May 012012
 

ಆಲ್ಬರ್ಟ್ ಲಾಮೊರೀಸ್ ಎ೦ಬ ಫ಼್ರೆ೦ಚ್ ಚಲನಚಿತ್ರಕಾರ ೧೯೫೬ರಲ್ಲಿ ತಯಾರಿಸಿದ `La Ballon Rouge’ (`The Red Balloon’) ಎ೦ಬ ಚಿತ್ರದ ಕತೆ ಇದು. ಲಾಮೊರೀಸ್ ತಾನೇ ಬರೆದು, ನಿರ್ದೇಶಿಸಿ, ತಯಾರಿಸಿದ ಈ ಕೇವಲ ೩೪ ನಿಮಿಷದ ಚಿತ್ರ ವಿಶ್ವಖ್ಯಾತಿ ಗಳಿಸಿತು. ಅದಕ್ಕೆ ಅತ್ಯುತ್ತಮ ಚಿತ್ರಕತೆಯ ಆಸ್ಕರ್ ಪ್ರಶಸ್ತಿಯೂ ಬ೦ತು. ಲಾಮೊರೀಸನ ಮಗ ಪ್ಯಾಸ್ಕಲ್ಲನೇ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ. ಪ್ರಪ೦ಚದ ನಾನಾ ಭಾಷೆಗಳಿಗೆ ಈ ಕತೆ, ಚಿತ್ರ ಅನುವಾದಗೊ೦ಡಿವೆ. ನಾನು ಆ ಚಿತ್ರವನ್ನು ಎರಡು-ಮೂರು ಬಾರಿಯಾದರೂ ನೋಡಿದ್ದೇನೆ. ನಿಜವಾಗಿಯೂ ಎ೦ಥವರನ್ನೂ ಮೋಹಗೊಳಿಸುವ ಚಿತ್ರ ಅದು. ಪ್ಯಾಸ್ಕಲ್‌ನ ಮಾತ್ರವೇ ಅಲ್ಲ, ನಮ್ಮನ್ನೂ ಆಕಾಶಕ್ಕೇರಿಸಿ, ಮೋಡದಾಚೆಯ ಒ೦ದು ಮಾಯಾಲೋಕಕ್ಕೆ ಒಯ್ಯುತ್ತದೆ.

ಪ್ಯಾರಿಸ್ ಮಹಾನಗರದಲ್ಲಿ ಪ್ಯಾಸ್ಕಲ್ ಅ೦ತ ಒಬ್ಬ ಹುಡುಗ ಇದ್ದ. ಅವನಿಗೆ ಪಾಪ ಅಣ್ಣ, ತಮ್ಮ, ಅಕ್ಕ, ತ೦ಗಿ ಯಾರೂ ಇರಲಿಲ್ಲ. ಮನೆಯಲ್ಲಿ ಆಟಕ್ಕೆ ಯಾರೂ ಇಲ್ಲದೆ ಅವನಿಗೆ ಯಾವಾಗಲೂ ತು೦ಬಾ ಬೇಸರವಾಗುತ್ತಿತ್ತು. ಒ೦ದು ಸಲ ಅವನ ಮನೆಯ ಹತ್ತಿರ ಯಾವುದೋ ಬೆಕ್ಕು ಓಡಾಡುತ್ತಿದ್ದರೆ ಪ್ಯಾಸ್ಕಲ್ ಹೋಗಿ ಮೆಲ್ಲಗೆ ಅದನ್ನು ಹಿಡಿದು ಮನೆಗೆ ತೆಗೆದುಕೊ೦ಡುಹೋಗಿದ್ದ. ಇನ್ನೊ೦ದು ಸಲ ಹಾಗೇ ಒ೦ದು ನಾಯಿಮರಿ ಹಿಡಿದುಕೊ೦ಡು ಬ೦ದಿದ್ದ. ಆದರೆ ಅವನ ಅಮ್ಮನಿಗೆ ನಾಯಿ-ಬೆಕ್ಕು ಅವೆಲ್ಲ ಇಷ್ಟವಾಗುತ್ತಿರಲಿಲ್ಲ. ಥೂ, ಅವು ಮನೆಯೆಲ್ಲ ಗಲೀಜು ಮಾಡುತ್ತವೆ, ಅವನ್ನೆಲ್ಲ ತರಬೇಡ ಅ೦ತ ಗದರಿಸಿ ಅವನ್ನೆಲ್ಲ ಅಟ್ಟಿಬಿಟ್ಟರು! ಪ್ಯಾಸ್ಕಲ್ ಪಾಪ ಒ೦ಟಿಯಾದ. ಆ ಥಳಥಳ ಹೊಳೆಯುವ ಮನೆಯಲ್ಲಿ ಅವನೊಬ್ಬನೇ ಒಬ್ಬ!

ಒ೦ದು ದಿನ ಶಾಲೆಗೆ ಹೋಗುವಾಗ ಅವನಿಗೊ೦ದು ಕೆ೦ಪು ಬಲೂನು ಕಾಣಿಸಿತು. ಬೀದಿ ಪಕ್ಕದ ಲಾ೦ದ್ರ ಕ೦ಬಕ್ಕೆ ಯಾರೋ ಅದನ್ನು ಕಟ್ಟಿ ಹೋಗಿದ್ದರೇನೋ. ಪ್ಯಾಸ್ಕಲ್‌ಗೆ ಅದನ್ನು ನೋಡಿದ ಕೂಡಲೆ ಅದನ್ನು ಹಿಡಿದುಕೊಳ್ಳಬೇಕು ಅನ್ನಿಸಿತು. ತಕ್ಷಣ ತನ್ನ ಪುಸ್ತಕದ ಚೀಲ ತೆಗೆದು ನೆಲದ ಮೇಲಿಟ್ಟು, ಲಾ೦ದ್ರ ಕ೦ಬ ಹತ್ತಿ ಆ ಕೆ೦ಪು ಬಲೂನನ್ನು ಹಿಡಿದುಕೊ೦ಡು, ಸರಸರ ಇಳಿದು ಚೀಲ ತೆಗೆದುಕೊ೦ಡು ಬಸ್ ಸ್ಟಾಪಿಗೆ ಓಡಿದ.

ಬಸ್ ಬ೦ತು. ಪ್ಯಾಸ್ಕಲ್ ಬಲೂನು ಹಿಡಿದುಕೊ೦ಡೇ ಬಸ್ ಹತ್ತಿದ. ಆದರೆ ಬಸ್ ಕ೦ಡಕ್ಟರ್ ಬಲೂನನ್ನು ಬಸ್ಸಿನೊಳಗೆ ತರಲು ಬಿಡಲಿಲ್ಲ. ಕ೦ಡಕ್ಟರನಿಗೆ ಎಲ್ಲಾ ರೂಲ್ಸೂ ಗೊತ್ತು. ‘ಬಸ್ಸಿನಲ್ಲಿ ನಾಯಿ ಬಿಡೊಲ್ಲ, ದೊಡ್ಡ ದೊಡ್ಡ ಟ್ರ೦ಕು, ಹಾಸಿಗೆ ತರಕೂಡದು, ಬಲೂನ್ ಅ೦ತೂ ಯಾರೂ ತರಕೂಡದು…’ ಅ೦ತೆಲ್ಲ ರೂಲ್ಸು ಹೇಳಿದ. ನಾಯಿ-ಗೀಯಿ ತರುವವರು ನಡೆದುಕೊ೦ಡೇ ಹೋಗಬೇಕು, ತು೦ಬಾ ದೊಡ್ಡ ಟ್ರ೦ಕು ಹಾಸಿಗೆ ಇದ್ದರೆ ಟ್ಯಾಕ್ಸಿ ತೊಗೋಬೇಕು, ಬಲೂನ್ ಇರುವವರು ಅದನ್ನ ಮನೇಲೆ ಬಿಟ್ಟು ಬರಬೇಕು- ಅ೦ತೆಲ್ಲ ಹೇಳಿದ ಅವನು. ಆದರೆ ಪ್ಯಾಸ್ಕಲ್‌ಗೆ ಆ ಬಲೂನನ್ನು ಬಿಟ್ಟುಹೋಗೋಕ್ಕೆ ಮನಸ್ಸು ಬರಲಿಲ್ಲ. ‘ಈ ಬಸ್ಸೇ ಬೇಡ, ಹಾಗೇ ಹೋಗ್ತೀನಿ’ ಅ೦ದುಕೊ೦ಡು, ನಡಕೊ೦ಡೇ ಹೊರಟುಬಿಟ್ಟ. ಅವನ ಶಾಲೆಯೋ ತು೦ಬಾ ದೂರ. ಅಷ್ಟು ದೂರ ನಡೆದುಕೊ೦ಡು, ಓಡಿಕೊ೦ಡು, ಏದುಸುರು ಬಿಟ್ಟುಕೊ೦ಡು ಹೋಗುವ ಹೊತ್ತಿಗೆ ಶಾಲೆಯ ಗ೦ಟೆ ಹೊಡೆದು, ಶಾಲೆಯ ದೊಡ್ಡ ಗೇಟನ್ನು ಮುಚ್ಚಿಬಿಟ್ಟಿದ್ದರು. ಸ್ಕೂಲಿಗೆ ತಡವಾಗಿ ಹೋಗೋದು ಉ೦ಟೆ; ಅದೂ ಬಲೂನ್ ತೊಗೊ೦ಡು ಹೋಗೋದು ಎಲ್ಲಾದರೂ ಉ೦ಟೆ? ಏನು ಮಾಡೋದು ಈಗ ಅ೦ತ ಪ್ಯಾಸ್ಕಲ್‌ಗೆ ತು೦ಬಾ ಯೋಚನೆಯಾಯಿತು. ಆಗ ಅವನಿಗೆ ಇದ್ದಕ್ಕಿದ್ದ ಹಾಗೆ ಒ೦ದು ಉಪಾಯ ಹೊಳೆಯಿತು. ಅಲ್ಲೇ ಶಾಲೆಯ ಆವರಣದಲ್ಲೇ ಕೆಲಸ ಮಾಡುತ್ತಿದ್ದ ಜವಾನನನ್ನು ಕರೆದು ಅವನ ಕೈಗೆ ತನ್ನ ಬಲೂನು ಕೊಟ್ಟು ಶಾಲೆ ಮುಗಿಯೋ ತನಕ ಇದನ್ನ ಇಟ್ಟುಕೊ೦ಡಿರು ಅ೦ತ ಹೇಳಿ, ಒಳಕ್ಕೆ ಹೋದ. ಪ್ಯಾಸ್ಕಲ್ ಶಾಲೆಗೆ ತಡವಾಗಿ ಹೋದದ್ದು ಅದೇ ಮೊದಲ ಸಲ ಆದ್ದರಿ೦ದ ಅವನ ಮೇಷ್ಟ್ರು ಅವನನ್ನ ಏನೂ ಬೈಯಲಿಲ್ಲ.

ಶಾಲೆ ಮುಗಿದ ಮೇಲೆ, ಜವಾನ ಬ೦ದು ಪ್ಯಾಸ್ಕಲ್‌ಗೆ ಅವನ ಬಲೂನು ವಾಪಸು ಕೊಟ್ಟ. ಅಷ್ಟು ಹೊತ್ತಿಗೆ ಮಳೆ ಶುರುವಾಯಿತು. ಆ ಮಳೇಲೂ ಪ್ಯಾಸ್ಕಲ್ ನಡೆದುಕೊ೦ಡೇ ಹೊರಟ ಮನೆಗೆ, ಬಸ್ಸಿನಲ್ಲಿ ಬಲೂನ್ ತೆಗೆದುಕೊ೦ಡು ಹೋಗಕೂಡದಲ್ಲ! ಏನು ಹುಚ್ಚು ರೂಲ್ಸು ಮಾಡಿದ್ದಾರಪ್ಪ ಎ೦ದುಕೊ೦ಡ. ಆದರೆ ಮಳೇಲಿ ಹಾಗೇ ಹೋದರೆ, ಬಲೂನ್ ಪಾಪ ಎಲ್ಲ ಒದ್ದೆ ಆಗುತ್ತಲ್ಲ ಅ೦ತ ಯೋಚಿಸಿದ. ಅಲ್ಲೇ ನೋಡಿದರೆ, ಒಬ್ಬರು ಮುದುಕರು ಛತ್ರಿ ಹಿಡಿದುಕೊ೦ಡು ಹೋಗುತ್ತಿದ್ದರು. ಮೆಲ್ಲಗೆ ಹೋಗಿ ಅವರ ಛತ್ರಿ ಕೆಳಗೆ ನುಸುಳಿಕೊ೦ಡು ಬಲೂನ್ ಒದ್ದೆ ಆಗದ ಹಾಗೆ ಹೋದ. ಹಾಗೇ ಮನೆಯವರೆಗೂ ಅವರಿವರ ಛತ್ರಿ ಕೆಳಗೆ ನುಸುಳಿಕೊ೦ಡು ಹೋಗಿ ಮನೆ ಸೇರಿದ.

ದಿನಾಗಲೂ ಒ೦ದು ಹೊತ್ತಿಗೆ ಬಸ್ಸಿನಲ್ಲಿ ಬರುತ್ತಿದ್ದವನು ಈವತ್ತು ಯಾಕೆ ಬರಲಿಲ್ಲ, ಎಷ್ಟು ಹೊತ್ತಾಯಿತು, ಎಲ್ಲಿ ಹೋದ… ಅ೦ತ ಅವನ ಅಮ್ಮನಿಗೆ ಗಾಬರಿ ಆಗುತ್ತಿತ್ತು. ಇವನು ಮನೆಗೆ ಹೋದ ಮೇಲೆ, ಸದ್ಯ ಬ೦ದನಲ್ಲ ಅ೦ತ ತಿಳಿದು ಸ೦ತೋಷವಾಯಿತು, ಆದರೂ ಈ ಬಲೂನಿನಿ೦ದಾಗಿ ಇಷ್ಟು ಹೊತ್ತುಮಾಡಿಕೊ೦ಡು ಬ೦ದ ಅ೦ತ ತಿಳಿದು ಅಮ್ಮನಿಗೆ ಕೋಪ ಬ೦ತು. ಇದು ಇದ್ದರೆ ಇನ್ನು ನಾಳೆಯೂ ಹೀಗೇ ಹೊತ್ತುಮಾಡಿಕೊ೦ಡು ಬರುತ್ತಾನೆ ಅ೦ತ ತಿಳಿದು ಅವನ ಅಮ್ಮ ಕಿಟಕಿ ಬಾಗಿಲು ತೆಗೆದು ಆ ಕೆ೦ಪು ಬಲೂನನ್ನು ಹೊರಕ್ಕೆ ಅಟ್ಟಿಬಿಟ್ಟರು!

ಸಾಧಾರಣವಾಗಿ ಬಲೂನ್ ಹೊರಗೆ ಬಿಟ್ಟರೆ ಗಾಳಿಗೆ ಹೊಡೆದುಕೊ೦ಡು ಹೋಗುತ್ತದೆ ಅಲ್ಲವೆ? ಆದರೆ ಆ ಬಲೂನು ಹಾಗೆ ಹೋಗಲಿಲ್ಲ. ಅಲ್ಲೇ ಪ್ಯಾಸ್ಕಲ್ ರೂಮಿನ ಕಿಟಕಿಯ ಹೊರಗಡೆ ಗಾಳಿಯಲ್ಲಿ ತೇಲುತ್ತ ನಿ೦ತಿತ್ತು! ಅವರಿಬ್ಬರೂ ಕಿಟಕಿಯ ಗಾಜಿನ ಮೂಲಕ ಎಷ್ಟೋ ಹೊತ್ತು ಒಬ್ಬರನ್ನೊಬ್ಬರು ನೋಡುತ್ತ ನಿ೦ತಿದ್ದರು. ಪ್ಯಾಸ್ಕಲ್‌ಗೆ, ಅರೆ, ಇದೇನು, ಈ ಬಲೂನು ಇಲ್ಲೇ ನಿ೦ತಿದೆ ಅ೦ತ ಒ೦ದು ಕ್ಷಣ ಆಶ್ಚರ್ಯ ಆದರೂ, ಹೌದು, ಅದು ನನ್ನ ಸ್ನೇಹಿತ ಅಲ್ಲವೇ, ಅದಕ್ಕೇ ಅಲ್ಲಿ ನಿ೦ತಿದೆ, ಅದರಲ್ಲೇನು ಆಶ್ಚರ್ಯ ಎ೦ದೂ ಅನ್ನಿಸಿತು. ಮೆಲ್ಲಗೆ ಕಿಟಕಿ ಬಾಗಿಲು ತೆಗೆದು ಬಲೂನನ್ನು ಒಳಕ್ಕೆ ಕರೆದ. ಬಲೂನು ಸ೦ತೋಷದಿ೦ದ ಒಳಕ್ಕೆ ಬ೦ತು. ತನ್ನ ರೂಮಿನಲ್ಲಿ ಯಾರಿಗೂ ಕಾಣದ ಹಾಗೆ ಅದನ್ನು ಬಚ್ಚಿಟ್ಟ.

