Sep 192011
 

Chandrashekahara Kambaraಡಾ.ಚಂದ್ರಶೇಖರ ಕಂಬಾರ ಅವರ ಸಮಗ್ರ ಸಾಹಿತ್ಯಕ್ಕೆ 2011ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ. ಇದು ಕನ್ನಡಕ್ಕೆ ಸಿಕ್ಕಿರುವ 8ನೇ ಜ್ಞಾನಪೀಠ ಕಿರೀಟಜ್ಞಾನಪೀಠವೆಂಬುದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ. ಬೆಳಗಾವಿಯ ಘೋಡಗಿರಿಯಲ್ಲಿ ಜನಿಸಿದ ಡಾ. ಚಂದ್ರಶೇಖರ ಕಂಬಾರರು ಬಹುಮುಖ ಪ್ರತಿಭೆ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರರಾಗಿ ಅವರು ಹಲವು ಕ್ಷೇತ್ರಗಳಲ್ಲಿ ತನ್ನ ಚಾಪನ್ನು ಮೂಡಿಸಿದ್ದಾರೆ. ಜಾನಪದ ಸೊಗಡನ್ನು ಕನ್ನಡ ಸಾಹಿತ್ಯಕ್ಕೆ ತಂದವರು.

ಹೇಳತೇನ ಕೇಳ, ಸಿರಿಸಂಪಿಗೆ, ಬೆಳ್ಳಿಮೀನು, ಕಾಡುಕುದುರೆ, ನಾಯಿಕಥೆ, ಜೋಕುಮಾರಸ್ವಾಮಿ, ಮಹಾಮಾಯಿ, ಹರಕೆಯ ಕುರಿ, ಋಷ್ಯಶೃಂಗ, ಬೆಪ್ಪುತಕ್ಕಡಿ ಭೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಕಂಬಾರರ ಪ್ರಮುಖ ಕೃತಿಗಳು. ಶಿಖರ ಸೂರ್ಯ ೨೬ ವರ್ಷಗಳ ನಂತರ ಇತ್ತೀಚೆಗೆ ಹೊರಬಂದ ಕಾದಂಬರಿ. ಈ ಕೃತಿಗೆ ಠ್ಯಾಗೋರ್ ಪ್ರಶಸ್ತಿ ದೊರೆತಿದೆ. ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ ಇವುಗಳಲ್ಲಿ ಪ್ರಮುಖವಾದುವು. ಅವರ ‘ಸಿರಿಸಂಪಿಗೆ’ ನಾಟಕಕ್ಕೆ 1991ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.
ಕಂಬಾರರು ಬೆಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ಚಂದ್ರಶೇಖರ ಕಂಬಾರರಿಗೆ ಕನ್ನಡ ಸಾಹಿತ್ಯ ರಂಗದ ಹಾರ್ದಿಕ ಅಭಿನಂದನೆಗಳು!

 Posted by at 2:32 PM
Apr 232011
 

ಕನ್ನಡಿಗರು ತಾವು ಹುಟ್ಟಿದ ನಾಡನ್ನು ಬಿಟ್ಟು ಮತ್ತೊಂದು ದೇಶಕ್ಕೆ ವಲಸೆ ಹೋಗುವ ಪರಿಪಾಠ ಹಿಂದಿನಿಂದಲೂ ಬಂದಿದೆ. ವಲಸೆಗೆ ಕಾರಣವೇನೇ ಇರಬಹುದು, ಆದರೆ ನಾಡನ್ನು ಬಿಟ್ಟ ಮಾತ್ರಕ್ಕೆ ಭಾಷೆಯ ಬಗೆಗಿನ ಒಲವನ್ನು ತೊರೆದು ಹೋಗದೆ, ತಮ್ಮೊಂದಿಗೇ ಕೊಂಡೊಯ್ದಿದ್ದಾರೆ. ಹೀಗೆ ವಲಸೆ ಹೋದ ಕನ್ನಡಿಗರು ತಮ್ಮ ದಿನನಿತ್ಯದ ಜಂಜಾಟದ ಜೀವನದಲ್ಲಿಯೂ ತಮ್ಮ ಅಮೂಲ್ಯವಾದ ಸಮಯವನ್ನು, ಕನ್ನಡ ಭಾಷೆಯನ್ನು ಉಳಿಸಿ, ಬೆಳೆaಸಿ, ಕಲಿಸುವುದಕ್ಕಾಗಿ ವಿನಿಯೋಗಿಸಿದ್ದಾರೆ. ವಲಸೆ ಬಂದ ಜನರ ಜೀವನಾಧಾರದ ಮೂಲವುa ಏನೇ ಇದ್ದರೂ ಭಾಷೆಗಾಗಿ ದುಡಿಯಲು ವಿನಿಯೋಗಿಸುವ ಈ ಸಮಯವು ಸ್ವಯಂ ಸೇವೆ ಮಾತ್ರ. ಭಾಷೆ ಎಂಬುದು ಒಂದು ಕುರುಹು. ಇಬ್ಬರು ವ್ಯಕ್ತಿಗಳ ನಡುವೆ ವಿಚಾರ ವಿನಿಮಯಕ್ಕೆ ಬಳಸಿಕೊಳ್ಳುವ ಸಾಧನ ಎಂಬುವುದರ ಜೊತೆಗೆ ‘ಭಾಷೆ’ ಎಂಬುದು ಆ ನಾಡಿನ ಕಲೆ, ಸಂಸ್ಕೃತಿ, ಆಹಾರ ಪದ್ದತಿ ಮತ್ತಿತರ ಅಂಶಗಳನ್ನೂ ಅಡಕವಾಗಿಸಿಕೊಂಡಿದೆ. ಲಾಭದಾಯಕವೂ ಅಲ್ಲದ, ಸಂಭಾವನೆಯನ್ನೂ ತರದ ಭಾಷಾಭಿವೃದ್ದಿ ಕೆಲಸವನ್ನು ಮಾಡಲು ಇವರಲ್ಲಿ ಮೂಡಿರುವ ಪ್ರೇರಣೆಯಾದರೂ ಏನು? ಈ ರೀತಿ ಕೈಗೊಂಡ ಕಾರ್ಯಗಳಿಂದ ಅವರು ಎದುರು ನೋಡುತ್ತಿರುವ ಫಲಾಪೇಕ್ಷೆ ಏನು? ಅಂತಹ ಅವಶ್ಯಕತೆ ಏನಿದೆ? ಒಂದೇ ನಾಡಿನಿಂದ ಬಂದು ನೆಲೆಸಿದ ಮಾತ್ರಕ್ಕೆ ತಮ್ಮದೇ ಒಂದು ಸಮುದಾಯವನ್ನು ರಚಿಸಿಕೊಳ್ಳುವ ಉದ್ದೇಶ ಏನು ಎಂಬೆಲ್ಲ ಅಂಶಗಳತ್ತ ಪಕ್ಷಿನೋಟ ಬೀರುತ್ತ, ಇಂತಹ ಹೊಣೆಗಾರಿಕೆಯನ್ನು ತಮ್ಮ ಹೆಗಲಿಗೇರಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿರುವ ಹೊರನಾಡ ಕನ್ನಡಿಗರ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನದ ಉದ್ದೇಶ.

ಕಳೆದ ಶತಮಾನದ ಅರವತ್ತು-ಎಪ್ಪತ್ತರ ದಶಕದಲ್ಲಿ ಪ್ರಮುಖವಾಗಿ ವೈದ್ಯರು, ಇಂಜಿನಿಯರ್’ಗಳ ವಲಸೆಯಿಂದ ಆರಂಭವಾಗಿತ್ತು. ಆರಂಭದಲ್ಲಿ ವಲಸೆಯ ಸಂಖ್ಯೆ ಕಡಿಮೆಯಿದ್ದು ನಂತರ ಎಂಬತ್ತರ ದಶಕದಲ್ಲಿ ಸ್ವಲ್ಪ ಹೆಚ್ಚೇ ಎನ್ನಬಹುದಾದ ಮಟ್ಟಿಗೆ ಏರಿತ್ತು. ಹೀಗೆ ಹೊರದೇಶಕ್ಕೆ ಕಾಲಿಟ್ಟ ಸಂಸಾರಗಳಲ್ಲಿ, ಮೊದಲಿಗೆ ಕನ್ನಡ ಭಾಷೆ ಕೇವಲ ಗಂಡ-ಹೆಂಡಿರ ನಡುವೆ ಸೀಮಿತವಾಗಿದ್ದು, ನಂತರ ಹೊರಗೆಲ್ಲೋ ಅಂಗಡಿ ಮುಂಗಟ್ಟಿನಲ್ಲಿ, ಕೇಳಿಬಂದ ಕನ್ನಡದ ದನಿಗೆ ತಲೆ ತಿರುಗಿಸಿ ಅವರ ಪರಿಚಯ ಮಾಡಿಕೊಳ್ಳುವುದರ ಮೂಲಕ ಮುಂದುವರೆಯಿತು. ಮುಂದೆ ನಾಲ್ಕಾರು ಕನ್ನಡದ ಸಂಸಾರಗಳು ಜೊತೆಯಾಗಿ ವಾರಾಂತ್ಯವೇ ಅಲ್ಲದೇ, ಪ್ರಮುಖ ಹಬ್ಬ-ಹರಿದಿನಗಳನ್ನು ಒಟ್ಟಾಗಿ ಆಚರಿಸಿಕೊಳ್ಳುತ್ತ, ನಾಲ್ಕು ಸಂಸಾರಗಳ ಗುಂಪು ನಲವತ್ತಾಗಿ ಬೆಳೆದು ಮುಂದೊಂದು ದಿನ ತಮ್ಮದೇ ಒಂದು ಸಂಘವನ್ನೇಕೆ ಸ್ಥಾಪಿಸಿಕೊಳ್ಳಬಾರದು ಎಂಬ ಆಲೋಚನೆ ಮೊಳಕೆಯೊಡೆದು ಅದು ಇಂದಿಗೆ ಮುನ್ನೂರು-ನಾನ್ನೂರು ಕುಟುಂಬಗಳನ್ನು ಒಟ್ಟು ಸೇರಿಸಿದ ಹೆಮ್ಮೆ ಹೊತ್ತು ನಿಂತ ಹಲವಾರು ನಿದರ್ಶನಗಳಿವೆ.

