Jul 022009
 

Triveni Shreenivasa Rao

 

ಕೃತಿ : ತುಳಸಿವನ
ಲೇಖಕಿ : ತ್ರಿವೇಣಿ ಶ್ರೀನಿವಾಸ ರಾವ್
ವಿಮರ್ಶೆ: ಮಧು ಕೃಷ್ಣಮೂರ್ತಿ 

 

ತ್ರಿವೇಣಿ ಶ್ರೀನಿವಾಸ ರಾವ್ ಬರೆದ ತುಳಸಿವನ ಎಂಬ ಶೀರ್ಷಿಕೆ ಉಳ್ಳ ಪುಸ್ತಕ ನನ್ನ ಕೈ ತಲುಪಿದಾಗ ಮನಸ್ಸಿನ ಆಳದೆಲ್ಲೆಲ್ಲೊ ಅಡಗಿದ್ದ ಚಿತ್ರ ಮೂಡಿಬಂದಿತು. ಅದು ಬೆಂಗಳೂರಿನಲ್ಲಿ ಬೆಂ. ವಾಹನ ನಿಲ್ದಾಣದ ಬಳಿ ಇರುವ ತುಳಸಿತೋಟ. ಈ ತೋಟದ ಬಳಿ ನಾನು ಅನೇಕ ಬಾರಿ ರಾಜಾಜಿನಗರದ ಕಡೆ ಹೋಗುವ ಬಸ್ಸಿಗಾಗಿ ಕಾದಿದ್ದೇನೆ. ಆಗೆಲ್ಲ ನಾನು ನನ್ನ ಬೆನ್ನ ಹಿಂದೆ ಇದ್ದ ತುಳಸಿತೋಟದ ಕಡೆ ಆಸಕ್ತಿಯಿಂದ ನೋಡುತ್ತಿದ್ದೆ. ಆ ಉದ್ಯಾನವನದ ವಿಶೇಷವೇನೆಂದರೆ ರಸ್ತೆಗಿಂತಲೂ ಅದು ತಗ್ಗಿನ ಭಾಗದಲ್ಲಿತ್ತು. ಇಳಿದು ಹೋಗಲು ಮೆಟ್ಟಲು ಇದ್ದವು. ಕೆಳಗಿಳಿದು ಹೋಗಿ ಉದ್ಯಾನವನದಲ್ಲೇನಿದೆ ಎಂದು ನೋಡಬೇಕು ಎಂದು ಅನೇಕ ಬಾರಿ ಅನಿಸಿದ್ದರು ಬೀಟಿ‌ಎಸ್ ಬಸ್ಸು ಹಿಡಿಯುವ ಸಾಹಸ ಹೆಚ್ಚಿನ ಆದ್ಯತೆ ಪಡೆದು ಅದಕ್ಕೆ ಅವಕಾಶ ನೀಡಿರಲಿಲ್ಲ. ನನಗೆ ಆ ಕೂತೂಹಲಕಾರಿ ಉದ್ಯಾನವನದ ಬಗ್ಗೆ ಮನಸಲ್ಲೆ ಇದ್ದ ರಮ್ಯ ಕಲ್ಪನೆ ತ್ರಿವೇಣಿ ಅವರ ತುಳಸಿವನ ಓದುವಾಗ ಮತ್ತೆ ಮೂಡಿಬಂದಿತು. 

ತಮ್ಮ ಬೇರುಗಳೊಂದಿಗೆ ಸಂಪರ್ಕ ಕಳೆದುಕೊಂಡ ಅನಿವಾಸಿಗಳಿಗೆ ತುಳಸಿವನದಲ್ಲಿ ತ್ರಿವೇಣಿ ಅವರು ತಮ್ಮ ಅಗಾಧ ಭಾವಕೋಶದಿಂದ ತೆಗೆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಾರಂಭದ ಲೇಖನಗಳು ನಮ್ಮನ್ನು ಚಿಕ್ಕಮಗಳೂರಿನ ವಾತಾವರಣಕ್ಕೆ ಕರೆದೊಯ್ದು ತಾರೆಗಳ ತೋಟದಲ್ಲಿ ಬೇರೂರಿಸುವ ಮೂಲಕ ನಮ್ಮನ್ನು ಸ್ಥಿರವಾಗಿ ಪುಸ್ತಕದಲ್ಲಿ ಸ್ಥಾಪಿಸಿಬಿಡುತ್ತದೆ. ತ್ರಿವೇಣಿ ಅವರು ಈ ಸಂಕಲನದಲ್ಲಿ ಬರೆದಿರುವ ವಿಷಯಗಳ ಪಟ್ಟಿ ಬಹಳ ದೊಡ್ಡದು. ಬಾಲ್ಯದ ಜೀವನ, ಸಿನೆಮ, ಸಂಗೀತವಷ್ಟೇ ಇಲ್ಲ, ಸಾಹಿತ್ಯ, ರಾಜಕೀಯ, ಅಮೇರಿಕದ ಜೀವನ, ಕನ್ನಡ ಮತ್ತು ಹಿಂದಿ ಸಿನಿಮ, ಒಲವು ಮತ್ತು ಹಸನಾದ ಜೀವನಕ್ಕೆ ಬೇಕಾದ ಹಲವಾರು ಹಿತನುಡಿಗಳು ಈ ಸಂಕಲನದಲ್ಲಿ ಹೇರಳವಾಗಿ ಕಾಣಬಹುದು. ಇಷ್ಟೆಲ್ಲ ಅನುಭವಗಳನ್ನು ಪಡೆದಿರುವ ತ್ರಿವೇಣಿ ಅವರ ಜೀವನ ಪ್ರೀತಿ ಈ ಸಂಕಲನದಲ್ಲಿ ಪ್ರತಿಯೊಂದು ಲೇಖನದಲ್ಲೂ ಎದ್ದು ಕಾಣುತ್ತದೆ.