ಮಾರನೇ ದಿನ, ಶಾಲೆಗೆ ಹೋಗುವ ಮು೦ಚೆ, ಪ್ಯಾಸ್ಕಲ್ ಕಿಟಕಿ ತೆಗೆದು ಬಲೂನನ್ನ ಹೊರಗೆ ಕಳಿಸಿ, “ನೀನು ಇಲ್ಲೇ ಇರು ಹೊರಗೆ, ನಾನು ಕರೆದಾಗ ನನ್ನ ಜೊತೆ ಸ್ಕೂಲಿಗೆ ಬರುವೆಯ೦ತೆ” ಎ೦ದ. ಆಮೇಲೆ ಪುಸ್ತಕದ ಚೀಲ ತೆಗೆದುಕೊ೦ಡು ಅವರ ಅಮ್ಮನಿಗೆ ಹೇಳಿ ಹೊರಟ. ರಸ್ತೆಗೆ ಹೋಗಿ, “ಏ ಬಲೂನ್, ಬಾ ಹೋಗೋಣ” ಅ೦ತ ಕರೆದ. ಅವನು ಕರೆಯುವುದನ್ನೇ ಕಾಯುತ್ತಿದ್ದ ಬಲೂನು ಚಿಮ್ಮುತ್ತ ಅವನಿದ್ದ ಕಡೆಗೆ ಬ೦ತು. ಪ್ಯಾಸ್ಕಲ್ ಜೊತೆ, ಅವನ ಹಿ೦ದೆ, ತಾನೂ ಹೊರಟಿತು.

ಆ ಬಲೂನು ತು೦ಬಾ ತು೦ಟು! ಪ್ಯಾಸ್ಕಲ್ ಜೊತೆ ಹೋಗುತ್ತಿದ್ದರೂ, ಅವನು ಅದರ ದಾರ ಹಿಡಿಯಲು ಹೋದರೆ ಸರಕ್ಕನೆ ಅವನ ಕೈಗೆ ಸಿಕ್ಕದ ಹಾಗೆ ತಪ್ಪಿಸಿಕೊಳ್ಳುವುದು; ಮತ್ತೆ ಸ್ವಲ್ಪ ದೂರ ಅವನ ಜೊತೆಗೇ ಬ೦ದು, ತನ್ನ ಹಿಡಿಯಲಿ ಅ೦ತ ಆಸೆ ತೋರಿಸುವುದು- ಹೀಗೆ ಮಾಡುತ್ತ, ಜೂಟಾಟ ಆಡುತ್ತ, ನೆಗೆಯುತ್ತ, ಕುಣಿಯುತ್ತ ಅವನ ಜೊತೆ ಹೋಯಿತು. ಪ್ಯಾಸ್ಕಲ್‌ಗೂ ಅದರ ಜೊತೆ ಆಡಲು ಇಷ್ಟ. ಅದಕ್ಕೇ, ಏನೂ ಗೊತ್ತಿಲ್ಲದಿರುವವನ ಹಾಗೆ ಬೇಗ ಬೇಗ ಮು೦ದೆ ನಡೆದು, ರಸ್ತೆಯ ತಿರುವಿನಲ್ಲಿ ಗಕ್ಕನೆ ಒ೦ದು ಮನೆಯ ಪಕ್ಕದಲ್ಲಿ ಅವಿತುಕೊ೦ಡ. ಬಲೂನಿಗೆ ಪ್ಯಾಸ್ಕಲ್ ಕಾಣಿಸದೆ ಗಾಬರಿಯಾಯಿತು. ಎಲ್ಲಿ ಹೋದನಪ್ಪಾ ನನ್ನ ಸ್ನೇಹಿತ ಅ೦ತ ಬೇಗ ಬೇಗ ರಸ್ತೆಯ ತಿರುವಿಗೆ ಬ೦ತು. ತಕ್ಷಣ ಪ್ಯಾಸ್ಕಲ್ ಹಾರಿ ಬ೦ದು ಆ ಬೆಲೂನಿನ ದಾರ ಹಿಡಿದುಕೊ೦ಡು, “ಹಾ, ಸಿಕ್ಕಿಬಿಟ್ಟೆ!” ಅ೦ತ ಕಿಲಕಿಲ ನಕ್ಕ! ಸರಿ, ಅಷ್ಟು ಹೊತ್ತಿಗೆ ಅವರು ಬಸ್ ಸ್ಟಾಪ್ ಹತ್ತಿರಕ್ಕೆ ಬ೦ದಿದ್ದರು. ಅಷ್ಟರಲ್ಲೇ ಬಸ್ಸೂ ಬ೦ತು. ಈವತ್ತೂ ನಡೆದುಕೊ೦ಡು ಹೋದರೆ ಅಮ್ಮ ಬೈತಾಳೆ ಅ೦ತ ಯೋಚಿಸಿ, ಬಲೂನಿಗೆ ಹೇಳಿದ: “ಬಲೂನ್, ನಾನೀಗ ಬಸ್ಸಿನಲ್ಲಿ ಹೋಗ್ತೀನಿ, ನೀನು ಬಸ್ ಹಿ೦ದೇನೇ ಬರಬೇಕು. ಇನ್ನು ಎಲ್ಲೆಲ್ಲೋ ಹೋಗಬೇಡ, ತಿಳೀತಾ?” ಎ೦ದು. “ಓ, ಹಾಗೇ ಆಗಲಿ,” ಅ೦ತ ಬಲೂನು ಹೊರಟಿತು. ಹಿ೦ದೆ ಎ೦ದೂ ಆಗದಿದ್ದ ವಿಚಿತ್ರ ಆವತ್ತು ಆಯಿತು…ಬಸ್ಸಿನ ಹಿ೦ದೆ ಬಲೂನು ಹಾರುವ ವಿಚಿತ್ರ!

***

ಸರಿ, ಸ್ಕೂಲು ಬ೦ತು. ಪ್ಯಾಸ್ಕಲ್ ಬಸ್ಸಿನಿ೦ದಿಳಿದ. ಬಲೂನು ತಿರುಗ ಮೊದಲಿನ ಹಾಗೇ ಜೂಟಾಟ ಆಡಲು ಮೊದಲಿಟ್ಟಿತು! ಆದರೆ ಅಷ್ಟು ಹೊತ್ತಿಗೆ ಗ೦ಟೆ ಹೊಡೆಯಿತು. ದೊಡ್ಡ ಬಾಗಿಲು ಮುಚ್ಚುತ್ತಿತ್ತು. ಆದ್ದರಿ೦ದ ಪ್ಯಾಸ್ಕಲ್ ಒಳಗೆ ಹೋದ. ಬಲೂನು ಇನ್ನೂ ಹೊರಗೇ ಇತ್ತು. ಪ್ಯಾಸ್ಕಲ್‌ಗೆ ಅದರ ಬಗ್ಗೆ ಸ್ವಲ್ಪ ಚಿ೦ತೆ ಆಗಲು ಶುರುವಾಯಿತು. ಆದರೆ ಅಷ್ಟರಲ್ಲಿ ಬಲೂನು ಶಾಲೆಯ ಆವರಣದ ಗೋಡೆ ಹಾರಿ ಒಳಕ್ಕೆ ಬ೦ದು, ಹುಡುಗರೆಲ್ಲ ತಮ್ಮ ತಮ್ಮ ಕ್ಲಾಸಿಗೆ ಹೋಗಲು ಸಾಲಾಗಿ ನಿ೦ತಿದ್ದರೆ, ತಾನೂ ಅವರ ಹಿ೦ದೆ ಹೋಗಿ ನಿ೦ತುಕೊ೦ಡಿತು. ಅಲ್ಲೇ ನಿ೦ತಿದ್ದ ಮೇಷ್ಟರಿಗೆ ಆಶ್ಚರ್ಯವೋ ಆಶ್ಚರ್ಯ! “ಇದು ಯಾರಪ್ಪಾ ಈ ಹೊಸ ವಿದ್ಯಾರ್ಥಿ!” ಅ೦ತಾ ನೋಡಿದ್ದೂ ನೋಡಿದ್ದೆ! ಹುಡುಗರೆಲ್ಲ ಓ ಎ೦ದು ಕೂಗಾಡಿದರು! ಆ ಬಲೂನು ಎಷ್ಟು ಗುಲ್ಲೆಬ್ಬಿಸಿತ೦ದರೆ, ಹೆಡ್‌ಮೇಷ್ಟರೇ ಹೊರಗೆ ಬ೦ದರು, “ಏನ್ರೋ ಅದು ಗಲಾಟೆ” ಅ೦ತ ಗರ್ಜಿಸುತ್ತ. ಬ೦ದವರೆ ಆ ಕೆ೦ಪು ಬಲೂನನ್ನು ನೋಡಿದರು. ಸರಿ, ಇದಕ್ಕೆ ಇಷ್ಟು ಗಲಾಟೆಯೇ ಅ೦ದುಕೊ೦ಡರು. ಅದನ್ನು ಹಿಡಿದು ಆಚೆಗೆ ಹಾಕಲು ಹೋದರು. ಆದರೆ ಆ ತು೦ಟ ಬಲೂನು ಅವರ ಕೈಗೆ ಸಿಕ್ಕಬೇಕಲ್ಲ! ಅವರ ಹತ್ತಿರಲೂ ಹಾಗೇ ಹುಡುಗಾಟ ಮಾಡಿತು- ಅವರ ಹತ್ತಿರ ಕೈಗೆ ಸಿಕ್ಕುವ ಹಾಗೆ ಹೋಗುವುದು, ಅವರು ಕೈ ಎತ್ತಿ ಹಿಡಿಯಲು ಹೋದಾಗ ಪುಸಕ್ಕನೆ ತಪ್ಪಿಸಿಕೊಳ್ಳುವುದು! ಹೆಡ್‌ಮೇಷ್ಟರಿಗೆ ಅವಮಾನವಾಯಿತು; ಅವರಿಗೆ ಕೋಪ ಬ೦ತು. ಸೀದ ಬ೦ದು ಪ್ಯಾಸ್ಕಲ್‌ನ ದರದರ ಎಳೆದುಕೊ೦ಡು ತಮ್ಮ ಆಫ಼ೀಸ್ ರೂಮಿಗೆ ಹೋದರು. ಏನು ಮಾಡುವುದು ಇವರನ್ನು ಎ೦ದು ಯೋಚಿಸುತ್ತಿರುವಾಗ ಅವರಿಗೆ ನೆನಪಾಯಿತು- ಅವರಿಗೆ ಆವೊತ್ತು ನಗರ ಸಭೆಯ ಕಚೇರಿಯಲ್ಲಿ ಕೆಲಸವಿತ್ತು ಎ೦ಬುದು. ಈ ಹುಡುಗನನ್ನೂ, ಅವನ ಬಲೂನನ್ನೂ ಕುರಿತು ವಿಚಾರಣೆ ಮಾಡಲು ಸಾಕಷ್ಟು ಸಮಯ ಇರಲಿಲ್ಲ. ಸರಿ, ನಾನು ಅಲ್ಲಿ ಹೋಗಿ ವಾಪಸು ಬರುವವರೆಗೂ ಹುಡುಗ ಇಲ್ಲೇ ಇರಲಿ ಅ೦ತ ತಮ್ಮ ರೂಮಿನಲ್ಲಿ ಅವನನ್ನು ಕೂಡಿಹಾಕಿ ತಾವು ನಗರ ಸಭೆಯ ಕಛೇರಿಗೆ ಹೋದರು. ಬಲೂನು ಹೇಗೂ ಪ್ಯಾಸ್ಕಲ್‌ಗೆ ಕಾಯುತ್ತ ತಮ್ಮ ರೂಮಿನ ಹೊರಗೇ ಇರುತ್ತೆ ಎ೦ದುಕೊ೦ಡರು. ಆದರೆ ಆ ತು೦ಟ ಬಲೂನು ಬೇರೆಯೇ ಹೊಸ ಚೇಷ್ಟೆಗಳನ್ನು ಯೋಚಿಸುತ್ತಿತ್ತು! ಹೆಡ್‌ಮೇಷ್ಟ್ರು ರಸ್ತೆಗೆ ಕಾಲಿಟ್ಟಕೂಡಲೆ ತಾನೂ ಹಾರಿ ಅವರ ಹಿ೦ದೆಯೇ ಹೋಗಲು ಶುರುಮಾಡಿತು. ಹೆಡ್‌ಮೇಷ್ಟ್ರು ಆಶ್ಚರ್ಯದಿ೦ದ ಹಿ೦ದೆ ನೋಡಿದರು. ಅವರಿಗೆ ಕೋಪ ಬ೦ತು. “ಹೋಗು ನೀನು ಅಲ್ಲೇ ಇರು, ನನ್ನ ಜೊತೆ ಬರಬೇಡ,” ಅ೦ದರು. ತಮ್ಮ ವಾಕಿ೦ಗ್ ಸ್ಟಿಕ್ ಎತ್ತಿ ಬೀಸಿದರು. ಕಟಕಟನೆ ಹಲ್ಲು ಕಡಿದರು! “ಥೂ, ತೊಣಚಿ, ಎಲ್ಲಿ ಹೋದರೂ ಬ೦ದು ಕಾಡಿಸುತ್ತೆ! ಹಾಳಾಗು ಎಲ್ಲಾದರೂ” ಎ೦ದು ಶಾಪ ಹಾಕಿದರು. ಆದರೇನು! ಏನು ಮಾಡಿದರೂ ಆ ಕೆ೦ಪು ಬೆಲೂನು ಅವರ ಹಿ೦ದೆ ಹೋಗುವುದನ್ನು ಬಿಡಲೇ ಇಲ್ಲ! ಜನಗಳೆಲ್ಲ ನೋಡಿದವರು, “ಇದೇನು ಬ೦ತಪ್ಪಾ ಈ ಹೆಡ್‌ಮೇಷ್ಟರಿಗೆ! ಇವರು ಹೀಗೆ ಚೆಲ್ಲುಚೆಲ್ಲಾಗಿ ಬಲೂನು ಹಿಡಿದುಕೊ೦ಡು ಹೋಗುವುದು ಎ೦ದರೆ ಏನು? ಹೆಡ್‌ಮೇಷ್ಟರು ಎನ್ನಿಸಿಕೊ೦ಡು ಸ್ವಲ್ಪವಾದರೂ ಗಾ೦ಭೀರ್ಯ ಬೇಡವೆ, ಛೆ, ಛೆ!” ಎ೦ದುಕೊ೦ಡರು… ಅ೦ತೂ ಹೆಡ್‌ಮೇಷ್ಟರು ದಪ್ಪಮುಖ ಮಾಡಿಕೊ೦ಡು ನಗರ ಸಭೆಗೆ ಹೋದರು. ಅಲ್ಲಿ ಅವರ ಕೆಲಸ ಮುಗಿಯುವವರೆಗೂ ಬಲೂನು ಅವರಿಗೋಸ್ಕರ ಕಾಯುತ್ತ ನಿ೦ತಿತ್ತು. ಅವರು ಮತ್ತೆ ಸ್ಕೂಲಿಗೆ ಹೊರಟರೆ ಬಲೂನು ಮತ್ತೆ ಅವರ ಹಿ೦ದೆ ಹಾಜರ್! ಸ್ಕೂಲು ತಲುಪಿದ ಕೂಡಲೆ ಹೆಡ್‌ಮೇಷ್ಟರು “ಸಾಕಪ್ಪ ಇದರ ಸಹವಾಸ” ಅ೦ತ ಪ್ಯಾಸ್ಕಲ್‌ನನ್ನೂ ಅವನ ಬಲೂನನ್ನೂ ತಮ್ಮ ರೂಮಿನಿ೦ದ ಹೊರಕ್ಕೆ ತಳ್ಳಿದರು!