ಕನ್ನಡ ಜನರು ಒಂದೆಡೆ ಸೇರಿ, ಒಂದಾಗಿ ಬೆರೆತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸುವುದು, ಸಾಧ್ಯವಾದಲ್ಲಿ ಮತ್ತೊಂದು ಸ್ಥಳದ ಕಲಾವಿದರನ್ನು ತಮ್ಮಲ್ಲಿ ಕರೆಸಿ ಅವರ ಕಲೆಯನ್ನು ಪ್ರೋತ್ಸಾಹಿಸುವುದು ಮತ್ತಿತರ ಸಾಂಘಿಕ ಚಟುವಟಿಕೆಗಳು, ಇಂದು ಹೊರನಾಡಿನಲ್ಲಿ ಕನ್ನಡ ಬೆಳೆಯುವುದಕ್ಕೆ ಸಹಕಾರಿಯಾಗಿದೆ. ಈ ರೀತಿಯ ಒಟ್ಟುಗೂಡುವಿಕೆ ಕೇವಲ ಮನರಂಜನೆಗಷ್ಟೇ ಸೀಮಿತಗೊಳ್ಳದೇ, ತಮ್ಮ ನಾಡಿನ ಜನರ ಸುಖ-ದು:ಖಗಳಲ್ಲಿ ಭಾಗಿಯಾಗುವುದು, ಕರ್ನಾಟಕದ ಸಂತ್ರಸ್ತ ಕುಟುಂಬಗಳಿಗೆ ದೇಣಿಗೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ತಮ್ಮ ವಲಯದಲ್ಲೇ ಮಕ್ಕಳಿಗೆ ಕನ್ನಡ ಕಲಿಸುವುದು ಮುಂತಾದವು ನೆಡೆಯುತ್ತದೆ.

ಹೀಗೆ ಕನ್ನಡ ಜನರ ಸಂಘಗಳು ಎಲ್ಲೆಡೆ ಬೆಳೆದು ಸ್ಥಿರವಾದ ಹೆಜ್ಜೆ ಊರಿದಂತೇ, ಇನ್ನಿತರ ಸಂಘಗಳ ನಡುವಿನ ಸಂಬಂಧ ಹೆಚ್ಚಿಸಿಕೊಳ್ಳಲು, ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ರಾಷ್ಟ್ರ ಮಟ್ಟದಲ್ಲಿ ತಮ್ಮ ದನಿಯನ್ನು ಗುರುತಿಸಿಕೊಳ್ಳಲು, ಕನ್ನಡ ನಾಡಿಗೆ ತಮ್ಮ ದನಿಯನ್ನು ತಲುಪಿಸಲು ಒಂದು ಸಾಮಾನ್ಯ ವೇದಿಕೆಯ ಅವಶ್ಯಕತೆ ಇದೆ ಎನ್ನಿಸಿದಾಗ ಆರಂಭವಾಗಿದ್ದು “ಅಕ್ಕ”. ಅಮೇರಿಕದಲ್ಲಿನ ಕನ್ನಡ ಸಂಘಗಳ ನಡುವಿನ ಸೌಹಾರ್ದತೆ ಬೆಳೆಸಲು, ಕನ್ನಡ ಪರ ಚಟುವಟಿಕೆಗಳನ್ನು ನೆಡೆಸಲು, ಕನ್ನಡಿಗರ ನಡುವಿನ ಸಂಪರ್ಕ ವೃದ್ದಿಸಲು ಹುಟ್ಟಿಕೊಂಡ “Association of Kannada Kootas of America”ವೇ ’ಅಕ್ಕ’.
ಅಮೇರಿಕದಂತಹ ದೊಡ್ಡ ದೇಶದಲ್ಲಿ, ಹೆಚ್ಚಾಗಿ ಪೂರ್ವ, ಪಶ್ಚಿಮ, ಮಧ್ಯ ದೇಶದಲ್ಲಿ ಕೇಂದ್ರೀಕೃತವಾಗಿರುವ ಅರವತ್ತು ಸಾವಿರಕ್ಕೂ ಹೆಚ್ಚು ಕನ್ನಡಿಗರ ಅಪೇಕ್ಷೆಯನ್ನು ಪೂರೈಸಲು ಒಂದೇ ಸಾಂಘಿಕ ಶಕ್ತಿಗೆ ಕೈ ಸಾಲದೆ, ಅದೇ ಉದ್ದೇಶದಿಂದ ದುಡಿಯಲು ತಲೆ ಎತ್ತಿದ್ದ ಮತ್ತೊಂದು ವೇದಿಕೆ ‘ನಾರ್ತ್ ಅಮೇರಿಕ ವಿಶ್ವ ಕನ್ನಡ ಅಗರ’ ಅಂದರೆ ’ನಾವಿಕ’. ಹೊರನಾಡಿನಲ್ಲಿ ಕನ್ನಡವು ಕೇವಲ ಅಮೇರಿಕದಲ್ಲಿ ಮಾತ್ರವಲ್ಲದೇ, ಸಿಂಗಪುರ್, ಮಲೇಷ್ಯಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಜಪಾನ್, ಕೆನಡ ಮುಂತಾದ ದೇಶಗಳಲ್ಲೂ ಕನ್ನಡ ಕಂಪನ್ನು ಹೊರನಾಡ ಕನ್ನಡಿಗರು ಹರಡಿದ್ದಾರೆ.

ಉಲ್ಲೇಖಿಸಲೋಗ್ಯ ಉತ್ತಮ ಉದಾಹರಣೆ ಎಂದರೆ, ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಶ್ರೀ.ಗೋಪೀನಾಥ್ ರಾವ್. ಇವರು ಕನ್ನಡ ಭಾಷೆಯನ್ನು ಬೆಳೆಸುವತ್ತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಬಹುದು. ಅಂತರ್ಜಾಲದ ಪೋರ್ಟಲ್ ’ಕನ್ನಡಧ್ವನಿ’ಯ ಮೂಲಕ ಹಲವಾರು ಬರಹಗಾರರನ್ನು ಒಂದೆಡೆ ಸೇರಿಸಿದ್ದಾರೆ. ಕೊಲ್ಲಿ ರಾಷ್ಟ್ರದಲ್ಲಿ ಅನೇಕ ಕಡೆ ಕನ್ನಡ ಸಂಘಗಳಿವೆ. ಅದರಲ್ಲಿ ಕೆಲವು ’ಕನ್ನಡ ಸಂಘ ಬಹರೇನ್, ಅಬು-ಧಾಬಿ ಕರ್ನಾಟಕ ಸಂಘ, ಕನ್ನಡ ಸಂಘ ದುಬೈ’ ಹೀಗೆ. ವರ್ಷದುದ್ದಕ್ಕೂ ಒಂದಲ್ಲ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಭಾಷೆಯನ್ನು ಬೆಳೆಸುವಲ್ಲಿ ಉತ್ತಮ ಪ್ರಯತ್ನಗಳನ್ನೇ ಮಾಡುತ್ತಿದ್ದಾರೆ. ಸಂಗೀತ ಕಾರ್ಯಕ್ರಮಗಳು, ನಾಟಕ, ಕ್ರೀಡೆ, ಸಾಹಿತ್ಯ ಕೂಟ, ಯಕ್ಷಗಾನ, ವಿಚಾರ ವೇದಿಕೆ, ಮಾಸಿಕ ಪತ್ರಿಕೆಗಳು, ಕನ್ನಡ ಗ್ರಂಥಾಲಯ ಹೀಗೆ ಹಲವು ವಿಧದಲ್ಲಿ ಭಾಷೆಯನ್ನು ಬೆಳೆಸುವ ಕಾರ್ಯಾಚರಣೆಗಳು ನೆಡೆಯುತ್ತವೆ. ಸಾಹಿತ್ಯ ಕ್ಶೇತ್ರದಲ್ಲಿ ಒಂದು ಅದ್ಬುತ ಪ್ರಯತ್ನ ಅಮೇರಿಕದಲ್ಲಿ ನೆಡೆದಿದೆ. ಎರಡು ವರ್ಷಗಳಿಗೊಮ್ಮೆ ’ಕನ್ನಡ ಸಾಹಿತ್ಯ ರಂಗ’ವು ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ನೆಡೆಸುತ್ತದೆ. ಎರಡು ದಿನಗಳ ಈ ಕಾರ್ಯಕ್ರಮವನ್ನು, ಸಾಹಿತ್ಯ ರಂಗವು ತಾವು ಉತ್ಸವ ನೆಡೆಸುವ ಪ್ರಾಂತ್ಯದ ಕನ್ನಡ ಕೂಟದ ಸಹಯೋಗದೊಂದಿಗೆ ನೆಡೆಯುತ್ತದೆ. ಅಮೇರಿಕನ್ನಡ ಬರಹಗಾರರ ಪುಸ್ತಕಗಳ ಮಾರಾಟ ಮಳಿಗೆ, ಕರ್ನಾಟಕದಿಂದ ಆಹ್ವಾನಿಸಲ್ಪಟ್ಟ ಹೆಸರಾಂತ ಸಾಹಿತಿಗಳ ವಿಚಾರ ಧಾರೆ, ಅಮೇರಿಕನ್ನಡದವರ ಪುಸ್ತಕಗಳ ಬಗ್ಗೆ ವಿಮರ್ಶೆ, ಕವಿಗೋಷ್ಟಿ ಮುಂತಾದವುಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಇಲ್ಲಿ ಚಲನಚಿತ್ರ ರಂಗದವರ ವೈಭವವಿಲ್ಲ, ರಾಜಕಾರಣಿಗಳ ಆಡಂಬರವಿಲ್ಲ. ಸಾಹಿತ್ಯ ರಂಗದ ಈ ಸಾಹಿತ್ಯೋತ್ಸವದಲ್ಲಿ ಎದ್ದು ಕಾಣುವ ಅಂಶವೆಂದರೆ ಸಹೃದಯ ವಾತಾವರಣ ಮತ್ತು ಸಮಯ ಪರಿಪಾಲನೆ.

