Jun 292009
 

Srivatsa Joshi

 

 

ಶ್ರೀವತ್ಸ ಜೋಶಿಯವರ ಎರಡು ಹೊತ್ತಗೆಗಳು:
ಇನ್ನೊಂದಿಷ್ಟು ವಿಚಿತ್ರಾನ್ನ
ಮತ್ತೊಂದಿಷ್ಟು ವಿಚಿತ್ರಾನ್ನ
ವಿಮರ್ಶೆ : ಶ್ರೀನಾಥ್ ಭಲ್ಲೆ, 

 

ಎಲ್ಲರಿಗೂ ನಮಸ್ಕಾರ.

ನನ್ನ ಹೆಸರು ಶ್ರೀನಾಥ್ ಭಲ್ಲೆ. ’ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ಸಂತೋಷವಾಗುತ್ತಿದೆ. ಆತ್ಮೀಯ ಮಿತ್ರರಾದ ಶ್ರೀವತ್ಸ ಜೋಶಿಯವರ ಪುಸ್ತಕಗಳನ್ನು ವಿಮರ್ಶಿಸಲು ಸಿಕ್ಕ ಅವಕಾಶಕ್ಕೆ ಇನ್ನೂ ಹೆಚ್ಚು ಸಂತೋಷವಾಗುತ್ತಿದೆ. ಮೊದಲ ಬಾರಿಗೆ ಇಂತಹ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅರಿತೋ ಅರಿಯದೆಯೋ ಆಗಬಹುದಾದ ತಪ್ಪುಗಳಿಗೆ ಅಡ್ವಾನ್ಸ್ ಆಗಿ ಕ್ಷಮೆ ಇರಲಿ. ಆರು ವರ್ಷಗಳ ಸಾಧನೆಯನ್ನು ಆರೇ ನಿಮಿಷಗಳಲ್ಲಿ ಹೇಳುವ ಪ್ರಯತ್ನ ಮಾಡುತ್ತೇನೆ. ವಿಚಿತ್ರಾನ್ನಗಳ ಸರಣಿಯುದ್ದಕ್ಕೂ ಲಘು ಹಾಸ್ಯ ಎದ್ದುಕಾಣುವುದರಿಂದ ನನ್ನ ವಿಮರ್ಶೆಯನ್ನೂ ಲಘು ಹಾಸ್ಯದಲ್ಲೇ ಕೊಂಡೊಯ್ಯುವ ಪ್ರಯತ್ನವನ್ನೂ ಮಾಡಿದ್ದೇನೆ.

ಸುದ್ದಿಯ ಹಸಿವಿಗೆ ಆಹಾರವೇ ವಿಚಿತ್ರಾನ್ನ. ಭೋಜನದ ಸವಿ ಎಷ್ಟಿದೆ ಎಂದರೆ, ವಿಚಿತ್ರಾನ ಎಂಬೋ ತಟ್ಟೆ ಖಾಲಿಯಾದ ಮೇಲೆ ಎರಡನೇ ಹಾಗೂ ಮೂರನೇ ಸರ್ವಿಂಗ್’ಗಾಗಿ ಓದುಗರನ್ನು ಆಹ್ವಾನಿಸಿ ಹಸಿವನ್ನು ಅಡಗಿಸಲು ಬಂದದ್ದು ’ಇನ್ನೊಂದಿಷ್ಟು ವಿಚಿತ್ರಾನ್ನ’ ಹಾಗೂ ’ಮತ್ತೊಂದಿಷ್ಟು ವಿಚಿತ್ರಾನ್ನ’. ಪುಸ್ತಕಗಳ ಉಪಶೀರ್ಷಿಕೆಯೇ ಹೇಳುವಂತೆ ಇವು ’ಲಗು ಬಗೆಯ’ ಹಾಗೂ ’ಬಗೆ ಬಗೆಯ’ ಬರಹಗಳ ಬುತ್ತಿ. ಜ್ಞ್ನಾನದ ಹಸಿವನ್ನು ತೀರಿಸಿಕೊಳ್ಳಲು ಎಲ್ಲಿಗೆ ಬೇಕಾದರೂ ಒಯ್ಯಬಹುದಾದ್ದರಿಂದ ಇವನ್ನು portable ಜ್ಞ್ನಾನ ಭಂಡಾರ ಎನ್ನಬಹುದು. ಇಷ್ಟಕ್ಕೂ ’ಇನ್ನೊಂದಿಷ್ಟು’, ’ಮತ್ತೊಂದಿಷ್ಟು’ ವಿಚಿತ್ರಾನ್ನಗಳಲ್ಲಿ ಏನಿದೆ ? ಎರಡೂ ಪುಸ್ತಕಗಳನ್ನು ಓದಿದ ಮೆಲೆ ಅನ್ನಿಸಿದ್ದು ’ಏನಿಲ್ಲ?’ ಅಂತ.

