ದೇ ನಾನು ಅಲ್ಲಿಯ ಸಾಹಿತ್ಯೋತ್ಸವವನ್ನು ಮೆಚ್ಚಲು ಕಾರಣ. ಒಬ್ಬ ಸಮಾಜ ಶಾಸ್ತ್ರಜ್ಞನಾಗಿ ನಾನು ಇಂದಿನವರೆಗೆ ಅತ್ಯಂತ ಜಾಗ್ರತೆಯಿಂದ ಇಂದಿನ ಸಾಹಿತಿಗಳ “ಒಲವು”ಗಳೆನ್ನುವ ತುರಿಕೆಗಿಡಗಳಿಂದದೂರವೇ ಉಳಿದುಕೊಂಡು ಬಂದವನು. ಕಳೆದ ನಾಲ್ಕೈದು ದಶಕಗಳಲ್ಲಿ ನಾನು ನಿಕಟವಾಗಿದ್ದ ಸಾಹಿತಿಗಳೆಂದರೆ, ಗೋಪಾಲಕೃಷ್ಣ ಅಡಿಗರು, ಶಿವರಾಮ ಕಾರಂತರು ಮತ್ತು ಈಚಿನ ತನಕ ಅನಂತಮೂರ್ತಿಯವರು. ಅನಂತಮೂರ್ತಿಯವರ ಅತ್ಯಂತ ನಿಕಟವರ್ತಿಯಾಗಿದ್ದರೂ ಅವರ ‘ಒಲವು’ಗಳಿಗೆ ಪೂರ್ತಿ ಮತಾಂತರವಾಗದೆ, ಆದರೂ ಅತ್ಯಂತ ಆತ್ಮೀಯತೆಯಿಂದ ಇದ್ದವನು. ಹಾಗೆಯೇ ಡಿ.ಆರ್. ನಾಗರಾಜ ನನ್ನ ಮತ್ತೊಬ್ಬ ಸಂವಾದಿ ಗೆಳೆಯ. ಪರಸ್ಪರ ಮೆಚ್ಚಿಕೊಂಡೂ ನಮ್ಮತನವನ್ನು ಇಬ್ಬರೂ ಕಾಯ್ದುಕೊಂಡವರು. ಇವರೆಲ್ಲರೂ ಇಂದಿಗೆ ನನ್ನ ಪಾಲಿಗೆ ಇತಿಹಾಸ.
ನಾನು ಭಾಗವಹಿಸಿದ ಸಾಹಿತ್ಯ ಸಮ್ಮೇಳನಗಳೂ ೪೦-೫೦ ವರ್ಷಗಳ ಹಿಂದೆ ಎರಡು, ಕಳೆದ ದಶಕದಲ್ಲಿ ಎರಡು. ೧೯೫೦ರ ದಶಕದ ಬೀದರಿನ ಸಮ್ಮೇಳನ ಡಿ.ಎಲ್. ನರಸಿಂಹಾಚಾರ್ ಅವರ ಅಧ್ಯಕ್ಷತೆಯಲ್ಲಿ; ವಿದ್ಯಾರ್ಥಿಯಾಗಿ ಪ್ರಾಧ್ಯಾಪಕ ಭೀಮಸೇನರಾಯರ ಜತೆಯಲ್ಲಿ ಭಾಗವಹಿಸಿದ್ದೆ. ಮಾಸ್ತಿಯವರ, ‘ಚೆನ್ನಬಸವನಾಯಕ’ನ ಬಗೆಗಿನ ಅಂದಿನ ಪ್ರಧಾನ ವಸ್ತು ಮಾತ್ರ ಇಂದಿಗೂ ನೆನಪಿನಲ್ಲಿ ಉಳಿದದ್ದು. ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ ಗೋಕಾಕರು ಅಧ್ಯಕ್ಷರು. ಈ ಸಮ್ಮೇಳನದಲ್ಲಿ ಗೋಕಾಕರು ಪದೇ ಪದೇ “ಮಾನವನಾಗಬೇಕು”- ಎಂದು ಹೇಳುತ್ತಿದ್ದದ್ದು ಮತ್ತು ಇದರ ಬಗ್ಗೆ ಮುಂದಕ್ಕೆ “ಬೀಚಿ”ಯವರ ವಿಶ್ಲೇಷಣೆ ನೆನಪಿವೆ. ಗೋಕಾಕರು ವೇದಿಕೆಯಲ್ಲಿ ಭಾಷಣಮಾಡುವಾಗ ಮುಂದೆ ಕುಳಿತಿದ್ದ ಬೀಚಿಯವರಿಗೆ ಕುತೂಹಲ! ‘ಇವರೇKSR_WEB-324ಕೆ ಪದೇ ಪದೇ ಮಾನವನಾಗಬೇಕೆನ್ನುತ್ತಾರೆ? ನಾವು ಮುಂದೆ ಕುಳಿತವರು ಮಾನವರಲ್ಲವೆ?’ ಕೊನೆಗೂ ಬೀಚಿಯವರ ಕಣ್ಣಿಗೆ ಬಿದ್ದದ್ದು ವೇದಿಕೆಯಲ್ಲೇ ಗೋಕಾಕರ ಎಡ ಮತ್ತು ಬಲದಲ್ಲಿ ಕುಳಿತವರು: ‘ಕೋಣದ ಚೆನ್ನಬಸಪ್ಪ’ ಮತ್ತು ‘ವೃಷಭೇಂದ್ರ ಸ್ವಾಮಿ’ಯವರು! ಬೀಚಿಗೆ ಇದೀಗ ಅರ್ಥವಾಯಿತಂತೆ ಮಾನವನಾಗಬೇಕಾದ ಅಗತ್ಯ!
ಒಂದು ಸಮ್ಮೇಳನವು ದೀರ್ಘಕಾಲಾನಂತರ ನಮ್ಮ ನೆನಪಿನಲ್ಲಿ ಉಳಿಯುವುದು ಇಂತಹ ಎದ್ದುಕಾಣುವ ಘಟನೆಗಳಾಗಿ. ಈಚಿನ ಮೂಡಬಿದರೆಯ ಮತ್ತು ಉಡುಪಿಯ ಸಮ್ಮೇಳನಗಳು ನನಗಂತೂ ಉತ್ತಮವಾಗಿ ವ್ಯವಸ್ಥಿತವಾಗಿ ಏರ್ಪಡಿಸಿದ ಜಾತ್ರೆಗಳಾಗಿ ನೆನಪಿಗೆ ಬರುತ್ತವೆ. ಅಧ್ಯಕ್ಷರಿಂದ ಹಿಡಿದು ಉಳಿದೆಲ್ಲರ ಮಾತುಗಳಲ್ಲಿ ಯಾವುವೂ ಗಮನಾರ್ಹವಾದವುಗಳಾಗಿ ನೆನಪಿಗೆ ಬರುತ್ತಿಲ್ಲ. ಸಾಹಿತಿಗಳ ಬೇರೆ ಬೇರೆ ಬಣಗಳು ವಿಶಾಲ ಬಯಲಿನಲ್ಲಿ ತಿರುಗಾಡುತ್ತಿದ್ದ ಚಿತ್ರಣವಷ್ಟೇ ಇಂದಿನ ನನ್ನ ನೆನಪು.
ಹ್ಯೂಸ್ಟನ್’ನಲ್ಲಿ ನೆರೆದವರು ಸಾವಿರಗಟ್ಟಲೆಯೂ ಅಲ್ಲ. ಕೇವಲ ಇನ್ನೂರರ ಆಚೆ ಈಚೆ ಇರಬಹುದು. ಆದರೆ ನೆರೆದವರ ನಡುವೆ ಒಂದು ಹೃದಯಗಳ ಬೆಸುಗೆಯ ಪರಿಸರ. ಪ್ರತ್ಯೇಕಿಸಬಹುದಾದ ಒಲವುಗಳ ಸೆಳೆತಗಳಿರಲಿಲ್ಲ. ನಾವೆಲ್ಲ ಕನ್ನಡದವರು- ಎಂದು ಒಂದೇ ಕುಟುಂಬವಾಗಿಸುವ ಭಾವಬಂಧನ. ತೀರ ಇಳಿವಯಸ್ಸಿನಲ್ಲೂ ಯೌವನದ ಹುರುಪಿನಲ್ಲಿ ಸಪತ್ನೀಕ/ಸಪತೀಕವಾಗಿ ಬಂದವರು! ಪರಸ್ಪರ ಪರಿಚಯಿಸಿಕೊಳ್ಳುವ, ಹತ್ತಿರ ಕುಳಿತು ತಿಂಡಿ ಊಟಗಳನ್ನು ಸವಿಯುವ ಸಂಭ್ರಮದ ವಾತಾವರಣ. ಅತ್ಯಂತ ಆತ್ಮೀಯ “homogeneous community”ಯ ಪರಿಸರ. “Ethnic bond” ಎದ್ದು ಕಾಣುತ್ತಿತ್ತು. ನನಗನ್ನಿಸುತ್ತಿತ್ತು- ಕನ್ನಡವನ್ನು ಉಳಿಸುವುದು ಸಾಹಿತಿಗಳ ಸಿದ್ಧಾಂತಗಳ ಮತ್ತು ವಿಮರ್ಶೆಗಳ ತಾಕಲಾಟದಿಂದಲ್ಲ. ಇಲ್ಲಿರುವಂತಹ ಹೃದಯಗಳ ಬೆಸುಗೆಯಿಂದ, ತಮ್ಮನ್ನು ಮತ್ತೆ ಮತ್ತೆ ಅರಿತುಕೊಳ್ಳುವುದರಿಂದ, ಒಟ್ಟಾಗುವುದರಿಂದ. ಒಡೆಯುವ ಮಾತುಗಳಿಂದಲ್ಲ- ಎನ್ನುವುದು. ಕನ್ನಡ ಮಾತನಾಡುವುದು ಒಂದೇ ಸಾಕು- ಕನ್ನಡ ಕಾಲವಾಹಿನಿಯಲ್ಲಿ ಭವಿಷ್ಯವನ್ನು ಕಂಡುಕೊಳ್ಳಲು. ಸಾಹಿತ್ಯವಲ್ಲ. ಜಗತ್ತಿನಲ್ಲಿ ಭಾಷೆಗಳು ಉಳಿದುಬಂದದ್ದು ಮಾತನಾಡುವುದರಿಂದ, ಲಿಖಿತ ಗ್ರಂಥಗಳಿಂದಲ್ಲ, ಲಿಪಿಯಿಂದಲೂ ಅಲ್ಲವೆನ್ನುವ ಅಂಶ ಸಾಹಿತಿಗಳಿಗೂ ತಿಳಿದರೆ, ಅವರಲ್ಲಿ ವಿನಯವು ಮೂಡೀತು. ಸಾಹಿತಿಯು ಬರೆಯುವಾಗ ಅದು ತನ್ನನ್ನು ತಿಳಿದುಕೊಳ್ಳಲು, ತನ್ನ ತೃಪ್ತಿಗಾಗಿ- ಎಂದಾಗ ಅದು ಸ್ವಾಗತಾರ್ಹ ಕೊಡುಗೆಯಾಗುತ್ತದೆ. ಇದನ್ನು ಬಿಟ್ಟು ಸಮಾಜವನ್ನು ತಿದ್ದಲು- ಎಂದಾಗ ಅದು ಅಹಂಕಾರದ ಪ್ರದರ್ಶನವಾಗುತ್ತದೆ.
ಹ್ಯೂಸ್ಟನ್ನಿನ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಲ್ಲದೆ ಅನೇಕ ಇತರರೂ ವೇದಿಕೆಯಲ್ಲಿ ಭಾಗವಹಿಸಿದ್ದಾರೆ, ತಮ್ಮ ಕೃತಿಗಳನ್ನು ಓದಿದ್ದಾರೆ, ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಎಲ್ಲರಲ್ಲೂ ನಾನು ಕಂಡದ್ದು ಪ್ರದರ್ಶನದ ಬದಲು ತನ್ನನ್ನು ಇತರರ ಮುಂದೆ ತೆರೆದುಕೊಳ್ಳುವ ಹಂಬಲ. ಇತರರ ಪ್ರತಿಕ್ರಿಯೆಯು ಪ್ರತಿಬಿಂಬದ ರೂಪವಾಗಿ ಅದರಲ್ಲಿ ತನ್ನ ಬಿಂಬವನ್ನು ಅರಿತುಕೊಳ್ಳುವ ಆಸಕ್ತಿ. ಮಕ್ಕಳ ನೃತ್ಯ, ವಿದುಷಿಯರ ಹಾಡುಗಾರಿಕೆ- ಎಲ್ಲವನ್ನೂ ಸೇರಿಸಿಕೊಂಡು.
ಇನ್ನು ಸಮ್ಮೇಳನದ ವೈಚಾರಿಕ ನೆಲೆಯಲ್ಲಿ ನನ್ನನ್ನು ಆಕರ್ಷಿಸಿದ್ದು, ಅಲ್ಲಿಯ ಅನೇಕ ಲೇಖಕರು ಬಿಡುಗಡೆಗೊಳಿಸಿದ ಅನೇಕ ಹೊತ್ತಗೆಗಳು. ಪ್ರತಿಯೊಂದೂ ನಮ್ಮ ಸಾಹಿತ್ಯ ಸಮ್ಮೇಳನದಲ್ಲಿ ಹೊರತರುವ ಯಾರೂ ಓದಲು ಉಪಯುಕ್ತವಾಗದ ಒಂದು ಗುಂಪಿನವರ ಬರಹಗಳಿಗಿಂತ ಭಿನ್ನವಾದವುಗಳು. ಮೈ.ಶ್ರೀ. ನಟರಾಜರಂಥವರು ಕನ್ನಡದ ಉತ್ಕೃಷ್ಟ ಸಾಹಿತಿಗಳ ಸಾಲಿಗೆ ಸೇರಬೇಕಾದವರು. ನಮ್ಮ ಹೆಮ್ಮೆಯ ಆಂಗ್ಲ ಸಾಹಿತಿ ದಿ. ರಾಜಾರಾಯರ ಕೃತಿಯ ಕನ್ನಡ ಅನುವಾದ- ‘ನಾರೀಗೀತ’-ದ ರೂವಾರಿಯಾಗಿದ್ದವರು. ಇವರೆಲ್ಲರ ಬರಹಗಳ ಜತೆಗೆ ಸಮ್ಮೇಳನದ ನೆನಪಿಗಾಗಿ ಹೊರತಂದ ಒಂದು ಉತ್ತಮ ಸಂಕಲನ “ಬೇರು ಸೂರು” ಸಮ್ಮೇಳನದ ಪ್ರಾಂಜಲ ಕಲಶದಂತಿತ್ತು.