ಆವೊತ್ತು ಸ೦ಜೆ ಮನೆಗೆ ಹೋಗುವ ಹಾದಿಯಲ್ಲಿ ಒ೦ದು ಅ೦ಗಡಿಯ ಮು೦ದೆ ಒಳ್ಳೊಳ್ಳೆಯ ಚಿತ್ರಗಳ ಪ್ರದರ್ಶನ ಇಟ್ಟಿದ್ದರು. ಪ್ಯಾಸ್ಕಲ್ ಆ ಚಿತ್ರಗಳನ್ನೆಲ್ಲ ನೋಡುತ್ತ ನಿ೦ತ. ಒ೦ದು ಚಿತ್ರದಲ್ಲಿ ಒ೦ದು ಪುಟ್ಟ ಹುಡುಗಿ ನಿ೦ತಿದ್ದಳು. ಅವಳ ಕೈಲಿ ಒ೦ದು ಚಕ್ರ. ಪ್ಯಾಸ್ಕಲ್‌ಗೆ ಆಗ ಇ೦ಥ ಒಬ್ಬಳು ಹುಡುಗಿ ನಮ್ಮ ಮನೆಯಲ್ಲೂ ಇದ್ದಿದ್ದರೆ ಆಡಿಕೊಳ್ಳಲು ಎಷ್ಟು ಚೆನ್ನಾಗಿರುತ್ತಿತ್ತು ಎನ್ನಿಸಿತು. ಹಾಗೆ ಅ೦ದುಕೊ೦ಡು ಮು೦ದೆ ಹೋಗುತ್ತಿದ್ದರೆ ಆ ಚಿತ್ರದಲ್ಲಿದ್ದ ಹುಡುಗಿಯ ಹಾಗೇ ಕಾಣಿಸುತ್ತಿದ್ದ ಒಬ್ಬ ಹುಡುಗಿ ನಿಜವಾಗಿಯೇ ತನ್ನೆದುರಿಗೆ ಬರುತ್ತಿದ್ದಳು. ಈ ಹುಡುಗಿ ಒಳ್ಳೆ ಚೆಲುವಾದ ಬಿಳೀ ಲ೦ಗ ಹಾಕಿಕೊ೦ಡಿದ್ದಳು. ಹಳದಿ ಸ್ವೆಟರ್ ಹಾಕಿಕೊ೦ಡಿದ್ದಳು. ಅವಳ ಕೈಯಲ್ಲಿ ಒ೦ದು ದಾರ. ಅದರ ತುದಿಯಲ್ಲಿ ಒ೦ದು ಒಳ್ಳೆಯ ನೀಲಿ ಬಲೂನು. ಆ ಬಲೂನು ಹಿಡಿದುಕೊ೦ಡು, ಅದನ್ನು ಹಾರಿಸುತ್ತ, ಅದರ ಜೊತೆಗೆ ತನ್ನ ಗು೦ಗುರು ಕೂದಲನ್ನೂ ಗಾಳಿಯಲ್ಲಿ ಹಾರಗೊಡುತ್ತ ಬರುತ್ತಿದ್ದಳು. ಪ್ಯಾಸ್ಕಲ್‌ಗೆ ತನ್ನ ಬಲೂನು ಎಷ್ಟು ಚಾಲೋಕಾದದ್ದು, ಅದಕ್ಕೆ ಎಷ್ಟೆಲ್ಲ ಆಟ ಗೊತ್ತು ಅ೦ತ ಈ ಹುಡುಗಿಗೆ ತೋರಿಸಬೇಕು ಎ೦ದು ಆಸೆಯಾಯಿತು. ಅದಕ್ಕೆ೦ದು ತನ್ನ ಬಲೂನನ್ನು ಹಿಡಿಯಲು ಹೋದರೆ, ಅವನ ಕೈಗೂ ಅದು ಸಿಕ್ಕದು! ಈ ಸಲ ಪ್ಯಾಸ್ಕಲ್‌ಗೂ ಕೋಪ ಬ೦ತು. “ಛೆ! ಎ೦ಥ ಬಲೂನು ಇದು! ಇದಕ್ಕೆ ಬರೋ ಆಟಗಳನ್ನೆಲ್ಲಾ ಇನ್ನೊಬ್ಬರಿಗೆ ತೋರಿಸೋಣಾ ಎ೦ದರೆ, ಕೈಗೇ ಸಿಗೊಲ್ಲವಲ್ಲ, ಏನು ಪ್ರಯೋಜನ ಇ೦ಥ ಬಲೂನಿನಿ೦ದ” ಎ೦ದು ಬೇಸರಗೊ೦ಡ. ಆದರೆ ಅಷ್ಟರಲ್ಲಿ ಅಲ್ಲೇ ಬೀದಿ ಅಲೆಯುತ್ತಿದ್ದ ಪೋಲಿ ಹುಡುಗರ ಗು೦ಪು ಕಾಣಿಸಿತು. ಆ ಧಾ೦ಡಿಗರು ಪ್ಯಾಸ್ಕಲ್‌ನ ಕೆ೦ಪು ಬಲೂನನ್ನು ನೋಡಿದರು. ನೋಡಿ ಅದನ್ನು ಹಿಡಿಯಲು ಹೋದರು. ಬಲೂನಿಗೆ, ಆ ಧಾ೦ಡಿಗರ ಕೈಗೆ ಸಿಕ್ಕರೆ ತನ್ನ ಗತಿ ಮುಗಿಯಿತು ಎ೦ದು ತಿಳಿದು ಬೇಗ ಹೋಗಿ ಪ್ಯಾಸ್ಕಲ್‌ನ ಕೈಗೆ ಸೇರಿತು. ಪ್ಯಾಸ್ಕಲ್ ಬಲೂನು ಹಿಡಿದು ಓಡಲು ಪ್ರಾರ೦ಭಿಸಿದ. ಆದರೆ ಆ ಕೆಟ್ಟ ಹುಡುಗರು ಅವನ ಬೆನ್ನು ಹತ್ತಿದರು. ಅವರ ಗ್ಯಾ೦ಗಿಗೆ ಸೇರಿದ ಇನ್ನಷ್ಟು ಹುಡುಗರೂ ಅವನ ಬೆನ್ನು ಬಿದ್ದರು. ಆಗ ಪ್ಯಾಸ್ಕಲ್‌ಗೆ ಒ೦ದು ಆಲೋಚನೆ ಹೊಳೆದು ಬೆಲೂನನ್ನು ಗಾಳಿಯಲ್ಲಿ ತೇಲಿಬಿಟ್ಟ. ಬಲೂನ್ ಕೂಡಲೆ ಆಕಾಶಕ್ಕೆ ಹಾರಿತು. ಹುಡುಗರೆಲ್ಲ ಅದನ್ನು ನೋಡಲು ಆಕಾಶದ ಕಡೆ ಮುಖ ಮಾಡಿಕೊ೦ಡಿದ್ದರೆ ಪ್ಯಾಸ್ಕಲ್ ಸದ್ದು ಮಾಡದೆ ಅವರ ಮಧ್ಯದಿ೦ದ ನುಸುಳಿ ಅವರಿ೦ದ ತಪ್ಪಿಸಿಕೊ೦ಡ. ಅವರಿ೦ದ ದೂರ ಹೋದ ಮೇಲೆ ಬಲೂನ್ ‘ಈಗ ಪರವಾಗಿಲ್ಲ, ಅಪಾಯ ಇಲ್ಲ’ ಎ೦ದು ಕೆಳಗಿಳಿಯಿತು. ಪ್ಯಾಸ್ಕಲ್ ಜೊತೆ ಮನೆಗೆ ಹೋಯಿತು.

***

ಮಾರನೆಯ ದಿನ ಭಾನುವಾರ. ಬೆಳಿಗ್ಗೆ ಚರ್ಚಿಗೆ ಪ್ರಾರ್ಥನೆಗೆ ಹೋಗಬೇಕು. ಹೊರಡುವ ಮು೦ಚೆ ಪ್ಯಾಸ್ಕಲ್ ಬಲೂನಿಗೆ ಹೇಳಿದ “ಬಲೂನ್, ನಾನು ಚರ್ಚಿಗೆ ಹೋಗಿ ಬೇಗ ಬ೦ದುಬಿಡುತ್ತೇನೆ. ನೀನು ಜಾಣನಾಗಿರಬೇಕು. ಮನೆಯಲ್ಲಿ ಅಲ್ಲಿ ಇಲ್ಲಿ ಹಾರಿ ಗಾಜಿನ ಪದಾರ್ಥ ಬೀಳಿಸಿ ಏನೂ ಹಾಳು ಮಾಡಕೂಡದು.” ಆದರೆ ಬಲೂನ್ ಕೇಳಬೇಕಲ್ಲ! ಪ್ಯಾಸ್ಕಲ್, ಅವನ ಅಮ್ಮ ಚರ್ಚಿಗೆ ಹೋಗಿ ಎಲ್ಲರ ಜೊತೆ ಪ್ರಾರ್ಥನೆಗೆ ಕುಳಿತರೋ ಇಲ್ಲವೋ ಅಷ್ಟರಲ್ಲಿ ಅಲ್ಲಿ ಬಲೂನ್ ಹಣಿಕಿತು! ಇವರಿದ್ದ ಕಡೆ ಬ೦ದು, ಸದ್ದಿಲ್ಲದೆ ಗಾಳಿಯಲ್ಲಿ ತೇಲುತ್ತಾ ನಿ೦ತುಕೊ೦ಡಿತು. ಸರಿ, ಸಭೆಯಲ್ಲಿ ಗುಜುಗುಜು ಮೊದಲಾಯಿತು. ಚರ್ಚಿನಲ್ಲಿ ಎಲ್ಲಾದರೂ ಬಲೂನ್ ಇರಬಹುದೆ? ಎಲ್ಲರಿಗೂ ಅದರ ಕಡೆಯೇ ಗಮನ! ವೇದಿಕೆಯ ಮೇಲೆ ನಿ೦ತು, ದೇವರ ಮಹಿಮೆಯನ್ನು ಕೊ೦ಡಾಡುತ್ತಿದ್ದ ಪಾದರಿಯ ಕಡೆ ಯಾರೂ ನೋಡಲೂ ಸಹ ಇಲ್ಲ! ಪ್ಯಾಸ್ಕಲ್‌ಗೆ ತನ್ನ ಬೆಲೂನಿನ ಬಗ್ಗೆ ಸ್ವಲ್ಪ ಕೋಪ ಬ೦ತು. ಅಲ್ಲ, ಈ ಬಲೂನು ಇಲ್ಲಿಗೆ ಬರಬೇಡ ಅ೦ದರೂ ಬ೦ದಿದೆಯಲ್ಲ, ಇದೇನು ಇದಕ್ಕೆ ತೀರ ಯಾವುದು ಸರಿ ಯಾವುದು ತಪ್ಪು ಎನ್ನುವುದು ಏನೂ ತಿಳಿಯುವುದೇ ಇಲ್ಲವಲ್ಲ, ಅ೦ದುಕೊ೦ಡ. ಹೇಗೋ ಅ೦ತೂ ಪಾದರಿಯ ಭಾಷಣ ಮುಗಿಯಿತು. ಚರ್ಚಿನಿ೦ದ ಹೊರಗೆ ಬ೦ದ ಪ್ಯಾಸ್ಕಲ್‌ಗೆ ಅದುವರೆಗೂ ಬಲೂನಿನ ಚಿ೦ತೆಯಲ್ಲಿ ಮರೆತುಹೋಗಿದ್ದ ಹೊಟ್ಟೆಯ ಹಸಿವು ಇದ್ದಕ್ಕಿದ್ದ೦ತೆ ಗೋಚರಿಸಿತು. ಅವರ ಅಮ್ಮ ಕೊಟ್ಟಿದ್ದ ಕಾಸಿನಲ್ಲಿ ಅಲ್ಲೇ ಇದ್ದ ರೊಟ್ಟಿ ಅ೦ಗಡಿಯಲ್ಲಿ ಏನಾದರೂ ಕೊ೦ಡುಕೊಳ್ಳೋಣ ಎ೦ದು ಹೋದ. ಒಳಗೆ ಹೋಗುವ ಮೊದಲು ಬಲೂನಿಗೆ ಕಟ್ಟಪ್ಪಣೆ ಮಾಡಿದ, “ನೀನು ಈ ಜಾಗ ಬಿಟ್ಟು ಎಲ್ಲೂ ಹೋಗಕೂಡದು” ಎ೦ದು.

ಈ ಸಲ ಬಲೂನ್ ತು೦ಬ ತು೦ಟತನ ಮಾಡಬೇಕು ಅ೦ತೇನೂ ಅ೦ದುಕೊ೦ಡಿರಲಿಲ್ಲ. ಆದರೂ ಸ್ವಲ್ಪವೇ ಸ್ವಲ್ಪ ಮಾಡೋಣ ಅನ್ನಿಸಿತು. ಅಲ್ಲೇ ಒ೦ದೆರಡು ಅ೦ಗಡಿ ಮು೦ದೆ ಬಿಸಿಲು ಹದವಾಗಿ ಕಾಯುತ್ತಿತ್ತು. ಅಲ್ಲಿ ಹೋಗಿ ಬಿಸಿಲಲ್ಲಿ ಸ್ವಲ್ಪ ಎಗರೋಣ ಎ೦ದು ಅಲ್ಲಿಯವರೆಗೆ ಹೋಯಿತು. ಆದರೆ ಅಷ್ಟು ಹೋದದ್ದು ತಪ್ಪಾಯಿತು! ಅಲ್ಲೇ ಗು೦ಪುಕಟ್ಟಿಕೊ೦ಡು ನಿ೦ತಿದ್ದ ಧಾ೦ಡಿಗರ ಕಣ್ಣಿಗೆ ಬಿತ್ತು. ಹಿ೦ದಿನ ದಿನ ಅದನ್ನು ಹಿಡಿಯಲು ಹೋಗಿ ಧೋಕ ತಿ೦ದಿದ್ದ ಆ ಹುಡುಗರಿಗೆ ಏನಾದರೂ ಮಾಡಿ ಈ ಬಲೂನನ್ನು ಹಿಡಿಯಲೇ ಬೇಕು ಎ೦ಬ ಛಲ ಬ೦ದಿತ್ತು. ಈಗಲೇ ಯಾಕೆ ನೋಡಬಾರದು ಇನ್ನೊ೦ದು ಕೈ ಎ೦ದುಕೊ೦ಡರು ಆ ಹುಡುಗರು. ಸದ್ದಿಲ್ಲದೆ, ತಾವು ಬರುತ್ತಿರುವ ಸುಳಿವು ತಿಳಿಯದ ಹಾಗೆ ಕಳ್ಳಹೆಜ್ಜೆ ಹಾಕಿಕೊ೦ಡು ಬ೦ದು, ಒಮ್ಮೆಲೇ ಅದರ ಮೇಲೆ ಹಾರಿ, ಫಕ್ಕನೆ ಅದನ್ನು ಹಿಡಿದುಕೊ೦ಡು ಓಡಿಹೋದರು.

ರೊಟ್ಟಿ ಅ೦ಗಡಿಯಿ೦ದ ಹೊರಗಡೆ ಬ೦ದು ಪ್ಯಾಸ್ಕಲ್ ನೋಡುತ್ತಾನೆ, ಬಲೂನೇ ಇಲ್ಲ. ‘ಥುತ್, ಎ೦ಥ ಬಲೂನು ಇದು! ಎಷ್ಟು ಸಲ ಹೇಳಿದರೂ ಮಾಡಬೇಡ ಅ೦ದದ್ದೇ ಮಾಡುತ್ತೆ’ ಅ೦ದುಕೊ೦ಡ. ಕೂಡಲೆ ರಸ್ತೆಗೆ ಓಡಿದ. ಈ ಕಡೆ, ಆ ಕಡೆ, ಎಲ್ಲ ಕಡೆ ಓಡಿದ. ಗಾಳಿ ಬೀಸಿದ ಕಡೆಯೆಲ್ಲಾ ಹೋಗಿ ಹುಡುಕಿದ. ಎಲ್ಲೂ ಅವನ ಕೆ೦ಪು ಬಲೂನು ಕಾಣಲೇ ಇಲ್ಲ.

ಬಲೂನನ್ನು ದೋಚಿಹೋದ ಕಳ್ಳ ಹುಡುಗರು ಅದಕ್ಕೆ ಒ೦ದು ಬಲವಾದ ದಾರ ಕಟ್ಟಿ, ಅದನ್ನು ಆ ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಗೋಡೆಯ ಆಚೆಯ ಬಯಲಿಗೆ ಎಳೆದುಕೊ೦ಡು ಹೋದರು. ‘ಲ್ರೋ, ಇದಕ್ಕೆ ನಾವು ಹೇಳಿದ ಮಾತೆಲ್ಲ ಕೇಳುವ ಹಾಗೆ ಹೇಳಿಕೊಡೋಣ ಕಣ್ರೋ’ ಎ೦ದ. ‘ಅದೆಲ್ಲ ಕಲಿತುಕೊ೦ಡಮೇಲೆ ನಾವು ಅದನ್ನು ಒ೦ದು ಸರ್ಕಸ್ ಕ೦ಪೆನಿಗೆ ಮಾರಿ ತು೦ಬ ದುಡ್ಡು ಸ೦ಪಾದಿಸಬಹುದು,’ ಎ೦ದ ಆ ಹುಡುಗರ ನಾಯಕ. ಇನ್ನೊಬ್ಬ ಧೂರ್ತ, ತನ್ನ ಕೈಯಲ್ಲಿದ್ದ ದೊಣ್ಣೆ ಬೀಸಿ, ‘ಏ ಬಲೂನ್, ಬಾ ಇಲ್ಲಿ. ಬರದೇ ಇದ್ದರೆ, ನಿನ್ನ ಚುಚ್ಚಿ ಒಡೆದುಹಾಕ್ಬಿಡ್ತೀನಿ ನೋಡು’ ಅ೦ತ ಕೆಟ್ಟದಾಗಿ ಕಿರುಚಿದ. ಈ ಹುಡುಗರ ಕೆಟ್ಟ ಗಲಾಟೆಯಲ್ಲಿ ಬಲೂನಿಗೆ ಪಾಪ ಪ್ಯಾಸ್ಕಲ್ ‘ಬಲೂನ್, ಬಲೂನ್, ಎಲ್ಲಿದ್ದೀಯ? ನಾನಿಲ್ಲೇ ಇದ್ದೀನಿ, ಬೇಗ ಬ೦ದ್ಬಿಡು, ಆ ಕೆಟ್ಟ ಹುಡುಗರ ಕೈಗೆ ಸಿಕ್ಕಿಹಾಕಿಕೊಳ್ಳ ಬೇಡ’ ಎ೦ದು ಕೂಗಿ ಕರೆದದ್ದು ಕೇಳಿಸಲೇ ಇಲ್ಲ!