ಉದಾಹರಣೆಗೆ, ಈ ಸಮಾರಂಭಕ್ಕೆ ಬರುವಾಗ ’ಯಾವ ಡ್ರಸ್ ಹಾಕಿಕೊಳ್ಳಲಿ’ ಎಂದು ಯೋಚಿಸಿದಾಗ ’ಇನ್ನೊಂದಿಷ್ಟು ವಿಚಿತ್ರಾನ್ನದ ಇಪ್ಪತ್ತನೆಯ’ ಲೇಖನದಲ್ಲಿ ವಿಷಯ ಸಿಕ್ಕಿತು. ಡ್ರಸ್ ತೆಗೆದಿಟ್ಟುಕೊಂಡು ಸ್ನಾನಕ್ಕೆ ಹೋಗಿ ಮೈಗೆ ಪಿಯರ್ಸ್ ಸೋಪು ತಿಕ್ಕಿಕೊಳ್ಳುವಾಗ ಇದು ಯಾಕೆ ಪಾರದರ್ಶಕವಾಗಿದೆ ಅಂತ ಜೋಶಿ ಹೇಳಿದ್ದಾರೆ ಅನ್ನೋದು ನೆನಪಾಯ್ತು. ಹಾಡಿಕೊಂಡು ಜಳಕ ಮುಗಿಸಿದ ಮೇಲೆ, ಪಿಯರ್ಸ್ ಬಗ್ಗೆ ತಿಳಿದುಕೊಳ್ಳೋವಾಗ ನಾನೇಕೆ ಬಾತ್ ರೂಮ್ ಸಿಂಗರ್ ಅಂತಾನೂ ತಿಳಿದುಕೊಂಡೆ.

ಜೋಶಿಯವರು ತಮ್ಮ ಲೇಖನಗಳಲ್ಲಿ ಹಲವಾರು ರೀತಿಯ ತಿಂಡಿ-ತಿನಿಸುಗಳ ರುಚಿ ತೋರಿಸಿದ್ದಾರೆ. ಚಿಕ್ಕಿ, ಬೇಗಲ್, ಬಜಗೋಳಿ, ಗೋಳಿಬಜೆ, ಹಲಸಿನ ಹಪ್ಪಳ ತಿನ್ನಿಸಿದ್ದು ಮಾತ್ರವಲ್ಲದೇ ಗಂಜಿ ಕುಡಿಸಿದ್ದಾರೆ… ಒಮ್ಮೆಯಂತೂ ಹುಲ್ಲು ತಿನಿಸಿದ್ದಾರೆ. ಕಾಕ್ ಟೈಲ್ ಬಗ್ಗೆ ಬರೆಯುವಾಗ ಜೋಶಿಯವರ ತಾವು ಯಾವ ಜೋಶ್’ನಿಂದಲೂ ಈ ಲೇಖನ ಬರೆದಿಲ್ಲ ಅಂತ ಹೇಳಿದ್ದಾರೆ. ನಾನೇನ ಹೇಳಹೊರಟಿದ್ದೀನಿ ಅನ್ನೋದು ಅರ್ಥವಾಗಬೇಕಾದರೆ ಅವರ ಲೇಖನಗಳನ್ನು ಓದಿಯೇ ತಿಳಿಯಬೇಕು.