ಗುರುಪ್ರಸಾದ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಮತ್ತು ಅಮೆರಿಕದಿಂದ ಇತ್ತೀಚೆಗೆ ಉಡುಪಿಗೆ ಮರಳಿ ಇಲ್ಲೇ ನೆಲೆಸಿರುವ ಜ್ಯೋತಿ ಮಹಾದೇವ್- ಇವರ ಸಂಪಾದನದಲ್ಲಿ ಹೊರತಂದ, ಅಮೆರಿಕದಲ್ಲಿ ನೆಲೆಸಿರುವ ಅನೇಕ ಬರಹಗಾರರ ಬರಹಗಳ ಸಂಕಲನ. ಕೃತಿಯ ಹೆಸರೇ ಸಂಕೇತಿಸುವಂತೆ ಈ ಎಲ್ಲ ಬರಹಗಾರರ ಬೇರು ಮತ್ತು ಸೂರಿನ ಕಥೆ-ವ್ಯಥೆಗಳನ್ನು ಅವರ ಲೇಖನಗಳಲ್ಲಿ ಗುರುತಿಸಬಹುದು. ಕರ್ನಾಟಕದ ಬೇರು ಕಿತ್ತುಕೊಳ್ಳದೆ, ಅಮೆರಿಕದಲ್ಲಿ ಸೂರು ಕಟ್ಟಿಕೊಂಡು, ಅಲ್ಲೇ ಬದುಕುತ್ತಿರುವ, ಬದುಕಬೇಕಾಗಿರುವ ಜೀವನವನ್ನು ಈ ಕೃತಿಯ ಮೂಲಕ ಕರ್ನಾಟಕದಲ್ಲೇ ಬದುಕುತ್ತಿರುವ ಕನ್ನಡಿಗರು ತಿಳಿಯಲು ಇದೊಂದು ಉತ್ತಮ ಸಾಧನ. ಸುಮಾರು ೫೦೦ ಪುಟಗಳಷ್ಟು ದೊಡ್ಡ ಗಾತ್ರದ ಈ ಗ್ರಂಥ “Indian Diaspora” ಪ್ರಕ್ರಿಯೆಯಲ್ಲಿ ಪ್ರಸಕ್ತ ದಶಕಗಳಲ್ಲಿ ಸೇರಿಕೊಂಡ ಕನ್ನಡಿಗರ ‘ಜೀವನ ದರ್ಶನ’ವನ್ನಿದು ತೆರೆದಿಡುತ್ತದೆ. ೩೮ ಲೇಖಕರಿಂದ ಬೇರೆ ಬೇರೆ ವಿಷಯಗಳ ಮೇಲೆ ಬರಹಗಳನ್ನು ಸಂಗ್ರಹಿಸಿ ಹೊರತಂದ ಈ ಗ್ರಂಥ ಒಂದು ಗಮನಾರ್ಹ ಕೊಡುಗೆ.
ಈ “ಡಯಾಸ್ಪೋರ” ಪ್ರಕ್ರಿಯೆ ಇಂದಿಗೆ ನಮ್ಮ ಪ್ರತಿಯೊಂದು ಮನೆಯನ್ನೂ ಪ್ರವೇಶಿಸಿದೆ. ಹೀಗಿರುವಾಗ ನಾವಿಂದು ತೀರಾ ಅಪ್ರಸ್ತುತವಾದ ಎಡ-ಬಲದ ವಾದ, ಹಿಂದುಳಿದವರು, ‘ಕಾರ್ಪೊರೇಟ್’, ‘ಮನುವಾದಿ’, ‘ಶೂದ್ರ-ಬ್ರಾಹ್ಮಣ’, ಇತ್ಯಾದಿ ಅರ್ಥ ಕಳೆದುಕೊಂಡ ಶಬ್ದಗಳಿಂದ ಬರಹಗಳನ್ನು ಮುಂದುವರಿಸುವುದು ಈ ಡಯಾಸ್ಪೋರ ಪ್ರಕ್ರಿಯೆಯಲ್ಲಿ ನಮ್ಮಿಂದ ‘alien’ ಆಗುತ್ತಿರುವ ನಮ್ಮ ಮಕ್ಕಳಿಗೇ ಬೇಡವಾದ ಸರಕುಗಳಾಗುತ್ತವೆ ಎನ್ನುವುದನ್ನು ಗಮನಿಸುವ ಅಗತ್ಯವಿದೆ. ಜಾನ್ ಕೆನಡಿಯ ಕೆಳಗೆ ಕಾರ್ಯದರ್ಶಿಯಾಗಿದ್ದ ಖ್ಯಾತ ಇತಿಹಾಸಕಾರ ಸ್ಲೆಶಿಂಜರ್ (Schlesinger)ನ ಮಾತು ನೆನಪಾಗುತ್ತದೆ. ನಾವಿಂದು ಚಿಂತಿಸುವಾಗ, ಬರೆಯುವಾಗ ‘scavengers of the past’ ಆಗುವ ಬದಲು ‘Architects of the future’ ಆಗಬೇಕು. ಹಿಂದಿನ ಅಶೌಚವನ್ನು ನಾವು ಶುದ್ಧೀಕರಿಸಬೇಕಾಗಿಲ್ಲ. ಭೂಮಿಯೇ ಅದನ್ನು ಮಣ್ಣಾಗಿಸಿದ್ದಾಳೆ. ನಮ್ಮ ಮುಂದಿನ ಪೀಳಿಗೆಗೆ ಅವರ ಭವಿಷ್ಯದ ಕನಸುಗಳ ಶಿಲ್ಪಿಗಳಾಗಬೇಕು- ನಮ್ಮ ಬರಹಗಳಲ್ಲಿ.
‘ಬೇರು ಸೂರು’ ಗ್ರಂಥದಲ್ಲಿ ಅನೇಕ ಕತೆಗಳಿವೆ, ವೈಚಾರಿಕ ಲೇಖನಗಳಿವೆ: ಕಾರ್ಪೊರೇಟ್ ಜಗತ್ತಿನಲ್ಲಿ ದುಡಿಯುವಾಗ ಗಳಿಸಿದ ಜ್ಞಾನ ಅನುಭವಗಳ ಚಿತ್ರಣವಿದೆ- ದೇವಾಲಯಗಳ ಪರಿಚಯವಿದೆ- ರಂಗಭೂಮಿಯ ಅನುಭವ ಕಥನವಿದೆ- ಒಟ್ಟು ಅಮೆರಿಕದಲ್ಲಿರುವ ಕನ್ನಡಿಗರ ಇಂದಿನ ಜೀವನದ, ಬಹುಮುಖಿಯಾದ ಪರಿಚಯವನ್ನು ಮಾಡಿಕೊಡುವ ವಿವಿಧ ಬರಹಗಳ ಜೇನುಗೂಡು ಈ ಬೇರು ಸೂರು. ನಮ್ಮವರು ಅಲ್ಲಿ ಕಟ್ಟಿಕೊಂಡು ಬಾಳುತ್ತಿರುವ ಸೂರಿನೊಳಗೆ ಹೊಕ್ಕು ಬರೋಣವೆಂದನ್ನಿಸುವಷ್ಟು ಗಮನಿಸಲೇಬೇಕಾದ ತೀರ ಉಪಯುಕ್ತವಾದ ಮಾಹಿತಿಕೋಶ ಇದಾಗಿದೆಯೆಂದು ನಾನಿದರ ಆದ್ಯಂತ ಕಣ್ಣಾಡಿಸಿದಾಗ ಅನ್ನಿಸಿತು. ನಾನು ಓದುವುದರಲ್ಲಿ ಬಹಳ ಹಿಂದೆ. ಆದರೆ ಇದರ ಪ್ರತಿಯೊಂದು ಲೇಖನವೂ ಓದಿಸಿಕೊಂಡು ಹೋಗಿದೆ. ಶ್ರೀಕಾಂತ ಬಾಬುರವರ ನೀಲಿ ಡಬ್ಬಿಯ ಶ್ರೀಖಂಡವು ನನ್ನ ನಿದ್ದೆಯನ್ನು ಕೆಡಿಸಿದ ಕಥೆ- ಅಮೆರಿಕದಲ್ಲಿ ಮಕ್ಕಳ ಬದುಕಿಗೆ ಕನ್ನಡಿ ಹಿಡಿಯುತ್ತದೆ. ಇದಕ್ಕೆ ಪೂರಕವಾದ ಬರವಣಿಗೆ ಎಚ್.ವೈ. ರಾಜಗೋಪಾಲರ ‘ಹೊಸ ನೆಲದಲ್ಲಿ ಹೊಸ ಸಸಿಗಳು’. ಈ ಸಸಿಗಳ ಬೇರು ಮತ್ತು ಸೂರು- ಎರಡೂ ಅಮೆರಿಕವೇ. Gene ಮಾತ್ರ ಕನ್ನಡದ್ದು. ತಮ್ಮ ‘ಜೀನ್’ ಎರಡೋ ಮೂರೋ ತಲೆಮಾರಿನಲ್ಲಿ ಮರೆತೇ ಹೋಗುವ ಸಾಧ್ಯತೆಯೂ ಇದೆ. ಕನ್ನಡಿ ನೋಡಿಯೇ ಇದರ ಮೂಲವನ್ನು ತಿಳಿದುಕೊಳ್ಳಬೇಕಾದೀತು. ಕನ್ನಡ ನಾಡಿನಿಂದ ಅಮೆರಿಕ ಪ್ರವೇಶಿಸಿ ಅಲ್ಲಿಯ ಸೂರಿನೊಳಗೆ ಬದುಕಲು ಬೇಕಾದ ಸಿದ್ಧತೆಯ ಬಗ್ಗೆ ನಳಿನಿ ಮಯ್ಯರ ಸುಂದರ ಚಿತ್ರಣ, ನಾಗ ಐತಾಳರ ಕಾದಂಬರಿಯನ್ನು ನೆನಪಿಸುವಂಥದ್ದು. ಕಾಗಿನೆಲೆಯವರು ಅಮೆರಿಕದಲ್ಲೇ ನೆಲೆಯನ್ನು ಕಂಡುಕೊಂಡ ಒಬ್ಬ ಶ್ರೇಷ್ಠ ಬರಹಗಾರನೆಂದು ಅವರ ‘ನಾನು-ನೀನು’ ಓದಿದಾಗ ತಿಳಿಯಿತು. ಶ್ರೀವತ್ಸರು ತನ್ನ ಬರಹಗಳ ಮೂಲಕ ಕರ್ನಾಟಕದಲ್ಲೂ ಪರಿಚಿತರು. ಗುಂಡೂ ಶಂಕರರಲ್ಲೂ ಒಬ್ಬ ಉತ್ತಮ ಬರಹಗಾರನನ್ನು ನಾನು ಗುರುತಿಸಿದ್ದೇನೆ. ‘ಅಮೆರಿಕ- ಒಂದು ವಿಶಿಷ್ಟ ರಾಷ್ಟ್ರವೆ?’- ಈ ಲೇಖನ ಒಬ್ಬ ತನ್ನನ್ನು ತಾನೇ ತಿಳಿಯಬಯಸುತ್ತಿರುವ, ಅಮೆರಿಕಕ್ಕೇ ಹೋಗಿ ಬಾಳುವವನ ಒಳಯೋಚನೆಗಳನ್ನು ಬಿಚ್ಚಿಡುತ್ತದೆ. ವಿಮಲಾ ರಾಜಗೋಪಾಲರ ಉಸಿರಿನಲ್ಲೇ ಸಂಗೀತವಿದೆ. ಸುಪ್ತದೀಪ್ತಿಯವರ ವಲಸೆ ವೃತ್ತದ ವರಸೆಯೊಳಗೆ ಅವರ ಸಮ್ಮೋಹನಗೊಳಿಸುವ ಭಾವಗೀತೆಗಳಿಗಿಂತ ಭಿನ್ನವಾದ ಗದ್ಯವನ್ನು ಬರೆಯುವ ಸಾಮರ್ಥ್ಯ ಕಾಣುವ ಅವಕಾಶ. ಮೀರಾ ರಾಜಗೋಪಾಲರು ಒಬ್ಬ ಗಮನಾರ್ಹ ಲೇಖಕಿಯಾಗಿ ಇಲ್ಲಿ ಎದ್ದು ಕಾಣುತ್ತಾರೆ. ಇದೇ ರೀತಿ ಪಟ್ಟಿ ಮಾಡಲು, ಎಚ್.ಕೆ. ಚಂದ್ರಶೇಖರ್, ವೈಶಾಲಿ ಹೆಗಡೆ, ತ್ರಿವೇಣಿ ಶ್ರೀನಿವಾಸರಾವ್, ವತ್ಸ ಕುಮಾರ್, ಎಸ್.ಎನ್. ಶ್ರೀಧರ್, ಕೃಷ್ಣರಾಜು, ಕೆ.ಜಿ.ವಿ. ಕೃಷ್ಣ- ಹೀಗೆ ಎಲ್ಲರ ಬಗ್ಗೆಯೂ ನನ್ನ ಮೆಚ್ಚುಗೆಯನ್ನು ಪ್ರಕಟಿಸಬೇಕಾಗುತ್ತದೆ.  ಸಮ್ಮೇಳನಗಳು ಇಂತಹ ಕೃತಿಯನ್ನು ಹೊರತಂದಲ್ಲಿ ಅವು ಚಿರಸ್ಮರಣೀಯವಾಗುತ್ತವೆ; ಹಕ್ಕಿಗಳು ಒಂದು ಒಳ್ಳೆಯ ಹಣ್ಣಿನ ಮರದ ಹಣ್ಣುಗಳನ್ನು ಕಚ್ಚಿಕೊಂಡು ಗಗನಕ್ಕೆ ಹಾರಿ ಬೀಜ ಪ್ರಸಾರ ಮಾಡಿದಂತೆ.