ಇಲ್ಲಿಯ ಲೇಖನಗಳಲ್ಲಿ ತ್ರಿವೇಣಿ ಅವರು ತಮ್ಮನು ಕಾಡುವ ಅನೇಕ ಬಾವನೆಗಳನ್ನು ಹೊರತಂದಿದ್ದಾರೆ.   ಶಿಕಾಗೊಗೆ ಮತ್ತೆ ವಸಂತ ಬಂದ ಲೇಖನದಲ್ಲಿ ನಿಸರ್ಗದ ಬಗ್ಗೆ ಕಾವ್ಯಮಯ ಬರಹವಿದ್ದರೆ ಅದರ ಹಿಂದೆಯೆ “ಬೆನ್ನು ತಟ್ಟಬೇಕಾದವರೆ ಬೆನ್ನಿಗೆ ಬರೆ” ಹಾಕಿದರೆ ಆಗುವ ಸಾತ್ವಿಕ ಸಿಟ್ಟಿನಿಂದ ಬರೆದ ಲೇಖನ ದಿಟ್ಟತನದಿಂದ ಕೂಡಿದೆ. ಯವ್ವನ್ನದ ಹುಚ್ಚು ಖೋಡಿಯ ಮನಸ್ಸಿನಲ್ಲಿ ಏಳುವ ನೂರಾರು ಭಾವನೆಗಳನ್ನು ಸರಳವಾಗಿ ಮತ್ತು ಮುಕ್ತವಾಗಿ ಚರ್ಚಿಸುವುದಷ್ಟೇ ಅಲ್ಲದೆ, ಅ ಭಾವನೆಗಳ ರಭಸಕ್ಕೆ ದುಡುಕಿ ತೇಲಿಹೋಗುವ ಯುವ ಪ್ರೇಮಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೊಸ ಸಂಸ್ಸೃತಿಯನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವುದನ್ನು ಕ್ರಿಸ್ಮಸ್ ಬಗೆಗಿನ ಲೇಖನದಲ್ಲಿ ಕಾಣಬಹುದು. ಕನಸುಗಾರ ರವಿಚಂದ್ರನ್ ಬಗ್ಗೆ ಬರೆದಿರುವ ಲೇಖನದಲ್ಲಿ, ತ್ರಿವೇಣಿಯವಗಿರುವ ಕನ್ನಡದ ಬಗೆಗಿನ ಭವ್ಯ ಕನಸ್ಸಿನ ಪರಿಚಯವಾಗುತ್ತದೆ.  ಎಲ್ಲಿಯೂ ಭೋದನೆ ಮಾಡದೆ ತಮ್ಮ ನಿಲುವುಗಳ ಬಗ್ಗೆ ಬರೆದಿರುವುದು ಮೆಚ್ಚಬೇಕಾದ ಅಂಶ.

ನಿನ್ನ ಮನಸೇ ಮಾನಸ ಸರೋವರ ಎಂಬ ಲೇಖನ ಪುಟ್ಟಣನವರ ಚಿತ್ರದ ಕಲೆಗಾರಿಕೆಯ ಬಗೆಗಷ್ಟೇ ಅಲ್ಲದೇ ಮಾನಸಿಕ ಆರೋಗ್ಯದ ಬಗ್ಗೆ ಉತ್ತಮ ವಿಶ್ಲೇಶಣೆಯಾಗಿದೆ. ವಟಾರದ ಮನೆಯ ಜೀವನದ ಬಗ್ಗೆ ಬರೆದಿರುವ ಲೇಖನ ಜನಸಾಮಾನ್ಯನ ಜೀವನವನ್ನು ಪ್ರತಿಬಿಂಬಿಸುತ್ತದೆ. ತಮ್ಮ ಸ್ವಂತ ಅನುಭವದಿಂದ ನೆರೆಟ್ ಮಾಡಿರುವುದು ಬಹಳ ಆತ್ಮೀಯತೆಯಿಂದ ಕೂಡಿದೆ. ಈ ವಟಾರದ ಮನೆಯ ಬಗ್ಗೆ ಬರೆಯುವಾಗ ಲೇಖಕಿ ಗಣೇಶನ ಮಧುವೆ ಚಿತ್ರ ನೆನೆಪಿಸಿಕೊಳ್ಳುವುದು ಮತ್ತು ವಟಾರ ಜೀವನದ ಧ್ಯೇಯವೆಂಬಂತಿರುವ “ಎಲ್ಲ ಮನೆಗೂ ಒಂದೇ ಮೀಟರ್ ಎಲ್ಲರಿಗೊಂದೇ ನಲ್ಲಿ ವಾಟರ್” ಎಂಬ ಈ ಸಾಲು ಮಾತು ಹೇಳುವುದು ಖುಷಿ ಕೊಡುತ್ತದೆ.

ಹೆಣ್ಣಿನ ಜಡೆಯನ್ನು ವಸ್ತುವಾಗಿಟ್ಟುಕೊಂಡ  ಶಿವರುದ್ರಪ್ಪನವರ ಕವಿತೆ ಒಂದೆಡೆಯಾದರೆ ಲೇಖಕಿಯ ಬಾಲ್ಯದ ನೆನಪು ಇನ್ನೊಂದೆಡೆ. ಚಿಕ್ಕವರಾಗಿದ್ದಾಗ  ತ್ರಿವೇಣಿಯವರಿಗೆ ಎರಡು ಜಡೆ ಇರುವುದರಿಂದ ಅವರ ಪ್ರಾಥಮಿಕ ಶಾಲೆಯ ಗುರುಗಳು ಟುವೇಣಿ ಎಂದು ಕರೆದಿದ್ದ ವೃತ್ತಾಂತದಿಂದ ಓದುಗರಿಗೂ ತಮ್ಮ ಬಾಲ್ಯದ ನೆನೆಪುಗಳನ್ನು ಕೆದೆಕಿದ್ದಾರೆ. ಪ್ರೀತಿಯ ಬಗ್ಗೆ ವ್ಯಾಲಂಟೈನ್ಸ್ ದಿನದ ಬಗ್ಗೆ ಬರೆಯುವಾಗ ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ತ್ರಿವೇಣಿ ಈ ಮಾತನ್ನು ಉಲ್ಲೇಖಿಸುತ್ತಾರೆ. “ಓರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ, ಎಲ್ಲಾ ಸುಂದರವೆಂದು ನೋಡೊ ಒಳಗಣ್ಣೆ ಪ್ರೀತಿ”. ಇದು ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ನಾನು ಓದಿದ್ ಅತ್ಯಂತ ಸಮರ್ಪಕವಾದ ಉತ್ತರ.

