Jul 222009
 

Shankar Hegdeಕನ್ನಡ ಸಾಹಿತ್ಯ ರಂಗದ ನಾಲ್ಕನೇ ಸಾಹಿತ್ಯೋತ್ಸವ  

 

ಕನ್ನಡ ಸಾಹಿತ್ಯ ರಂಗದ ನಾಲ್ಕನೇ ವಸಂತ ಸಾಹಿತ್ಯೊತ್ಸವವು ಕಾವೇರಿ ಕನ್ನಡ ಸಂಘದ ಸಹಯೋಗದಲ್ಲಿ ಮೇ ೩೦ ಮತ್ತು ೩೧, ೨೦೦೯ ರಂದು ರಾಕ್‍ವಿಲ್ (ಮೇರಿಲ್ಯಾಂಡ್) ನಲ್ಲಿರುವ ಶೇಡೀ ಗ್ರೋವ್ ವಿಶ್ವವಿದ್ಯಾಲಯದ ಆವರಣದಲ್ಲಿ  ಯಶಸ್ವಿಯಾಗಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಧುನಿಕ ಕನ್ನಡದ ಇಬ್ಬರು ಪ್ರಮುಖ ಲೇಖಕಿಯರಾದ –  ಡಾ. ವೀಣಾ ಶಾಂತೇಶ್ವರ ಮತ್ತು ಶ್ರೀಮತಿ ವೈದೆಹಿ – ಆಗಮಿಸಿ ಎರಡು ದಿನಗಳ ಕಾಲ ನಮ್ಮನ್ನು ಕನ್ನಡ ಕತೆ-ಕಾದಂಬರಿ ಲೋಕಕ್ಕೆ ಕರೆದೊಯ್ದು ಸಾಹಿತ್ಯದ ರಸದೂಟವನ್ನುಣಿಸಿದರು. ಜೊತೆಗೆ ವುಡ್‍ಲ್ಯಾಂಡ್ಸ್ ಹೋಟೆಲಿನ ರುಚಿ-ರುಚಿ ಊಟ-ಉಪಹಾರಗಳ ರಸದೂಟಕ್ಕೂ ಏನೂ ಕೊರತೆಯಿರಲಿಲ್ಲ.

ಸಮ್ಮೇಳನದ ಮೊದಲ ದಿನದ ಕಾರ್ಯಕ್ರಮ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾಯಿತು.  ರಂಗದ ಅಧ್ಯ಼ಕ್ಷ ಎಚ್. ವೈ, ರಾಜಗೊಪಾಲ್ ಹಾಗೂ ಕಾವೇರಿ ಕನ್ನಡ ಕೂಟದ ಅಧ್ಯಕ್ಷೆ ಮೀನಾ ರಾವ್ ಅವರ ಸ್ವಾಗತ ಭಾಷಣಗಳ ನಂತರ, ರಾಜಗೊಪಾಲ್ ಅವರು ಡಾ. ವೀಣಾ ಶಾಂತೇಶ್ವರ್ ಅವರನ್ನೂ, ಶಶಿಕಲಾ ಚಂದ್ರಶೇಖರ್ ಅವರು ವೈದೇಹಿ ಅವರನ್ನು ಪರಿಚಯ ಮಾಡಿಕೊಟ್ಟರು. ಬಳಿಕ ಡಾ. ವೀಣಾ ಶಾಂತೇಶ್ವರ್ ಅವರು ಸಾಹಿತ್ಯ ರಂಗದ ಹೊಸ ಪ್ರಕಟಣೆ “ಕನ್ನಡ ಕಾದಂಬರಿ ಲೋಕದಲ್ಲಿ – ಹೀಗೆ ಹಲವು” ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಪುಸ್ತಕದ ಪ್ರಧಾನ ಸಂಪಾದಕ ಮೈ.ಶ್ರೀ.ನಟರಾಜ ಹಾಗೂ ಸಂಪಾದಕ ಮಂಡಳಿಯ ಪರವಾಗಿ ಗುರುಪ್ರಸಾದ ಕಾಗಿನೆಲೆ ಅವರು ಪುಸ್ತಕ ಪ್ರಕಟನೆಯ ಹಿನ್ನೆಲೆ ಮತ್ತು ಸಂಪಾದನೆಯ ಅನುಭವವನ್ನು ಹಂಚಿಕೊಂಡರು. ಸಮ್ಮೇಳನದ ಅಂಗವಾಗಿ ಹೊರತಂದ ಈ ಪುಸ್ತಕದಲ್ಲಿ ಕಳೆದ ಮೂರು ದಶಕಗಳಲ್ಲಿ ಪ್ರಕಟವಾದ ೨೪ ಕನ್ನಡ ಕಾದಂಬರಿಗಳ ಪರಿಚಯಾತ್ಮಕ ವಿಮರ್ಶೆ (ವಿಮರ್ಶಾತ್ಮಕ ಪರಿಚಯ) ಗಳಿವೆ.  ಎಲ್ಲಾ ೨೪ ಲೇಖನಗಳೂ ಅಮೆರಿಕೆಯಲ್ಲಿ ವಾಸವಾದ ಕನ್ನಡಿಗರಿಂದಲೇ ಬರೆದವುಗಳು.