 Posted by at 6:07 PM
Jul 012013
 

(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಪ್ರಬಂಧ.)

 

ನನ್ನ ಪಾಲಿಗೆ ಅದೊಂದು ಕರಾಳ ದಿನವೆನ್ನಬೇಕು. ಹತ್ತು ವರ್ಷವಿದ್ದ ಮನೆಯಿಂದ ನನ್ನನ್ನು ಹೊರಹಾಕಿದ್ದರು. ನನ್ನ ಸೃಷ್ಟಿಯಿಂದ ಇಲ್ಲಿಯವರೆಗೆ ಇದ್ದಿದ್ದು ಇದೊಂದೆ ಮನೆ. ಹತ್ತು ವರ್ಷಕ್ಕೇ ಹಳಸಿ ಹೋದನೆ ನಾನು? ನನ್ನನ್ನೇಕೆ ಹೊರದಬ್ಬಿದರು? ಎಂದಾದರೂ ತೊಂದರೆ ಕೊಟ್ಟಿದ್ದನೇನು? ಎಂದಾರದರೂ ನನ್ನ ರಿಪೇರಿಗಾಗಿ ಹಣದ ಖರ್ಚನ್ನು ಮಾಡಿಸಿದ್ದೆನೇನು?. ಒಪ್ಪಿಕೊಳ್ಳೋಣ ಹತ್ತು ವರ್ಷಕ್ಕೆ ನನ್ನ ಬಣ್ಣ ಸ್ವಲ್ಪ ಮಾಸಿದ್ದಿರಬಹುದು. ಮತ್ತೆ ನನ್ನ ರೂಪವನ್ನು ತರಲು ನನ್ನನ್ನೇನು ಬ್ಯೂಟಿ ಪಾರ್ಲರ್ಗೆ ಕರೆದುಕೊಂಡು ಹೋಗ ಬೇಕಾಗಿತ್ತೇ?. ಮನೆಯಲ್ಲೇ ಯಾವುದೋ ರಾಸಾಯನಿಕ ವಸ್ತುಗಳನ್ನು ಹಾಕಿ ಸ್ನಾನ ಮಾಡಿಸಿದ್ದರೂ ನನಗೇನು ಅನ್ನಿಸುತ್ತಿರಲಿಲ್ಲ. ಅದೂ ಬೇಡ ಅಂದರೆ ನನಗೆ ಹೊಸ ಬಟ್ಟೆಯನ್ನೇ ಹೊಲಿಸಬಹುದಾಗಿತ್ತು. ಅದೆಲ್ಲವನ್ನೂ ಬಿಟ್ಟು ನನ್ನನ್ನು ಮನೆಯಿಂದ ಹೊರಗೇ ನೂಕಿದ್ದಾರಲ್ಲ, ಯಾರ ಹತ್ತಿರ ಹೇಳಿಕೊಳ್ಳಲಿ ನನ್ನ ಈ ದುರಂತ ಕಥೆಯನ್ನು.

