Jul 262009
 

ಶ್ರೀನಾಥ್ ಭಲ್ಲೆಮೂಗಿಗೆ ಹತ್ತಿ ತುರುಕುವ ಮುನ್ನ

 

ಜಂಜಟ್ಟಿನ ಜಗಕೆ ಜಾರೋ ಮುನ್ನ
ಪುಟ್ಟ ಕೋಟೆಯಲಿ ನೀ ಸುಖವಪಡು

ತಾರತಮ್ಯವನು ಅರಿಯೋ ಮುನ್ನ
ಎಲ್ಲರೊಂದಿಗೆ ಬೆರೆತು ಒಂದಾಗಿಬಿಡು

ಪಾಲಕರು ಸ್ಪರ್ಧೆಗೊಡ್ಡೋ ಮುನ್ನ
ಕುಣಿದಾಡಿ ಬಿಡು ನಲಿದಾಡಿ ಬಿಡು

ಕಳೆವುದ, ಭಾಗಿಸುವದ ಕಲಿಯೋ ಮುನ್ನ
ಕೂಡಿಸಿ, ವೃದ್ದಿಸಿ ಖುಷಿಯಪಡು

ಸಂಸಾರ ಸಾಗರದ ಸುಳಿ ಸೆಳೆಯೋ ಮುನ್ನ
ಸ್ವಚ್ಚಂದದ ತಂಗಾಳಿಯಲಿ ತೇಲಿಬಿಡು

ರೋಗರುಜಿನಗಳು ನಿನ್ನಲ್ಲರಳೋ ಮುನ್ನ
ನರಳೋ ರೋಗಿಗಳ ಬಗ್ಗೆ ಕರುಣೆ ಇಡು

ಮೂಗಿಗೆ ಹತ್ತಿ ತುರುಕೋ ಮುನ್ನ
ನಿರ್ಮಲ ಮನದಲ್ಲೊಮ್ಮೆ ಉಸಿರಾಡಿಬಿಡು

ಬಾಯಿಗೆ ಅಕ್ಕಿ ತುಂಬಿಸೋ ಮುನ್ನ
ತಪ್ಪುಗಳಿಗೆ ಕ್ಷಮೆ ಯಾಚಿಸಿಬಿಡು

ನಾಲ್ಕು ಕಾಲಿನ ರಥವೇರೋ ಮುನ್ನ
ಸೌದೆಗೆ ಬೆಂಕಿ ಹಚ್ಚೋ ಮುನ್ನ
ಕ್ರೋಧ ಬಿಡು, ಆಕ್ರೋಶ ಬಿಡು
ಇದ್ದುದರಲ್ಲೇ ಸಂತೃಪ್ತಿ ಪಡು
ಸಜ್ಜನರ ಸಂಗದಿ ಸುಖವ ಪಡು

 

ಭವ ಬಂಧನ

ಹೊರಗೆಡಹಲು ಎನ್ನ ಮನದಾಳದ ಅಳಲು
ಮೂಲೆ ಹಿಡಿದು ನಾ ಗಟ್ಟಿಯಾಗಿ ಅಳಲು

ತಲೆ ನೇವರಿಸಿದಳು ತಾಯಂತಹ ಅತ್ತೆ
ಏನಂತಹ ದುಗುಡ ನೀನೇಕೆ ಅತ್ತೆ

ಸೂರ್ಯ ತಾ ಮುಳುಗಿಹನು ಇದು ಸಂಧ್ಯಾಕಾಲ
ಇಂಥದೇ ಸಂಜೆ ಅಪ್ಪನ ಜೀವಕದು ಸಂಧ್ಯಾಕಾಲ

ಹೇಳಲಾಗಲಿಲ್ಲ ಹೃದಯದಿ ಅಡಗಿದ್ದ ಭಾವ
ಇದ್ದುದಿಬ್ಬರೇ ಸಂತೈಸಲು ಆ ನನ್ನ ಅಕ್ಕ ಭಾವ

ಅಕ್ಕಗೆ ನುಡಿದಿದ್ದನವ ಇವಳನ್ನು ನೀ ಸಾಕು
ಬಂಧುಗಳಿಲ್ಲದ ಈ ಊರು ಅವಳಿಗಿನ್ನು ಸಾಕು

ಹೆತ್ತಮ್ಮನಿಲ್ಲ, ಸಲುಹಿದ ಅಪ್ಪನಿಲ್ಲ, ಏನಾಗುವುದೋ ಎನ್ನ ಬಾಳು
ಕಂಕಣ ಬಲ ಒದಗಿಸಿ ಹರಸಿಹಳು ಅಕ್ಕ ನೀ ನೂರ್ಕಾಲ ಬಾಳು