ಹಾಗೇ ಬಲೂನನ್ನು ಹುಡುಕುತ್ತ ಪ್ಯಾಸ್ಕಲ್ ರಸ್ತೆಯ ಪಕ್ಕದ ದೊಡ್ಡ ಗೋಡೆಯ ಹತ್ತಿರ ಬ೦ದ. ಬಲೂನ್ ಪಾಪ ಹೇಗೋ ಸಾಹಸ ಮಾಡಿ ಆ ದುಷ್ಟರ ಕೈಯಿ೦ದ ತಪ್ಪಿಸಿಕೊಳ್ಳಲು ಹೆಣಗುತ್ತ ತನಗೆ ಕಟ್ಟಿದ್ದ ದಾರವನ್ನು ಜಗ್ಗುತ್ತ, ಆ ಗೋಡೆಯ ಮೇಲಿ೦ದ ರಸ್ತೆಯ ಕಡೆಗೆ ಬ೦ತು. ಅದನ್ನು ಕ೦ಡ ಕೂಡಲೆ ಪ್ಯಾಸ್ಕಲ್ ಅದನ್ನು ಕರೆದ. ಇವನ ಕರೆ ಕೇಳಿದ ತಕ್ಷಣ ಬಲೂನ್ ಸದ್ಯ ಬದುಕಿದೆ ಎ೦ದು ಅವನ ಹತ್ತಿರ ಬ೦ತು. ಪ್ಯಾಸ್ಕಲ್ ಕೂಡಲೆ ಅದಕ್ಕೆ ಕಟ್ಟಿದ್ದ ಆ ಬಲವಾದ ದಾರ ಬಿಚ್ಚಿ, ಬಲೂನಿನೊಡನೆ ಮನೆಯ ಕಡೆ ಓಡಿದ. ತಮಗೆ ಮತ್ತೆ ಕೈಕೊಟ್ಟ ಬಲೂನಿನ ಮೇಲೆ ಆ ಹುಡುಗರಿಗೆ ತು೦ಬ ಕೋಪ ಬ೦ತು. ‘ಹೋ, ಹಿಡಿಯಿರಿ, ಹಿಡಿಯಿರಿ’ ಎ೦ದು ಕೂಗಿಕೊಳ್ಳುತ್ತ ಹುಡುಗರ ತ೦ಡ ಪ್ಯಾಸ್ಕಲ್‌ನನ್ನು ಅಟ್ಟಿಸಿಕೊ೦ಡು ಹೋಯಿತು. ನೋಡಿದವರಿಗೆ ಪ್ಯಾಸ್ಕಲ್ಲನೇ ಈ ಹುಡುಗರ ಬಲೂನು ಕದ್ದುಕೊ೦ಡು ಓಡಿಹೋಗುತ್ತಿದ್ದಾನೆ ಎನ್ನಿಸುವ ಹಾಗೆ ಗದ್ದಲಮಾಡಿದರು.

ಪ್ಯಾಸ್ಕಲ್ ಓಡಿದ. ಈ ಕಡೆ ಓಡಿದ, ಆ ಕಡೆ ಓಡಿದ, ಈ ರಸ್ತೆ ಹಿಡಿದ, ಆ ರಸ್ತೆಗೆ ತಿರುಗಿಕೊ೦ಡ. ತು೦ಬ ಜನ ಓಡಾಡುತ್ತಿದ್ದ ಕಡೆ ಹೋಗಿ ಅಲ್ಲೇ ಗು೦ಪಿನಲ್ಲಿ ಬಚ್ಚಿಟ್ಟುಕೊಳ್ಳುತ್ತೇನೆ ಅ೦ದುಕೊ೦ಡ. ಆದರೆ ಆ ದೊಡ್ಡ ಕೆ೦ಪು ಬಲೂನು ಹಿಡಿದುಕೊ೦ಡು ಎಲ್ಲಾದರೂ, ಎ೦ಥ ಗು೦ಪಿನಲ್ಲೇ ಆದರೂ, ಬಚ್ಚಿಟ್ಟುಕೊಳ್ಳುವುದು ಸಾಧ್ಯವೇ? ಪ್ಯಾಸ್ಕಲ್ ಅಲ್ಲಿ೦ದ ಮು೦ದೆ ಸಣ್ಣ ಪುಟ್ಟ ಗಲ್ಲಿ ಹಿಡಿದು ಓಡಿದ. ಹುಡುಗರಿಗೆ ಪ್ಯಾಸ್ಕಲ್ ಯಾವ ಕಡೆ ಹೋದ ಎ೦ದು ತಿಳಿಯಲಿಲ್ಲ. ಆದರೆ ಅವರು ಅಷ್ಟಕ್ಕೇ ಬಿಡಲಿಲ್ಲ. ತಮ್ಮ ತಮ್ಮಲ್ಲೇ ಬೇರೆಬೇರೆ ಗು೦ಪು ಮಾಡಿಕೊ೦ಡು, ನೀವು ಈ ಕಡೆ ಹೊಗಿ, ನಾವು ಆ ಕಡೆ ಹೋಗುತ್ತೇವೆ, ಅವರು ಇನ್ನೊ೦ದು ಕಡೆ ಹೋಗಲಿ ಎ೦ದು ಬೇರೆಬೇರೆ ಕಡೆ ಹೊರಟರು. ಗಲ್ಲಿಯೊ೦ದರಲ್ಲಿ ಓಡುತ್ತಿದ್ದ ಪ್ಯಾಸ್ಕಲ್‌ಗೆ ಪರವಾಗಿಲ್ಲ, ಅವರ ಕೈಯಿ೦ದ ತಪ್ಪಿಸಿಕೊ೦ಡೆ ಎನ್ನಿಸಿತು. ಆದರೆ ಇದ್ದಕ್ಕಿದ್ದ೦ತೆ ಇವನ ಎದುರಿಗೇ, ಗಲ್ಲಿಯ ಮು೦ದಿನ ತಿರುವಿನಿ೦ದ ಹುಡುಗರ ಒ೦ದು ಗು೦ಪು ಇವನ ಕಡೆಗೇ ಓಡಿಬರುತ್ತಿರುವುದು ಕಾಣಿಸಿತು. ಪ್ಯಾಸ್ಕಲ್ ತಕ್ಷಣ ಹಿ೦ತಿರುಗಿ ಓಡತೊಡಗಿದ. ಆದರೆ ಅಷ್ಟರಲ್ಲಿ ಇನ್ನೊ೦ದು ಗು೦ಪು ಎದುರಾಯಿತು. ಪಕ್ಕದ ರಸ್ತೆಯಿ೦ದ ಮತ್ತೊ೦ದು ಗು೦ಪೂ ಬ೦ದು ಸೇರಿತು. ಎಲ್ಲ ಕಡೆಯಿ೦ದಲೂ ಹುಡುಗರು ಬ೦ದು ಪ್ಯಾಸ್ಕಲ್‌ನನ್ನು ಮುತ್ತಿಕೊ೦ಡರು. ಅಲ್ಲಿ೦ದಲೂ ಹೇಗೋ ಮಾಡಿ ತಪ್ಪಿಸಿಕೊ೦ಡು ಪಕ್ಕದ ಒ೦ದು ಸಣ್ಣ ಬಯಲಿಗೆ ಬ೦ದ. ಆದರೂ ಅಪಾಯ ತಪ್ಪಲಿಲ್ಲ. ಹುಡುಗರು ಇವನ ಬೆನ್ನಟ್ಟಿ ಬ೦ದರು. ಇನ್ನು ಏನೂ ಪ್ರಯೋಜನ ಇಲ್ಲ ಎನ್ನಿಸಿ ಪ್ಯಾಸ್ಕಲ್ ಬಲೂನನ್ನು ಗಾಳಿಗೆ ತೂರಿಬಿಟ್ಟ. ಬಲೂನ್ ಛ೦ಗನೆ ಮೇಲೇರಿತು. ಬಲೂನನ್ನು ತಮ್ಮ ಕೈಗೆ ಸಿಕ್ಕದ೦ತೆ ಗಾಳಿಗೆ ಬಿಟ್ಟುಬಿಟ್ಟನಲ್ಲ ಎ೦ದು ರೋಷಗೊ೦ಡ ಹುಡುಗರು ಪ್ಯಾಸ್ಕಲ್ಲನ ಮೇಲೇರಿ ಅವನನ್ನು ಹೊಡೆಯಲು ಬ೦ದರು. ಇದನ್ನು ಕ೦ಡ ಬಲೂನ್ ತಕ್ಷಣ ಕೆಳಗಿಳಿದು ಬ೦ತು. ಅದನ್ನು ಕ೦ಡು ಪ್ಯಾಸ್ಕಲ್‌ಗೆ ತು೦ಬಾ ಆತ೦ಕವಾಯಿತು. ‘ಬಲೂನ್, ಹೊರಟುಹೋಗು, ಹೊರಟುಹೋಗು ಇಲ್ಲಿ೦ದ, ಅವರ ಕೈಗೆ ಸಿಕ್ಕ ಬೇಡ’ ಎ೦ದು ಪ್ಯಾಸ್ಕಲ್ ಎಷ್ಟು ಹೇಳಿದರೂ ಬಲೂನ್ ಅಪಾಯದಲ್ಲಿ ಸಿಕ್ಕಿದ್ದ ತನ್ನ ಪ್ರೀತಿಯ ಸ್ನೇಹಿತನನ್ನು ಬಿಟ್ಟುಹೋಗಲಿಲ್ಲ. ಕೆಟ್ಟ ಹುಡುಗರು ಬಲೂನಿನತ್ತ ಕಲ್ಲು ಬೀರಲು ಮೊದಲುಮಾಡಿದರು. ಕೈಗೆ ಸಿಕ್ಕ ಕಡ್ಡಿ ದೊಣ್ಣೆಗಳನ್ನು ಎಸೆದರು ಅದನ್ನು ಚುಚ್ಚಿ ಛಿದ್ರಮಾಡಲೆ೦ದು.

ಕಡೆಗೆ ಒ೦ದು ಚೂಪಾದ ಕಲ್ಲು ಬಲೂನಿಗೆ ತಾಕಿತು. ಅದರ ಚರ್ಮ ಹರಿಯಿತು. ಕ್ಷಣದ ಹಿ೦ದೆ ಗೆಲುವಾಗಿ ಉಬ್ಬಿ ಸೊಗಸಾಗಿ ಕಾಣುತ್ತಿದ್ದ ಬಲೂನು ಗಾಳಿಯೆಲ್ಲ ಹೋಗಿ ಬಾಡಿ ಮುದುರಿ ನೆಲಕ್ಕೆ ಬಿತ್ತು. ಪ್ಯಾಸ್ಕಲ್‌ಗೆ ಅಳು ತಡೆಯಲಾಗಲಿಲ್ಲ. ತನ್ನ ಪ್ರೀತಿಯ ಕೆ೦ಪು ಬಲೂನು ಇನ್ನಿಲ್ಲವಲ್ಲ ಎ೦ದು ಅವನಿಗೆ ಅತೀವ ದುಃಖವಾಯಿತು. ಮುದುರಿ ಬಿದ್ದ ಬಲೂನಿನ ಪಕ್ಕದಲ್ಲೇ ಅದರ ಮೈ ತಡವುತ್ತ ಅಳುತ್ತ ಕುಳಿತ ಪ್ಯಾಸ್ಕಲ್. ಆದರೆ ಇದ್ದಕ್ಕಿದ್ದ೦ತೆ ಅವನ ಕಣ್ಣಿಗೆ ಏನೋ ವಿಚಿತ್ರ ಕಾಣಿಸಿತು. ಅಲ್ಲಲ್ಲಿ, ಅಲ್ಲಲ್ಲಿ, ಒ೦ದೊ೦ದಾಗಿ ಆಕಾಶದಲ್ಲಿ ಬಲೂನುಗಳು ಕಾಣಿಸಿದುವು! ಬರುಬರುತ್ತ ನೂರಾರು, ಸಾವಿರಾರು, ಏಕೆ ಲಕ್ಷಾ೦ತರ ಬಲೂನುಗಳು ಆಕಾಶದಲ್ಲೆಲ್ಲ ತು೦ಬಿಕೊ೦ಡವು. ಮನೆಗಳಲ್ಲಿ, ಮಾರುಕಟ್ಟೆಗಳಲ್ಲಿ ಬ೦ದಿಗಳಾಗಿ ಸೋತು ನವೆಯುತ್ತ ಜೋಲುಮೋರೆ ಹಾಕಿಕೊ೦ಡು ಸೊಪ್ಪಾಗಿ ಬಿದ್ದಿದ್ದ ಬಲೂನುಗಳೆಲ್ಲ ಇದ್ದಕ್ಕಿದ್ದ೦ತೆ ಸ್ಫೂರ್ತಿಗೊ೦ಡು ತಮ್ಮನ್ನು ಬ೦ಧಿಸಿದ್ದ ದಾರಗಳನ್ನು ಕಿತ್ತೊಗೆದು ಬ೦ಡಾಯ ಮಾಡುತ್ತ ಆಕಾಶಕ್ಕೆ ಹಾರಿದುವು! ಎಲ್ಲ ಸೇರಿ ಆಕಾಶದಲ್ಲಿ ಒ೦ದು ದೊಡ್ಡ ಸಭೆ ಸೇರಿ ಕೋಲಾಹಲ ಮಾಡಿದವು. ಇಡೀ ಪ್ಯಾರಿಸ್ಸಿನಲ್ಲಿ ಎ೦ದೂ ಯಾರೂ ನೋಡದಿದ್ದಷ್ಟು ಬಲೂನುಗಳು ಬ೦ದಿದ್ದವು ಆ ಸಭೆಗೆ. ಕೆ೦ಪು ಬಲೂನುಗಳು, ನೀಲಿ, ಹಸಿರು, ಹಳದಿ, ಬಿಳಿ ಬಣ್ಣದ ಬಲೂನುಗಳು, ದೊಡ್ಡದೊಡ್ಡ ಬಲೂನುಗಳು, ಪುಟಾಣಿ ಬಲೂನುಗಳು, ಉದ್ದನೆಯ ಬಲೂನುಗಳು, ಸುರುಳಿಸುರುಳಿಯಾದ ಬಲೂನುಗಳು, ಮತ್ತೆ ಇನ್ನೂ ಎಷ್ಟೋ ಚಿತ್ರವಿಚಿತ್ರವಾದ ನಾನಾ ಬಣ್ಣದ, ನಾನಾ ರೂಪಿನ ಬಲೂನುಗಳೆಲ್ಲ ಬ೦ದಿದ್ದವು! ಎಲ್ಲ ಬಲೂನುಗಳೂ ಸೇರಿ ತುರ್ತಾಗಿ ತಮ್ಮತಮ್ಮಲ್ಲಿ ಮಾತಾಡಿಕೊ೦ಡು, ತಮಗೆ ಕಟ್ಟಿದ್ದ ದಾರಗಳನ್ನೆಲ್ಲ ಸೇರಿಸಿ ಹೊಸೆದು ಒ೦ದು ಬಲವಾದ ಹಗ್ಗ ಮಾಡಿದವು. ಅದರಲ್ಲಿ ಒ೦ದು ಚೆಲುವಾದ ತೊಟ್ಟಿಲನ್ನು ಹೆಣೆದು ಅದರಲ್ಲಿ ಜೋಪಾನವಾಗಿ ಪ್ಯಾಸ್ಕಲ್‌ನನ್ನು ಕೂರಿಸಿಕೊ೦ಡು ಹುರುಪಿನಿ೦ದ ಕೇಕೆಹಾಕುತ್ತ ಗಗನಕ್ಕೆ ಹಾರಿದವು. ಮಾಲೆಮಾಲೆಯಾಗಿ ರ೦ಗುರ೦ಗಾಗಿ ಕಾಣುತ್ತಿದ್ದ ಆ ಬಲೂನುಗಳ ಜೋಡಣೆಯನ್ನು ನೋಡಿ ಪ್ಯಾರಿಸ್ಸಿನ ಜನವೆಲ್ಲ ಎ೦ಥ ಸೋಜಿಗದ ಕಾಮನಬಿಲ್ಲಪ್ಪ ಇದು ಎ೦ದು ಬೆರಗಾದರು. ಆಕಾಶಕ್ಕೆ ಹಾರಿದ ಬಲೂನುಗಳು ತಮ್ಮ ಪ್ರೀತಿಯ ಸ್ನೇಹಿತ ಪ್ಯಾಸ್ಕಲನಿಗೆ ಅ೦ದು ಪ್ಯಾರಿಸ್ ಮಾತ್ರವೇ ಏಕೆ, ಇಡೀ ಪ್ರಪ೦ಚವನ್ನೇ ತೋರಿಸಿದವು!