ನನ್ನ ಸೃಷ್ಟಿ ಆಗಿದ್ದು 1998ರಲ್ಲಿ. ನ್ಯೂಜೆರ್ಸಿಯ ಒಂದು ಬಡಾವಣೆಯಲ್ಲಿ. ಅದೂ ಒಂದು ಕಾರ್ ಗ್ಯಾರಾಜಿನಲ್ಲಿ. ಸೃಷ್ಟಿಗೊಂಡ ಸಮಯದಿಂದಲೇ ಬಿಳಿ ಬಣ್ಣದನು ನಾನು. ಸೃಷ್ಟಿಗೊಂಡ ಕೆಲವೇ ವಾರಗಳಲ್ಲಿ ಇವರ ಮನೆ ಸೇರಿದವನು ನಾನು. ಹೊಸದಾಗಿ ಬಂದಾಗ ಇದ್ದ ಹೊಸ ಬಟ್ಟೆಯ ಸುವಾಸನೆ ಬರಬರುತ್ತಾ ಮಸಾಲೆಗಳ ಗಾಟುಗಳಿಂದ ಮಾಸುತ್ತಾ ಬಂತು. ಹಾಗೆಯೇ 13 ವರ್ಷಗಳು ಕಳೆದಿದ್ದವು. ಈ ಹದಿಮೂರು ವರ್ಷಗಳಲ್ಲಿ ನನ್ನೊಂದಿಗೆ ಕಾಲ ಕಳೆದವರ ಪಟ್ಟಿ ಮಾಡಲು ಪುಟಗಳೇ ಹಿಡಿಯುತ್ತದೆ. ಮೊದ ಮೊದಲು ನ್ಯೂಜೆರ್ಸಿಯಲ್ಲಿದ್ದಾಗ ನನ್ನ ಮಾಲೀಕರ ತಂದೆ ತಾಯಂದಿರೇ ನನ್ನ ಜೊತೆ ಕಾಲಕಳೆದವರು. ನನ್ನ ಮಾಲೀಕರ ತಂದೆಯಂತೂ ನನ್ನ ಮೇಲೆ ಕೂತು ಹೇಳುತ್ತಿದ್ದ ಸಂಗೀತ, ಕಿವಿಗೆ ಇಂಪಾಗಿರುತ್ತಿತ್ತು. ಮಾಲೀಕರ ಮಾವನವರು ಪ್ರತಿ ದಿನ ಅವರ ಮಧ್ಯಾಹ್ನದ ಭೋಜನದ ನಂತರ ನನ್ನೊಂದಿಗೆ ವಿಶ್ರಮಿಸಿಕೊಳ್ಳುತ್ತಿದ್ದಿದ್ದು ನನಗೆ ವಾಡಿಕೆಯಾಗಿತ್ತು. ಈ ಮನೆಯಲ್ಲಿ ಎರಡು ವಾರಕ್ಕೊಂದಾದರೂ ಒಂದು ಪಾರ್ಟಿ ನಡೆಯುತ್ತಿತ್ತು. ಪಾರ್ಟಿ ಎಂದರೆ ನನಗೆ ನಡುಕವೇ ಬರುತ್ತಿತ್ತು. ಏಕೆಂದರೆ ದೊಡ್ಡವರು ನನ್ನ ಮೇಲೆ ಬೀರುಗಳನ್ನು ಸುರಿಸುತ್ತಾ, ಮಕ್ಕಳಂತೂ ನನಗೇ ಊಟವನ್ನೇ ಮಾಡಿಸುತ್ತಾ, ಆಗಾಗ್ಗೆ ನೀರೂ ಸಹ ಕುಡಿಸುತ್ತಿದ್ದಿದ್ದನ್ನು ಮರೆಯಲು ಸಾಧ್ಯವಿಲ್ಲ. ಮಾಲೀಕರು ತಿಂಗಳಿಗೊಮ್ಮೆಯಾದರೂ ನನ್ನ ಸ್ಥಳವನ್ನು ಬದಲಾಯಿಸುತ್ತಿದ್ದರು. ಒಮ್ಮೊಮ್ಮೆ ಮನೆಯ ನೆಲಮಾಳಿಗೆಯಲ್ಲಿ ಪಾರ್ಟಿ ನಡೆಯುತ್ತದೆ ಎಂದಾಗ ನಾನು ನಿಟ್ಟುಸಿರು ಬಿಡುತ್ತಿದ್ದೆ. ಏಕೆಂದರೆ ಬಂದ ಜನ ನೆಲಮಾಳಿಗೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು. ನನಗೆ ಆಗ ಸ್ವಲ್ಪ ವಿರಾಮವಿರುತ್ತಿತ್ತು. ಮೂರು ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಒಂದು ದಿವಸ ನಾಲ್ಕಾರು ಜನ ಬಂದು ಎತ್ತುಕೊಂಡು ಒಂದು ಟ್ರಕ್ನೊಳಗೆ ಹಾಕಿ ಬಾಗಿಲು ಮುಚ್ಚಿದ್ದರು. ಕತ್ತಲೆ ತುಂಬಿತ್ತು.