ತಂಪನೆಯ ಗಾಳಿಯೊಂದಿಗೆ ಸೂರ್ಯ ಮುಳುಗುವಾ ಹೊತ್ತು
ಬಂದಿದ್ದಳು ಅಕ್ಕ ದೂರಾಗುವ ಸಂದೇಶವಾ ಹೊತ್ತು

ಮುಪ್ಪಾದವರ ಸೇವೆಗೆ ಭಾವನ ಕೂಗಿ ಕರೆದಿತ್ತು ಕರ್ತವ್ಯದ ಕರೆ
ಏಂದೋ ಒಮ್ಮೆ ನೋಡುವ ಅಕ್ಕಳಿಗಿನ್ನು ಕೇವಲ ದೂರವಾಣಿ ಕರೆ

ಎನ್ನವರೆಲ್ಲ ದೂರಾಗುತ್ತಿಹರತ್ತೆ ನಾನೇನ ಮಾಡಿರುವೆ ಪಾಪ
ಹೊಟ್ಟೆ ಹಸಿವಿನಿಂದ ಅಳಲು ಹತ್ತಿತ್ತು ಮಲಗಿದ್ದ ನನ್ನ ಪಾಪ

ನವ ಬಂಧನವು ಸೆಳೆದಾಗ ಹಳೆ ಬಂಧನಗಳು ಹರಿವುದೇ?
ಹಳೆ ಬಂಧನದ ಮೌಲ್ಯ ನವ ಪೀಳಿಗೆಯಲ್ಲೂ ಹರಿವುದೇ?

ಟಿಪ್ಪಣಿ :- ಹಲವಾರು ಬಾರಿ ಪದವೊಂದೇ ಆದರೂ ಅವುಗಳ ಅರ್ಥ ಬೇರೆ ಇರುತ್ತದೆ. ಅಂತಹ ಕೆಲವು ಪದಗಳನ್ನು ತೆಗೆದುಕೊಂಡು ಕವನ ರೂಪದಲ್ಲಿ ಭವ ಬಂಧನದ ಬಗೆಗಿನ ಒಂದು ಸನ್ನಿವೇಶವನ್ನು ಹೆಣೆದಿದ್ದೇನೆ. ಕವನದಲ್ಲಿ ಅಕ್ಕ-ತಂಗಿಯರ ಬಾಂಧವ್ಯವಿದೆ. ತಂದೆಯ ಸ್ಥಾನದಲ್ಲಿ ನಿಲ್ಲುವ ಭಾವನ ಚಿತ್ರಣವಿದೆ. ಹೊಸ ಬಂಧನಕ್ಕೆ ಸಿಲುಕುತ್ತಿದ್ದಂತೆ ಜೊತೆ ಹಳೆಯ ಬಾಂಧವ್ಯವು ಮಸುಕಾಗುವ ಕ್ರೂರ ಸತ್ಯವೂ ಅಡಕವಾಗಿದೆ. ಅದಲ್ಲದೆ, ನಾವು ಒಬ್ಬರಿಗೆ ಋಣಿಯಾಗಿದ್ದೇವೆ ಎಂದು ನಮ್ಮ ಮುಂದಿನವರೂ ಅದರಂತೆ ಋಣಿಯಾಗಿರಬೇಕೇ ಎಂಬ ಪ್ರಶ್ನೆಯೂ ಇದೆ…. ನಿಮಗೆ ಉತ್ತರ ಗೊತ್ತೆ ?

 Posted by at 10:00 PM