ಕನ್ನಡ ಭಾಷೆಯ ಕಂಪನ್ನು ಹೊರದೇಶದಲ್ಲಿ ಹರಡುವ ಹಾದಿಯಲ್ಲಿ ಚಲನಚಿತ್ರದ ಪಾತ್ರವೂ ದೊಡ್ಡದು. ಅಮೇರಿಕದ ವಿಷಯ ಹೇಳಿದಲ್ಲಿ, ಒಂದು ಕಾಲಕ್ಕೆ ಭಾರತೀಯ ದಿನಸಿ ಅಂಗಡಿಗಳಲ್ಲಿ ಕೆಲವೇ ಹಳೆಯ ಕ್ಯಾಸೆಟ್’ಗಳು  ದೊರೆಯುತ್ತಿತ್ತು. ಕೆಲವು ದೊಡ್ಡ ನಗರಗಳಲ್ಲಿ ಮಾತ್ರ ಕರ್ನಾಟಕದಿಂದ ರೀಲ್ ತರಿಸಿ ಚಲನಚಿತ್ರ ತೋರಿಸುತ್ತಿದ್ದರು. ಇಂದು, ಹೊರದೇಶದಲ್ಲೇ ಕನ್ನಡ ಚಲನಚಿತ್ರ ವಿತರಕರಿದ್ದು, ಹೊಸ ಚಲನಚಿತ್ರಗಳನ್ನು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೋಡಿ ಆನಂದಿಸಬಹುದಾಗಿದೆ. ಹೊರದೇಶದಲ್ಲಿ ನೆಡೆವ ಕನ್ನಡ ಪರ ಚಟುವಟಿಕೆಗಳಲ್ಲಿ ಹಲವಾರು ಚಲನಚಿತ್ರ ಕಲಾವಿದರು ಬರುವುದು ಸಾಮಾನ್ಯ ನೋಟವಾಗಿದೆ. ಅಂತೆಯೇ ಕನ್ನಡ ಕಲೆ ಸಂಸ್ಕೃತಿಯನ್ನು ಮೆರೆಸುವ ಹಲವಾರು ಕಲಾವಿದರೂ ಹೊರದೇಶಕ್ಕೆ ಆಗಮಿಸಿ, ಹಲವಾರು ಊರುಗಳನ್ನು ಸುತ್ತಿ, ಕಾರ್ಯಕ್ರಮಗಳನ್ನು ನೆಡೆಸಿಕೊಡುತ್ತ, ಕನ್ನಡದ ಪ್ರಚಾರ ನೆಡೆಸುತ್ತಿದ್ದಾರೆ ಎಂದರೆ ಅತಿ ಅತಿಶಯೋಕ್ತಿಯಲ್ಲ. ಇದೇ ನಿಟ್ಟಿನಲ್ಲಿ ನೆಡೆಯುತ್ತಿರುವ ಮತ್ತೊಂದು ಕನ್ನಡ ಪರ ಪ್ರಚಾರ ಎಂದರೆ ಹೊರನಾಡಿನ ಕನ್ನಡದ ಎಫ್.ಎಂ ರೇಡಿಯೋ ಕಾರ್ಯಕ್ರಮಗಳಲ್ಲಿ ಮೂಡಿ ಬರುವ ಕನ್ನಡ ಚಲನಚಿತ್ರಗಳ ಗೀತೆಗಳು, ಭಾವಗೀತೆಗಳು, ವಿಚಾರ ವಿನಿಮಯ ಇತ್ಯಾದಿ. ವಿದೇಶದಲ್ಲಿ ಕನ್ನಡ ಬೆಳವಣಿಗೆಗೆ ಬರಹಗಾರರ ಕೊಡುಗೆ ಪ್ರಶಂಶನೀಯವಾದದ್ದು. ಅಮೇರಿಕದ ತಮ್ಮ ಮೂವತ್ತು ವರ್ಷಗಳ ಜೀವಿತದಲ್ಲಿ “ಅಮೇರಿಕನ್ನಡ” ಎಂಬ ದ್ವಿಮಾಸಿಕ ಒಂದರ ಪ್ರಧಾನ ಸಂಪಾದಕರಾದ ಶ್ರೀಯುತರಾದ ಶಿಕಾರಿಪುರ ಹರಿಹರೇಶ್ವರ ಅವರು ಹದಿನೇಳು ಪುಸ್ತಕಗಳನ್ನು ಬರೆದಿದ್ದರು. ಅಲ್ಲದೆ, ಹಲವಾರು ಸಾಹಿತ್ಯಾಸಕ್ತರಲ್ಲಿ ಬರವಣಿಗೆಯನ್ನು ಪ್ರಚೋದಿಸಿ, ಪ್ರೋತ್ಸಾಹಿಸಿ ಅವರನ್ನು ಬರಹಗಾರರನ್ನಾಗಿಸಿದ್ದಾರೆ. ಹಲವಾರು ಬರಹಗಾರರ ಪುಸ್ತಕಗಳನ್ನು ತಮ್ಮ ಖರ್ಚಿನಲ್ಲಿ ಅಚ್ಚು ಹಾಕಿಸಿದ್ದಾರೆ. ಇವರ ಅವಿರತ ಶ್ರಮವನ್ನು ಗುರುತಿಸಿದ ಘನ ಕರ್ನಾಟಕ ಸರ್ಕಾರವು ಇವರಿಗೆ ’ರಾಜ್ಯೋತ್ಸವ’ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