KSR_WEB-500
ಬಾಗಿಲು ತೆರೆದಾಗ ಬೆಳಕು ಹರಿದಿತ್ತು. ನನಗೆ ಜೀವ ಬಂದ ಹಾಗೆ ಆಗಿತ್ತು. ಟ್ರಕ್ಕಿನ ಕತ್ತಲ ರೂಮಿನಲ್ಲಿ ಎನಿಲ್ಲವಾದರೂ ಒಂದು ವಾರ ಕೂಡಿ ಹಾಕಿದ್ದರೋ ಏನೋ? ಮತ್ತೆ ನನ್ನನ್ನು ಎತ್ತಿಕೊಂಡು ಮನೆಯ ಒಳಗೆ ಕರೆದು ತಂದಿದ್ದರು. ಹೊಸ ಮನೆ. ಹೊಸ ಜಾಗ. ಮನೆಯವರ ಮಾತನ್ನು ಕೇಳಿಸಿಕೊಂಡಾಗಲೇ ಗೊತ್ತಾಗಿದ್ದು, ನನ್ನ ಮಾಲೀಕರು ನ್ಯೂಜೆರ್ಸಿಯಿಂದ ಕ್ಯಾಲಿಫೋರ್ನಿಯಾಗೆ ಶಿಫ್ಟ್ ಆಗಿದ್ದಾರೆ ಎಂದು, ಇಲ್ಲಿಯ ನನ್ನ 10 ವರ್ಷದ ವಾಸ ನನ್ನ ಜೀವನದ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನಗಳು ಎಂದೇ ಹೇಳಬೇಕು. ಕನ್ನಡದ ಬಹುತೇಕ ಪ್ರಸಿದ್ಧ ಸಿನಿಮಾ ನಟರು, ಕಿರುತೆರೆಯ ನಟರೂ, ಸಾಹಿತಿಗಳು ಹಾಗೂ ಹಾಡುಗಾರರೊಡನೆ ಕಳೆದ ದಿನಗಳು ನನ್ನ ಮನಸ್ಸಿನಲ್ಲಿನ್ನೂ ಹಸಿರಾಗಿದೆ. ಒಮ್ಮೆ ಸಂಗೀತಗಾರರ ದಂಡೇ ಬಂದಿದ್ದು ಜ್ಞಾಪಕ. ದಿನವೆಲ್ಲಾ ಮನೆಯಲ್ಲಿ ಸಂಗೀತ ಗುಂಯಾಡಿಸುತ್ತಿತ್ತು. ನನ್ನ ಮೇಲೆ ಕುಳಿತು ಹಾಡಿದವರೆಷ್ಡು. ರತ್ನಮಾಲಾ ಪ್ರಕಾಶ್, ಎಂ ಡಿ ಪಲ್ಲವಿ, ಬಿ ಕೆ ಸುಮಿತ್ರಾ, ರಾಜೇಶ್ ಕೃಷ್ಣನ್, ಅರ್ಚನಾ ಉಡುಪ, ನಾಗರಾಜ್ ಹವಲ್ದಾರ್, ಶ್ರೀನಿವಾಸ ಉಡುಪ, ಅಪ್ಪಗೆರೆ ತಿಮ್ಮರಾಜು, ಬಿ ಆರ್ ಛಾಯಾ, ಮುದ್ದು ಕೃಷ್ಣ, ಬಿ ಜಯಶ್ರೀ, ಮಾಲತಿ ಶರ್ಮಾ, ಶಮಿತ ಮಲ್ನಾಡ್, ಎಲ್ ಎನ್ ಶಾಸ್ತ್ರಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಸ್ಯಗಾರರಿಗೇನು ಕಮ್ಮಿ ಇರಲಿಲ್ಲ. ಒಮ್ಮೆ ಪ್ರೊ. ಕೃಷ್ಣೇಗೌಡ ಹಾಗೂ ಪ್ರೊ. ಅ ರಾ ಮಿತ್ರ ಅವರ ಹಾಸ್ಯ ಜುಗಲ ಬಂದಿ ವಾರಗಟ್ಟಲೆ ಹಗಲು ರಾತ್ರಿ ಎನ್ನದೇ ಎಲ್ಲರನ್ನು ನಗೆಗಡಲಲ್ಲಿ ಮುಳಗಿಸಿತ್ತು. ರಿಚರ್ಡ್ ಲೂಯಿಸ್ ಬಂದಾಗಲಂತೂ ಗುಂಡಿನ ಪಾರ್ಟಿಯ ಜೊತೆಗೆ ಹಾಸ್ಯದ ಹೊನಲೇ ಹರಿದಿತ್ತು. ಮೈಸೂರು ಆನಂದ್ ಅಂತೂ ನನ್ನ ಮೇಲೆ ಬಲ ಬಾಗದ ಮೂಲೆಯಲ್ಲಿ ಕುಳಿತು ಕೊಂಡು ಜೋಕುಗಳನ್ನು ಹೇಳುವುದೆಂದರೆ ಅವರಿಗೂ ಇಷ್ಟ, ನನಗೂ ಇಷ್ಟ. ಒಮ್ಮೆ ಮನೆಯಲ್ಲಿ ಎಷ್ಟು ಕಲಾವಿದರಿಂದ ತುಂಬಿತ್ತೆಂದರೆ ನನ್ನ ಮೇಲೆಲ್ಲಾ ಕುಳಿತು ಮಾತನಾಡುತ್ತಿದ್ದರು. ಒಮ್ಮ ಕನ್ನಡದ ಕುಳ್ಳ ದ್ವಾರಕೀಶ್ ನನ್ನ ಮೇಲೆ ಕೂತು ಚಿತ್ರರಂಗದ ತಮ್ಮ ಅನುಭವಗಳನ್ನು ನಮ್ಮ ಮಾಲೀಕರೊಡನೆ ಹಂಚಿಗೊಂಡಿದ್ದು ಭಾವಪೂರ್ಣವಾಗಿತ್ತು. ಮುಖ್ಯಮಂತ್ರಿ ಚಂದ್ರು ಅವರ ಪ್ರತಿ ಸಂಭಾಷಣೆಯಲ್ಲೂ ಹುಟ್ಟಿಸುತ್ತಿದ್ದ ಹಾಸ್ಯ ಮನೆಯಲ್ಲಿನ ಗಾಳಿಯಲ್ಲೂ ಹರಿಯುತ್ತಿತ್ತು. ಬಹು ಮುಖ್ಯ ದಿನಗಳು ಎಂದರೆ ಟಿ ಎನ್ ಸೀತಾರಾಂ, ಕಪ್ಪಣ್ಣ, ಮುದ್ದುಕೃಷ್ಣ ಹಾಗೂ ಅಪ್ಪಗೆರೆ ತಿಮ್ಮರಾಜು ಅವರು ಮನೆಯಲ್ಲಿ ಇದ್ದಾಗ. ನನ್ನ ಮೇಲೆ ಕೂತು ನಡೆದ ಗುಂಡಿನ ಪಾರ್ಟಿಗಳೇನು! ಜಾನಪದ ಹಾಡುಗಳ ಸಂಭ್ರಮವೇನು! ಹೇಳತೀರದು. ಅದೇ ಸಂದರ್ಭದಲ್ಲಿ ಒಂದು ದಿನ ನನ್ನ ಮೇಲೆ ಕೂತು ಮುದ್ದುಕೃಷ್ಣ ಹಾಗೂ ಅಪ್ಪಿಗೆರೆ ತಿಮ್ಮರಾಜು ಅವರ ಬಿಸಿ ಬಿಸಿ ಮಾತುಗಳು ನನ್ನನ್ನೂ ಬಿಸಿ ಮಾಡಿದಂತಿತ್ತು. ಅವರಿಗೆ ಸಮಾದಾನ ಮಾಡಲು ನನ್ನ ಮೇಲೆ ಕೂತಿದ್ದ ಕಪ್ಪಣ್ಣ ಹಾಗೂ ಟಿ ಎನ್ ಎಸ್ ರವರು ಹರ ಸಾಹಸ ಮಾಡುತ್ತಿದ್ದ ದೃಶ್ಯ ಕಣ್ಮುಂದೆ ಈಗಲೂ ಇದೆ. ಕಪ್ಪಣ್ಣರವರು ಅಂದು ರಾತ್ರಿ ನನ್ನ ಮೇಲೆ ಮಲಗಿದ್ದಲ್ಲದೇ ಜೋರು ಗೊರಕೆ ಹೊಡದಿದ್ದು ನಾನಂತೂ ಮರೆಯಲಾರೆ. ಅಪ್ಪಿಗೆ ತಿಮ್ಮರಾಜುವರಂತೂ ಅವರು ಇರುವಷ್ಟು ದಿವಸವೂ ನನ್ನ ಮೇಲೆ ಕೂತೆ ಇರಲಿಲ್ಲ. ನನ್ನ ಪಕ್ಕದಲ್ಲೇ ಕುಳಿತು ಕೊಳ್ಳುತ್ತಿದ್ದರು. ನಮ್ಮ ಮಾಲೀಕರ ನಾಟಕದ ಗುರು ಸ್ನೇಹಿತ ನಾಗಾಭರಣ, ರಾಣಿ ಭರಣ ಹಾಗೂ ಕಲ್ಪನಾ ಅವರುಗಳು ಬಂದಾಗಲಂತೂ ಮನೆ ರಂಗ ಗೀತೆಗಳಿಂದ ಪ್ರತಿಧ್ವನಿಸುತ್ತಿದ್ದವು. ಸಿಹಿಕಹಿ ಚಂದ್ರು ತಮ್ಮ ಬೊಂಭಾಟ್ ಭೋಜನದ ನಂತರ ನನ್ನ ಮೇಲೆ ಆರಾಮವಾಗಿ ಕೂತು ವಿಶ್ರಮಿಸುತ್ತಿದ್ದರು. ಕನ್ನಡದ ಸಾಹಿತ್ಯ ದಿಗ್ಗಜರುಗಳಾದ ಹೆಚ್ ಎಸ್ ವೆಂಕಟೇಶ್ ಮೂರ್ತಿ ಹಾಗೂ ಬಿ ಆರ್ ಲಕ್ಷ್ಮಣರಾವ್ ಅವರು ಬಂದಾಗ ಮನೆಯಲ್ಲಿದ್ದ ಸಾಹಿತ್ಯಾತ್ಮಕ ವಾತಾವರಣ ಪಡೆಯಲು ನಮ್ಮ ಮಾಲೀಕರ ಮನೆ ಸೇರಿದ್ದು ನನ್ನ ಪುಣ್ಯ ಎನ್ನಬೇಕು.
ಈ ಮನೆಯಲ್ಲೂ ಬಹಳಷ್ಟು ಪಾರ್ಟಿಗಳು ನಡೆಯುತ್ತಿದ್ದವು. ಹಳೆ ಮನೆಯಲ್ಲಿ ನೆಳಮಾಳಿಗೆಯಾದರೂ ಇತ್ತು, ಕೆಲ ಪಾರ್ಟಿಗಳಲ್ಲಿ ನನಗೆ ವಿಶ್ರಮಿಸಲು ಸ್ವಲ್ಪ ಕಾಲವಕಾಶವಾದರೂ ಇತ್ತು. ಈ ಹೊಸ ಮನೆಯಲ್ಲೂ ನನ್ನ ಮೇಲೆ ಎಲ್ಲ ತರಹದ ಪಾನೀಯಗಳು, ತಿಂಡಿ ತಿನಿಸಿಗಳನ್ನು ಮನೆಗೆ ಬಂದ ಅತಿಥಿಗಳು ತಿನ್ನಿಸಿದ್ದಾರೆ. ಆಧರೆ ಕ್ಯಾಲಿಫೋರ್ನಯಾದ ಈ ಮನೆಯಲ್ಲಿ ಆಗಿಂದಾಗ್ಗೆ ನನ್ನನ್ನು ಯಾರೋ ಅಲ್ಲಾಡಿಸಿದಂತಾಗುತ್ತಿತ್ತು. ಅದು ಭೂಕಂಪ ಎಂದು ಗೊತ್ತಾಗಿದ್ದು ಬಹಳ ದಿವಸದ ಮೇಲೆಯೇ. ನನ್ನ ಈ 13 ವರ್ಷಗಳ ಆತ್ಮ ಕತೆಯನ್ನು ನಿಮ್ಮಲ್ಲಿ ಹೇಳಿಕೊಳ್ಳೋಣವೆಂದೆನಿಸಿತ್ತು. ಆದ್ದರಿಂದ ಈ ಪತ್ರದ ಬರೆದಿದ್ದೇನೆ. ನನ್ನನ್ನು ಮನೆಯಿಂದ ಹೊರ ತಳ್ಳಿದಾಗ ಮಾಲೀಕರ ಕಣ್ಣಲ್ಲೂ ಹನಿಗಳು ಹರಿದಿದ್ದು ಕಾಣಿಸಿತು. ಅಮ್ಮನವರಂತೂ ಅತ್ತೇಬಿಟ್ಟಿದ್ದರು. ಮಾಲೀಕರು ನನ್ನನ್ನು ಎತ್ತಿ ಟ್ರಕ್ಕಿನ ಒಳಗೆ ತಳ್ಳುತ್ತಿದ್ದಾಗ ತೆಗೆದ ಫೋಟೋ ಅವರ ಬಳಿಯೇ ಇರಬೇಕು ಅಂದು ಕೊಂಡಿದ್ದೇನೆ. ಅವರ ಮನೆಯಿಂದ ನನ್ನನ್ನು ಕರೆದು ತಂದು ಯಾವುದೋ ಒಂದು ಉಗ್ರಾಣದಲ್ಲಿ ತುರುಕಿದ್ದಾರೆ. ಧೂಳು ಹೊಡೆಯುವವರೂ ಯಾರೂ ಇಲ್ಲ. ಖಾಯಿಲೆ ಬಂದವರಂತೆ ಕಾಣುತ್ತಿದ್ದೇನೆ. ನಮ್ಮ ಹಳೆಯ ಮಾಲೀಕರಿಗೆ ಮನೆಗೆ ವಾಪಸ್ ಕರೆದುಕೊಂಡು ಹೋಗಿ ಎಂದು ಹೇಳಲಿಕ್ಕೆ ಅವರ ಸಂಬಂಧ ಹದಿಮೂರು ವರ್ಷಗಳ ಸಂಬಂಧ. ಈ ಹದಿಮೂರು ವರ್ಷಗಳಲ್ಲಿ ನನ್ನ ವಂಶಜರಿಗೆ ಸಿಗದ ಅವಕಾಶವನ್ನು ಅವರು ನನಗೆ ಒದಗಿಸಿದ್ದಾರೆ. ಅವರಿಗೆ ನಾನು ಚಿರ ಋಣಿ.
ಇತಿ,
ವಲ್ಲೀಶ ಶಾಸ್ತ್ರಿಯವರ ಮನೆಯ ಹಳೆ ಬಿಳಿ ಸೋಫಾ

 

 Posted by at 2:10 PM
Jul 012013
 

 

 

 

 

 

 

(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಕವನಗಳು.)

ಮಳೆ ಎಂದರೆ…

ಮಳೆ ಎಂದರೆ ಕೆಲವರಿಗೆ-
ಹರಳುಗಟ್ಟಿದ ಹಿನ್ನೋಟ,
ಭರವಸೆಯ ಮಿಂಚೋಟ,
ಮಣ್ಣ ಘಮದೊಳ ಹೂದೋಟ.

ಮಳೆ ಎಂದರೆ ಕೆಲವರಿಗೆ-
ಕವಿತೆ ಬರೆಸುವ ಚಿತ್ರ,
ಕಥೆಗೊಂದು ಪಾತ್ರ,
ಪ್ರಣಯದಾಟಕೆ ತಂತ್ರ.

ಮಳೆ ಎಂದರೆ ಕೆಲವರಿಗೆ-
ತೆನೆಯು ತೂಗಿದ ನೆನಪು,
ಕಣಜ ತುಂಬಿದ ಕನಸು,
ಮಣ್ಣ ಮಡಿಲಿನ ಬದುಕು.

ಮಳೆ ಎಂದರೆ ಕೆಲವರಿಗೆ-
ಬಿಡದೇ ಸುರಿವ ಶನಿ.
ಶೀತಹವೆ ಥಂಡಿಗಾಳಿ,
ಹವಾಮಾನ ವರದಿ.

ಮಳೆ ಎಂದರೆ ಮಳೆಗೆ ?
ಇಡಿಯು ಬಿಡಿ ಬಿಡಿಯಾಗಿ
ಗಮ್ಯದೆಡೆಗಿನ ಯಾನ.
ಹನಿಹನಿಯ ಎದೆಯಲ್ಲೂ
ಅದ್ವೈತ ಧ್ಯಾನ.