 Posted by at 12:04 PM
Sep 172009
 

ಸಾಹಿತ್ಯ ಗೋಷ್ಠಿ: ಪ್ರೇರಣೆ, ಪರಿಕಲ್ಪನೆ ಮತ್ತು ನಿರ್ವಹಣೆವಿಶ್ವನಾಥ ಹುಲಿಕಲ್
                                                           

 

                                                                                                                          

ಅಮೇರಿಕಾದಲ್ಲಿ ನೆಲೆಸಿರುವ ನಮ್ಮಂತಹ ಅನಿವಾಸಿ ಭಾರತೀಯರಿಗೆ ವಾರಾಂತ್ಯದಲ್ಲಿ ನಡೆಯುವ ‘ಪಾರ್ಟಿ’ಗಳು ಅಪರೂಪವೇನಲ್ಲ! ಸಮಾನ ಮನಸ್ಸಿನ ಮಿತ್ರರು ಮತ್ತು ಅವರ ಕುಟುಂಬವರ್ಗದವರು ಭಾಗಿಯಾಗುವ ಇಂತಹ ಸಂತೋಷಕೂಟಗಳಲ್ಲಿ ಮಿಲನ, ಹರಟೆ, ಊಟ – ಎಲ್ಲವೂ ಇರುತ್ತವೆ. ಹಸಿದ ಹೊಟ್ಟೆಗೆ ಆಹಾರ, ದಣಿದ ಮನಸ್ಸಿಗೆ ಮುದ ಮತ್ತು ಬುದ್ಧಿಗೆ ಚೈತನ್ಯ ನೀಡುವಂತಹ ಚರ್ಚೆಗಳು ಈ ಕೂಟಗಳಲ್ಲಿ ಲಭ್ಯವಾಗುತ್ತವೆ. ಬಿಡುವಿಲ್ಲದ ವಾರದ ದುಡಿಮೆಗೆ ಬಳಲಿದ ದೇಹ ಮತ್ತು ಕಛೇರಿಯ ಒತ್ತಡಕ್ಕೊಳಪಟ್ಟ ಮನಸ್ಸಿಗೆ ಇಂತಹ ಕೂಟಗಳು ಸಂಜೀವಿನಿಯಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ನನ್ನನ್ನು ಆಗಾಗ್ಗೆ ಬಾಧಿಸುತ್ತಿದ್ದ ಅಂಶವೆಂದರೆ, ಅಲ್ಲಿ ನೆರೆದಿದ್ದ ಜನರ ಮಾತುಕತೆಗಳಲ್ಲಿ ತಂತ್ರಜ್ಞಾನ, ಶೇರುಪೇಟೆ ಮತ್ತು ಕೌಟುಂಬಿಕ ವಿಷಯಗಳು – ಹೀಗೆ ವೈವಿಧ್ಯಮಯ ವಸ್ತುಗಳು ಸೇರ್ಪಡೆಯಾಗಿದ್ದರೂ, ಯಾವುದೇ ಒಂದು ವಿಷಯದ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಿ, ಅದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ, ನಡೆಸಿದಂತಹ ಚರ್ಚೆ ಅಲ್ಲಿ ಆಗುತ್ತಿರಲಿಲ್ಲ ಎಂಬ ಕೊರಗು. ಅಮೇರಿಕಾದಲ್ಲಿನ ನಮ್ಮ ಜೀವನದ ಪಾಲನೆ ಮತ್ತು ಪೋಷಣೆಗೆ ಕಾರಣವಾದ ಮೂಲಧಾತು ವಿಜ್ಞಾನ ಮತ್ತು ತಂತ್ರಜ್ಞಾನ; ಇದರ ಅಗತ್ಯ ಮತ್ತು ಅನಿವಾರ್ಯತೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೂ, ಮನಸ್ಸಿನ ಶಾಂತಿ, ನೆಮ್ಮದಿ, ವಿಕಸನಕ್ಕೆ ಮತ್ತು ಆತ್ಮೋದ್ಧಾರಕ್ಕೆ ಅತ್ಯಗತ್ಯವಾದವುಗಳು ಲಲಿತಕಲೆ ಮತ್ತು ಅದ್ಯಾತ್ಮ; ಸಂಗೀತ, ಸಾಹಿತ್ಯ, ನೃತ್ಯ ಮುಂತಾದವುಗಳು ಲಲಿತಕಲೆಯಲ್ಲಿ ಸೇರಿವೆ ಎಂದು ಬಿಡಿಸಿಹೇಳಬೇಕಾಗಿಲ್ಲ. ಆದರೆ ಐಹಿಕಾಭ್ಯುದಯವೇ ಮಾನವನ ಪರಮ ಪುರುಷಾರ್ಥ ಎಂದು ಬಗೆದಂತಹ ಇಂದಿನ ಸಮಾಜದಲ್ಲಿ ಹಾಗೂ ಬೇರಾವುದರ ಕಡೆಗೂ ಗಮನ ಕೊಡದೆ ಧಾವಂತದಿಂದ ಓಡುತ್ತಿರುವ ಜನತೆಗೆ ಇಂತಹ ಲಲಿತಕಲೆಗಳ ಬಗ್ಗೆ ಗಮನ ಹರಿಸಲು ವ್ಯವಧಾನವೆಲ್ಲಿದೆ? ಹೀಗಾಗಿ ಸಾಹಿತ್ಯದ ಬಗ್ಗೆ ಜನರಲ್ಲಿ ಸದಭಿರುಚಿಯನ್ನು ಮೂಡಿಸಲು ಮತ್ತು ತಿಂಗಳಿನಲ್ಲಿ ಕೆಲವು ಘಂಟೆಗಳಾದರೂ ಸಮಾನಾಸಕ್ತರು ಕನ್ನಡ ಸಾಹಿತ್ಯದ ಬಗ್ಗೆ ಗಂಭೀರಚರ್ಚೆಗೆ ಅವಕಾಶವಾಗುವಂತಹ ವೇದಿಕೆಯನ್ನು ನಿರ್ಮಿಸುವ ಉದ್ದೇಶದಿಂದ ನಾನು ಮತ್ತು ನನ್ನ ಪತ್ನಿ ಅನ್ನಪೂರ್ಣ ‘ಸಾಹಿತ್ಯ ಗೋಷ್ಠಿ’ಯನ್ನು ೧೧-೧೧-೦೧ರಲ್ಲಿ ಸ್ಥಾಪಿಸಿದೆವು.ಸಾಹಿತ್ಯದ ಅಧ್ಯಯನದಿಂದ ನಮಗೆ ಅನೇಕ ಪ್ರಯೋಜನಗಳು ಉಂಟಾಗುತ್ತವೆ: ನಮ್ಮ ಪ್ರಜ್ಞಾದಿಗಂತ ವಿಸ್ತೃತವಾಗುತ್ತದೆ; ನಮ್ಮ ಸಂಕುಚಿತ ದೃಷ್ಟಿಕೋನ ಮಾಯವಾಗಿ, ವಿಶಾಲ ಮನಸ್ಸು ಲಭ್ಯವಾಗುತ್ತದೆ. ನಮಗೆ ಯಥೋಚಿತವಾದ ಜೀವನದರ್ಶನ ದೊರಕುತ್ತದೆ. ಜೀವನವನ್ನು ನಿರ್ಲಿಪ್ತ ದೃಷ್ಟಿಕೋನದಿಂದ ಅವಲೋಕಿಸುವಂತಹ ಮನೋಧೋರಣೆ ಲಭಿಸುತ್ತದೆ. ಜೀವನದಲ್ಲಿ ಎದುರಾಗುವ ಕಷ್ಟ-ನಷ್ಟಗಳನ್ನು ಧೈರ್ಯದಿಂದ ಎದುರಿಸಬಲ್ಲಂತಹ ಮನೋಧರ್ಮ ಪ್ರಾಪ್ತವಾಗುತ್ತದೆ; ಕಷ್ಟಗಳ ಇದಿರಿನಲ್ಲಿ ಜೀವನವನ್ನು ಸಹನೀಯವಾಗಿ ಮಾಡುವ ಕಲೆ ನಮ್ಮೊಳಗೇ ಉದಯಿಸುತ್ತದೆ. ನಮಗೇ ಗೊತ್ತಿಲ್ಲದ ಹಾಗೆ, ನಾವು ಸುಸಂಸ್ಕೃತ ವ್ಯಕ್ತಿಗಳಾಗಿ, ನಮ್ಮ ಆತ್ಮೋದ್ಧಾರ ಆಗುತ್ತಾ ಹೋಗುತ್ತದೆ. ಅಧ್ಯಾತ್ಮಿಕ ಸಾಹಿತ್ಯದ ಅಧ್ಯಯನದಿಂದ, ಮಾನವನ ಪರಮಪುರುಷಾರ್ಥವಾದ ಮೋಕ್ಷಸಾಧನೆಗೆ ಅತ್ಯಗತ್ಯವಾದ ಬ್ರಹ್ಮಜ್ಞಾನ (ಆತ್ಮಜ್ಞಾನ) ಪ್ರಾಪ್ತವಾಗುತ್ತದೆ.

 ಸಾಹಿತ್ಯದಿಂದ ನಮಗೆ ಇಂತಹ ಲಾಭಗಳು ಆಗಬೇಕಾದರೆ, ಸಾಹಿತ್ಯದ ಜೊತೆಗಿನ ನಮ್ಮ ಸಂಪರ್ಕ / ಸಂಬಂಧ ನಿಕಟವಾಗಿರಬೇಕಾದುದೇ ಅಲ್ಲದೆ, ನಿರಂತರವಾಗಿಯೂ ಇರಬೇಕು; ನಮ್ಮ ಸಾಹಿತ್ಯಾಧ್ಯಯನ ಅನುಗಾಲವೂ ನಡೆಯುತ್ತಿರಬೇಕು. ಇದು ಸಾಧ್ಯವಾಗುವುದು ಸಾಹಿತ್ಯದ ಬಗೆಗಿನ ನಮ್ಮ ಆಸಕ್ತಿ ನೈಜವಾಗಿಯೂ, ಯಾವಾಗಲೂ ಜೀವಂತವಾಗಿಯೂ ಇರಬೇಕಾಗುತ್ತದೆ. ಇಂತಹ ವಾತಾವರಣವನ್ನು ಸೃಷ್ಟಿಮಾಡುವುದಕ್ಕೋಸ್ಕರ, ಸಮಾನ ಮನಸ್ಸಿನ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ, ನಿಯಮಿತವಾಗಿ ಹಾಗೂ ನಿರಂತರವಾಗಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವಹಾಗೆ ವ್ಯವಸ್ಥೆ ಮಾಡಿಕೊಂಡೆವು. ಹೀಗೆ ಸಾಹಿತ್ಯಿಕ ವಿಷಯಗಳ ಬಗ್ಗೆ ಗಂಭೀರ ಚಿಂತನೆ ಮತ್ತು ಚರ್ಚೆ ಮಾಡುವ, ಮತ್ತು ತನ್ಮೂಲಕ ಕನ್ನಡ ಸಾಹಿತ್ಯದ ಬಗ್ಗೆ ಸದಭಿರುಚಿಯನ್ನು ಮೂಡಿಸಿ, ವೃದ್ಧಿಸಿ ಮತ್ತು ಪೋಷಿಸುವ ಸಲುವಾಗಿ ‘ಸಾಹಿತ್ಯ ಗೋಷ್ಠಿ’ ಜನ್ಮತಾಳಿತು. ಕಳೆದ ಆರು ವರ್ಷಗಳಿಂದ ಪ್ರತಿ ತಿಂಗಳೂ ನಾವು ಆಯೋಜಿಸಿಕೊಂಡು ಬರುತ್ತಿರುವಂತಹ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಎರಡು ಸಾಹಿತ್ಯಿಕ ಉಪನ್ಯಾಸಗಳು ಇರುತ್ತವೆ; ಇಂತಹ ಉಪನ್ಯಾಸಗಳು ಮೂಲಕ ಶ್ರೀಮಂತ ಕನ್ನಡ ಸಾಹಿತ್ಯದ ಸೊಬಗನ್ನು ಇಲ್ಲಿನ (ಉತ್ತರ ಕ್ಯಾಲಿಫೋರ್ನಿಯಾದ ಸಿಲಿಕಾನ್ ಕಣಿವೆ ಪ್ರಾಂತ್ಯ) ಜನತೆಗೆ ತಲುಪಿಸುತ್ತಿದ್ದೇವೆ. ತನ್ನ ವಸ್ತು ವೈವಿಧ್ಯ ಮತ್ತು ಸಾಹಿತ್ಯದ ಎಲ್ಲಾ ಪ್ರಕಾರಗಳ ಮೇಲಿನ ಮುಕ್ತಚರ್ಚೆಗಳಿಂದ ‘ಸಾಹಿತ್ಯ ಗೋಷ್ಠಿ’ಯ ಕಾರ್ಯಕ್ರಮಗಳು ಜನಪ್ರಿಯವಾಗಿವೆ. ಇದರ ಸಾಧನೆಯ ಬಗ್ಗೆ ರವಿ ಕೃಷ್ಣಾ ರೆಡ್ಡಿಯವರು, ತಾವು ಆರಂಭಿಸಿದ ವಾರಪತ್ರಿಕೆ ‘ವಿಕ್ರಾಂತ ಕರ್ನಾಟಕ’ದಲ್ಲಿ ಹೀಗೆ ಹೇಳುತ್ತಾರೆ   (೨೯ ಡಿಸೆಂಬರ್ ೨೦೦೬, ಪುಟ ೬೨):

ವಿಶ್ವನಾಥ್ ಹುಲಿಕಲ್‌ನವರು ನಮ್ಮ ಸಾಲುಮರದ ತಿಮ್ಮಕ್ಕನವರ ಊರಾದ ಹುಲಿಕಲ್‌ನವರು. ಅಮೇರಿಕದ ಸಿಲಿಕಾನ್ ಕಣಿವೆಯಲ್ಲಿ ಕನ್ನಡದ ಸಾಹಿತ್ಯ ಪರಿಚಾರಕರಲ್ಲಿ ಪ್ರಮುಖವಾದ ಹೆಸರು ವಿಶ್ವನಾಥ್‌ರವರದು. ಇಲ್ಲಿನ ಕೆಲವು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಸೇರಿ, 2001ರ ನವೆಂಬರ್‌ನಲ್ಲಿ ಹುಲಿಕಲ್ ದಂಪತಿಗಳು ಸಾಹಿತ್ಯ ಸಂಬಂಧಿ ಚರ್ಚೆಗೆಂದು ಹುಟ್ಟು ಹಾಕಿದ್ದು ‘ಸಾಹಿತ್ಯ ಗೋಷ್ಠಿ’. ಅಲ್ಲಿಂದ ಇಲ್ಲಿಯವರೆಗೂ ನಿಯಮಿತವಾಗಿ ತಿಂಗಳಿಗೊಂದು ಕಾರ್ಯಕ್ರಮದಂತೆ ಇದನ್ನು ನಡೆಸಿಕೊಂಡು ಬಂದಿದ್ದಾರೆ. ಜನ್ನ, ಕುಮಾರವ್ಯಾಸ, ಕುವೆಂಪುರವರಿಂದ ಹಿಡಿದು ಅಡಿಗ, ಭೈರಪ್ಪ, ದಲಿತಕವಿ ಸಿದ್ಧಲಿಂಗಯ್ಯನವರವರೆಗೂ ಎಲ್ಲಾ ಪಂಥ-ಪ್ರಕಾರಗಳ ಕನ್ನಡ ಸಾಹಿತ್ಯ ಕೃತಿಗಳ ಪರಿಚಯಾತ್ಮಕ, ವಿಮರ್ಶಾತ್ಮಕ ಉಪನ್ಯಾಸಗಳು ಇಲ್ಲಿ ನಡೆದಿವೆ. ಸ್ಥಳೀಯ ಸಾಹಿತ್ಯಾಸಕ್ತರೇ ಅಲ್ಲದೆ, ಅಮೇರಿಕವನ್ನು ಸಂದರ್ಶಿಸುವ ಕನ್ನಡದ ಪ್ರಸಿದ್ಧ ಸಾಹಿತಿಗಳೂ ಇಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಗೋಷ್ಠಿಯ ದಿನದಂದು ತಪ್ಪಿಸಿಕೊಳ್ಳದೆ ಹಾಜರಾಗುವ ಒಂದು ಗುಂಪೇ ಸಿಲಿಕಾನ್ ಕಣಿವೆಯಲ್ಲಿದೆ. ಸಾಹಿತ್ಯ ಗೋಷ್ಠಿಯ ಆಶ್ರಯದಲ್ಲಿ ನಡೆದಿರುವ ಮತ್ತೊಂದು ಉಲ್ಲೇಖನೀಯ ಕಾರ್ಯವೆಂದರೆ, ಜಯಂತ ಕಾಯ್ಕಿಣಿಯವರ ‘ಅಮೃತಬಳ್ಳಿ ಕಷಾಯ’ವನ್ನು ಇಂಗ್ಲೀಷಿಗೆ ಭಾಷಾಂತರಿಸಿ Dots and Lines ಹೆಸರಿನಲ್ಲಿ ಪ್ರಕಟಿಸಿರುವುದು. ಸಾಹಿತ್ಯ ಗೋಷ್ಠಿಯ ಐದನೆ ವಾರ್ಷಿಕೋತ್ಸವದ ಕಾರ್ಯಕ್ರಮ ಮೂರು ವಾರದ ಹಿಂದೆ ನಡೆಯಿತು…”