ಹೊರನಾಡಿಗೆ ಬಂದು, ಕನ್ನಡ ಸಂಘವನ್ನು ಸ್ಥಾಪಿಸಬೇಕು ಎಂದುಕೊಂಡಿದ್ದೇಕೆ? ಮುಂದಿನ ಪೀಳಿಗೆಗೂ ಕನ್ನಡ ಭಾಷೆ ಉಳಿಸಬೇಕಾದಲ್ಲಿ ಕೈಗೊಳ್ಳಬೇಕಾದ ಕಾರ್ಯವೇನು? ಎಂಬುದಾಗಿ ಪ್ರಶ್ನಿಸಿದಾಗ, ಹಲವು ಕನ್ನಡ ಸಂಘಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ  ರಿಚ್ಮಂಡ್ ಕನ್ನಡ ಸಂಘ ಪ್ರಥಮ ಅಧ್ಯಕ್ಷರಾದ ಡಾ|ರವೀಂದ್ರ ಅವರ ಅಭಿಪ್ರಾಯ ಹೀಗಿದೆ. ಕನ್ನಡದ ಮೇಲಿನ ಪ್ರೇಮವೇ ಹೊರನಾಡಿನಲ್ಲೂ ಕನ್ನಡವನ್ನು ಬೆಳೆಸಲು ಪ್ರೇರಣೆ. ಕನ್ನಡ ಪರ ಚಟುವಟಿಕೆಗಳು ನಿಂತರೆ ಭಾಷೆಯ ಅವನತಿಗೆ ಎಡೆ ಮಾಡಿಕೊಟ್ಟಂತೆ. ಕನ್ನಡಿಗರು ಭೇಟಿಯಾದಾಗ ಕನ್ನಡದಲ್ಲಿ ವ್ಯವಹರಿಸಬೇಕು. ನಮ್ಮಲ್ಲಿ ಭಾಷೆಯ ಬಗೆಗಿನ ಒಲವನ್ನು ಬೆಳೆಸಿಕೊಳ್ಳಬೇಕು. ಎಂದಾದರೊಮ್ಮೆ ಭೇಟಿಯಾಗುವುದು, ಮತ್ತು ಹಬ್ಬ ಹರಿದಿನಗಳಲ್ಲಿ ಸೇರುವುದಕ್ಕಿಂತ ಹೆಚ್ಚಾಗಿ ಒಂದು ಸಂಘವನ್ನು ಸ್ಥಾಪಿಸಿ ವರ್ಷದುದ್ದಕ್ಕೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಭಾಷಾಭಿಮಾನ ಹೆಚ್ಚುತ್ತದೆ ಮತ್ತು ಮುಂದಿನ ಪೀಳಿಗೆಗೂ ಕನ್ನಡದ ಬಗ್ಗೆ ಅರಿವು ಮೂಡುತ್ತದೆ. ನವ ಪೀಳಿಗೆಯಲ್ಲೂ ಕನ್ನಡ ಭಾಷೆ ಮುಂದುವರೆಯಬೇಕಾದಲ್ಲಿ ಅದರ ಆರಂಭ ಮನೆಯಲ್ಲಿ ಆಗಬೇಕು. ಹಿರಿಯರು ಮಕ್ಕಳೊಡನೆ ಕನ್ನಡದಲ್ಲಿ ವ್ಯವಹರಿಸಬೇಕು. ಆಗ ಮಾತ್ರ ಭಾಷೆಯ ಉಳಿವು, ಮತ್ತು ಬೆಳವಣಿಗೆ.

ಕರ್ನಾಟಕ ಕಲಾ ಪ್ರಪಂಚದ ಒಂದು ಅವಿಭಾಜ್ಯ ಅಂಗ, ಭಾರತವೇ ಅಲ್ಲದೆ ಹೆಚ್ಚು ಕಡಿಮೆ ಇಡೀ ವಿಶ್ವವನ್ನೇ ಮಂತ್ರಮುಗ್ದವನ್ನಾಗಿಸುವ ಕಲೆ ಎಂದರೆ ’ನೃತ್ಯ’. ಈ ನೃತ್ಯ ಕಲೆಯು ಅನಾದಿ ಕಾಲದಿಂದಲೂ ಬಂದಿದ್ದರೂ, ಅದು ಕೆಲವು ಜನರಿಗೆ ಮಾತ್ರ ಎಂದು ಮೂಗೆಳೆವ ಮಡಿವಂತರಿದ್ದರು. ಅಂದಿನ ದಿನಗಳ ಜನರ ನಿರ್ಲಕ್ಷ್ಯಕ ಭಾವೆನೆಯಿಂದ ಕುಗ್ಗದೆ, ಇಂದಿನ ತಾಂತ್ರಿಕ ಜಗತ್ತಿನ ಪ್ರವಾಹದಲ್ಲಿ ಕೊಚ್ಚಿಹೋಗದೆ, ತಮಗೆ ಒಲವಿದ್ದ ಕಲೆಯನ್ನು ಉಳಿಸಿಕೊಂಡು, ಅದನ್ನು ಬೆಳೆಸಿ, ಪಸರಿಸಿ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಹಿರಿದಾಗಿಸಿ ಪರನಾಡಿನವರಿಂದಲೂ ಸೈ ಎನಿಸಿಕೊಂಡು ಮುನ್ನೆಡೆಯುತ್ತಿರುವವರಲ್ಲಿ ಉಮಾ ಇಟ್ಟಿಗಿ ಕೂಡಾ ಒಬ್ಬರು. ಅಮೇರಿಕದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದ್ದಂತೆ, ಜಗತ್ತಿನ ಎಲ್ಲೆಡೆ ಉಮಾ ಇಟ್ಟಿಗಿ ಅವರಂತಹ ಕಲಾ ಪೋಷಕರು ಇದ್ದಾರೆ. ಕನ್ನಡ ನಾಡಿನಲ್ಲಿ ಹುಟ್ಟಿ ಹೊರದೇಶದಲ್ಲಿ ಉಳಿದಿದ್ದರೂ ಇವರುಗಳ ಕಲಾಸೇವೆ ಮಾತ್ರ ಹಿಂದೆ ಬಿದ್ದಿಲ್ಲ. ಕಲಾಸೇವೆಯ ಮೂಲಕ ಕಲೆಯನ್ನು ಪರಿಚಯಿಸುವುದಷ್ಟೇ ಅಲ್ಲದೇ ಎರಡು ರಾಷ್ಟ್ರಗಳ ನಡುವಿನ ಸೌಹಾರ್ದತೆಯ ಭದ್ರ ಸೇತುವೆಯನ್ನೂ ನಿರ್ಮಿಸುವಲ್ಲಿ ಹಿರಿದಾದ ಪಾತ್ರವಹಿಸುತ್ತಿದ್ದಾರೆ. ಕಲೆಯ ಮುಖಾಂತರ ಹೊರನಾಡ ಕನ್ನಡಿಗರಲ್ಲಿ ನಮ್ಮ ಭಾಷೆಯ ನಾಡು, ನುಡಿಯ ಬಗ್ಗೆ ಅಭಿಮಾನ ಹೆಚ್ಚಿಸಲು ಕಾರಣೀಭೂತರಾಗಿದ್ದಾರೆ.

ಎಪ್ಪತ್ತರ ದಶಕದ ಆರಂಭದಲ್ಲಿ ಅಮೇರಿಕಕ್ಕೆ ಬಂದು ನೆಲೆಸಿದ ಹಿರಿಯರೊಬ್ಬರನ್ನು ಇಂದಿಗೂ ಅಂದಿಗೂ ನೀವು ಕಂಡಂತೆ ಭಾಷೆ ಹೇಗೆ ಬೆಳೆದಿದೆ ಎಂಬುದಾಗಿ ಪ್ರಶ್ನಿಸಿದಾಗ, ಶ್ರೀಯುತ ಗಂಗಾಧರ ಮೂರ್ತಿಯವರು ಅಂದಿನ ಚಿತ್ರಣವನ್ನೇ ನಮ್ಮ ಮುಂದಿಟ್ಟರು. ಎಪ್ಪತರ ದಶಕದಲ್ಲಿ ಅಮೇರಿಕದ ಫಿಲಡೆಲ್ಫಿಯಾ ನಗರಕ್ಕೆ ಬಂದರು. ಎರಡು ವಾರಕ್ಕೊಮ್ಮೆ ಹತ್ತಿರದ ನ್ಯೂಯಾರ್ಕ್ ನಗರಕ್ಕೆ ದಿನಸಿ ಅಂಗಡಿಗೆ ಹೋಗುತ್ತಿದ್ದ ಇವರ ಕಣ್ಣಿಗೆ ಅಪರೂಪಕ್ಕೊಮ್ಮೆ ಭಾರತೀಯ ಕಂಡು ಬರುತ್ತಿದ್ದರೂ ಅವರಲ್ಲಿ ಯಾರೂ ಕನ್ನಡಿಗರಾಗಿರಲಿಲ್ಲ. ಅಮೇರಿಕ ಸೇರಿದ ಎರಡು ವರ್ಷದ ನಂತರ ಅವರಿಗೆ ಮೊದಲ ಕನ್ನಡ ಸಂಸಾರ ಕಣ್ಣಿಗೆ ಬಿದ್ದದ್ದು. ಅಂದಿನ ದಿನಗಳಲ್ಲಿ ಫಿಲಡೆಲ್ಫಿಯ, ನ್ಯೂಯಾರ್ಕ್ ಇತ್ಯಾದಿ ನಾಲ್ಕೈದು ಪ್ರಮುಖ ನಗರದಲ್ಲಿರುವವರು ಉಗಾದಿ ಹಬ್ಬ ಆಚರಿಸಿದಾಗ ಸುಮಾರು ಮುನ್ನೂರು ಮಂದಿ ಸೇರುತ್ತಿದ್ದಾರು. ಅದೇ ಚಿತ್ರಣವನ್ನು ಇಂದಿಗೆ ಹೋಲಿಸಿದರೆ ಒಂದು ಸಣ್ಣ ನಗರದ ಒಂದು ಸಂಘದಿಂದ ಅಷ್ಟು ಜನ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸುತ್ತಾರೆ. ಸಂಖ್ಯೆಯ ಮತ್ತು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅದ್ಬುತ ಬೆಳವಣಿಗೆ ಎಂಬುದು ಸತ್ಯ. ಮೊದಲ ದಿನಗಳಲ್ಲಿ ಸ್ನೇಹಿತರಾದ ಒಂದೆರಡು ಕುಟುಂಬಗಳೂ ಇಂದಿಗೂ ತಮ್ಮೊಂದಿಗೆ ಇದ್ದಾರೆ. ಕೆಲವರು ದೂರದ ಊರಿಗೆ ಹೋದರೆ, ಒಂದಿಬ್ಬರು ಕಾಲವೇ ಆಗಿದ್ದಾರೆ ಎಂಬುದನ್ನೂ ತಿಳಿಸಿದರು. ದೇಶ ಬಿಟ್ಟು ಬಂದವರಿಗೆ, ಸ್ನೇಹಿತರೇ ಬಂಧು-ಬಳಗ ಎಂದು ಅನಿಸದೇ ಇರಲಿಲ್ಲ.