****************

 

ಚಂದಿರಗೊಂದು ಕಾಗದ

ಅಮ್ಮಾ..,
ಚಂದಿರಗೊಂದು ಕಾಗದ ಬರೆಯುವೆ
ಹಗಲೂ ಬಾರೆಂದು.
ನಿನ್ನನು ನೋಡಿ ಮಮ್ಮು ತಿನ್ನುವೆ
ಮೊಗವನು ತೋರೆಂದು.

ಉರಿವ ಸೂರ್ಯನ ಹೇಗೆ ನೋಡಲೇ
ನೀನು ಉಣಿಸುವಾಗ?
ತಾರೆಯ ಜೊತೆಯಲಿ ಚಂದಿರ ನಿಂತಿರೆ
ಊಟಕೆ ರುಚಿ ಆಗ.

ನನ್ನಯ ಕಾಗದ ಓದಲು ಅವನಿಗೆ
ಬರುವುದೇ ಕನ್ನಡ?
ಬಾರದೆ ಇದ್ದರೆ ನೀನೇ ಕಲಿಸೇ
ನನ್ನಯ ಸಂಗಡ.

ಹುಣ್ಣಿಮೆ ಬಂದರೆ ಬಾನಿನ ಬಣ್ಣವು
ಬಿಳುಪಾಯಿತು ಹೇಗೇ!?
ಚಂದ್ರನೂ ನನ್ನಂತೆ ಬಟ್ಟಲ ಹಾಲನು
ಚೆಲ್ಲಿಕೊಂಡನೇನೇ ಅಮ್ಮಾ,
ಚೆಲ್ಲಿಕೊಂಡನೇನೇ !?

 Posted by at 1:50 PM
Jul 012013
 

(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಪ್ರಬಂಧ.)

 

ಮೊನ್ನೆ ನಮ್ಮ ನಗೆಹೊನಲು ಭು.ಹೆ. ಯವರು ತಮ್ಮ ಮುಖಪುಸ್ತಕದಲ್ಲಿ ಚಂದದ ಬಾಗಿಲಿನ ಚಿತ್ರ ಅಂಟಿಸಿದ್ದರು. ದಪ್ಪನೆಯ ಮರದ ಚೌಕಟ್ಟಿನ ಮೇಲೆ ಚಿತ್ತಾರದ ಬಳ್ಳಿ, ಎತ್ತರದ ಹೊಸ್ತಿಲು, ಮೇಲೊಂದು ಗಣಪತಿ ಪಟ, ಎಂತ ಚಂದದ ಬಲು ಆತ್ಮೀಯ ಬಾಗಿಲು ಅದು. ಮಲೆನಾಡು, ಕರಾವಳಿಯ ಬಹುಮೊನ್ನೆ ನಮ್ಮ ನಗೆಹೊನಲು ಭು.ಹೆ. ಯವರು ತಮ್ಮ ಮುಖಪುಸ್ತಕದಲ್ಲಿ ಚಂದದ ಬಾಗಿಲಿನ ಚಿತ್ರ ಅಂಟಿಸಿದ್ದರು. ದಪ್ಪನೆಯ ಮರದ ಚೌಕಟ್ಟಿನ ಮೇಲೆ ಚಿತ್ತಾರದ ಬಳ್ಳಿ, ಎತ್ತರದ ಹೊಸ್ತಿಲು, ಮೇಲೊಂದು ಗಣಪತಿ ಪಟ, ಎಂತ ಚಂದದ ಬಲು ಆತ್ಮೀಯ ಬಾಗಿಲು ಅದು. ಮಲೆನಾಡು, ಕರಾವಳಿಯ ಬಹುತೇಕ ಹಳ್ಳಿಗಳೆಲ್ಲ ಮನೆಯ ಪ್ರಧಾನ ಬಾಗಿಲು ಅದು. ಪ್ರಧಾನ ಬಾಗಿಲು ಆಗಿನ ಕಾಲದ ದಪ್ಪ ಮರದ ತೊಲೆಯ ಅಂಕಣದ ಮನೆಗಳ ಜೀವಸಂವಹನದ ಕೇಂದ್ರ ಬಿಂದು; ಗಡಿರೇಖೆ. ಮಲೆನಾಡಿನ ಮನೆಗಳ ಸೌಂದರ್ಯವನ್ನು, ಗೌರವವನ್ನು, ಆಪ್ತತೆಯನ್ನು, ಸುರಕ್ಷೆಯ ಭಾವವನ್ನು ಒಂದು ವಿಶಿಷ್ಟ ಬಗೆಯಲ್ಲಿ ಬೆಸೆದುಕೊಡುವ ಚೈತನ್ಯ ಆ ಬಾಗಿಲಿಗಿದೆ ಎಂದರೆ ತಪ್ಪಾಗಲಾರದು. ಆದರೆ ಪ್ರಧಾನ ಬಾಗಿಲು ಎಂದಾಕ್ಷಣ ಅಯಾಚಿತವಾಗಿ ನನ್ನ ಕೈ ತಲೆ ಮುಟ್ಟಿ ನೋಡಿಕೊಳ್ಳುತ್ತೆ. ಹೌದು, ಬಹಳ ಬಾರಿ ತಲೆಬಡಿಸಿಕೊಂಡು ಬುಗುಟೆಯೆದ್ದು, ಈಗಲೂ ಅಲ್ಲೆಲ್ಲೋ ಹಸಿ ನೋವು ಇದ್ದಂತೆ ಭಾಸವಾಗಿಸುವ ಬಾಗಿಲು ಪ್ರಧಾನ ಬಾಗಿಲು.

 

ಮಣ್ಣು ಗೋಡೆಯ ಕಟ್ಟಿಗೆ ಅಂಕಣದ ಆಗಿನ ಮನೆಗಳನ್ನು ಸ್ಪಷ್ಟವಾಗಿ ಹೊರಮನೆ ಒಳಮನೆ ಎಂದು ವಿಂಗಡಿಸುವ ಮುಖ್ಯ ಗಡಿ ಪ್ರಧಾನ ಬಾಗಿಲು. ಮನೆಯೆದುರು ಮಣ್ಣು, ಸೆಗಣಿ ಬಡಿದು ಸಾರಿಸಿದ ಅಂಗಳ, ಅಲ್ಲೊಂದು ತುಳಸಿಕಟ್ಟೆ, ಅಡಿಕೆ ಒಣಗಿಸುವ ಅಟ್ಟ. ಅಂಗಳದಾಚೆ ಒಂದು ಅಗಳ ಅಥವಾ ದೊಡ್ಡ ಮಳೆನೀರ ಕಾಲುವೆ, ಅದಕ್ಕೊಂದು ಪುಟ್ಟ ಅಡಿಕೆ ದಬ್ಬೆಯ ಸಂಕ. ಅದರಾಚೆ ತಗ್ಗಿನಲ್ಲಿ ಹಸಿರು ಅಡಿಕೆ ತೋಟ. ಅಂಗಳದೀಚೆ ಮನೆಗೊಂದು ಹೊರಬದಿಗೆ ಕಟ್ಟೆ ಅಥವಾ ಚಿಟ್ಟೆ. ಅದರಾಚೆ ಒಂದು ಕಡೆಯಲ್ಲಿ ಮಾಡು, ಅಡಿಕೆ ಚೀಲ ಶೇಖರಕ್ಕೆ, ಅಡಿಕೆ ಸುಲಿಯುವವರಿಗೆ ಜಾಗ. ಮನೆಯ ಆಚೆಮಾಡಿನ ಹೊರಗೊಂದು ತಣ್ಣೀರಿನ ತಳಕಾಣದ ಬಾವಿ. ಅಲ್ಲೇ ಒಂದು ಬಚ್ಚಲು, ಅದಕೊಂದು ಸದಾ ಬೆಚ್ಚಗಿರುವ ಒಲೆ, ಸದಾ ಸುಡುಸುಡು ನೀರಿರಿರುವ ಕಾದುಕೊಂಡೆ ಇರುವ ತುಂಬಿದ ಹಂಡೆ. ಹಿಂದೊಂದು ದನದ ಕೊಟ್ಟಿಗೆ, ಹೊರಬದಿಗೊಂದು ಅಕ್ಕಚ್ಚು ದಾಣಿ, ಮುರ ಕೊಚ್ಚುವ ಕತ್ತಿ, ಮೆಟ್ಟುಗತ್ತಿ, ಬತ್ತ ಕುಟ್ಟುವ ಒರಳುಕಲ್ಲು. ಮನೆಯ ಹೊರಚಿಟ್ಟೆಯಿಂದ ಮುಂಬಾಗಿಲಿನಿಂದ ಒಳಹೊಕ್ಕರೆ ಅಲ್ಲೊಂದು ವಿಶಾಲ ಹೊರಜಗಲಿ ಅಥವಾ ಕೆಳಜಗಲಿ. ಅಲ್ಲೊಂದು ಮೆಟ್ಟಿಲಿನಂತೆ ಸ್ವಲ್ಪ ಎತ್ತರಕ್ಕೆ ಒಳಜಗಲಿ ಅಥವಾ ಮೇಲ್ಜಗಲಿ. ಹೊರಜಗಲಿಯಲ್ಲೊಂದಿಷ್ಟು ಕುರ್ಚಿ, ಬೆಂಚು ಒಂದು ಕವಳಬಟ್ಟಲಿಡಲು ಮೇಜು. ಮೇಲ್ಜಗಲಿಯಲ್ಲಿ ಒಂದು ಮೆತ್ತನೆಯ ವಿಶಾಲ ಜಮಖಾನೆ, ಅದರ ಮೇಲೆಲ್ಲಾ ಸುತ್ತಲೂ ಹರಡಿದ ಗಟ್ಟಿ ದಿಂಬು ಅಥವಾ ಆನಿಸಿಕೊಳ್ಳಲಿರುವ ಲೋಡು. ಗೊಡೆಯ ಮೇಲೆಲ್ಲಾ ಸಿಕ್ಕಾಪಟ್ಟೆ ದೇವರ ಕ್ಯಾಲೆಂಡರುಗಳು, ಮನೆಯ ಹಿರಿಯರ ಛಾಯಾಚಿತ್ರಗಳು, ಮಕ್ಕಳ ಮೊಮ್ಮಕ್ಕಳ ಚಿತ್ರಗಳು, ಅಂಕಣದ ಮೂಲೆಯಲ್ಲಿ ಚಿಂವ್ ಚಿಂವ್ ಗುಬ್ಬಿ ಗೂಡು. ಈ ವಿವರಗಳನ್ನು ಕಣುಮುಚ್ಚಿಕೊಂಡು ಕಲ್ಪಿಸಿಕೊಂಡರೆ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಯಾರಾದರೂ ತಮ್ಮ ತಮ್ಮ ಮನೆಯನ್ನೇ ನೆನಪಿಸಿಕೊಳ್ಳಬಲ್ಲರು. ಇಂಥ ಮೇಲ್ಜಗಲಿಯ ಮಧ್ಯದಲ್ಲಿ ಗಾಂಭೀರ್ಯವೂ ಪ್ರೀತಿಯೂ ತುಂಬಿದ, ಸಣ್ಣನೆಯ ಊದಿನಕಡ್ಡಿಯ ಹೊಗೆ ಸೂಸುತ್ತ ಮುಗುಳ್ನುಗುತ್ತಿರುವುದೆ ಚಿತ್ತಾರದ ಬಾಗಿಲು, ಪ್ರಧಾನ ಬಾಗಿಲು. ಆಗೆಲ್ಲ ಮನೆಯೊಡತಿ ಬೆಳಗೆದ್ದು ಮುಖ ತೊಳೆದು ಒಂದು ದೊಡ್ಡ ತಂಬಿಗೆಯಲ್ಲಿ ನೀರಿಟ್ಟುಕೊಂಡು ಹೊರಬಂದು, ತುಳಸಿ ಕಟ್ಟೆಗೆ ನೀರು ಹಾಕಿ, ಹೊರಬಾಗಿಲಿಗೆ ರಂಗೋಲಿ ಹಾಕಿ, ಪ್ರಧಾನ ಬಾಗಿಲಿಗೊಂದು ತಂಬಿಗೆ ನೀರಿತ್ತು, ಅಲ್ಲಿ ಅರಿಹೋಗಿರುವ ರಾತ್ರಿ ಹಚ್ಚಿಟ್ಟ ದೀಪ ಎತ್ತಿಕೊಂಡು ಒಳಹೋಗುವಳು.