ತ್ರಿವೇಣಿ ಅವರು ಇಲ್ಲಿ ಕೇವಲ ಹಳೆ ನೆನಪುಗಳನ್ನು ಮೆಲಕು ಹಾಕುತ್ತ ಹಿಂದಿನ ದಶಕದಲ್ಲಿ ತಟಸ್ತರಾಗಿಲ್ಲ. ಇಂದಿನ ಕನ್ನಡ ಚಲನಚಿತ್ರದ ಟ್ರೆಂಡಿಗೂ ಸ್ಪಂದಿಸಬಲ್ಲ ಆಸಕ್ತಿ ಮತ್ತು ಅರಿವು ತ್ರಿವೇಣಿ ಅವರಿಗೆ ಇರುವುದು ಸಂತಸದ ವಿಷಯ. ಜಿ‌ಎಸೆಸ್ ಕವಿತೆ, ಮೈಸೂರು ಮಲ್ಲಿಗೆ ಮತ್ತು ಲಕ್ಷ್ಮಿನಾರಾಯಣ ಭಟ್ಟರ ಕವಿತೆಗಳನ್ನು ಉಲ್ಲೇಖಿಸುವಷ್ಟೆ ಸುಲಭವಾಗಿ, ದರ್ಶನ್ ನಟನೆಯ ಇತ್ತೀಚಿನ ರೌಡಿ ಚಿತ್ರಗಳ ಬಗ್ಗೆಯೂ ವ್ಯಾಖ್ಯಾನ ನೀಡಿದ್ದಾರೆ. ಮೆಂಟಲ್ ಮಂಜ, ಮೆಜೆಸ್ಟಿಕ್, ಕರಿಯ ಸಿನಿಮಗಳ ಬಗ್ಗೆ ಬರೆಯುತ್ತ “ಮೀಟರಿನಲ್ಲಿ ಯಾರಿಗೈತೆ ನನ್ನ ಮುಂದೆ ಶಿಷ್ಯ.” ಎಂಬಂತ ಖತರ್ನಾಕ್ ಡೈಲಾಗುಗಳನ್ನೂ ಇಲ್ಲಿಯ ಲೇಖನದಲ್ಲಿ ನಾವು ಕಾಣಬಹುದು. 

ಮಾತು ಮನುಷ್ಯ ಜೀವಿಗಳ ನಡುವೆ ಇರಬೇಕಾದ ಒಂದು ಆರೋಗ್ಯಕರ ಪ್ರಕ್ರಿಯೆ. ಸಂತೋಷ ಹಂಚಿಕೊಂಡಾಗ ಇಮ್ಮಡಿಯಾಗುವುದು ಮತ್ತು ಸಂಕಟದ ಹೊರೆ ಕಡಿಮೆಯಾಗುವುದು ತಿಳಿದ ವಿಷಯ. ಬರಿ ಮಾತಷ್ಟೇ ಅಲ್ಲದೆ ಹರಟೆಯ ಅಗತ್ಯವನ್ನೂ ತೋರಿಸುವ ಲೇಖನದಲ್ಲಿ ಮತ್ತೆ ಲೇಖಕರು ಅನೇಕ ಉದಾಹರಣೆಗಳನ್ನು ನೀಡಿರುವುದು ನೆನೆಪನ್ನು ಕೆದಕುತ್ತದೆ. ಹಬ್ಬ ಹರಿದಿನಗಳಲ್ಲಿ ಊಟವಾದ ನಂತರೆ ಅಥಿತಿಗಳೊಂದಿಗೆ ಒಂದೆಡೆ ಕಲೆತು ತಾಂಬೂಲ ಮೆಲ್ಲುತ್ತ ಪಟ್ಟಾಂಗಕ್ಕೆ ರಂಗೇರಿಸುವುದು, ಹಳ್ಳಿಗಳಲ್ಲಿ ಕಾಣಬಹುದಾದ ಸೋಮಾರಿ ಕಟ್ಟೆ, ಎ. ಎನ್ ಮೂರ್ತಿರಾಯರ ಹರಟೆಯ ಪ್ರಬಂಧಗಳು ಮತ್ತು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಎ. ಎಸ್ ಮೂರ್ತಿಯವರ “ಮನೆ ಮಾತಿನಲ್ಲಿ” ಎಡವಟ್ಟಿನ ಈರಣ್ಣ “ಕಾಪಿ ಓ ಮರ್ತೆ ಬಿಟ್ಟೆ” ಎಂದು ಕಾರ್ಯಕ್ರಮ ಮುಕ್ತಾಯವಾಗುದು ಸುಖ ಎಲ್ಲಾರಿಗು ಎಲ್ಲೈತವ್ವ ಲೇಖನದಲ್ಲಿ ಸುಖ ಎಂದರೇನು ಎಂಬ ಗಂಭೀರ ವಿಷಯದ ಬಗ್ಗೆ ಸ್ಪಷ್ಟವಾದ ಕಲ್ಪನೆ ಇಲ್ಲದೆ ಸುಖದ ಹುಡುಕಾಟ ನಿರಂತರವಾಗಿರುವುದನ್ನು ವಿವರಿಸುತ್ತಾರೆ. ಅನಿವಾಸಿಗಳನ್ನು ಕಾಡುವ ಈ ಸುಖ ಇಲ್ಲದಿರುವಿಕೆಗೆ ಬರುವ ಪ್ರತಿಕ್ರಿಯೆ “ಕೂತು ತಿಂದರೂ ಕರಗದಷ್ಟು ಇರೋವಾಗ ನಿಂಗೇನು ಧಾಡಿ”. ಆದರೆ ಪಾದರಕ್ಷೆ ತೊಟ್ಟವನಿಗೆ ಅದು ಎಲ್ಲಿ ಕಚ್ಚುತ್ತಿದೆ ಎಂಬ ಅರಿವಿರುವುದು ಎಂದು ಹೇಳಿರುವುದು ಸತ್ಯವೆನಿಸುತ್ತದೆ.