ಭಾಷಾಭಿವೃದ್ದಿ ಕೆಲಸವನ್ನು ಮಾಡಲು ನಿಮಗೆ ಮೂಡಿರುವ ಪ್ರೇರಣೆಯಾದರೂ ಏನು? ಈ ರೀತಿ ಕೈಗೊಂಡ ಕಾರ್ಯಗಳಿಂದ ನೀವು ಅಪೇಕ್ಷಿಸುತ್ತೀರಿ ಎಂಬುದಾಗಿ ಅಮೇರಿಕದ ಅಲಬಾಮಾದಲ್ಲಿ ನೆಲೆಸಿರುವ ಸಂಧ್ಯಾ ಅನಂತ್ ಅವರನ್ನು ಕೇಳಿದಾಗ, ಅವರ ಅಭಿಪ್ರಾಯದಲ್ಲಿ ಭಾಷೆಯ ಬೆಳವಣಿಗೆಯು ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೆಡೆಯಬೇಕು. ಭಾರತೀಯರಾಗಿ ಹುಟ್ಟಿ, ಬೆಳೆದು ಹೊರನಾಡಿನಲ್ಲಿ ನೆಲೆಸಿರುವ ಜನರಿಗೆ ಎರಡೂ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬದುಕಲು ಶ್ರಮಿಸಿದರೂ, ಮುಂದಿನ ಪೀಳಿಗೆಯವರು ಇದೇ ರೀತಿ ಶ್ರಮಿಸುತ್ತಾರೆ ಎಂದುಕೊಳ್ಳುವುದು ಸರಿ ಇಲ್ಲ. ಏಕೆಂದರೆ ಅವರುಗಳು ಬೆಳೆಯುತ್ತಿರುವ ಪರಿಸರವೇ ಹೊರದೇಶ. ಅವರಲ್ಲಿ ನಮ್ಮ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದೇ ನಾವುಗಳು ಮಾಡಬೇಕಾದ ಮೊದಲ ಕೆಲಸ. ಇಲ್ಲಿನ ಮಕ್ಕಳು ಭಾಷೆಯನ್ನು ಕಲಿತಲ್ಲಿ, ನಮ್ಮ ಹಿಂದಿನ ಪೀಳಿಗೆಯವರ ಜೊತೆ ಬಾಂಧವ್ಯ ಬೆಳೆಸಲು ಸಹಕಾರಿ ಆಗುತ್ತದಷ್ಟೇ ಅಲ್ಲದೆ ಮುಂಬರುವ ಪೀಳಿಗೆಯಲ್ಲೂ ಕನ್ನಡ ಭಾಷೆಯ ಉಳಿಯುತ್ತದೆ.

ಹೀಗೆ ವಲಸೆ ಬಂದ ಕನ್ನಡಿಗರು ಮೂಲತ: ವಿವಿಧ ಪ್ರಾಂತ್ಯದವರಾಗಲಿ, ಜಾತಿಯವರಾಗಲಿ, ಸಮಾಜದಲ್ಲಿ ಯಾವುದೇ ಮಟ್ಟದವರಾಗಲಿ, ಆದರೆ ಎಲ್ಲರನ್ನೂ ಒಟ್ಟಾಗಿ ಬಂಧಿಸಿದ ಒಂದು ಶಕ್ತಿಯೆಂದರೆ ’ಭಾಷೆ’. ವಲಸೆ ಬಂದಾಗ ಹೆತ್ತವರನ್ನೂ, ಒಡಹುಟ್ಟಿದವರನ್ನೂ ಬಿಟ್ಟು ಬಂದವರನ್ನು,  ಸಂಬಂಧಿಕರಲ್ಲದವರೊಂದಿಗೆ ಬೆರೆತು ಒಂದೇ ಕುಟುಂಬದವರಾಗಿ ಬದುಕುವಂತೆ ಅನುವು ಮಾಡಿಕೊಡುವಲ್ಲಿ “ಭಾಷೆ” ಸಹಕಾರಿಯಾಗಿದೆ. ತಮ್ಮ ಬಂಧುಗಳು, ಸ್ನೇಹಿತರು, ಎಂದೆಲ್ಲ ಜನರ ಸುತ್ತಲೇ ಇರುವವರಿಗೆ ಹೊರದೇಶಕ್ಕೆ ಬಂದ ಕೂಡಲೇ ’ನೀರ ಬಿಟ್ಟ ಮೀನು’ ಆದ ಪರಿಸ್ಥಿತಿ ಎದುರಾಗುತ್ತದೆ. ತಮಗೇ ಅರಿವಿಲ್ಲದೆ ಭೇಟಿಯಾದ ತಮ್ಮ ಭಾಷೆಯವರು ಅವರಿಗೆ ಬಂಧುಗಳಂತೇ ತೋರುತ್ತಾರೆ. ತಮ್ಮೊಂದಿಗೆ ಇಲ್ಲದ ತಮ್ಮವರನ್ನು ಅವರಲ್ಲಿ ಕಾಣುತ್ತಾರೆ. ತಮ್ಮ ನಾಡಿನಲ್ಲಿ ಬಿಟ್ಟು ಬಂದ ತಂದೆ-ತಾಯಿಯರನ್ನು ಪರದೇಶದಲ್ಲಿ ಕಾಣುವ ಹಿರಿಯರಲ್ಲಿ ಕಾಣುತ್ತಾರೆ. ಇದೆಲ್ಲ ಭಾವನೆಗಳ ಹಿಂದೆ ಇರುವ ಕೊಂಡಿ ಎಂದರೆ ‘ಭಾಷೆ.’ ‘ನಾವೆಲ್ಲರೂ ಒಂದು’ ಎಂಬ ಭಾವೈಕ್ಯತೆ ಬಹಳಷ್ಟು ಸಂದರ್ಭದಲ್ಲಿ ಎದ್ದು ಕಾಣುತ್ತದೆ. ಭಾರತದಿಂದ ಬಂದು ಹಿರಿಯರು ಇಲ್ಲಿ ಅನಾರೋಗ್ಯ ಪೀಡಿತರಾದಲ್ಲಿ ತಮ್ಮ ಕೈಲಾದಷ್ಟರ ಮಟ್ಟಿಗೆ ಸಹಾಯ ಮಾಡುವಷ್ಟು ಉದಾರ ಮನಸ್ಸಿನ ವೈದ್ಯರಿದ್ದಾರೆ. ರಿಸೆಷನ್ ಸಮಯದಲ್ಲಿ ಜಗತ್ತಿನ ಆರ್ಥಿಕ ಪರಿಸ್ಥಿತಿಯೇ ಅಲುಗಾಡಿ, ಅಮೇರಿಕ ಮತ್ತು ಇತರೆ ಪಾಶ್ಚಿಮಾತ್ಯ ದೇಶಗಳಲ್ಲಿ ಕಂಪನಿಗಳು ದಿವಾಳಿ ಎದ್ದು, ಸಹಸ್ರಾರು ಜನರು ಕೆಲಸ ಕಳೆದುಕೊಂಡಾಗ, ಕನ್ನಡಿಗರೂ ಅದಕ್ಕೆ ಹೊರತಾಗಿರಲಿಲ್ಲ. ಅಂತಹ ಸಮಯದಲ್ಲಿ ತಮ್ಮ ’ಭಾಷೆ’ಯ ಜನರಿಗೆ ಸಹಾಯ ಮಾಡಿ ಅವರ ಕಷ್ಟ ಕಾಲದಲ್ಲಿ ಬೆಂಬಲವಾಗಿ ನಿಂತ ನಿದರ್ಶನಗಳು ಹೇರಳ. ಕಷ್ಟ ಕಾಲದಲ್ಲಿ ಕಲ್ಲಾಗಿ, ಬೆಟ್ಟದಡಿಯ ಹುಲ್ಲಾಗಿ ಎಲ್ಲೆಡೆ ಮಲ್ಲಿಗೆ ಕಂಪನ್ನು ಬೀರುವ ವಿಶಾಲ ಹೃದಯಿ ಕನ್ನಡಿಗರಿಗೆ ಇದೇನೂ ಕಷ್ಟವಲ್ಲ.ಸಂಘಗಳೂ ಹಾಗೂ ಸಾಂಘಿಕ ಶಕ್ತಿಗಳು ಬಲವಾಗಿಯೇ ಇದ್ದು ಹತ್ತು ಹಲವು ಕಾರ್ಯಕ್ರಮಗಳನ್ನು ನೆಡೆಸಿಕೊಳ್ಳುತ್ತ ಬಂದು, ಭಾಷೆಯ ಅಭಿವೃದ್ದಿಗೆ ಸಹಕಾರಿಯಾಗಿದ್ದರೂ, ಇನ್ನೂ ಒಂದು ವಿಚಾರದಲ್ಲಿ ಬಹಳ ಹಿಂದೆ ಇದ್ದೇವೆ. ಅಮೇರಿಕ ಹಾಗೂ ಯು.ಕೆ ದೇಶಗಳ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಪರದೇಶಗಳ ಭಾಷಾ ತರಬೇತಿಗಳನ್ನು ವಿಶ್ಲೇಷಿಸಿ ನೋಡಿದಾಗ ಕಂಡು ಬಂದ ವಿಷಯವೆಂದರೆ, ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ನೆಡೆಯುತ್ತಿರುವ ಭಾರತೀಯ ಭಾಷೆಗಳ ಅಧ್ಯಯನವು ಪರ ಭಾರತೀಯ ಭಾಷೆಗಳಿಗೆ ಹೋಲಿಸಿದಾಗ ಕನ್ನಡ ಭಾಷೆಯು ಇನ್ನೂ ಸಾಕಷ್ಟು ಹಿಂದುಳಿದಿದೆ.