 

ನನ್ನ ಅಜ್ಜಿಯ ಮನೆಯೂ ಇಂಥದ್ದೇ ಒಂದು ಮನೆ. ಈಗಲೂ ಚಿಕ್ಕಮ್ಮನ ದಿನ ಆರಂಭವಾಗುವುದು ಹೀಗೆಯೇ. ರಜೆಯಲ್ಲಾದರೆ ದೇವರಿಗೆ ನಾವು ಮೊಮ್ಮಕ್ಕಳು ಸುತ್ತಲಿನ ಹೂಗಿಡಗಳಿಂದ ಹೂಕೊಯ್ದು ದೇವರ ಮುಂದಿಡಬೇಕು. ಆನಂತರ ಕೊಟ್ಟಿಗೆ ಕೆಲಸ ಮುಗಿಸಿ ಸ್ನಾನ ಮಾಡಿ ಚಿಕ್ಕಪ್ಪ ದೇವರಪೂಜೆ ಮುಗಿಸಿ, ಜಗಲಿಯ ದೇವರುಗಳಿಗೆ ಅಜ್ಜನ,(ಈಗ ಅಜ್ಜಿಯದಕ್ಕೂ ) ಪಟಕ್ಕೆಲ್ಲ ಹೂ ಮುಡಿಸಿ, ದೀಪ ತೋರಿಸಿ, ಪ್ರಧಾನ ಬಾಗಿಲ ಬುಡದಲ್ಲಿ ಅಕ್ಕಿಲೋಟದಲ್ಲಿ ಊದಿನ ಕಡ್ಡಿ ಸಿಕ್ಕಿಸಿದರೆ ದಿನವೆಲ್ಲ ಪರಿಮಳ ಸೂಸುತ್ತ ನಿಂತಿರುವ ಬಾಗಿಲು. ಮಧ್ಯಾಹ್ನ ಊಟವಾದ ಮೇಲೆ ಅಡ್ಡಾಗಿ ಎಂದು ಬೈಸಿಕೊಂಡು ಮಲಗಿರುವ ನಾವು, ಬೆಳಕು ಬೀಳದಿರಲೆಂದು ಬಾಗಿಲ ಕದ ಓರೆ ಮಾಡಿ ಮಲಗಿದ ಅಜ್ಜಿಗೆ ಕಾಣದಂತೆ ಉರಿಬಿಸಿಲಲ್ಲಿ ಎದ್ದು ಓಡುವ ಆತುರ ನಮಗೆ. ಮೆಲ್ಲನೆ ಪ್ರಧಾನ ಬಾಗಿಲ ಕದ ಸರಿಸಿದರೆ, ಯಮಭಾರದ ಕದ ಕಿರ್ರೆಂದು ರಂಪ ಮಾಡಿ ಉಪಾಯದ ಓಟಕ್ಕೆಲ್ಲ ಅಲ್ಲೇ ಹೊಸ್ತಿಲಲ್ಲಿ ಅಡ್ಡ ಹಾಕುತ್ತಿತ್ತು. ಸಂಜೆ ಭಜನೆಯ ಹೊತ್ತಲ್ಲಿ, ಬಿಸಿಬಿಸಿ ಹಂಡೆಯ ನೀರಲ್ಲಿ ಕಾಲ್ತೊಳೆದು, ಪ್ರಧಾನ ಬಾಗಿಲಿಗೆ ಕೈಮುಗಿದು ಒಳಬಂದು ಕರಂಡಕ ಭಸ್ಮ ಹಚ್ಚಿಕೊಂಡರೆ ಅಲ್ಲಿಂದ ಅಜ್ಜಿಯ ಕತೆಯ ಸರಣಿಗೆ ಕಾಯುವ ಎಣಿಕೆ ಶುರು ಎಂದರ್ಥ. ಭಜನೆ ಮುಗಿಸಿ, ಊಟ ಮುಗಿಸಿ, ಚಿಕ್ಕಮ್ಮ ಬಾಗಿಲ ದೀಪಕ್ಕೆ ಎಣ್ಣೆ ಹನಿಸಿದ ಮೇಲೆ ಮೇಲೆ ಕಾಲು ನೀಡಿ ಕುಳಿತ ಅಜ್ಜಿಯ ಬಾಯಿಂದ ಒಂದೊಂದೇ ಕತೆಗಳು ಹೊರಬೀಳುತಿದ್ದವು. ಅಜ್ಜಿಯಾ ಪ್ರಕಾರ, ಪ್ರಧಾನ ಬಾಗಿಲು ದಾಟಿ ಯಾವ ದುಷ್ಟ ಶಕ್ತಿಯೂ ಒಳಬರುವುದಿಲ್ಲ, ಹಾಗಾಗಿ ಜಗಲಿಯ ಮೇಲೆ ರಾತ್ರಿ ಮಲಗುವ ಅವಕಾಶ ಮಕ್ಕಳಿಗಿಲ್ಲ. ಅಲ್ಲಿ ಗಂಡಸರು ಮಾತ್ರ ಗೊರಕೆ ಹೊಡೆಯುತ್ತ ಬಿದ್ದಿರಬಹುದು. ಅದು ಮೆತ್ತಿನ (ಮೇಲಂತಸ್ತಿನ) ಮೇಲಾದರೂ ಮಕ್ಕಳೆಲ್ಲ ಪ್ರಧಾನ ಬಾಗಿಲಿನ ಒಳ ಪ್ರದೇಶ ಭಾಗವಾದ ಮನೆಯಲ್ಲಿ ಮಲಗತಕ್ಕದ್ದು.

 

ಈ ಪ್ರಧಾನ ಬಾಗಿಲು ನಾನು ನೋಡಿದಂತೆ ಇತರ ಎಲ್ಲ ಬಾಗಿಲುಗಳಿಗಿಂತ ಒಂದು ಅಡಿಗಿಂತಲೂ ಹೆಚ್ಚಿನ ಎತ್ತರವನ್ನು ಕಳೆದುಕೊಂಡ ಗಿಡ್ಡ ಬಾಗಿಲು. ಹೊಸ್ತಿಲು ಕೂಡ ಅರ್ಧ ಮೆಟ್ಟಿಲ ಎತ್ತರ. ಹೆಚ್ಚಿನ ಕಡೆ ಬಾಗಿಲ ಮೇಲೆ ಇರುವುದು ಮನೆದೇವರ ಪಟ ಇಲ್ಲವೇ ಗಣಪತಿಯ ಪಟ. ಸ್ವಲ್ಪ ಎಚ್ಚರ ತಪ್ಪಿದಿರೋ ಬಾಗಿಲು ದಾಟುವಾಗ ತಲೆ ಧಂ ಎಂದು ಬಡಿಸಿಕೊಳ್ಳುವುದು ಖಂಡಿತ. ಬಹಳಷ್ಟು ಬಾರಿ ಹಾಗೆ ಬಡಿಸಿಕೊಂಡಿದ್ದೇನೆ. ಆರು ಫೂಟು ಎತ್ತರದ ದೊಡ್ಡಪ್ಪನ ಮಗನಂತೂ ತಲೆತಗ್ಗಿಸಿದರೂ ಧಡಾಲ್ ಎಂದು ಬಡಿಸಿಕೊಳ್ಳುತ್ತಿದ್ದ. ಅವನು ಚಪ್ಪಲಿ ಕಳಚಲು ಪುರುಸೊತ್ತಿಲ್ಲದಂತೆ ಅಜ್ಜಿ, ಚಿಕ್ಕಮ್ಮ, “ತಮ್ಮ ತಲೆ ಹುಷಾರು” ಎಂದು ಬಡಕೊಳ್ಳುತ್ತಿದ್ದರೂ ಅವ ಬಾಗಿಲಿಗೆ ಬಡಿಸಿಕೊಳ್ಳುತ್ತಿದ್ದ. ಈ ಬಾಗಿಲನ್ನು ಅದೇಕೆ ಇಷ್ಟು ಗಿಡ್ಡ ಕಟ್ಟುತ್ತಾರೊ, ಆಗಿನ ಜನರೇ ಮೈಕಟ್ಟಿನಲ್ಲಿ ಸ್ವಲ್ಪ ಗಿಡ್ಡ ಎಂದಿಟ್ಟುಕೊಂಡರೂ ಅವರಿಗೂ ತಲೆಬಗ್ಗಿಸಿಯೇ ಹೋಗುವಷ್ಟು ಗಿಡ್ಡವಿರುತ್ತವೆ ಈ ಬಾಗಿಲುಗಳು. ಆದರೆ ಬಾಗಿಲಿನ ಮೂಲಕ ಸಾರುವ ಒಂದು ಅಡಕವಾದ ಸಂದೇಶವಿದೆ ಅಲ್ಲಿ. ಮನೆಗೆ ಬಂದವರನ್ನು ಕರೆದು ಉಪಚರಿಸುವ, ಕೂರಿಸುವ ಪರಿ, ಜಾಗಗಳಲ್ಲಿಯೂ ಮಲೆನಾಡಿನಲ್ಲಿ ಸೂಕ್ಷ್ಮ ವ್ಯತ್ಯಾಸವಿದೆ. ಅಪರಿಚಿತರು, ಏನೋ ಕೆಲಸ ಕಾರ್ಯಕ್ಕೆಂದು ಒಣ ವ್ಯವಹಾರಗಳಿಗೆ ಬಂದವರಿಗೆ ಹೊರಜಗಲಿಗೆ ಮಾತ್ರ ಪ್ರವೇಶ. ಆದರೆ ಯಾರೇ ಬಂದರು ತಕ್ಷಣ ಅವರಿಗೆ ನೀರು ಕೊಡುವುದು ವಾಡಿಕೆ. ಅಲ್ಲೇ ಬೇಕಿದ್ದರೆ ಚಹಾ ಸರಬರಾಜು. ಇನ್ನು ಹರಟೆಗೆಂದು ಬಂದವರು, ಲೋಕಾಭಿರಾಮ ಮಾತನಾಡುವವರು, ಸ್ವಲ್ಪ ಹೆಚ್ಚಿನ ಬಳಕೆಯ ಊರಜನ ಬಂದರೆ ಒಳಜಗಲಿಯೆ ಲೋಡಿನ ಆಸನ ಜೊತೆಗೆ ಕವಳ(ಎಲೆ ಅಡಿಕೆ) ಬಟ್ಟಲು. ಒಳಕರೆದು ಅಡಿಗೆಮನೆಯಲ್ಲಿ ಇಲ್ಲ ಒಳಮನೆಯಲ್ಲಿ ಕೂರಿಸಿ ಉಪಚರಿಬೇಕಾದರೆ, ಊಟ ಹಾಕಬೇಕಾದರೆ, ಆ ವ್ಯಕ್ತಿ ಅತ್ಯಂತ ಆತ್ಮೀಯರೂ, ಬಳಗದವರೂ, ತೀರ ಹೊಕ್ಕು ಬಳಕೆಯುಳ್ಳವರೋ ಆಗಿರಬೇಕು. ಅಂಥವರು ಒಳ ಬರುವಾಗ, ಮನೆಗೂ, ಮನೆತನಕ್ಕೂ, ಮನೆಜನಕ್ಕೂ ಗೌರವ ಸೂಚಿಸಿ, ಅವರ ಆತ್ಮೀಯತೆಗೆ ಪ್ರೀತಿಗೆ ಧಕ್ಕೆ ತರದಂತೆ ನಡೆದುಕೊಳ್ಳುವೆ ಎಂಬಂತೆ ಒಪ್ಪಂದ ಸೂಚಕವಾಗಿ ಒಳಬರುವ ವ್ಯಕ್ತಿ ತಲೆತಗ್ಗಿಸಿ ಬರಲೆಂದು ಬಾಗಿಲಿನ ಮೂಲಕ ಮನೆಯವರು ಕೇಳುವ ಚಿಕ್ಕ ಮನ್ನಣೆ. ತಲೆತಗ್ಗಿಸಲಿಲ್ಲವೋ, ಬಾಗಿಲೆ ಎಚ್ಚರಿಸುತ್ತೆ. ಒಮ್ಮೆ ದಪ್ಪನೆಯ ಚೌಕಟ್ಟಿನ ಭಾರೀ ಬಾಗಿಲಿಗೆ ಬಡಿಸಿಕೊಂಡವ ಮತ್ತೊಮ್ಮೆ ಒಳಬರುವಾಗ ಬಗ್ಗಲು ತಪ್ಪುವುದಿಲ್ಲ.