ತ್ರಿವೇಣಿ ಅವರ ಈ ಸಂಕಲನದಲ್ಲಿ ಲೇಖಕಿ ತಾನು ಕಂಡ ಜೀವನದ ಅನುಭವಗಳನ್ನನ್ನು ಹಂಚಿಕೊಂಡಿದ್ದಾರೆ.  ಅಷ್ಟಲ್ಲದೆ ಆಧುನಿಕ ಬೆಳವಣಿಗೆಗಳೊಂದಿಗೆ ಹೊಂದಿಕೊಳ್ಳುವ ಮನೋಭಾವ ಮತ್ತು ಆಶಾವಾದ ಈ ಲೆಖನಗಲ್ಲಿ ವ್ಯಕ್ತವಾಗಿದೆ.  ಇಲ್ಲಿ ಕಾಣುವ ಒಂದು ಕೊರತೆ ಏನೆಂದರೆ ಅನೇಕ ಲೇಖನಗಳು ಅವೇ ವಿಷಯಗಳನ್ನು ಪುನರಾವರ್ತನೆಗೊಳ್ಳುತ್ತಿದೆಯೊ ಎನಿಸುತ್ತದೆ.  ಒಂದೇ ಪುಸ್ತಕಕ್ಕೆ ೬೭ ಲೇಖನಗಳು ತುಸು ಜಾಸ್ತಿಯಾದಂತಿದೆ. ಹದಿನೈದಿಪ್ಪತ್ತು ಲೇಖನಗಳಿರುವಂತಾದರೆ ತುಳಸಿವನ  ಹೆಚ್ಚು ಆಕರ್ಷಕವಾಗಬಹು. ತ್ರಿವೇಣಿಯವರೆ ಬರೆದ ಈ ಕವಿತೆ ಈ ಸಂಕಲನದಲ್ಲಿದ್ದು ಅನೇಕ ಲೇಖನಗಳಿಗೆ ತಳಹದಿಯಾಗಿದೆ ಎಂದೆನಿಸುತ್ತದೆ. ಆ ಕವಿತೆ ಇಲ್ಲಿದೆ :-

ಇನಿಯ, ನನ್ನ ಕಣ್ಣುಗಳು
ವಿಕಸಿತ ಕಮಲವಲ್ಲ,
ಪ್ರಶಾಂತ ತಿಳಿಗೊಳವಲ್ಲ,
ಮಿನುಗುವ ನಕ್ಷತ್ರಗಳಲ್ಲ,
ಫಳಗುಟ್ಟುವ ಮೀನೂ ಅಲ್ಲ,
ಅದು ಕೇವಲ ನಿನ್ನೊಲವ
ಪ್ರತಿಫಲಿಸುವ
ಕನ್ನಡಿ ಮಾತ್ರ”

 Posted by at 6:45 PM
Jun 292009
 

Srivatsa Joshi

 

 

ಶ್ರೀವತ್ಸ ಜೋಶಿಯವರ ಎರಡು ಹೊತ್ತಗೆಗಳು:
ಇನ್ನೊಂದಿಷ್ಟು ವಿಚಿತ್ರಾನ್ನ
ಮತ್ತೊಂದಿಷ್ಟು ವಿಚಿತ್ರಾನ್ನ
ವಿಮರ್ಶೆ : ಶ್ರೀನಾಥ್ ಭಲ್ಲೆ, 

 

ಎಲ್ಲರಿಗೂ ನಮಸ್ಕಾರ.

ನನ್ನ ಹೆಸರು ಶ್ರೀನಾಥ್ ಭಲ್ಲೆ. ’ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ಸಂತೋಷವಾಗುತ್ತಿದೆ. ಆತ್ಮೀಯ ಮಿತ್ರರಾದ ಶ್ರೀವತ್ಸ ಜೋಶಿಯವರ ಪುಸ್ತಕಗಳನ್ನು ವಿಮರ್ಶಿಸಲು ಸಿಕ್ಕ ಅವಕಾಶಕ್ಕೆ ಇನ್ನೂ ಹೆಚ್ಚು ಸಂತೋಷವಾಗುತ್ತಿದೆ. ಮೊದಲ ಬಾರಿಗೆ ಇಂತಹ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅರಿತೋ ಅರಿಯದೆಯೋ ಆಗಬಹುದಾದ ತಪ್ಪುಗಳಿಗೆ ಅಡ್ವಾನ್ಸ್ ಆಗಿ ಕ್ಷಮೆ ಇರಲಿ. ಆರು ವರ್ಷಗಳ ಸಾಧನೆಯನ್ನು ಆರೇ ನಿಮಿಷಗಳಲ್ಲಿ ಹೇಳುವ ಪ್ರಯತ್ನ ಮಾಡುತ್ತೇನೆ. ವಿಚಿತ್ರಾನ್ನಗಳ ಸರಣಿಯುದ್ದಕ್ಕೂ ಲಘು ಹಾಸ್ಯ ಎದ್ದುಕಾಣುವುದರಿಂದ ನನ್ನ ವಿಮರ್ಶೆಯನ್ನೂ ಲಘು ಹಾಸ್ಯದಲ್ಲೇ ಕೊಂಡೊಯ್ಯುವ ಪ್ರಯತ್ನವನ್ನೂ ಮಾಡಿದ್ದೇನೆ.