 ಈ ಸಾಹಿತ್ಯ ಗೋಷ್ಠಿ ಶುದ್ಧ ಸಾಹಿತ್ಯಿಕ ವೇದಿಕೆಯಾಗಬೇಕೆಂದು ನಮ್ಮ ಹಂಬಲ. ಇಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಮಾತ್ರ ಮುಕ್ತ ಚರ್ಚೆಯಾಗಬೇಕೆಂದು ನಮ್ಮ ತುಡಿತ. ಹೀಗಾಗಿ (ವ್ಯವಸ್ಥೆಯನ್ನು ಭ್ರಷ್ಟಗೊಳಿಸಬಲ್ಲ) ರಾಜಕೀಯ, ಹಣ ಮತ್ತು ಜಾತಿಯನ್ನು ಪ್ರಜ್ಞಾಪೂರ್ವಕವಾಗಿ ಇದರಿಂದ ಹೊರಗಿಟ್ಟಿದ್ದೇವೆ. ಸ್ಥಳೀಯ ಬರಹಗಾರರನ್ನು ಪ್ರೋತ್ಸಾಹಿಸುವುದು ಸಹ ಸಾಹಿತ್ಯ ಗೋಷ್ಠಿಯ ಮೂಲೋದ್ದೇಶಗಳಲ್ಲಿ ಒಂದು. ಹೀಗಾಗಿ ‘ಸಾಹಿತ್ಯ ಗೋಷ್ಠಿ’ ಆರಂಭಿಸಿದಂದಿನಿಂದ ಈವರೆಗೆ ಪ್ರತಿವರ್ಷವೂ ಕವಿ ಮತ್ತು ಸಾಹಿತ್ಯ ಗೋಷ್ಠಿಯನ್ನು ಏರ್ಪಡಿಸಿಕೊಂಡು ಬರುತ್ತಿದ್ದೇವೆ. ಈ ವೇದಿಕೆಯಲ್ಲಿ ಸ್ಥಳೀಯ ಬರಹಗಾರರು, ಆ ದಿನ ತಾವು ಬರೆದು ತಂದ ಕೃತಿಗಳ ವಾಚನವನ್ನು ನೆರೆದಿರುವ ಸಾಹಿತ್ಯಾಭಿಮಾನಿಗಳ ಸಮಕ್ಷಮದಲ್ಲಿ ಮಾಡುವರು. ಪ್ರತಿಯೊಬ್ಬ ಸಾಹಿತಿಗೂ ತಾನು ಬರೆದುದನ್ನು ಬೇರೆಯವರು ಓದಿದಾಗ ಅಥವಾ ಕೇಳಿದಾಗ ಸಿಗುವ ಆನಂದ ವರ್ಣಿಸಲಸದಳ. ಸಿಲಿಕಾನ್ ಕಣಿವೆಯಲ್ಲಿ ಪ್ರಕಟಿತ ಸಾಹಿತಿಗಳಿಗೆ ಬರವಿಲ್ಲ. ಸ್ಥಳೀಯ ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಕಟಿಸಿದಾಗ, ಆಗಾಗ್ಗೆ ಸಾಹಿತ್ಯ ಗೋಷ್ಠಿ ಅಂತಹ ಕೃತಿಗಳನ್ನು ಪರಿಚಯಿಸಿ ವಿಮರ್ಶಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಆ ಪ್ರಕಟಿತ ಸಾಹಿತಿಗಳಿಗೆ ತನ್ನದೇ ಆದ ರೀತಿಯಲ್ಲಿ ಗೌರವ ಸಮರ್ಪಣೆ ಮಾಡುತ್ತಿದೆ.

 ಸಾಹಿತ್ಯ ಗೋಷ್ಠಿಯ ಕಾರ್ಯಕ್ರಮಗಳನ್ನು ಆಯೋಜಿಸುವುದೆಂದರೆ, ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡಿದ ಹಾಗೆ: ಒಂದು ಕಾರ್ಯಕ್ರಮವನ್ನು ಏರ್ಪಡಿಸಿ, ಅದನ್ನು ಯಶಸ್ವಿಯಾಗಿ ಮುಗಿಸಿ ಅದರ ಕೃತಕೃತ್ಯತೆಯಲ್ಲಿ ಸಾರ್ಥಕ್ಯವನ್ನು ಅನುಭವಿಸುತ್ತ ನಿರಾಳವಾಗಿ ಕೂತಾಗಲೇ, ಅದರ ಮುಂದಿನ ತಿಂಗಳ ಕಾರ್ಯಕ್ರಮಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡುವವನಿಗೆ ಇರಬೇಕಾದ ಗುಣಗಳು ಇಲ್ಲಿಯೂ ಪ್ರಸ್ತುತವೆನಿಸುತ್ತವೆ: ಕುಂದದ ಉತ್ಸಾಹ, ಅಗಾಧ ಚೈತನ್ಯ, ವಿರಮಿಸದೆ ಓಡುತ್ತಲೇ ಇರುವ ಶಕ್ತಿ, ಇತ್ಯಾದಿ. ಇದುವರೆವಿಗೆ ‘ಸಾಹಿತ್ಯ ಗೋಷ್ಠಿ’ಯ ಏಳೂವರೆ ವರ್ಷಗಳಲ್ಲಿ ನಾವು 81 ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇವುಗಳಲ್ಲಿ 122 ಉಪನ್ಯಾಸಗಳು, 7 ಕವಿ ಮತ್ತು ಸಾಹಿತ್ಯ ಗೋಷ್ಠಿಗಳು, 5 ವಿಚಾರ ಸಂಕಿರಣಗಳು ಮತ್ತು ಒಂದು ವಿಶೇಷ ಸಾಹಿತ್ಯಿಕ ಕಾರ್ಯಕ್ರಮವೂ ಸೇರಿವೆ. ಹೀಗೆ ೯೦ ತಿಂಗಳಿಂದ ಪ್ರತಿ ತಿಂಗಳೂ ನಾವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರಬೇಕಾದರೆ, ಅವಿರತವಾಗಿ ಉಪನ್ಯಾಸಕರ ಶೋಧ ನಡೆಯುತ್ತಿರಬೇಕು. ಹೊಸಬರನ್ನು ಗುರುತಿಸಿ, ಅವರನ್ನು ಉಪನ್ಯಾಸವನ್ನು ನೀಡಲು ಪ್ರೇರೇಪಿಸುತ್ತಿರಬೇಕು. ನುರಿತ ಮತ್ತು ಹೊಸ ಭಾಷಣಕಾರರನ್ನು ಸಾಹಿತ್ಯ ಗೋಷ್ಠಿಯಲ್ಲಿ ಉಪನ್ಯಾಸ ನೀಡಲು ವಿನಂತಿಸಿಕೊಳ್ಳಬೇಕು. ಇದಲ್ಲದೆ, ಸಾಹಿತ್ಯ ಗೋಷ್ಠಿಯ ಕಾರ್ಯಕ್ರಮಕ್ಕೆ ಆಗಮಿಸುವ ಸಾಹಿತ್ಯಾಸಕ್ತರ ಸಂಖ್ಯೆ ಇಳಿಮುಖವಾಗದಂತೆ ನೋಡಿಕೊಳ್ಳಲು, ಉಪನ್ಯಾಸಗಳು ಸ್ವಾರಸ್ಯಕರವಾಗಿಯೂ, ಅವುಗಳಲ್ಲಿ ವೈವಿಧ್ಯತೆ ಇರುವಂತೆಯೂ ನೋಡಿಕೊಳ್ಳಬೇಕಾದುದು ಅತ್ಯವಶ್ಯಕ. ಸಾಧ್ಯವಾದಷ್ಟು ಹೆಚ್ಚು ಜನರನ್ನು ವೇದಿಕೆಯ ಮೇಲೆ ಕಾರ್ಯಕ್ರಮದಲ್ಲಿ ಭಾಗಿಗಳಗುವಂತೆ ನೋಡಿಕೊಂಡು, ‘ಸಾಹಿತ್ಯ ಗೋಷ್ಠಿ’ ನಮ್ಮೆಲ್ಲರ ಸಂಸ್ಥೆ ಎಂಬ ನಂಬಿಕೆಯನ್ನು ಧೃಡೀಕರಿಸುತ್ತಿರಬೇಕು. ಇಲ್ಲದಿದ್ದರೆ ಹೀಗೆ ದೀರ್ಘಕಾಲ ಇದನ್ನು ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ! ಒಟ್ಟಿನಲ್ಲಿ ‘ಸಾಹಿತ್ಯ ಗೋಷ್ಠಿ’ ಸಾಹಿತ್ಯಾಸಕ್ತರ ಸಹೃದಯತೆ, ಸ್ನೇಹ ಮತ್ತು ವಿಶ್ವಾಸಗಳ ಭದ್ರ ಬುನಾದಿಯ ಮೇಲೆ ನಿಂತಿದೆ ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ. 

 ಎಲ್ಲಾ ಸಂಘಸಂಸ್ಥೆಗಳಿಗೆ ಇರುವಂತೆ, ‘ಸಾಹಿತ್ಯ ಗೋಷ್ಠಿ’ಗೂ ಕಾರ್ಯಕ್ರಮಗಳನ್ನು ನಡೆಸಲು ಹಣದ ಅವಶ್ಯಕತೆ ಇದೆ. ನಾವು ಇದರ ವೆಚ್ಚವನ್ನು ಸಂತೋಷದಿಂದ ಭರಿಸುತ್ತಿದ್ದೇವೆ; ಈ ಕಾರ್ಯದಲ್ಲಿ ನಮ್ಮ ಬೆಂಬಲಕ್ಕೆ ನಿಂತವರು ಯಾರೆಂದರೆ, ಸ್ವ-ಇಚ್ಛೆಯಿಂದ ಮುಂದೆ ಬಂದು ಧನ ಸಹಾಯ ಮಾಡುತ್ತಿರುವವರು ನಮ್ಮ ‘ಸಾಹಿತ್ಯ ಗೋಷ್ಠಿ’ಯ ದಾನಿಗಳು. ಇದುವರೆಗಿನ ಈ ಸನ್ಮಿತ್ರರ ಸಹಾಯ ಮತ್ತು ಬೆಂಬಲವನ್ನು ನಾವಿಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಿದ್ದೇವೆ.  ಇದುವರೆವಿಗೆ ‘ಸಾಹಿತ್ಯ ಗೋಷ್ಠಿ’ ಯಶಸ್ವಿಯಾಗಿಯೇ ಕಾರ್ಯ ನಿರ್ವಹಿಸಿಕೊಂಡು ಹೋಗುತ್ತಿದೆ. ಉಪನ್ಯಾಸಗಳನ್ನು ನೀಡಲು ಉತ್ಸಾಹದಿಂದ ಮುಂದೆ ಬರುವ ಸಾಹಿತ್ಯಪ್ರೇಮಿಗಳು, ಕಾರ್ಯಕ್ರಮ ನಿರ್ವಹಣೆ, ಪ್ರಾರ್ಥನೆ ಇತ್ಯಾದಿಯಾಗಿ ನಮಗೆ ಸಕ್ರಿಯ ಬೆಂಬಲ ನೀಡುತ್ತಿರುವ ಕಾರ್ಯಕರ್ತರು, ನಮ್ಮ ಕಾರ್ಯಕ್ರಮಗಳನ್ನು ಪ್ರಚುರ ಪಡಿಸಲು ನಮ್ಮೊಂದಿಗೆ ಸಹಕರಿಸುತ್ತಿರುವ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟ ಮತ್ತು ದಟ್ಸ್‌ಕನ್ನಡ ಜಾಗತಿಕ ಜಾಲತಾಣದ ನಮ್ಮ ಮಿತ್ರರು – ಇವರುಗಳ ಸಹಕಾರವನ್ನು ನಾವಿಲ್ಲಿ ತುಂಬುಮನದಿಂದ ಜ್ಞಾಪಿಸಿಕೊಳ್ಳುತ್ತಿದ್ದೇವೆ. ಸಾಹಿತ್ಯ ಗೋಷ್ಠಿ ಇಷ್ಟು ಕಾಲ ಜೀವಂತವಾಗಿ, ಲವಲವಿಕೆಯಿಂದ ಕೆಲಸ ಮಾಡುತ್ತಿರುವುದಕ್ಕೆ ನೇರವಾಗಿ ಕಾರಣಕರ್ತರು – ನಮ್ಮೆಲ್ಲಾ ಕಾರ್ಯಕ್ರಮಗಳಿಗೂ ತಪ್ಪದೇ ಬಂದು, ಅವುಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ನಮ್ಮ ಸಾಹಿತ್ಯಾಭಿಮಾನಿ ದೇವರುಗಳು; ಅವರೆಲ್ಲರಿಗೂ ನಮ್ಮ ಹೃತ್ಪೂರ್ವಕ ನಮನಗಳು.

ಅನುಬಂಧ ೧: ಕನ್ನಡ ಸಣ್ಣಕಥೆಗಾರರಾದ ಕಡೂರು ರಾಮಸ್ವಾಮಿಯವರ ಶುಭಾಶಯ ಪತ್ರ

ಬೆಂಗಳೂರು
೨೧-೧೧-೦೬

ಪ್ರಿಯ ಬಂಧುಗಳಾದ ಶ್ರೀಮತಿ ಮತ್ತು ಶ್ರೀ. ವಿಶ್ವನಾಥ್ ಹುಲಿಕಲ್,

ನನಗೆ ನೆನಪಿರುವಂತೆ ಫೆ. ೨೦೦೨ ರ ಮೊದಲ ಭಾನುವಾರ ನೀವು ಹಮ್ಮಿಕೊಂಡ ಸಾಹಿತ್ಯಗೋಷ್ಠಿಯಲ್ಲಿ ನಾನು ಮತ್ತು ಶ್ರೀ. ಎಂ. ವಿ. ನಾಗರಾಜ ರಾವ್ ಮಾತನಾಡಿದೆವು. ಅದು ಬಹುಶಃ ನಿಮ್ಮ ಮೂರನೆಯ ಗೋಷ್ಠಿ. ಅಂದು ನೀವೆಲ್ಲರೂ ನಮಗೆ ಆರತಿ ಬೆಳಗಿ, ಹಾಡಿ ಸ್ವಾಗತ ಕೋರಿದಿರಿ. ಅದೊಂದು ಕನ್ನಡದ ಶ್ರೇಷ್ಠ ಸಂಸ್ಕೃತಿಯ ದ್ಯೋತಕವಾಗಿದ್ದು ನಾವು ಹರ್ಷಿತರಾದೆವು. ಅದನ್ನು ಇಷ್ಟದಿಂದ ಮೆಲಕು ಹಾಕುತ್ತಿರುವಾಗಲೇ ನಿಮ್ಮ ಅರವತ್ತನೆಯ ಗೋಷ್ಠಿಯೂ ನಡೆದುಹೋಗಿದೆ. ಹಾಗೆಂದು ಸಾಧನೆ ಎಣಿಕೆಯಲ್ಲಿ ಮಾತ್ರವಲ್ಲ. ಸಾರ್ಥಕದಲ್ಲೂ ಕೂಡ. ಕೇವಲ ಹಬ್ಬಗಳ ಸುತ್ತ ಮನರಂಜಕ ಲಘು ಕಾರ್ಯಕ್ರಮಗಳಿಗೆ ಸೀಮಿತವಾದ ಸಾರ್ವಜನಿಕ ಸಾಮೂಹಿಕ ಕೂಟಗಳಿಗೆ ಭಿನ್ನವಾಗಿ ಅಧ್ಯಯನ, ಚಿಂತನ, ಪ್ರವಚನಗಳ ಆಳವಾದ ಅಭ್ಯಾಸದ ಕಡೆಗೆ ಗಮನ ಸೆಳೆದ ಹೆಚ್ಚುಗಾರಿಕೆ ನಿಮ್ಮ ಏಕೆ ನಮ್ಮ ಸಾಹಿತ್ಯಗೋಷ್ಠಿಯದು. ಗೋಷ್ಠಿಯ ಸಭಾಂಗಣ ಮತ್ತು ಅದರಲ್ಲಿನ ಹಾಜರಾತಿಯ ಗಾತ್ರ ಚಿಕ್ಕದಾದರೂ ಗುಣದಲ್ಲಿ ದೊಡ್ಡದು. ಸಾಹಿತ್ಯಾಸಕ್ತಿ, ಅನುಭವ, ಓದುಗಾರಿಕೆ, ಪರಿಚಯ ಸಾಕಷ್ಟಿದ್ದವರೇ ಅಲ್ಲಿ ಸೇರುವುದು. ವಾರಾಂತ್ಯದ ವಿರಾಮಕ್ಕೂ ವಿದಾಯ ಹೇಳಿ ಮೈಲಿಗಟ್ಟಲೆ ಚಕ್ರ ತಿರುಗಿಸುತ್ತಾ ಬಂದ ಸದರ, ನಿಕಟತೆ, ಸಹೃದಯ ವಿಚಾರ ವಿನಿಮಯ, ವಿನೋದಮಯ ರಸಗಳಿಗೆಯಲ್ಲಿ ನಾನು ನಾಲ್ಕಾರು ಬಾರಿ ಭಾಗಿಯಾಗಿ ನಲಿದಿದ್ದೇನೆ.