 

ಈಗ ಕಟ್ಟುವ ಮನೆಗಳಲೆಲ್ಲ ಇರುವ ಪ್ರಧಾನ ಬಾಗಿಲು ಹೆಸರಿಗಷ್ಟೇ ಪ್ರಧಾನ. ಯಾರಿಗೂ ತಲೆತಗ್ಗಿಸಿ ಒಳಹೋಗಲು ಇಲ್ಲ ವ್ಯವಧಾನ. ಮನೆಯ ಮುಖ್ಯ ಆರ್ಟರಿಯಂತೆ ಇದ್ದ ಬಾಗಿಲು ಈಗ ಪ್ರತಿಶ್ಠೆಯ ಕೆತ್ತನೆ, ಅಲಂಕಾರದ ಪ್ರದರ್ಶನಕ್ಕೆ ಮೀಸಲು.ಜನಜೀವನ ಪ್ರಧಾನ ಬಾಗಿಲು – ವೈಹ್ಸಾಲಿ ಹೆಗಡೆ ಬದಲಾದಂತೆ ಬದುವ ರೀತಿ ಬದಲಾದಂತೆ ಇವೆಲ್ಲ ಸಹಜವೇನೋ ಎಂಬಂತೆ ನಾವೂ ಒಪ್ಪಿಕೊಂಡುಬಿಟ್ಟಿದ್ದೇವೆ. ಆದರೆ ತಲೆಮಾರುಗಳ ಹೆಜ್ಜೆಗುರುತುಗಳನ್ನು, ಹಾದುಹೋದ ಬಗ್ಗಿದ ತಲೆಗಳ ಲೆಕ್ಕವಿಟ್ಟ ಗಿಡ್ಡ ಬಾಗಿಲನ್ನು ಕಿತ್ತು ಉದ್ದಗೊಳಿಸಲು ಹೇಗೆ ಸಾಧ್ಯ? ಈ ಬಾಗಿಲು ಹಲವು ಬಗೆಯಲ್ಲಿ ಮನೆಜನರ ನಿತ್ಯಜೀವನದ ನಿಯಂತ್ರಣವನ್ನು ಹೊಂದಿತ್ತು. ಎತ್ತರದ ಹೊಸ್ತಿಲಿನಿಂದಾಗಿ, ಕಾಡಿನ ಹುಳ ಹುಪ್ಪತೆಗಳು, ಹಾವು ಹರಣೆಗಳು, ಅಷ್ಟು ಸುಲಭದಲಿ ಒಳಮನೆಯಲ್ಲಿ ನುಸುಳುವುದಿಲ್ಲ. ಹೈಟೆಕ್ ಬೀಗಗಳಿಲ್ಲದ ಕಾಲದಲ್ಲಿ ಕಳ್ಳಕಾಕರ ಕೈಚಳಕಕ್ಕೆ ಸುಲಭದಲ್ಲಿ ಜಗ್ಗದ ದಪ್ಪನೆಯ ಕದ, ಬಾಗಿಲ ಚೌಕಟ್ಟು, ಚಿಳಕಗಳು, ಮನೆಬಿಟ್ಟು ಹೋದ ಪ್ರಯಾಣದ ಸಂದರ್ಭಗಳಲ್ಲಿ ಮನೆಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸಿರುತ್ತಿದ್ದವು. ಮನೆಯಲ್ಲಿನ ದಿನನಿತ್ಯದ ಹಲವು ಆಚರಣೆಗಳು ಪ್ರಧಾನ ಬಾಗಿನ ಸುತ್ತ ಅರಿವಿಲ್ಲದೆಯೇ ಆತುಕೊಂಡಿವೆ. ಬೆಳಿಗ್ಗೆ ಗಂಧ ಸೂಸುವ ಬಾಗಿಲು, ಮುಸ್ಸಂಜೆಯಲ್ಲಿ ಮತ್ತೆ ಚಿಕ್ಕಮ್ಮ ತುಳಸಿಗೆ ದೀಪ ತೋರಿಸಿ, ಪ್ರಧಾನ ಬಾಗಿಲಿನ ಬುಡಕ್ಕೊಂದು ದೀಪ, ಒಂದು ಚಂಬು ನೀರಿಡುವ ಮೂಲಕ ಮತ್ತೆ ಚಂಬಿನ ನೀರಿನ ಜೊತೆ ರಿಫ್ರೆಶ್ ಆಗಿ ನಿಂತಿರುತ್ತೆ. ರಾತ್ರಿಯಾಗುತ್ತಿದ್ದಂತೆ ದೀಪಕ್ಕೆ ಮತ್ತೆ ಎಣ್ಣೆ ತುಂಬಲಾಗುತ್ತೆ. ಆಗೆಲ್ಲ ವಿದ್ಯುತ್ ಇರದ, ಈಗ ಇದ್ದರೂ ಇಲ್ಲದಂತಿರುವ ವಿದ್ಯುತ್ಗಿಂತ ಪ್ರಧಾನ ಬಾಗಿಲಿನ ದೀಪ ಹೊರಬಾಗಿಲಿನಿಂದ ಹಿಡಿದು, ಅಡಿಗೆಮನೆಯ ಬಾಗಿಲಿನವೆರೆಗೂ ದಾರಿ ತೋರುವ ದೀಪ. ಹೊರಜಗಲಿಯ ಮೇಲೆ ಇಲ್ಲವೇ ಒಳ ಮನೆಯಲ್ಲಿ ಮಲಗಿದವರಿಗೆ ಮಧ್ಯೆ ಬಚ್ಚಲಿಗೆ ಎದ್ದು ಹೋಗಲು ಇರುವ ಬೆಡ್ ಲ್ಯಾಂಪ್. ಬಾಗಿಲಿನ ನೀರು, ರಾತ್ರಿ ಎದ್ದವರಿಗೆ ಬಾಯಾರಿಕೆ ತಣಿಸುವ ನೀರು. ರಾತ್ರಿಯಿಂದ ಬೆಳಗಿನವರೆಗೂ ಉರಿದು ಉಷೆ ಮೂಡುವಾಗೆಲ್ಲೊ ಕೊನೆಯುಸಿರೆಳೆದು, ಕಮ್ಮನೆಯ ಘಾಟಿನೊಂದಿಗೆ ಹಲವರ ನಿದ್ದೆಯ ಕನಸಿನಲ್ಲಿನ ಬೆಳಕಂತೆ ಆರಿಹೋಗುವ ದೀಪ ಮತ್ತೆ ಬೆಳಗುವುದು ಮರುದಿನ ಮುಸ್ಸಂಜೆಯಲ್ಲಿ. ದೀಪ ಆರಿದ ಕಮಟಿಗೆ ಬೆಳಗಾಯಿತೆಂದು ಏಳುತ್ತಿದ್ದ ಅಜ್ಜಿ ಈಗಲೂ ಪ್ರಧಾನ ಬಾಗಿಲ ಪಕ್ಕದಲ್ಲಿ ಪಟವಾಗಿ ದೀಪ ಕಾಯುತ್ತಿದ್ದಾಳೆ. ಬಾಗಿಲ ಬಳಿ ಬರುವವರಿಗೆ “ತಂಗಿ ತಲೆ ಹುಷಾರು, ತಮ್ಮ ಹನಿ ಬಗ್ಗು” ಎಂದಂತೆ ಕೇಳಿಸುತ್ತಿದೆ.

 Posted by at 12:06 PM