ಮುಖ್ಯ ಅತಿಥಿ ಡಾ. ವೀಣಾ ಶಾಂತೇಶ್ವರರು ತಮ್ಮ ಭಾಷಣದಲ್ಲಿ “ಕನ್ನಡ ಕಾದಂಬರಿಯಲ್ಲಿ ಕಳೆದ ಕಾಲು ಶತಮಾನ” ವಿಷಯದ ಮೇಲೆ ಒಂದು ಘಂಟೆ ನಿರರ್ಗಳವಾಗಿ ಮಾತನಾಡಿದರು. ಕನ್ನಡದಲ್ಲಿ ಕಾದಂಬರಿ ಪ್ರಕಾರದ ಸಾಹಿತ್ಯದ ಉಗಮದಿಂದ ಪ್ರಾರಂಭಿಸಿ, ನವೋದಯ, ಪ್ರಗತಿಶೀಲ, ನವ್ಯ ಹಾಗೂ ನವ್ಯೋತ್ತರ ಘಟ್ಟಗಳ ಕಾದಂಬರಿಗಳ ವೈಶಿಷ್ಟ್ಯಗಳನ್ನು ಉದಾಹರಣೆಗಳೊಂದಿಗೆ ವಿವರವಾಗಿ ಚರ್ಚಿಸಿದರು. ಭಾಷಣದ ನಂತರ ಇನ್ನೊಬ್ಬ ಮುಖ್ಯ ಅತಿಥಿ ವೈದೇಹಿ ಅವರು ಮೈ.ಶ್ರೀ.ನಟರಾಜರ “ಜಾಲತರಂಗಿಣಿ”  ಪುಸ್ತಕವನ್ನು ವಿದ್ಯುಕ್ತವಾಗಿ ಬಿಡುಗಡೆ ಮಾಡಿದರು. ಮೊದಲ ದಿನದ ಕೊನೆಯ ಸಾಹಿತ್ಯಕ ಕಾರ್ಯಕ್ರಮ ಅಮೇರಿಕನ್ನಡಿಗರ ಸಾಹಿತ್ಯ ಗೋಷ್ಠಿ. ಮನೋರಂಜಕವಾಗಿ, ಸಂಭಾಷಣೆಯ ರೂಪದಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟವರು ನಳಿನಿ ಮೈಯ ಮತ್ತು ಮಧು ಕೃಷ್ಣಮೂರ್ತಿಯವರುಗಳು. ಇದರಲ್ಲಿ ಹನ್ನೆರಡು ಕೆಲ ಹೊಸ ಮತ್ತೆ ಕೆಲ ಪರಿಚಿತ ಬರಹಗಾರರು ತಮ್ಮ ಕಥೆ, ಕವನ, ಹರಟೆಗಳನ್ನು ರಸವತ್ತಾಗಿ ಓದಿ ರಂಜಿಸಿದರು. ಮೊದಲ ದಿನದ ಕಾರ್ಯಕ್ರಮ ಕಾವೇರಿ ಕನ್ನಡ ಕೂಟದ ಹವ್ಯಾಸಿ ಕಲಾವಿದರಿಂದ “ರಾಧೇಯ” ಮತ್ತು “ಹಿರಣ್ಯಕಶಿಪು” ನಾಟಕಗಳೊಂದಿಗೆ ಮುಕ್ತಾಯವಾಯಿತು.

ಎರಡನೇ ದಿನದ ಪ್ರಮುಖ ಕಾರ್ಯಕ್ರಮಗಳೆಂದರೆ ವೈದೇಹಿ ಅವರಿಂದ ಕೃತಿಭಾಗ ವಾಚನ,  ಅಮೇರಿಕನ್ನಡ ಬರಹಗಾರರಿಂದ ಇತ್ತೀಚೆಗ ಪ್ರಕಟಿಸಿದ ಪುಸ್ತಕಗಳ ಪರಿಚಯ-ವಿಶ್ಲೇಷಣೆ, ಮತ್ತು ಮುಖ್ಯ ಅತಿಥಿಗಳ ಜೊತೆ ಕೆಲವು ಸ್ಥಳೀಯ ಸದಸ್ಯರು ಕೂಡಿ ನಡೆಸಿಕೊಟ್ಟ ಸಂವಾದ (ಪ್ರಶ್ನೋತ್ತರ) ಕಾರ್ಯಕ್ರಮ. ಪ್ರಾರಂಭದಲ್ಲಿ, ಶ್ರೀವತ್ಸ ಜೋಶಿ ಮತ್ತು ಶಿವು ಭಟ್ ಅವರು ಗಣಕಯಂತ್ರ ಮತ್ತು ಅಂತರ್‌ಜಾಲಲ್ಲಿ ಕನ್ನಡವನ್ನು“ಬರಹ” ತಂತ್ರಾಂಶದ ಮೂಲಕ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದೆಂದು ಪ್ರತ್ಯಕ್ಷ ಉದಾಹರಣೆಗಳೊಂದಿಗೆ ತೋರಿಸಿಕೊಟ್ಟರು. ವೈದೇಹಿಯವರು ತಮ್ಮ “ವೈದೇಹಿ ಅವರ ಆಯ್ದ ಕವಿತೆಗಳು” ಪುಸ್ತಕದಿಂದ ಎರಡು ಕವನಗಳನ್ನು ಮತ್ತು  “ವೈದೇಹಿ ಅವರ ಆಯ್ದ ಕಥೆಗಳು”  ಪುಸ್ತಕದಿಂದ “ಅಮ್ಮಚ್ಚಿಯೆಂಬ ನೆನಪು” ಕಥೆಯನ್ನು ಭಾವಪೂರ್ಣವಾಗಿ ಓದಿ ನಮ್ಮನ್ನೆಲ್ಲ ರಂಜಿಸಿ, ನಗಿಸಿ, ನಮ್ಮ-ನಮ್ಮ ಜೀವನಾನುಭದ “ಅಮ್ಮಚ್ಚಿ” ಯನ್ನು ನೆನಪಿಗೆ ತಂದುಕೊಟ್ಟರು.