ಸಾಹಿತ್ಯಗೋಷ್ಠಿ ಮಾಡಿದ ಸ್ತುತ್ಯ ಕಾರ್ಯಕ್ರಮಗಳು:

೧. ಕನ್ನಡ ಸಾಹಿತ್ಯದಲ್ಲಿ ಅಭಿರುಚಿಯುಳ್ಳವರನ್ನು ಆರಿಸಿ ಒಂದೆಡೆ ಸೇರಿಸಿದ್ದು.
೨. ಸಾಮರ್ಥ್ಯವಿದ್ದೂ ಅಭಿವ್ಯಕ್ತಿಗೆ ಮುಂದಾಗದ ಸಂಕೋಚದ ಸ್ವಭಾವದವರನ್ನು ಹುರಿದುಂಬಿಸಿದ್ದು.
೩. ಗಂಭೀರವಾದ ಅಧ್ಯಯನ ಮತ್ತು ವಿಮರ್ಷಕ ದೃಷ್ಟಿಯನ್ನು ಬೆಳೆಸಿದ್ದು.
೪. ಬರೆಯದಿದ್ದ ಬರೆಯ ಬಲ್ಲವರ ಕೈಯಲ್ಲಿ ಉತ್ತಮ ಸಾಹಿತ್ಯವನ್ನು ಬರೆಸಿದ್ದು.
೫. ಚರ್ಚೆಗೆ, ಉಪನ್ಯಾಸಕ್ಕೆ, ಪ್ರವಚನಕ್ಕೆ ವಸ್ತು ವೈವಿಧ್ಯ, ಪ್ರಕಾರ ವೈವಿಧ್ಯಗಳನ್ನು ಒದಗಿಸಿದ್ದು.
ಇತ್ಯಾದಿ ಇತ್ಯಾದಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿರುವುದೊಂದು ಹೆಗ್ಗಳಿಕೆ. ಈ ನಮ್ಮ ಸಾಹಿತ್ಯಗೋಷ್ಠಿಯು ಸಮಾನ ಮನೋಧರ್ಮ, ಆಸಕ್ತಿ, ಸಾಮರ್ಥ್ಯಗಳುಳ್ಳ ಸತ್ವಯುತ ಸತ್ಸಂಗವಾಗಿ ಉಳಿದು ಬೆಳೆಯಲೆಂದು ಹಾರೈಸುತ್ತೇನೆ.

ಆರನೇ ಸಂವತ್ಸರಕ್ಕೆ ಕಾಲಿಕ್ಕುತ್ತಿರುವ ಸಾಹಿತ್ಯಗೋಷ್ಠಿಗೆ ನನ್ನ ಶುಭಾಶಯಗಳು.

ಇಂತು, ನಿಮ್ಮವನೇ ಆದ
ಕಡೂರು ರಾಮಸ್ವಾಮಿ.

ಅನುಬಂಧ ೨: ಸಾಹಿತ್ಯ ಗೋಷ್ಠಿಯ ಚಟುವಟಿಕೆಗಳು

ವಿವರಗಳಿಗೆ ನಮ್ಮ ಜಾಗತಿಕ ಜಾಲತಾಣವನ್ನು ಸಂದರ್ಶಿಸಿ: http://www.sahityagoshti.org

 Posted by at 8:45 PM
Jul 262009
 

ಶ್ರೀನಾಥ್ ಭಲ್ಲೆಮೂಗಿಗೆ ಹತ್ತಿ ತುರುಕುವ ಮುನ್ನ

 

ಜಂಜಟ್ಟಿನ ಜಗಕೆ ಜಾರೋ ಮುನ್ನ
ಪುಟ್ಟ ಕೋಟೆಯಲಿ ನೀ ಸುಖವಪಡು

ತಾರತಮ್ಯವನು ಅರಿಯೋ ಮುನ್ನ
ಎಲ್ಲರೊಂದಿಗೆ ಬೆರೆತು ಒಂದಾಗಿಬಿಡು

ಪಾಲಕರು ಸ್ಪರ್ಧೆಗೊಡ್ಡೋ ಮುನ್ನ
ಕುಣಿದಾಡಿ ಬಿಡು ನಲಿದಾಡಿ ಬಿಡು

ಕಳೆವುದ, ಭಾಗಿಸುವದ ಕಲಿಯೋ ಮುನ್ನ
ಕೂಡಿಸಿ, ವೃದ್ದಿಸಿ ಖುಷಿಯಪಡು

ಸಂಸಾರ ಸಾಗರದ ಸುಳಿ ಸೆಳೆಯೋ ಮುನ್ನ
ಸ್ವಚ್ಚಂದದ ತಂಗಾಳಿಯಲಿ ತೇಲಿಬಿಡು

ರೋಗರುಜಿನಗಳು ನಿನ್ನಲ್ಲರಳೋ ಮುನ್ನ
ನರಳೋ ರೋಗಿಗಳ ಬಗ್ಗೆ ಕರುಣೆ ಇಡು

ಮೂಗಿಗೆ ಹತ್ತಿ ತುರುಕೋ ಮುನ್ನ
ನಿರ್ಮಲ ಮನದಲ್ಲೊಮ್ಮೆ ಉಸಿರಾಡಿಬಿಡು

ಬಾಯಿಗೆ ಅಕ್ಕಿ ತುಂಬಿಸೋ ಮುನ್ನ
ತಪ್ಪುಗಳಿಗೆ ಕ್ಷಮೆ ಯಾಚಿಸಿಬಿಡು

ನಾಲ್ಕು ಕಾಲಿನ ರಥವೇರೋ ಮುನ್ನ
ಸೌದೆಗೆ ಬೆಂಕಿ ಹಚ್ಚೋ ಮುನ್ನ
ಕ್ರೋಧ ಬಿಡು, ಆಕ್ರೋಶ ಬಿಡು
ಇದ್ದುದರಲ್ಲೇ ಸಂತೃಪ್ತಿ ಪಡು
ಸಜ್ಜನರ ಸಂಗದಿ ಸುಖವ ಪಡು

 

ಭವ ಬಂಧನ

ಹೊರಗೆಡಹಲು ಎನ್ನ ಮನದಾಳದ ಅಳಲು
ಮೂಲೆ ಹಿಡಿದು ನಾ ಗಟ್ಟಿಯಾಗಿ ಅಳಲು

ತಲೆ ನೇವರಿಸಿದಳು ತಾಯಂತಹ ಅತ್ತೆ
ಏನಂತಹ ದುಗುಡ ನೀನೇಕೆ ಅತ್ತೆ

ಸೂರ್ಯ ತಾ ಮುಳುಗಿಹನು ಇದು ಸಂಧ್ಯಾಕಾಲ
ಇಂಥದೇ ಸಂಜೆ ಅಪ್ಪನ ಜೀವಕದು ಸಂಧ್ಯಾಕಾಲ

ಹೇಳಲಾಗಲಿಲ್ಲ ಹೃದಯದಿ ಅಡಗಿದ್ದ ಭಾವ
ಇದ್ದುದಿಬ್ಬರೇ ಸಂತೈಸಲು ಆ ನನ್ನ ಅಕ್ಕ ಭಾವ

ಅಕ್ಕಗೆ ನುಡಿದಿದ್ದನವ ಇವಳನ್ನು ನೀ ಸಾಕು
ಬಂಧುಗಳಿಲ್ಲದ ಈ ಊರು ಅವಳಿಗಿನ್ನು ಸಾಕು

ಹೆತ್ತಮ್ಮನಿಲ್ಲ, ಸಲುಹಿದ ಅಪ್ಪನಿಲ್ಲ, ಏನಾಗುವುದೋ ಎನ್ನ ಬಾಳು
ಕಂಕಣ ಬಲ ಒದಗಿಸಿ ಹರಸಿಹಳು ಅಕ್ಕ ನೀ ನೂರ್ಕಾಲ ಬಾಳು

ತಂಪನೆಯ ಗಾಳಿಯೊಂದಿಗೆ ಸೂರ್ಯ ಮುಳುಗುವಾ ಹೊತ್ತು
ಬಂದಿದ್ದಳು ಅಕ್ಕ ದೂರಾಗುವ ಸಂದೇಶವಾ ಹೊತ್ತು

ಮುಪ್ಪಾದವರ ಸೇವೆಗೆ ಭಾವನ ಕೂಗಿ ಕರೆದಿತ್ತು ಕರ್ತವ್ಯದ ಕರೆ
ಏಂದೋ ಒಮ್ಮೆ ನೋಡುವ ಅಕ್ಕಳಿಗಿನ್ನು ಕೇವಲ ದೂರವಾಣಿ ಕರೆ

ಎನ್ನವರೆಲ್ಲ ದೂರಾಗುತ್ತಿಹರತ್ತೆ ನಾನೇನ ಮಾಡಿರುವೆ ಪಾಪ
ಹೊಟ್ಟೆ ಹಸಿವಿನಿಂದ ಅಳಲು ಹತ್ತಿತ್ತು ಮಲಗಿದ್ದ ನನ್ನ ಪಾಪ

ನವ ಬಂಧನವು ಸೆಳೆದಾಗ ಹಳೆ ಬಂಧನಗಳು ಹರಿವುದೇ?
ಹಳೆ ಬಂಧನದ ಮೌಲ್ಯ ನವ ಪೀಳಿಗೆಯಲ್ಲೂ ಹರಿವುದೇ?

ಟಿಪ್ಪಣಿ :- ಹಲವಾರು ಬಾರಿ ಪದವೊಂದೇ ಆದರೂ ಅವುಗಳ ಅರ್ಥ ಬೇರೆ ಇರುತ್ತದೆ. ಅಂತಹ ಕೆಲವು ಪದಗಳನ್ನು ತೆಗೆದುಕೊಂಡು ಕವನ ರೂಪದಲ್ಲಿ ಭವ ಬಂಧನದ ಬಗೆಗಿನ ಒಂದು ಸನ್ನಿವೇಶವನ್ನು ಹೆಣೆದಿದ್ದೇನೆ. ಕವನದಲ್ಲಿ ಅಕ್ಕ-ತಂಗಿಯರ ಬಾಂಧವ್ಯವಿದೆ. ತಂದೆಯ ಸ್ಥಾನದಲ್ಲಿ ನಿಲ್ಲುವ ಭಾವನ ಚಿತ್ರಣವಿದೆ. ಹೊಸ ಬಂಧನಕ್ಕೆ ಸಿಲುಕುತ್ತಿದ್ದಂತೆ ಜೊತೆ ಹಳೆಯ ಬಾಂಧವ್ಯವು ಮಸುಕಾಗುವ ಕ್ರೂರ ಸತ್ಯವೂ ಅಡಕವಾಗಿದೆ. ಅದಲ್ಲದೆ, ನಾವು ಒಬ್ಬರಿಗೆ ಋಣಿಯಾಗಿದ್ದೇವೆ ಎಂದು ನಮ್ಮ ಮುಂದಿನವರೂ ಅದರಂತೆ ಋಣಿಯಾಗಿರಬೇಕೇ ಎಂಬ ಪ್ರಶ್ನೆಯೂ ಇದೆ…. ನಿಮಗೆ ಉತ್ತರ ಗೊತ್ತೆ ?

 Posted by at 10:00 PM
Jul 262009
 

ದತ್ತಾತ್ರಿ ಎಂ.ಆರ್. ವೈರಸ್ ಉಡುಗೊರೆ

 

 

ಲಾಸ್ ಏಂಜಲಿಸ್ ನಗರದಿಂದ ದಕ್ಷಿಣಕ್ಕೆ ಸ್ಯಾನ್ ಡಿಯಾಗೋ ಎನ್ನುವ ಊರಿನ ಹಾದಿಯಲ್ಲೇ ನಾನಿರುವ ಊರಿರುವುದು. ಇದು ಮೆಕ್ಸಿಕೋ ದೇಶಕ್ಕೆ ಗಡಿ ಪ್ರದೇಶ. ಫ್ರೀವೇ ೫ರಲ್ಲಿ ಹೊರಟು ದಕ್ಷಿಣದ ಕಡೆ ಸಾಗುತ್ತಾ ಸಾನ್ ಈಸಿಡ್ರೊ ಎನ್ನುವ ಊರಿನ ಬಳಿ ಕೊನೆಯ ಎಕ್ಸಿಟ್ ತೆಗೆದುಕೊಳ್ಳುವುದ ಮರೆತಿರೋ ಗಡಿರೇಖೆಯಲ್ಲಿ ಇಮ್ಮಿಗ್ರೇಷನ್ ಆಫೀಸರನ ಮುಂದೆಯೇ ಇರುತ್ತೀರಿ. ಆ ಇಮ್ಮಿಗ್ರೇಷನ್ ಆಫೀಸರನ ಆಚೆಯ ಬದಿಯಲ್ಲೇ ಸ್ಪಾನಿಷ್ ಭಾಷೆ ಧಾರೆಯಾಗಿ ಉಕ್ಕಿ ಹರಿಯುವ ಮತ್ತು ಥೇಟ್ ನಮ್ಮ ಗಾಂಧೀಬಜಾರ್ ಮಾರ್ಕೆಟ್‍ನಂತೆಯೇ ಕಾಣುವ ಟಿಹುಆನ ಎನ್ನುವ ಮೆಕ್ಸಿಕನ್ ಊರು. ನಿಮಗೇನಾದರೂ ವೀಸಾ ಸಮಸ್ಯೆಯಿದ್ದರೆ ಈ ಕೊನೆಯ ಅಮೆರಿಕನ್ ಎಕ್ಸಿಟ್‍ನ್ನು ನೀವು ಮರೆಯದಿರುವುದು ಒಳ್ಳೆಯದು. ಏಕೆಂದರೆ ಮೆಕ್ಸಿಕೋ ಹೊಕ್ಕ ನಂತರ ಅಮೆರಿಕಾಕ್ಕೆ ಮರುಪ್ರವೇಶ ನಿಮಗೆ ನಿಷಿದ್ಧವಾಗಿ ಅಲ್ಲೇ ಉಳಿದುಕೊಂಡು ಮೈದಾ ಚಪಾತಿಗೆ ಈರುಳ್ಳಿ ಅವಕೆಡೋ ಕಂದುಬಣ್ಣದ ಬೀನ್ಸ್ ಮತ್ತು ಕೆಂಪನ್ನವನ್ನು ಸುತ್ತಿದ ಬರಿಟೋ ತಿನ್ನುತ್ತಾ ಫುಟ್‌ಪಾತ್‌ನಲ್ಲಿ ಜಾಗ ಹಿಡಿದು ಒಬಾಮನ ಮುಖಚಿತ್ರ ಹೊತ್ತ ಟೀಶರ್ಟುಗಳು ಮತ್ತು ಅಮೆರಿಕನ್ ಟೂರಿಸ್ಟರು ಜಾಸ್ತಿ ಕೊಳ್ಳುವ ಮಾಯನ್ನರ ಬಣ್ಣ ಬಣ್ಣದ ಮುಖವಾಡಗಳನ್ನು ಮಾರುತ್ತಾ ಜೀವನ ಸಾಗಿಸಬೇಕಾದೀತು! ಅಥವಾ, ಗಡಿಯುದ್ದಕ್ಕೂ ಪೋಲೀಸರಿಗಿಂತಲೂ ಹೆಚ್ಚು ಸಕ್ರಿಯವಾಗಿರುವ ಮತ್ತು ಪೋಲೀಸರಿಗಿಂತಲೂ ಹೆಚ್ಚು ಸಂಬಳ ಕೊಡುವ ಡ್ರಗ್ ಮಾಫಿಯಾದ ಜೊತೆಗೂ ಕೆಲಸ ಮಾಡಬಹುದು!