ಸುದ್ದಿಯ ಹಸಿವಿಗೆ ಆಹಾರವೇ ವಿಚಿತ್ರಾನ್ನ. ಭೋಜನದ ಸವಿ ಎಷ್ಟಿದೆ ಎಂದರೆ, ವಿಚಿತ್ರಾನ ಎಂಬೋ ತಟ್ಟೆ ಖಾಲಿಯಾದ ಮೇಲೆ ಎರಡನೇ ಹಾಗೂ ಮೂರನೇ ಸರ್ವಿಂಗ್’ಗಾಗಿ ಓದುಗರನ್ನು ಆಹ್ವಾನಿಸಿ ಹಸಿವನ್ನು ಅಡಗಿಸಲು ಬಂದದ್ದು ’ಇನ್ನೊಂದಿಷ್ಟು ವಿಚಿತ್ರಾನ್ನ’ ಹಾಗೂ ’ಮತ್ತೊಂದಿಷ್ಟು ವಿಚಿತ್ರಾನ್ನ’. ಪುಸ್ತಕಗಳ ಉಪಶೀರ್ಷಿಕೆಯೇ ಹೇಳುವಂತೆ ಇವು ’ಲಗು ಬಗೆಯ’ ಹಾಗೂ ’ಬಗೆ ಬಗೆಯ’ ಬರಹಗಳ ಬುತ್ತಿ. ಜ್ಞ್ನಾನದ ಹಸಿವನ್ನು ತೀರಿಸಿಕೊಳ್ಳಲು ಎಲ್ಲಿಗೆ ಬೇಕಾದರೂ ಒಯ್ಯಬಹುದಾದ್ದರಿಂದ ಇವನ್ನು portable ಜ್ಞ್ನಾನ ಭಂಡಾರ ಎನ್ನಬಹುದು. ಇಷ್ಟಕ್ಕೂ ’ಇನ್ನೊಂದಿಷ್ಟು’, ’ಮತ್ತೊಂದಿಷ್ಟು’ ವಿಚಿತ್ರಾನ್ನಗಳಲ್ಲಿ ಏನಿದೆ ? ಎರಡೂ ಪುಸ್ತಕಗಳನ್ನು ಓದಿದ ಮೆಲೆ ಅನ್ನಿಸಿದ್ದು ’ಏನಿಲ್ಲ?’ ಅಂತ.

ಉದಾಹರಣೆಗೆ, ಈ ಸಮಾರಂಭಕ್ಕೆ ಬರುವಾಗ ’ಯಾವ ಡ್ರಸ್ ಹಾಕಿಕೊಳ್ಳಲಿ’ ಎಂದು ಯೋಚಿಸಿದಾಗ ’ಇನ್ನೊಂದಿಷ್ಟು ವಿಚಿತ್ರಾನ್ನದ ಇಪ್ಪತ್ತನೆಯ’ ಲೇಖನದಲ್ಲಿ ವಿಷಯ ಸಿಕ್ಕಿತು. ಡ್ರಸ್ ತೆಗೆದಿಟ್ಟುಕೊಂಡು ಸ್ನಾನಕ್ಕೆ ಹೋಗಿ ಮೈಗೆ ಪಿಯರ್ಸ್ ಸೋಪು ತಿಕ್ಕಿಕೊಳ್ಳುವಾಗ ಇದು ಯಾಕೆ ಪಾರದರ್ಶಕವಾಗಿದೆ ಅಂತ ಜೋಶಿ ಹೇಳಿದ್ದಾರೆ ಅನ್ನೋದು ನೆನಪಾಯ್ತು. ಹಾಡಿಕೊಂಡು ಜಳಕ ಮುಗಿಸಿದ ಮೇಲೆ, ಪಿಯರ್ಸ್ ಬಗ್ಗೆ ತಿಳಿದುಕೊಳ್ಳೋವಾಗ ನಾನೇಕೆ ಬಾತ್ ರೂಮ್ ಸಿಂಗರ್ ಅಂತಾನೂ ತಿಳಿದುಕೊಂಡೆ.

ಜೋಶಿಯವರು ತಮ್ಮ ಲೇಖನಗಳಲ್ಲಿ ಹಲವಾರು ರೀತಿಯ ತಿಂಡಿ-ತಿನಿಸುಗಳ ರುಚಿ ತೋರಿಸಿದ್ದಾರೆ. ಚಿಕ್ಕಿ, ಬೇಗಲ್, ಬಜಗೋಳಿ, ಗೋಳಿಬಜೆ, ಹಲಸಿನ ಹಪ್ಪಳ ತಿನ್ನಿಸಿದ್ದು ಮಾತ್ರವಲ್ಲದೇ ಗಂಜಿ ಕುಡಿಸಿದ್ದಾರೆ… ಒಮ್ಮೆಯಂತೂ ಹುಲ್ಲು ತಿನಿಸಿದ್ದಾರೆ. ಕಾಕ್ ಟೈಲ್ ಬಗ್ಗೆ ಬರೆಯುವಾಗ ಜೋಶಿಯವರ ತಾವು ಯಾವ ಜೋಶ್’ನಿಂದಲೂ ಈ ಲೇಖನ ಬರೆದಿಲ್ಲ ಅಂತ ಹೇಳಿದ್ದಾರೆ. ನಾನೇನ ಹೇಳಹೊರಟಿದ್ದೀನಿ ಅನ್ನೋದು ಅರ್ಥವಾಗಬೇಕಾದರೆ ಅವರ ಲೇಖನಗಳನ್ನು ಓದಿಯೇ ತಿಳಿಯಬೇಕು.

ಹಲವಾರು ಬಾರಿ ಕೆಣಕಿ-ತಿಣುಕಿಸಿದ ರಸಪ್ರಶ್ನೆಗಳನ್ನು ಕೇಳಿ ವಿಜೇತರನ್ನು ಆರಿಸಿ ಬಹುಮಾನ ನೀಡಿದ್ದಾರೆ. ಒಂದು ಬಾರಿ ಸಚಿತ್ರ ರಸಪ್ರಶ್ನೆ ನೆಡೆಸುವುದರ ಮೂಲಕ ’ಜನಪದ ಜಾತ್ರೆ’ ಯನ್ನೇ ನೆಡೆಸಿದ್ದಾರೆ. ಹಲವಾರು ಹೊಸ ವಿಷಯಗಳ ಹಬ್ಬವೇ ಆಗಿತ್ತು ಆ ರಸಪ್ರಶ್ನೆ. ವೈಜ್ಞ್ನಾನಿಕ ವಿಚಾರಗಳನ್ನು ತಿಳಿಸುತ್ತ ಒಮ್ಮೆ, Telescope, Telegraph ಇನ್ನಿತರೇ “ಟೆಲಿ” ಬಗ್ಗೆ ಮಾತನಾಡುತ್ತ ದೂರವಾಣಿ ನಾಮಕರಣದಂತಹ ವಿಚಾರ ತಿಳಿಸಿದ್ದರು. ಮತ್ತೊಂದೆಡೆ ಕೊಕ್ಕರೆ ಹಾರಾಟದ ಏರೋ ಡೈನಾಮಿಕ್ಸ್ ತಿಳಿಸಿದ್ದಾರೆ. ಹಲವಾರು ಲೇಖನಗಳಲ್ಲಿ ಲಘು ಹಾಸ್ಯದ ಸವಿಯನ್ನು ಚೆನ್ನಾಗಿ ಹರಿಸಿದ್ದಾರೆ. ಉದಾಹರಣೆಗೆ ಹಜಾಮತ್-ಸೆ-ಹಜಾಮತ್ ತಕ್, ಪನ್’ಗಳು, ಮಜಾವಾಣಿ, ಆಂಗ್ಲ-ಕನ್ನಡ translation ವೈಪರೀತ್ಯ, ಹನುಮನಿಗೆ ಬರೆದ ಪತ್ರ ಹೀಗೇ ಸಾಗುತ್ತದೆ ಪಟ್ಟಿ.ಸ್ವಾರಸ್ಯಕರವಾದ ವಿಚಾರಗಳನ್ನು ತಿಳಿಸುವುದರಲ್ಲಿ ಜೋಶಿಯವರದು ಎತ್ತಿದ ಕೈ ಎಂದರೆ ಅದು ಅತಿಶಯೋಕ್ತಿಯಲ್ಲ.  ಎತ್ತಿದ ಕೈ ಇದ್ದರೆ ಟೈಪ್ ಹೇಗೆ ಮಾಡುತ್ತಿದ್ದರು ಎಂದು ಕೇಳಬೇಡಿ.