ಹಲವಾರು ಬಾರಿ ಕೆಣಕಿ-ತಿಣುಕಿಸಿದ ರಸಪ್ರಶ್ನೆಗಳನ್ನು ಕೇಳಿ ವಿಜೇತರನ್ನು ಆರಿಸಿ ಬಹುಮಾನ ನೀಡಿದ್ದಾರೆ. ಒಂದು ಬಾರಿ ಸಚಿತ್ರ ರಸಪ್ರಶ್ನೆ ನೆಡೆಸುವುದರ ಮೂಲಕ ’ಜನಪದ ಜಾತ್ರೆ’ ಯನ್ನೇ ನೆಡೆಸಿದ್ದಾರೆ. ಹಲವಾರು ಹೊಸ ವಿಷಯಗಳ ಹಬ್ಬವೇ ಆಗಿತ್ತು ಆ ರಸಪ್ರಶ್ನೆ. ವೈಜ್ಞ್ನಾನಿಕ ವಿಚಾರಗಳನ್ನು ತಿಳಿಸುತ್ತ ಒಮ್ಮೆ, Telescope, Telegraph ಇನ್ನಿತರೇ “ಟೆಲಿ” ಬಗ್ಗೆ ಮಾತನಾಡುತ್ತ ದೂರವಾಣಿ ನಾಮಕರಣದಂತಹ ವಿಚಾರ ತಿಳಿಸಿದ್ದರು. ಮತ್ತೊಂದೆಡೆ ಕೊಕ್ಕರೆ ಹಾರಾಟದ ಏರೋ ಡೈನಾಮಿಕ್ಸ್ ತಿಳಿಸಿದ್ದಾರೆ. ಹಲವಾರು ಲೇಖನಗಳಲ್ಲಿ ಲಘು ಹಾಸ್ಯದ ಸವಿಯನ್ನು ಚೆನ್ನಾಗಿ ಹರಿಸಿದ್ದಾರೆ. ಉದಾಹರಣೆಗೆ ಹಜಾಮತ್-ಸೆ-ಹಜಾಮತ್ ತಕ್, ಪನ್’ಗಳು, ಮಜಾವಾಣಿ, ಆಂಗ್ಲ-ಕನ್ನಡ translation ವೈಪರೀತ್ಯ, ಹನುಮನಿಗೆ ಬರೆದ ಪತ್ರ ಹೀಗೇ ಸಾಗುತ್ತದೆ ಪಟ್ಟಿ.ಸ್ವಾರಸ್ಯಕರವಾದ ವಿಚಾರಗಳನ್ನು ತಿಳಿಸುವುದರಲ್ಲಿ ಜೋಶಿಯವರದು ಎತ್ತಿದ ಕೈ ಎಂದರೆ ಅದು ಅತಿಶಯೋಕ್ತಿಯಲ್ಲ.  ಎತ್ತಿದ ಕೈ ಇದ್ದರೆ ಟೈಪ್ ಹೇಗೆ ಮಾಡುತ್ತಿದ್ದರು ಎಂದು ಕೇಳಬೇಡಿ.

ಅಂಧಕಾರದ ಬಗ್ಗೆ ವಿಚಾರ ಮಾಡುತ್ತ Switzerland’ನ blind cow restaurant ಬಗ್ಗೆ ಹೇಳಿದ್ದಾರೆ. ಅದರಂತೆಯೇ ಡಾ| ಕೆಲ್ಲಿಯವರ ಕಥಾನಕ, Code Adam, Nostalgia, Murphy’s law, Global dimming, Nut-Bolt-Screw  ಇತ್ಯಾದಿ ಲೇಖನಗಳು.

ಮತ್ತೊಂದು ಕಡೆ ಜೋಶಿಯವರು ಹೇಳ್ತಾರೆ, ತಮಗೆ ಎಲ್ಲೆಲ್ಲಿಂದಲೋ ವಿಷಯಗಳನ್ನು ತಂದು ಅದಕ್ಕೊಂದು ಸಾಮಾನ್ಯ ವಿಷಯ ಹೊಂದಿಸಿ ಪೋಣಿಸುವುದು ಇಷ್ಟ ಎಂದು ತಿಳಿಸಿದ್ದಾರೆ. ಅದನ್ನು ಸಮರ್ಥನೆ ಮಾಡುವ ಒಂದು ಲೇಖನವೆಂದರೆ ಹೇಮಾಮಾಲಿನಿ-ಲಾಲೂ ಪ್ರಸಾದ್-ಗಾಂಧೀಜಿ-ಮಾವಿನಹಣ್ಣಿನ ಬಗ್ಗೆ ಬರೆದ ಲೇಖನ. ಬಹಳ ಸೊಗಸಾದ ಲೇಖನ ಇದು.