ಅಂತರಾಷ್ಟ್ರೀಯ ಮಟ್ಟದ ಹಲವನ್ನು ಪರಿಶೀಲಿಸಿದಾಗ ಕಂಡಿದ್ದು, ಅಮೇರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕೇವಲ ಒಂದು ತರಗತಿ ಕನ್ನಡಕ್ಕೆ ಮೀಸಲಾಗಿದ್ದು, ಅದೂ ಕೇವಲ ಕನ್ನಡ ಕಲಿಸುವುದಕ್ಕಾಗಿ ಮಾತ್ರ. ಅಮೇರಿಕದ್ದೇ ಶಿಕಾಗೋ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ, ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ತರಗತಿಗಳೇ ಇಲ್ಲ. ಈ ಎಲ್ಲದರಲ್ಲಿಯೂ ಇತರ ಭಾರತೀಯ ಭಾಷೆಗಳ ಬಗ್ಗೆ ಭೋಧನೆ ಆಗುತ್ತಿರುವುದೇ ಅಲ್ಲದೇ, ಆ ಭಾಷೆಗಳ ಹಿನ್ನೆಲೆ, ಚರಿತ್ರೆ, ಬೆಳವಣಿಗೆ, ಮಹತ್ ಕೃತಿಗಳು, ಇವುಗಳ ಬಗ್ಗೆ ಆಳವಾಗಿ ಅಧ್ಯಯನ ನೆಡೆಸುವಲ್ಲಿ ಮುಂದಾಗಿದ್ದರೆ. ಇನ್ನೂ ಭಾಷಾ ಕಲಿಕೆಯ ಹಂತದಲ್ಲೇ ಇರುವ ಕನ್ನಡ ಭಾಷೆಯ ವಿಷಯದಲ್ಲಿ ಕನ್ನಡ ಪರ ವೇದಿಕೆಗಳು ಮತ್ತು ಭಾಷೆಯ ಬೆಳವಣಿಗೆಗಾಗಿ ದುಡಿಯುತ್ತಿರುವವರು ಶ್ರಮಿಸಿದಲ್ಲಿ ಕನ್ನಡ ಬಗೆಗಿನ ಗೌರವ ಹೆಚ್ಚುತ್ತದೆ. ತೊಂಬತ್ತರ ದಶಕದಲ್ಲಿ ಹೊಸ ಅಲೆಯ ವಲಸೆ ಭಾರೀ ಗಾತ್ರದಲ್ಲಿ ಆರಂಭವಾಯಿತು. ಅದು Information Technology ಅಂದರೆ ಮಾಹಿತಿ ತಂತ್ರಜ್ಞ್ನಾನದ ಅಲೆ. ನಾನಾ ದೇಶಗಳಿಗೆ ಕನ್ನಡಿಗರು ವಲಸೆ ಹೋಗಿದ್ದರಿಂದ ಭಾಷೆ ಬೆಳೆಯಲೂ ಸಹಕಾರಿಯಾಯಿತು. ಹಿಂದಿನ ಪೀಳಿಗೆಯ ಸಮಯದಲ್ಲಿ ತಲೆ ಎತ್ತಿದ ಕನ್ನಡ ಸಂಘಗಳೂ ಹಾಗೂ ಕನ್ನಡ ಭಾಷಾ ಚಟುವಟಿಕೆಗಳು ಈ ಸರದಿಯಲ್ಲಿ ದುಪ್ಪಟ್ಟಾಯಿತು. ಹೊಸ ಅಲೆಯ ವಲಸಿಗರ ಬೇಕು’ಗಳ ಪೂರೈಕೆಗಾಗಿಯೇ ಇಂದು ಅಕ್ಕ, ನಾವಿಕ ಎಂಬೆಲ್ಲ ಸಾಂಘಿಕ ಶಕ್ತಿಗಳು ಹುಟ್ಟಿಕೊಂಡಿರುವುದು.

ಒಂದು ಕಾಲಕ್ಕೆ ಕನ್ನಡ ಸಾಹಿತ್ಯ ಸೇವೆ ಕರ್ನಾಟಕಕ್ಕೆ ಸೀಮಿತ, ಹಿರಿಯರಿಗೆ ಮೀಸಲು ಎಂಬೆಲ್ಲ ಸೀಮಿತಗೊಂಡಿತ್ತು. ತಂತ್ರಜ್ಞ್ನಾನ ಬೆಳೆದಂತೆಲ್ಲ ಕನ್ನಡ ಪರ ಚಟುವಟಿಕೆಗಳೂ ಬೆಳೆಯುವುದರಲ್ಲಿ ಹಿಂದೆ ಬೀಳಲಿಲ್ಲ. ಇಂತಹ ದಿನಗಳಲ್ಲಿ ಹೊರಬಂದುದೇ ಬರಹ, ಶ್ರೀ, ಲಿಪಿ ಎಂಬ ತಂತ್ರಾಂಶಗಳು. ನವಯುಗದ ಬರಹಗಾರರಿಗೆ ಬರೆಯುವ ಹುಮ್ಮಸ್ಸನ್ನು ಹೆಚ್ಚಿಸಿದ್ದೇ ಈ ತಂತ್ರಾಂಶಗಳು. ನಂತರದ ದಿನಗಳಲ್ಲಿ ಮೂಡಿ ಬಂದ ಅಂತರ್ಜಾಲದ ಪೋರ್ಟಲ್’ಗಳು ಮತ್ತು ಬ್ಲಾಗ್ ಪ್ರಪಂಚ ಬರಹಗಾರರಿಗೆ ಹೊಸ ಪ್ರಪಂಚವನ್ನೇ ತೆರೆದಿಟ್ಟಂತಾಯಿತು. ’ಗೂಗಲ್’ನವರು ಕನ್ನಡ ಭಾಷೆಯ Transliteration ಒದಗಿಸಿದ ಮೇಲಂತೂ, ಕನ್ನಡ ತಂತ್ರಾಂಶವನ್ನು ಕಂಪ್ಯೂಟರ್’ನಲ್ಲಿ ಇಳಿಸಿಕೊಳ್ಳಲೇಬೇಕೆಂಬ ಅವಶ್ಯಕತೆಯೂ ಇಲ್ಲದಾಯಿತು. ಎಲ್ಲೆಲ್ಲಿ ಏನೇನು ಕನ್ನಡ ಪರ ಚಟುವಟಿಕೆಗಳು ನೆಡೆಯುತ್ತಿವೆ ಎಂಬುದರ ಬಗೆಗಿನ ಮಾಹಿತಿ ಪಾರದರ್ಶಕವಾಯಿತು. ಇಂದು ಅಂತರ್ಜಾಲದ ಪೋರ್ಟಲ್’ನ ಕನ್ನಡ ಬರಹಗಳನ್ನು, ಕನ್ನಡ ಪತ್ರಿಕೆಗಳನ್ನು ಮೊಬೈಲ್’ನಲ್ಲೇ ಓದಬಹುದಾಗಿದೆ. ಹೊರದೇಶದಲ್ಲೆಲ್ಲೋ ಕುಳಿತು ತಾವು ಬರೆದ ಬರಹಗಳನ್ನು ಅಂಚೆ ಮೂಲಕ ಪತ್ರಿಕೆಗಳಿಗೆ ಕಳಿಸಿ ನಂತರ ಅದು ಸ್ವೀಕಾರವಾಗಿ ಪ್ರಕಟಣೆಗೊಳ್ಳುವ ಹೊತ್ತಿಗೆ ಕನಿಷ್ಟ ಆರು ತಿಂಗಳೇ ತಗುಲುತ್ತಿದ್ದ ದಿನಗಳು ಇನ್ನಿಲ್ಲ. ಕಪ್ಪೆ ಚಿಪ್ಪಿನಲ್ಲಿ ಸೇರಿಕೊಂಡಂತಾಗಿದ್ದ ಭಾವನೆಗಳು ಇಂದು ಬ್ಲಾಗ್ ಪ್ರಪಂಚದಲ್ಲಿ ನಿರ್ಭಿಡೆಯಿಂದ ಹೇಳಿಕೊಳ್ಳಬಹುದಾಗಿದೆ. ತಮ್ಮ ಲೇಖನಗಳನ್ನು ಪತ್ರಿಕೆಗೆ ಈ-ಮೈಲ್’ನಲ್ಲಿ ಕಳಿಸುವಷ್ಟೇ ಸಲೀಸಾಗಿ ಪೋರ್ಟಲ್’ಗಳಲ್ಲಿ ಪ್ರಕಟಿಸಿ ಭಾಷೆಯ ಉಳಿವು, ಬೆಳವಣಿಗೆ ಮತ್ತು ಪ್ರಚಾರಕ್ಕೆ ಪರೋಕ್ಷವಾಗಿಯೇ ಸಹಕಾರಿಯಾಗಿದ್ದಾರೆ. ಈಜಿಪ್ಟಿನಲ್ಲಿನ ಮೂವತ್ತು ವರ್ಷಗಳ ದಬ್ಬಾಳಿಕೆಯ ಆಡಳಿತವು ಇಂದಿನ ತಾಂತ್ರಿಕ ಜಗತ್ತಿನ ದಿನದಲ್ಲಿ ಕೇವಲ ಮೂವತ್ತು ದಿನಗಳಲ್ಲಿ ಅಡಗಿಸಬಹುದಾಗಿದೆ ಎಂದಲ್ಲಿ ಇನ್ಯಾವ ಕ್ರಾಂತಿಯೂ ಆಗಬಹುದು.