ಅಂಧಕಾರದ ಬಗ್ಗೆ ವಿಚಾರ ಮಾಡುತ್ತ Switzerland’ನ blind cow restaurant ಬಗ್ಗೆ ಹೇಳಿದ್ದಾರೆ. ಅದರಂತೆಯೇ ಡಾ| ಕೆಲ್ಲಿಯವರ ಕಥಾನಕ, Code Adam, Nostalgia, Murphy’s law, Global dimming, Nut-Bolt-Screw  ಇತ್ಯಾದಿ ಲೇಖನಗಳು.

ಮತ್ತೊಂದು ಕಡೆ ಜೋಶಿಯವರು ಹೇಳ್ತಾರೆ, ತಮಗೆ ಎಲ್ಲೆಲ್ಲಿಂದಲೋ ವಿಷಯಗಳನ್ನು ತಂದು ಅದಕ್ಕೊಂದು ಸಾಮಾನ್ಯ ವಿಷಯ ಹೊಂದಿಸಿ ಪೋಣಿಸುವುದು ಇಷ್ಟ ಎಂದು ತಿಳಿಸಿದ್ದಾರೆ. ಅದನ್ನು ಸಮರ್ಥನೆ ಮಾಡುವ ಒಂದು ಲೇಖನವೆಂದರೆ ಹೇಮಾಮಾಲಿನಿ-ಲಾಲೂ ಪ್ರಸಾದ್-ಗಾಂಧೀಜಿ-ಮಾವಿನಹಣ್ಣಿನ ಬಗ್ಗೆ ಬರೆದ ಲೇಖನ. ಬಹಳ ಸೊಗಸಾದ ಲೇಖನ ಇದು.

ತಾವು ಭೇಟಿ ನೀಡಿದ ಸ್ಥಳಗಳ ವೈಶಿಷ್ಟ್ಯದ ಬಗ್ಗೆ ಹಲವೆಡೆ ಬರೆದಿದ್ದಾರೆ. ಕಾರ್ಯನಿಮಿತ್ತ ಹೋದ ಪೋರ್ಟರಿಕೋ ಆಗಿರಬಹುದು ಅಥವಾ ಸ್ನೇಹಿತರು ಆಹ್ವಾನಿಸಿದ ಪದ್ಮನಾಭ ವ್ರತವೇ ಆಗಿರಬಹುದು. ಹಬ್ಬ ಹರಿದಿನಗಳ ಬಗ್ಗೆ ಮಾತನಾಡುತ್ತ ಮಹತ್ವ ಸಾರುವ ಕಥೆಯನ್ನೂ ವಿವರಿಸಿದ್ದಾರೆ. ಲಕ್ಶ್ಮೀ ಪೂಜೆ, ಮಂಗಳ ಗೌರಿ, ಶಿವರಾತ್ರಿ ಆಚರಣೆ, ಉಗಾದಿ, ದೀಪಾವಳಿ, ದೇವಳದ ಜಾತ್ರೆ ಹೀಗೆ. ಎಲ್ಲ ಲೇಖನಗಳೂ ಉತ್ತಮವಾಗಿದ್ದರೂ ನಾನಗೆ ಅತೀ ಮೆಚ್ಚುಗೆಯಾದವು ಅಂದರೆ ವೇದಾಧ್ಯಯನ ವಿಧಾನ, ವೃಷಭ ವಿಸರ್ಜಿತ, ಏಕವಚನ ನಾಮಾಮೃತ, ತಲ್ಲಣಿಸದಿರು ಕಂಡ್ಯ ವಲಸೆಗಾರ.