ತಾವು ಭೇಟಿ ನೀಡಿದ ಸ್ಥಳಗಳ ವೈಶಿಷ್ಟ್ಯದ ಬಗ್ಗೆ ಹಲವೆಡೆ ಬರೆದಿದ್ದಾರೆ. ಕಾರ್ಯನಿಮಿತ್ತ ಹೋದ ಪೋರ್ಟರಿಕೋ ಆಗಿರಬಹುದು ಅಥವಾ ಸ್ನೇಹಿತರು ಆಹ್ವಾನಿಸಿದ ಪದ್ಮನಾಭ ವ್ರತವೇ ಆಗಿರಬಹುದು. ಹಬ್ಬ ಹರಿದಿನಗಳ ಬಗ್ಗೆ ಮಾತನಾಡುತ್ತ ಮಹತ್ವ ಸಾರುವ ಕಥೆಯನ್ನೂ ವಿವರಿಸಿದ್ದಾರೆ. ಲಕ್ಶ್ಮೀ ಪೂಜೆ, ಮಂಗಳ ಗೌರಿ, ಶಿವರಾತ್ರಿ ಆಚರಣೆ, ಉಗಾದಿ, ದೀಪಾವಳಿ, ದೇವಳದ ಜಾತ್ರೆ ಹೀಗೆ. ಎಲ್ಲ ಲೇಖನಗಳೂ ಉತ್ತಮವಾಗಿದ್ದರೂ ನಾನಗೆ ಅತೀ ಮೆಚ್ಚುಗೆಯಾದವು ಅಂದರೆ ವೇದಾಧ್ಯಯನ ವಿಧಾನ, ವೃಷಭ ವಿಸರ್ಜಿತ, ಏಕವಚನ ನಾಮಾಮೃತ, ತಲ್ಲಣಿಸದಿರು ಕಂಡ್ಯ ವಲಸೆಗಾರ.

ಒಟ್ಟಾರೆ ಹೇಳಿದರೆ ’ಇನ್ನೊಂದಿಷ್ಟು ವಿಚಿತ್ರಾನ್ನ’ ಹಾಗೂ ’ಮತ್ತೊಂದಿಷ್ಟು ವಿಚಿತ್ರಾನ್ನ’ ಲೇಖನ ಸರಮಾಲೆಯಲ್ಲಿ ಉದಾತ್ತ ವಿಚರಗಳಿವೆ, ಚಿಂತನೆ ಇದೆ, ಹಾಸ್ಯ ಇದೆ, ರಸಪ್ರಶ್ನೆಗಳಿವೆ, ಖಾದ್ಯಗಳ ವಿಚಾರವಿದೆ, ಗಣಿತ ಇದೆ, ವಿಜ್ಞ್ನಾನ ಇದೆ, ದಾಸರ ಪದಗಳು ಹಾಗೂ ಸಿನಿಮಾ ಹಾಡುಗಳ ಭಂಡಾರವೇ ಇದೆ. ಬರೀ ತಮ್ಮದೇ ವಿಚಾರಗಳಲ್ಲದೇ ಓದುಗರು ಈ-ಮೈಲ್ ಗಳಲ್ಲಿ ಹಂಚಿಕೊಂಡ ವಿಚಾರಗಳನ್ನೂ ಲೇಖನದಲ್ಲಿ ಸೇರಿಸಿದ್ದಾರೆ.ಅಗಲವಾದ ಜ್ಞ್ನಾನಕ್ಕಿಂತ ಯಾವುದಾದರೂ ಒಂದು ವಿಷಯದಲ್ಲಿ ಆಳವಾದ ಜ್ಞ್ನಾನ ಇದ್ದಿದ್ದರೆ ಎಂದು ಚೆನ್ನಿತ್ತು ಎಂದು ಹೇಳುತ್ತ ನಮಗೂ ಒಮ್ಮೆ ಯೋಚನೆ ಮಾಡುವ ಹಾಗೆ ಮಾಡಿದ್ದಾರೆ. ಅದ್ಭುತ ವಿಚಾರಗಳನ್ನು ಪುಸ್ತಕ ರೂಪದಲ್ಲಿ ತಂದು ಎಲ್ಲರನ್ನೂ ರಂಜಿಸಿರುವ ಶ್ರೀವತ್ಸ ಜೋಶಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತ, ನನ್ನ ಮಾತು ಮುಗಿಸುತ್ತೇನೆ. ಹಾಗೂ ವಿಮರ್ಶೆ ಮಾಡುವ ಅವಕಾಶ ನೀಡಿದ ಕನ್ನಡ ಸಾಹಿತ್ಯ ರಂಗದ ಸಮಿತಿ ವರ್ಗದವರಿಗೂ ಅನಂತ ವಂದನೆಗಳು. 

ಈವರೆಗಿನ ನನ್ನ ಮಾತನ್ನು ಕೇಳಿ ನಿಮಗೆ ಆಕಳಿಕೆ ಬಂದಿದ್ದರೆ ಅದು ಯಾಕೆ ಎಂದು ತಿಳಿದುಕೊಳ್ಳಲು ’ಇನ್ನೊಂದಿಷ್ಟು ವಿಚಿತ್ರಾನ್ನದ’ ಇಪ್ಪತ್ತೊಂಬತ್ತನೆಯ ಲೇಖನ ಓದಿ.

ನಾನಿನ್ನು ಬರಲೇ ?

 

 Posted by at 7:14 PM