ಭಾಷಾ ಬೆಳವಣಿಗೆಗೆ ಸಹಕಾರಿಯಾಗಿರುವ ಆಧುನಿಕ ತಂತ್ರಜ್ಞ್ನಾನದ ಯುಗದ ಮತ್ತೆರಡು ಅವಿಷ್ಕಾರಗಳು ಎಂದರೆ ‘ಫೇಸ್ ಬುಕ್’ ಮತ್ತು ‘ಟ್ವಿಟ್ಟರ್’. ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತು ತಾವು ಓದಿದ ಪುಸ್ತಕ ಬಗ್ಗೆಯೋ ಅಥವಾ ತಮಗೆ ಇಷ್ಟವಾದ ವಿಚಾರ ಧಾರೆಯನ್ನೋ ಹಂಚಿಕೊಂಡಲ್ಲಿ ಜಗತ್ತಿನ ಮತ್ತೊಂದು ಮೂಲೆಯಲ್ಲಿರುವವರು ಮರುಕ್ಷಣದಲ್ಲೇ ಅದನ್ನು ಓದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಷ್ಟು ಪ್ರಭಾವಶಾಲಿ ಮಾಧ್ಯಮವಾಗಿದೆ. ’ಫೇಸ್ ಬುಕ್’ ನ ಕೆಲವು ಕನ್ನಡ ವೇದಿಕೆಗಳು ಎಂದರೆ ‘ಕನ್ನಡ ಸಾಹಿತ್ಯ ಮಂಚ’, ‘ನಿಲುಮೆ’, ‘ಕನ್ನಡ ಸಂಪದ’, ಇತ್ಯಾದಿ. ’ಕನ್ನಡ ಸಂಪದ’ವು ಕರ್ನಾಟಕದ ’ಸ್ಮರಣೀಯರ’ ಬಗ್ಗೆ ಮಾಹಿತಿ ಒದಗಿಸಿದಾಗ, ಹೊರನಾಡ ಕನ್ನಡಿಗರೂ ತಮ್ಮ ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಂಡು ವಿರಳವಾಗಿದ್ದ ಕನ್ನಡವನ್ನು ಹೇರಳವಾಗಿಸಿದ್ದಾರೆ. ಕನ್ನಡ ಬ್ಲಾಗ್ ಪ್ರಪಂಚವನ್ನು ಪ್ರಮುಖವಾಗಿ ಪ್ರಚಾರ ಮಾಡಿರುವವರು ’ಅವಧಿ’ (www.avadhimag.com). ಸಾಮಾಜಿಕ ಮಾಧ್ಯಮದಲ್ಲಿ ಆಧುನಿಕ ತಂತ್ರಜ್ಞ್ನಾನವನ್ನು ಬಳಸಿಕೊಂಡು ಜಗತ್ತಿನಾದ್ಯಂತ ಬರಹಗಾರರಿಗೆ ಹೊಸ ವೇದಿಕೆಯನ್ನೇ ಸೃಷ್ಟಿ ಮಾಡಿದ್ದಾರೆ. ಇಂದಿನ ತಂತ್ರಜ್ಞ್ನಾನ ಮತ್ತು ಹೊಸ ಅವಿಷ್ಕಾರ ಯುಗವು ಭಾಷೆಯ ಬೆಳವಣಿಗೆ ಮಾಡಲು ಸೂಕ್ತ ಸಮಯವಾಗಿದೆ. ಈ ಸುಸಮಯವನ್ನು ಉಪಯೋಗಿಸಿಕೊಂಡು ಕನ್ನಡ ಭಾಷೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲು, ಹೊರನಾಡ ಕನ್ನಡಿಗರ ಸಮುದಾಯದ ನಡುವಿನ ಭಾಂಧವ್ಯ ಗಟ್ಟಿಯಾಗಿಸಲು, ರಾಜ್ಯದಲ್ಲಿನ ಮತ್ತು ಹೊರನಾಡಿನ ಕನ್ನಡಿಗರ ನಡುವೆ ಅಂತರ ಕಡಿಮೆ ಮಾಡಲು ಮತ್ತು ಸೇತುವೆ ಭದ್ರವಾಗಿಸಲು ಭಾಷೆಯ ಬೆಳವಣಿಗೆಗಾಗಿ ಹೋರಾಡುತ್ತಿರುವವರು ಸೂಕ್ತವಾಗಿ ಬಳಸಿಕೊಳ್ಳಬೇಕು.

( ಇದು ‘ಬೆಳಗಾವಿ’ಯಲ್ಲಿ ನಡೆದ ವಿಶ್ವಸಮ್ಮೇಳನ ಸಂದರ್ಭದಲ್ಲಿ ಹೊರತಂದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಲೇಖಕರು – ಶ್ರೀನಾಥ್ ಭಲ್ಲೆ ಮತ್ತು ವೆಂಕಟೇಶ್ ರಾಘವೆಂದ್ರ. ವೆಂಕಟೇಶ್ ರಾಘವೆಂದ್ರ ಅವರು ವಿಶ್ವದ ಅನೇಕ ಕಡೆಗಳಲ್ಲಿ ಅಭ್ಯುದಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀನಾಥ್ ಭಲ್ಲೆ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.)

 Posted by at 9:04 AM
Jul 222009
 

Shankar Hegdeಕನ್ನಡ ಸಾಹಿತ್ಯ ರಂಗದ ನಾಲ್ಕನೇ ಸಾಹಿತ್ಯೋತ್ಸವ  

 

ಕನ್ನಡ ಸಾಹಿತ್ಯ ರಂಗದ ನಾಲ್ಕನೇ ವಸಂತ ಸಾಹಿತ್ಯೊತ್ಸವವು ಕಾವೇರಿ ಕನ್ನಡ ಸಂಘದ ಸಹಯೋಗದಲ್ಲಿ ಮೇ ೩೦ ಮತ್ತು ೩೧, ೨೦೦೯ ರಂದು ರಾಕ್‍ವಿಲ್ (ಮೇರಿಲ್ಯಾಂಡ್) ನಲ್ಲಿರುವ ಶೇಡೀ ಗ್ರೋವ್ ವಿಶ್ವವಿದ್ಯಾಲಯದ ಆವರಣದಲ್ಲಿ  ಯಶಸ್ವಿಯಾಗಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಧುನಿಕ ಕನ್ನಡದ ಇಬ್ಬರು ಪ್ರಮುಖ ಲೇಖಕಿಯರಾದ –  ಡಾ. ವೀಣಾ ಶಾಂತೇಶ್ವರ ಮತ್ತು ಶ್ರೀಮತಿ ವೈದೆಹಿ – ಆಗಮಿಸಿ ಎರಡು ದಿನಗಳ ಕಾಲ ನಮ್ಮನ್ನು ಕನ್ನಡ ಕತೆ-ಕಾದಂಬರಿ ಲೋಕಕ್ಕೆ ಕರೆದೊಯ್ದು ಸಾಹಿತ್ಯದ ರಸದೂಟವನ್ನುಣಿಸಿದರು. ಜೊತೆಗೆ ವುಡ್‍ಲ್ಯಾಂಡ್ಸ್ ಹೋಟೆಲಿನ ರುಚಿ-ರುಚಿ ಊಟ-ಉಪಹಾರಗಳ ರಸದೂಟಕ್ಕೂ ಏನೂ ಕೊರತೆಯಿರಲಿಲ್ಲ.