ತ್ರಿವೇಣಿ ಶ್ರೀನಿವಾಸ ರಾವ್ ನಿರ್ವಸಿಕೊಟ್ಟ “ಹೆಮ್ಮೆ ಬರಿಸುವವರು ನಮ್ಮ ಬರಹಗಾರರು” ಕಾರ್ಯಕ್ರಮದಲ್ಲಿ ಕಳೆದ ವಸಂತೋತ್ಸವದಲ್ಲಿ ಬಿಡುಗಡೆಯಾದ ರಂಗದ “ನಗೆಗನ್ನಡಂ ಗೆಲ್ಗೆ” ಪುಸ್ತಕವನ್ನೊಳಗೊಂಡು, ಒಟ್ಟೂ ಎಂಟು ಪುಸ್ತಕಗಳನ್ನು ವಿವಿಧ ಓದುಗರು ಅರ್ಥಪೂರ್ಣವಾಗಿ ವಿಮರ್ಶಿಸಿದರು. ವಿಮರ್ಶಿಸಿದ ಪುಸ್ತಕಗಳಲ್ಲಿ, ನಮ್ಮ ಶಿಕಾಗೋದವರೇ ಆದ ತ್ರಿವೇಣಿ ಶ್ರೀನಿವಾಸ ರಾವ್ “ತುಳಸೀವನ” ವೂ ಒಂದು.

ರವಿವಾರದ ರಸದೂಟದ ಬಳಿಕ “ಇಂದಿನ ಕನ್ನಡ ಬರಹಗಾರ್ತಿಯರು”  ವಿಷಯದ ಮೇಲೆ ಸಂವಾದ ಕಾರ್ಯಕ್ರಮ – ನಡೆಸಿಕೊಟ್ಟವರು ಶಶಿಕಲಾ ಚಂದ್ರಶೇಖರ್. ತುಂಬ ಸ್ವಾರಸ್ಯಕರವಾಗಿದ್ದ ಈ ಕಾರ್ಯಕ್ರಮದಲ್ಲಿ ವೀಣಾ ಶಾಂತೇಶ್ವರ್ ಮತ್ತು ವೈದೇಹಿ ಅವರ ಜೊತೆಯಲ್ಲಿ ನಳಿನಿ ಮೈಯ, ತ್ರಿವೇಣಿ ಶ್ರೀನಿವಾಸ ರಾವ್, ಜ್ಯೋತಿ ಮಹಾದೇವ್, ವಿಮಲಾ ರಾಜಗೋಪಾಲ್, ಹಾಗೂ ಮೀರಾ ಪಿ. ಆರ್.  ಅವರೂ ಭಾಗವಹಿಸಿದ್ದರು. ಅತಿ ಉತ್ಸಾಹದ ಶ್ರೋತೃಗಳಿಂದ ಬಂದ ಪ್ರಶ್ನೆಗಳು ವೈವಿದ್ಯಮಯವಾಗಿದ್ದರೆ, ಉತ್ತರಗಳೂ ಕೂಡ ಅಷ್ಟೇ ಸ್ವಾರಸ್ಯಮಯವೂ, ವಿಚಾರಾತ್ಮಕವೂ ಆಗಿದ್ದವು. ಕೊನೆಯದಾಗಿ ಕಾವೇರಿ ಸಂಘದ ಕನ್ನಡ ಕಲಿಯೋಣ ಶಾಲಾ ಮಕ್ಕಳ ವಿವಿಧ ವಿನೋದಾವಳಿ ಮತ್ತು ವಂದನಾರ್ಪಣೆಗಳೊಂದಿಗೆ, ವಸಂತೋತ್ಸವ ಕಾರ್ಯಕ್ರಮ ಮುಕ್ತಾಯವಾಯಿತು.

-ಶಂಕರ ಹೆಗ್ಗಡೆ

 Posted by at 1:20 AM