ಒಟ್ಟಾರೆ ಹೇಳಿದರೆ ’ಇನ್ನೊಂದಿಷ್ಟು ವಿಚಿತ್ರಾನ್ನ’ ಹಾಗೂ ’ಮತ್ತೊಂದಿಷ್ಟು ವಿಚಿತ್ರಾನ್ನ’ ಲೇಖನ ಸರಮಾಲೆಯಲ್ಲಿ ಉದಾತ್ತ ವಿಚರಗಳಿವೆ, ಚಿಂತನೆ ಇದೆ, ಹಾಸ್ಯ ಇದೆ, ರಸಪ್ರಶ್ನೆಗಳಿವೆ, ಖಾದ್ಯಗಳ ವಿಚಾರವಿದೆ, ಗಣಿತ ಇದೆ, ವಿಜ್ಞ್ನಾನ ಇದೆ, ದಾಸರ ಪದಗಳು ಹಾಗೂ ಸಿನಿಮಾ ಹಾಡುಗಳ ಭಂಡಾರವೇ ಇದೆ. ಬರೀ ತಮ್ಮದೇ ವಿಚಾರಗಳಲ್ಲದೇ ಓದುಗರು ಈ-ಮೈಲ್ ಗಳಲ್ಲಿ ಹಂಚಿಕೊಂಡ ವಿಚಾರಗಳನ್ನೂ ಲೇಖನದಲ್ಲಿ ಸೇರಿಸಿದ್ದಾರೆ.ಅಗಲವಾದ ಜ್ಞ್ನಾನಕ್ಕಿಂತ ಯಾವುದಾದರೂ ಒಂದು ವಿಷಯದಲ್ಲಿ ಆಳವಾದ ಜ್ಞ್ನಾನ ಇದ್ದಿದ್ದರೆ ಎಂದು ಚೆನ್ನಿತ್ತು ಎಂದು ಹೇಳುತ್ತ ನಮಗೂ ಒಮ್ಮೆ ಯೋಚನೆ ಮಾಡುವ ಹಾಗೆ ಮಾಡಿದ್ದಾರೆ. ಅದ್ಭುತ ವಿಚಾರಗಳನ್ನು ಪುಸ್ತಕ ರೂಪದಲ್ಲಿ ತಂದು ಎಲ್ಲರನ್ನೂ ರಂಜಿಸಿರುವ ಶ್ರೀವತ್ಸ ಜೋಶಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತ, ನನ್ನ ಮಾತು ಮುಗಿಸುತ್ತೇನೆ. ಹಾಗೂ ವಿಮರ್ಶೆ ಮಾಡುವ ಅವಕಾಶ ನೀಡಿದ ಕನ್ನಡ ಸಾಹಿತ್ಯ ರಂಗದ ಸಮಿತಿ ವರ್ಗದವರಿಗೂ ಅನಂತ ವಂದನೆಗಳು. 

ಈವರೆಗಿನ ನನ್ನ ಮಾತನ್ನು ಕೇಳಿ ನಿಮಗೆ ಆಕಳಿಕೆ ಬಂದಿದ್ದರೆ ಅದು ಯಾಕೆ ಎಂದು ತಿಳಿದುಕೊಳ್ಳಲು ’ಇನ್ನೊಂದಿಷ್ಟು ವಿಚಿತ್ರಾನ್ನದ’ ಇಪ್ಪತ್ತೊಂಬತ್ತನೆಯ ಲೇಖನ ಓದಿ.

ನಾನಿನ್ನು ಬರಲೇ ?

 

 Posted by at 7:14 PM
Jun 292009
 

Vishwanath Hulikal ೧. ಮೂಲ ಕೃತಿ: `Men are from Mars, Women are from Venus’
 ಆಂಗ್ಲ ಮೂಲ ಲೇಖಕ: ಡಾ. ಜಾನ್ ಗ್ರೇ
 ಕನ್ನಡ ಅನುವಾದ: ‘ಆತ ಮಂಗಳ ಲೋಕದಿಂದ, ಈಕೆ ಶುಕ್ರ ಲೋಕದಿಂದ’
 ಅನುವಾದಕರು: ವಿಶ್ವನಾಥ್ ಹುಲಿಕಲ್
 ಪ್ರಕಟಣೆ: ಕಾವ್ಯಾಲಯ ಪ್ರಕಾಶಕರು, ಮೈಸೂರು
 ಪ್ರಕಟಿತ ವರ್ಷ: ೨೦೦೯.

 

Men are from from Mars, Women are from Venus  ಎಂಬ ಪುಸ್ತಕವು ಕಳೆದ ದಶಕದಲ್ಲಿ ಮಾನವೀಯ ಸಂಬಂಧಗಳ ಬಗ್ಗೆ ಪ್ರಕಟವಾದ ಪುಸ್ತಕಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಖ್ಯಾತಿಯನ್ನು ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಪುಸ್ತಕವು ವಿಶ್ವದ ೪೦ ಭಾಷೆಗಳಿಗೆ ಅನುವಾದವಾಗಿ, ಒಟ್ಟು ೩ ಕೋಟಿಗಿಂತ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ.

 ಈ ಪುಸ್ತಕ ಡಾ|| ಜಾನ್ ಗ್ರೇ ಅವರ ೭ ವರ್ಷಗಳ ಅವಿಶ್ರಾಂತ ಸಂಶೋಧನೆಯ ಫಲ. ಈ ಅವಧಿಯಲ್ಲಿ ಅವರು ೨೫೦೦೦ಕ್ಕೂ ಹೆಚ್ಚಿನ ಜನರನ್ನು ತಮ್ಮ ಸೆಮಿನಾರ್ ಗಳಲ್ಲಿ ಸಂದರ್ಶಿಸಿದ್ದಾರೆ. ಇದರಿಂದ ಅವರಿಗೆ ಗಂಡು-ಹೆಣ್ಣುಗಳು ಹೇಗೆ ಮೂಲಭೂತವಾಗಿ ಭಿನ್ನರು ಎಂಬುದನ್ನು ಅವರು ಆಳವಾಗಿ ಅರಿತುಕೊಂಡು, ನಿರ್ದಿಷ್ಠವಾಗಿ ವ್ಯಖ್ಯಾನಿಸಲು ಸಾಧ್ಯವಾಗಿದೆ. ಈ ತೆರನಾದ ತಿಳುವಳಿಕೆಯಿಂದ, ಸ್ತ್ರೀ-ಪುರುಷರ ಮಧ್ಯದ ಸಂಬಂಧ ಮತ್ತು ಸಂಪರ್ಕವನ್ನು ನೂತನ ವಿಧಾನಗಳಿಂದ ಸುಧಾರಿಸಲು ಅನುಕೂಲವಾಗಿದೆ. ಗಂಡು-ಹೆಣ್ಣುಗಳ ಮಧ್ಯೆ ಸಂಬಂಧವನ್ನು ಉತ್ತಮಪಡಿಸಬೇಕಾದರೆ, ಇವರಿಬ್ಬರ ನಡುವಣ ಮೂಲಭೂತ ವ್ಯತ್ಯಾಸಗಳನ್ನು ಮೊದಲು ಅರಿತುಕೊಳ್ಳಬೇಕು. ಈ ಬಗೆಯ ತಿಳುವಳಿಕೆಯಿಂದ ಆತ್ಮಾಭಿಮಾನ ಮತ್ತು ವೈಯಕ್ತಿಕ ಘನತೆ ಹೆಚ್ಚುತ್ತದೆ. ಅಷ್ಟೇ ಅಲ್ಲದೆ, ಪರಸ್ಪರ ವಿಶ್ವಾಸ, ನಂಬಿಕೆ, ವೈಯಕ್ತಿಕ ಜವಾಬುದಾರಿ, ಸಹಕಾರ ಮತ್ತು ಪ್ರೀತಿಯೂ ಅಧಿಕವಾಗುತ್ತದೆ.