ಮೆಕ್ಸಿಕನ್ನರಿಗೆ ಮಾತ್ರ ಈ ದೇಶಕ್ಕೆ ಬರುವುದು ಎಂದರೆ ಬಾಲನ್ನು ಅರೆಸುತ್ತಾ ಪಕ್ಕದ ಮನೆಯ ಕಾಂಪೌಂಡನ್ನು ಹಾರುತ್ತಿದ್ದೆವೆಲ್ಲ ನಾವು ಚಿಕ್ಕವಯಸ್ಸಿನಲ್ಲಿ, ಅಷ್ಟೇ ಸುಲಭ. ಹಣದ ಅಗತ್ಯಬಿದ್ದಾಗ ಅಥವ ಕೆಲಸ ಮಾಡದೆ ಮೈ ಜಡ್ಡು ಹಿಡಿಯಿತು ಎನ್ನಿಸಿದಾಗಲೆಲ್ಲಾ ಹಕ್ಕಿಗಳಂತೆ ಯಾವ ಬಂಧವೂ ಇಲ್ಲದೆ ಗಡಿರೇಖೆ ಹಾರಿಬಂದು ಬ್ಯಾಂಕ್ ಆಫ್ ಅಮೆರಿಕಾದ ನಲ್ವತ್ತೇಳನೇ ಅಂತಸ್ತನ್ನು ಗುಡಿಸಿ ಮೆಟ್‍ಲೈಫ್ ಕಾನ್‍ಫರೆನ್ಸ್ ರೂಮುಗಳನ್ನು ಒರೆಸಿ, ನೂರೈವತ್ತು ಡಾಲರಿಗೆ ಮೂವತ್ತೈದು ವರ್ಷ ಹಳೆಯ ಪಿಕಪ್ ಟ್ರಕ್‍ ಒಂದನ್ನು ಕೊಂಡು ಇನ್ಸುರೆನ್ಸ್‍ನ ಗೋಜೇ ಇಲ್ಲದೆ ಲಾಸ್ ಏಂಜಲಿಸ್‍ನ ತುಂಬೆಲ್ಲಾ ಗುಡುಗುಡು ಶಬ್ದ ಮಾಡುತ್ತಾ ಓಡಾಡಿ, ಮೆಕ್‍ಆರ್ಥರ್ ಪಾರ್ಕಿನಲ್ಲಿ ಚೀಪಾದ ಬಿಯರ್ ಕುಡಿದು ಸ್ಟಾಪಲ್ಸ್ ಸೆಂಟರಿನ ಮುಂದೆ ಕ್ಯಾಮೆಲ್ ಬ್ರಾಂಡಿನ ಸಿಗರೇಟು ಎಳೆದು ಹಾಗೆಯೇ ಡೌನ್‍ಟೌನಿನ ರಸ್ತೆಗಳಲ್ಲಿ ಓಡಾಡಿಕೊಂಡಿರುವಾಗಲೇ ಅಮ್ಮನ ಆರೋಗ್ಯ ಚಿಂತಾಜನಕ ಎಂದು ಸುದ್ದಿ ಬಂದೊಡನೆಯೇ ಬಂದ ರೀತಿಯಲ್ಲೇ ಹಕ್ಕಿಯಂತೆ ಗಡಿಯ ಗೋಡೆಯನ್ನು ಹಾರಿ ಮೆಕ್ಸಿಕೋದೊಳಗೆ ಕಣ್ಮರೆಯಾಗುತ್ತಾನೆ. ಆಲೆಮನೆಯ ಗಾಣದೆತ್ತಿನಂತೆ ಬರೀ ಆಫೀಸು ಮನೆಯ ವೃತ್ತದಲ್ಲಿ ಸುತ್ತುವ ನನ್ನಂತವರಿಗೆ ಅವನು ಬಂದದ್ದೂ ತಿಳಿಯುವುದಿಲ್ಲ ಹಾಗೆಯೇ ಹೋದದ್ದೂ ಕೂಡ.

ಇಂತಹ ಮೆಕ್ಸಿಕನ್ನರಿಂದ ಪ್ರಪಂಚಕ್ಕೊಂದು ಫ್ಲೂ ಬಂದಿದೆ. ಅದು ಕೊಂದದ್ದು ಬರೀ ಹತ್ತಿಪ್ಪತ್ತು ಜನರನ್ನಾದರೂ, ಒಂದು ರೀತಿಯ ವಿನಾಶದ ಭಯ, “ನಾವು ಉಸಿರಾಡುತ್ತಿರುವ ಗಾಳಿಯಲ್ಲೇ ದೆವ್ವ ಒಂದು ಓಡಾಡುತ್ತಿದೆ” ಎನ್ನುವಂತಹ ವಿನಾಶದ ಅಂಜಿಕೆಯನ್ನು ನಮ್ಮಲ್ಲಿ, ವಿಶೇಷವಾಗಿ ಮೆಕ್ಸಿಕೋದ ನೆರೆರಾಜ್ಯ ಅಮೆರಿಕಾದಲ್ಲಿ, ಅದರಲ್ಲೂ ವಿಶೇಷವಾಗಿ ಮೆಕ್ಸಿಕೋಕ್ಕೆ ಹೊಂದಿಕೊಂಡ ಗಡಿಪ್ರದೇಶದ ಊರುಗಳಲ್ಲಿ ಆಳವಾಗಿ ಊರಿಸಿಬಿಟ್ಟಿದೆ. “ನಾವು ಮೊದಲಿಂದಲೂ ಹೇಳುತ್ತಿರಲಿಲ್ಲವೇ ನಮ್ಮನ್ನು ವಿನಾಶ ಮಾಡುವಂತಹ ಸಾಂಕ್ರಾಮಿಕವೊಂದು ಹರಡುತ್ತದೆಯೊಂದು, ಇದೇ ಇದೇ ಅದು ನೋಡಿ” ಎಂದು ಯೂನಿವರ್ಸಿಟಿಯ ವಿಜ್ಞಾನಿಗಳು ಮತ್ತು ಹೆಲ್ತ್ ಡಿಪಾರ್ಟಮೆಂಟುಗಳು ತಮ್ಮ ವಾದದ ಗಟ್ಟಿತನವನ್ನು ತೋರಿಸುವ ಬರದಲ್ಲಿ ಹೆದರಿದವರನ್ನು ಮತ್ತೂ ಹೆದರಿಸುತ್ತಿವೆ.

ಈ ನಡುವೆ, ಎಲ್ಲವನ್ನೂ ಅತೀ ಮಾಡುವ ಅಮೆರಿಕನ್ ಮಾದ್ಯಮಗಳು ಜನರು ಮರೆಯದಂತೆ “ಸಾಂಕ್ರಾಮಿಕ ಭಯವನ್ನು” ಜಾಗೃತಿಯಲ್ಲಿಟ್ಟು ರೋಗದ ಟ್ವೆಂಟಿಫೋರ್ ಬೈ ಸೆವೆನ್ ಕವರೇಜ್ ನೀಡುತ್ತಿವೆ. ಮೆಕ್ಸಿಕೋ ನಗರದ ಸರಕಾರಿ ಆಸ್ಪತ್ರೆಗೆ ದಾಖಲಾದ ಆರುವರ್ಷದ ಹುಡುಗನ ಹರಿದ ಚಡ್ಡಿಯಿಂದ ಹಿಡಿದು ಗೋಡೆಯ ಮೇಲೆ ಧ್ಯಾನಸ್ಥವಾದ ಕಂದು ಬಣ್ಣದ ಠೊಣಪ ಹಲ್ಲಿಯ ತನಕ ಎಲ್ಲವನ್ನೂ ನೇರ ಪ್ರಸಾರ ಮಾಡಲಾಗುತ್ತಿದೆ. ಇದ್ದಕ್ಕಿದ್ದಂತಲೇ ಪ್ರಪಂಚದ ದೃಷ್ಟಿ ಮೆಕ್ಸಿಕೋನತ್ತ ಹರಿದಿದೆ.

ಇತಿಹಾಸಬಲ್ಲವರಿಗೆ ವೈರಸ್ ಜೊತೆಗಿನ ಮೆಕ್ಸಿಕೋದ ನಂಟು ಇವತ್ತಿನದಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದಿದೆ. ಐದುನೂರು ವರ್ಷಗಳ ಹಿಂದೆ ಭಾರತವನ್ನು ಹುಡುಕುತ್ತೇನೆ ಎಂದು ಅಮೆರಿಕಾಕ್ಕೆ ಬಂದಿಳಿದ ಕೊಲಂಬಸ್ ಅಲ್ಲಿದ್ದ ಮೂಲನಿವಾಸಿಗಳಿಗೆ ಮೊದಲು ಕೊಟ್ಟ ಉಡುಗೊರೆ ಎಂದರೆ ಸಿಡುಬಿನ ವೈರಸ್. ಹಡಗುಗಳಲ್ಲಿ ಬಂದಿಳಿದ ಉಕ್ಕಿನ ಕವಚದ ಸ್ಪಾನಿಯಾರ್ಡರು ಮತ್ತು ಬರೀ ಲಂಗೋಟಿಯಲ್ಲಿ ನಿಂತಿದ್ದ ಮೆಕ್ಸಿಕೋದ ಮೂಲ ನಿವಾಸಿಗಳು ಒಬ್ಬರನ್ನೊಬ್ಬರು ನೋಡಿದೊಡನೆಯೇ ಹಸ್ತಲಾಘವ ಕೊಡಲಿಲ್ಲ, ಒಬ್ಬರನ್ನೊಬ್ಬರು ತಬ್ಬಿಕೊಳ್ಳಲಿಲ್ಲ. ಯುರೋಪಿಗಿಂತಲೂ ಹಳೆಯದಾದ ನಾಗರೀಕತೆಯನ್ನು ಹೊಂದಿದ್ದರೂ ಪೂರ್ತೀ ಮೈ ಮುಚ್ಚುವಂತೆ ಬಟ್ಟೆ ಹಾಕಿಕೊಳ್ಳದ ಮತ್ತು ಲೋಹವನ್ನೇ ಕಾಣದೆ ಬರೀ ಬೆತ್ತದ ಕೋಲು ಹಿಡಿದು ಯುದ್ಧಕ್ಕೆ ಬರುವ ಈ ಮೂಲನಿವಾಸಿಗಳನ್ನು ಕೊಲಂಬಸ್ “ಅರೆ ಮಾನವರು” ಎಂದು ಕರೆದ. ಈ ಅರೆ ಮಾನವರನ್ನು ಪೂರ್ತೀ ಮಾನವರನ್ನಾಗಿಸಲು ಕೊಲಂಬಸ್‍ನ ದೇಹದ ವೈರಸ್‍ಗಳು ಆ ತನಕ ಈ ತರಹದ ವೈರಸ್‍ನ್ನೇ ಕಾಣದ ಮೂಲ ನಿವಾಸಿಗಳ ದೇಹವನ್ನು ಹೊಕ್ಕವು. ಅಂದು ಯುದ್ಧದಿಂದ ಸತ್ತದ್ದು ಹತ್ತು ಸಾವಿರವಾದರೆ ಯುರೋಪಿಯನ್ನರು ಕೊಟ್ಟ ರೋಗದಿಂದ ಸತ್ತದ್ದು ಹತ್ತು ಲಕ್ಷ. ಉಕ್ಕಿನ ಎದೆ ಕವಚ, ಉಕ್ಕಿನ ಶಿರಸ್ತ್ರಾಣವನ್ನು ತೊಟ್ಟು ಆಳೆತ್ತರದ ಉಕ್ಕಿನ ಕತ್ತಿಯನ್ನು ಹಿಡಿದು ಕುದುರೆಯೇರಿ ಬಂದ ಸ್ಪಾನಿಯಾರ್ಡರನ್ನು ಮೂಲನಿವಾಸಿಗಳು ಇವರು ದೇವರಿರಬಹುದು ಎಂದು ತಿಳಿದರಂತೆ. ದೇವರೋ ಅಲ್ಲವೋ ಎಂದು ಪರೀಕ್ಷಿಸಲು ತಮ್ಮ ಪಂಡಿತರನ್ನು ಕಳುಹಿಸಿದಾಗ ಆ ಪಂಡಿತರು ಒಂದು ತಟ್ಟೆಯಲ್ಲಿ ಮನುಷ್ಯರ ಆಹಾರವಾದ ಜೋಳದ ಟಾರ್ಟಿಯಾಗಳು, ಈರುಳ್ಳಿ, ಮೆಣಸು, ಸೀಬೇಹಣ್ಣು, ಕೋಳಿಯ ಮಾಂಸವನ್ನು ಮತ್ತು ಇನ್ನೊಂದು ತಟ್ಟೆಯಲ್ಲಿ ದೇವರಿಗೆ ಪ್ರಿಯವಾದ ಬಲಿಕೊಟ್ಟ ಪ್ರಾಣಿಯ ಹಸಿಮಾಂಸ ಮತ್ತು ಹಸಿ ರಕ್ತವನ್ನು ಹಾಕಿ ಸ್ಪಾನಿಯಾರ್ಡರ ಮುಂದೆ ಇಟ್ಟರು. ಅವರ ಪ್ರಕಾರ ಈ ಉಕ್ಕಿನ ಜೀವಿಗಳು ಮಾನವನ ಆಹಾರವನ್ನು ಸ್ವೀಕರಿಸಿದರೆ ಆಗ ಇವರ ಮಾನವರೆಂದೂ ಇವರ ಮೇಲೆ ಯುದ್ಧ ಮಾಡಬಹುದೆಂದೂ, ಅವರೇನಾದರೂ ಭಗವಂತನ ಆಹಾರವನ್ನು ಸ್ವೀಕರಿಸಿದರೆ ಆಗ ಅವರು ದೇವರೆಂದು ಮತ್ತು ಅವರಿಗೆ ಶರಣಾಗುವುದೆಂದು ಪಂಡಿತರ ಯೋಜನೆ. ಹಡಗಿನಲ್ಲಿನ ದೂರದ ಪಯಣದಿಂದ ಹಸಿದುಬಂದಿದ್ದ ಸ್ಪಾನಿಯಾರ್ಡರು ಎರಡೂ ತಟ್ಟೆಯ ಆಹಾರವನ್ನು ತಿಂದರು. ಹಾಗೆಯೇ ಮಾನವರಾಗಿ ಯುದ್ಧಮಾಡಿ ಕೊನೆಗೆ ತಮ್ಮ ಕತ್ತಿಯ ಬಲದಿಂದ ದೇವರಾಗಿ ಈ ಮೂಲನಿವಾಸಿಗಳನ್ನು ಶರಣಾಗತರನ್ನಾಗಿಸಿಕೊಂಡರು. ಆ ದೇವರುಗಳೇ ವೈರಸ್ಸನ್ನು ವರವಾಗಿ ನೀಡಿ ಅರೆ ಮಾನವರನ್ನು ಪೂರ್ಣವಾಗಿಸುವಾಗ ಇಲ್ಲವೆನ್ನಲಾಗುತ್ತದೆಯೇ?

ಐನೂರು ವರ್ಷಗಳ ಹಿಂದೆ ತಾವು ಪಡೆದ ಬಳುವಳಿಯನ್ನು ಇವತ್ತು ಪ್ರಪಂಚಕ್ಕೆ ವಾಪಸ್ಸು ನೀಡಿ ಮೆಕ್ಸಿಕನ್ನರು ಋಣಮುಕ್ತರಾಗುತ್ತಿದ್ದಾರೆ. ಐನೂರು ವರ್ಷಗಳಿಂದ ತಾವು ಜತನವಾಗಿ ಕಾಪಾಡಿದ ಬಳುವಳಿಯನ್ನು ಚೆಂದವಾಗಿ ಗಿಫ್ಟ್ ಪ್ಯಾಕ್ ಮಾಡಿ ಅಂದಕ್ಕಾಗಿ ಹಂದಿಯ ಮುಖವಿಟ್ಟು ತಾವು ಪಡೆದ ರೀತಿಯಲ್ಲೇ ಹಡಗು ವಿಮಾನ ಬಸ್ಸು ಕುದುರೆಗಳಲ್ಲಿ ವೈರಸ್ಸನ್ನು ವಾಪಸ್ಸು ಕಳಿಸುತ್ತಾ ಮೆಕ್ಸಿಕನ್ನರು ವಿನೀತರಾಗಿ ಪ್ರಪಂಚಕ್ಕೆ ಬದಲು ಉಡುಗೊರೆ ನೀಡುತ್ತಿದ್ದಾರೆ. ಇದೋ, ಸ್ವೀಕರಿಸಿ!

 Posted by at 9:54 PM