 ಪ್ರಸ್ತುತ ಆಧುನಿಕ ಕಾಲದ ಸ್ತ್ರೀ-ಪುರುಷರ ನಡುವೆ ಪ್ರೀತಿಪೂರ್ವಕ ಸಂಬಂಧ ಸ್ಥಾಪನೆಗೆ, ಈ ಪುಸ್ತಕ ನೇರವಾಗಿ ನೆರವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ, ಇದರಲ್ಲಿ ವಿವರಿಸಿರುವ ಪ್ರತಿಯೊಂದು ಪ್ರಾಯೋಗಿಕ ಸಲಹೆಯನ್ನೂ ಅತ್ಯಂತ ವ್ಯಾಪಕ ಪರೀಕ್ಷೆಗೆ ಗುರಿಪಡಿಸಲಾಗಿದೆ. ಡಾ|| ಜಾನ್ ಗ್ರೇ ಪ್ರಶ್ನಿಸಿದ ೨೫೦೦೦ ವ್ಯಕ್ತಿಗಳಲ್ಲಿ, ಪ್ರತಿಶತ ೯೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪುಸ್ತಕದಲ್ಲಿ ವಿವರಿಸಿರಿವ ವ್ಯಕ್ತಿಗಳ ಜೊತೆ ತಮ್ಮನ್ನು ಉತ್ಸಾಹದಿಂದ ಗುರುತಿಸಿಕೊಂಡಿದ್ದಾರೆ. ಗಂಡು-ಹೆಣ್ಣುಗಳ ಮಧ್ಯೆ, ಅವರೀರ್ವರ ಭಿನ್ನತೆಯಿಂದಾಗಿ ಉದ್ಭವಿಸುವ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿ, ಅವನ್ನು ನಿವಾರಿಸಲು ಅನುಷ್ಠಾನಗೊಳಿಸಬಹುದಾದಂತಹ ಪ್ರಾಯೋಗಿಕ ಸಲಹೆಗಳನ್ನು ನೀಡಲಾಗಿದೆ. ಆದ್ದರಿಂದಲೇ ಈ ಪುಸ್ತಕಕ್ಕೆ ಮಹತ್ವ ಹೆಚ್ಚಾಗಿದೆ. 

ಈ ಪುಸ್ತಕದಲ್ಲಿ ವಿವರಿಸಿರುವ ಪ್ರಾಯೋಗಿಕ ಸಲಹೆಗಳು ಯಾವ ದೇಶದ ಜನರಿಗೂ ಅನ್ವಯಿಸುವಂತಹುದು. ಗಂಡು-ಹೆಣ್ಣುಗಳ ಮಧ್ಯೆ ಉದ್ಭವಿಸುವ ಸಮಸ್ಯೆಗಳು ಪರಿಹಾರವಾದರೆ, ಈ ಸಂಸಾರ ಸುಖಮಯವಾಗಿರುತ್ತದೆ. ಅವರಿಬ್ಬರ ನಡುವೆ ಸಂಘರ್ಷಗಳೇ ಉಗಮಿಸದಿದ್ದರೆ, ಅದಕ್ಕಿಂತ ಹೆಚ್ಚಿನ ಸಂತೋಷ ಎಲ್ಲಿದೆ? ಈ ಪುಸ್ತಕದ ಪ್ರಯೋಜನವನ್ನು ತಮ್ಮ ಕನ್ನಡ ನಾಡಿನ ಬಾಂಧವರಿಗೆ ತಲುಪಿಸಬೇಕೆಂಬ ಚಡಪಡಿಕೆಯೇ ನನ್ನನ್ನು ಈ ಪುಸ್ತಕದ ಅನುವಾದಕ್ರಿಯೆಗೆ ಪ್ರೇರೇಪಿಸಿತು.

 

(ಇದೇ ಪುಸ್ತಕ ಕನ್ನಡ ಜಾಗತಿಕ ಜಾಲತಾಣದಲ್ಲಿ http://ThatsKannada.OneIndia.in/column/hulikal  ಸೆಪ್ಟೆಂಬರ್ ೧೬, ೨೦೦೫ ರಿಂದ ಮೇ ೧೧, ೨೦೦೭ ರವರೆಗೆ ಸಾಪ್ತಾಹಿಕ ಧಾರಾವಾಹಿಯಾಗಿ ಅಂಕಣವಾಗಿ ಪ್ರಕಟಗೊಂಡಿದೆ.)

೨. ಮೂಲ ಕೃತಿ:  ‘Story of Civilization’
ಆಂಗ್ಲ ಲೇಖಕ: ವಿಲ್ ಡ್ಯೂರಂಟ್
ಕನ್ನಡ ಅನುವಾದ ‘ನಾಗರೀಕತೆಯ ಕಥೆ’ (ಸಂಪುಟ ೩) – ಸೀಸರ್ ಮತ್ತು ಕ್ರಿಸ್ತ
ಅನುವಾದಕರು: ವಿಶ್ವನಾಥ್ ಹುಲಿಕಲ್, ಶಶಿಕಲ ರಾಜ, ಮೀರಾ ಮೂರ್ತಿ, ಶ್ರೀಧರ ಮೂರ್ತಿ, ಮಾಗಳದ.
ಪ್ರಧಾನ ಸಂಪಾದಕರು: ಡಾ|| ಎಲ್. ಎಸ್. ಶೇಷಗಿರಿರಾವ್
ಪ್ರಕಟಣೆ:  ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು
ಪ್ರಕಟಿತ ವರ್ಷ: ೨೦೦೮.

 

 Posted by at 6:43 PM