ಸಮ್ಮೇಳನದ ಮೊದಲ ದಿನದ ಕಾರ್ಯಕ್ರಮ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾಯಿತು.  ರಂಗದ ಅಧ್ಯ಼ಕ್ಷ ಎಚ್. ವೈ, ರಾಜಗೊಪಾಲ್ ಹಾಗೂ ಕಾವೇರಿ ಕನ್ನಡ ಕೂಟದ ಅಧ್ಯಕ್ಷೆ ಮೀನಾ ರಾವ್ ಅವರ ಸ್ವಾಗತ ಭಾಷಣಗಳ ನಂತರ, ರಾಜಗೊಪಾಲ್ ಅವರು ಡಾ. ವೀಣಾ ಶಾಂತೇಶ್ವರ್ ಅವರನ್ನೂ, ಶಶಿಕಲಾ ಚಂದ್ರಶೇಖರ್ ಅವರು ವೈದೇಹಿ ಅವರನ್ನು ಪರಿಚಯ ಮಾಡಿಕೊಟ್ಟರು. ಬಳಿಕ ಡಾ. ವೀಣಾ ಶಾಂತೇಶ್ವರ್ ಅವರು ಸಾಹಿತ್ಯ ರಂಗದ ಹೊಸ ಪ್ರಕಟಣೆ “ಕನ್ನಡ ಕಾದಂಬರಿ ಲೋಕದಲ್ಲಿ – ಹೀಗೆ ಹಲವು” ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಪುಸ್ತಕದ ಪ್ರಧಾನ ಸಂಪಾದಕ ಮೈ.ಶ್ರೀ.ನಟರಾಜ ಹಾಗೂ ಸಂಪಾದಕ ಮಂಡಳಿಯ ಪರವಾಗಿ ಗುರುಪ್ರಸಾದ ಕಾಗಿನೆಲೆ ಅವರು ಪುಸ್ತಕ ಪ್ರಕಟನೆಯ ಹಿನ್ನೆಲೆ ಮತ್ತು ಸಂಪಾದನೆಯ ಅನುಭವವನ್ನು ಹಂಚಿಕೊಂಡರು. ಸಮ್ಮೇಳನದ ಅಂಗವಾಗಿ ಹೊರತಂದ ಈ ಪುಸ್ತಕದಲ್ಲಿ ಕಳೆದ ಮೂರು ದಶಕಗಳಲ್ಲಿ ಪ್ರಕಟವಾದ ೨೪ ಕನ್ನಡ ಕಾದಂಬರಿಗಳ ಪರಿಚಯಾತ್ಮಕ ವಿಮರ್ಶೆ (ವಿಮರ್ಶಾತ್ಮಕ ಪರಿಚಯ) ಗಳಿವೆ.  ಎಲ್ಲಾ ೨೪ ಲೇಖನಗಳೂ ಅಮೆರಿಕೆಯಲ್ಲಿ ವಾಸವಾದ ಕನ್ನಡಿಗರಿಂದಲೇ ಬರೆದವುಗಳು.

ಮುಖ್ಯ ಅತಿಥಿ ಡಾ. ವೀಣಾ ಶಾಂತೇಶ್ವರರು ತಮ್ಮ ಭಾಷಣದಲ್ಲಿ “ಕನ್ನಡ ಕಾದಂಬರಿಯಲ್ಲಿ ಕಳೆದ ಕಾಲು ಶತಮಾನ” ವಿಷಯದ ಮೇಲೆ ಒಂದು ಘಂಟೆ ನಿರರ್ಗಳವಾಗಿ ಮಾತನಾಡಿದರು. ಕನ್ನಡದಲ್ಲಿ ಕಾದಂಬರಿ ಪ್ರಕಾರದ ಸಾಹಿತ್ಯದ ಉಗಮದಿಂದ ಪ್ರಾರಂಭಿಸಿ, ನವೋದಯ, ಪ್ರಗತಿಶೀಲ, ನವ್ಯ ಹಾಗೂ ನವ್ಯೋತ್ತರ ಘಟ್ಟಗಳ ಕಾದಂಬರಿಗಳ ವೈಶಿಷ್ಟ್ಯಗಳನ್ನು ಉದಾಹರಣೆಗಳೊಂದಿಗೆ ವಿವರವಾಗಿ ಚರ್ಚಿಸಿದರು. ಭಾಷಣದ ನಂತರ ಇನ್ನೊಬ್ಬ ಮುಖ್ಯ ಅತಿಥಿ ವೈದೇಹಿ ಅವರು ಮೈ.ಶ್ರೀ.ನಟರಾಜರ “ಜಾಲತರಂಗಿಣಿ”  ಪುಸ್ತಕವನ್ನು ವಿದ್ಯುಕ್ತವಾಗಿ ಬಿಡುಗಡೆ ಮಾಡಿದರು. ಮೊದಲ ದಿನದ ಕೊನೆಯ ಸಾಹಿತ್ಯಕ ಕಾರ್ಯಕ್ರಮ ಅಮೇರಿಕನ್ನಡಿಗರ ಸಾಹಿತ್ಯ ಗೋಷ್ಠಿ. ಮನೋರಂಜಕವಾಗಿ, ಸಂಭಾಷಣೆಯ ರೂಪದಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟವರು ನಳಿನಿ ಮೈಯ ಮತ್ತು ಮಧು ಕೃಷ್ಣಮೂರ್ತಿಯವರುಗಳು. ಇದರಲ್ಲಿ ಹನ್ನೆರಡು ಕೆಲ ಹೊಸ ಮತ್ತೆ ಕೆಲ ಪರಿಚಿತ ಬರಹಗಾರರು ತಮ್ಮ ಕಥೆ, ಕವನ, ಹರಟೆಗಳನ್ನು ರಸವತ್ತಾಗಿ ಓದಿ ರಂಜಿಸಿದರು. ಮೊದಲ ದಿನದ ಕಾರ್ಯಕ್ರಮ ಕಾವೇರಿ ಕನ್ನಡ ಕೂಟದ ಹವ್ಯಾಸಿ ಕಲಾವಿದರಿಂದ “ರಾಧೇಯ” ಮತ್ತು “ಹಿರಣ್ಯಕಶಿಪು” ನಾಟಕಗಳೊಂದಿಗೆ ಮುಕ್ತಾಯವಾಯಿತು.

ಎರಡನೇ ದಿನದ ಪ್ರಮುಖ ಕಾರ್ಯಕ್ರಮಗಳೆಂದರೆ ವೈದೇಹಿ ಅವರಿಂದ ಕೃತಿಭಾಗ ವಾಚನ,  ಅಮೇರಿಕನ್ನಡ ಬರಹಗಾರರಿಂದ ಇತ್ತೀಚೆಗ ಪ್ರಕಟಿಸಿದ ಪುಸ್ತಕಗಳ ಪರಿಚಯ-ವಿಶ್ಲೇಷಣೆ, ಮತ್ತು ಮುಖ್ಯ ಅತಿಥಿಗಳ ಜೊತೆ ಕೆಲವು ಸ್ಥಳೀಯ ಸದಸ್ಯರು ಕೂಡಿ ನಡೆಸಿಕೊಟ್ಟ ಸಂವಾದ (ಪ್ರಶ್ನೋತ್ತರ) ಕಾರ್ಯಕ್ರಮ. ಪ್ರಾರಂಭದಲ್ಲಿ, ಶ್ರೀವತ್ಸ ಜೋಶಿ ಮತ್ತು ಶಿವು ಭಟ್ ಅವರು ಗಣಕಯಂತ್ರ ಮತ್ತು ಅಂತರ್‌ಜಾಲಲ್ಲಿ ಕನ್ನಡವನ್ನು“ಬರಹ” ತಂತ್ರಾಂಶದ ಮೂಲಕ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದೆಂದು ಪ್ರತ್ಯಕ್ಷ ಉದಾಹರಣೆಗಳೊಂದಿಗೆ ತೋರಿಸಿಕೊಟ್ಟರು. ವೈದೇಹಿಯವರು ತಮ್ಮ “ವೈದೇಹಿ ಅವರ ಆಯ್ದ ಕವಿತೆಗಳು” ಪುಸ್ತಕದಿಂದ ಎರಡು ಕವನಗಳನ್ನು ಮತ್ತು  “ವೈದೇಹಿ ಅವರ ಆಯ್ದ ಕಥೆಗಳು”  ಪುಸ್ತಕದಿಂದ “ಅಮ್ಮಚ್ಚಿಯೆಂಬ ನೆನಪು” ಕಥೆಯನ್ನು ಭಾವಪೂರ್ಣವಾಗಿ ಓದಿ ನಮ್ಮನ್ನೆಲ್ಲ ರಂಜಿಸಿ, ನಗಿಸಿ, ನಮ್ಮ-ನಮ್ಮ ಜೀವನಾನುಭದ “ಅಮ್ಮಚ್ಚಿ” ಯನ್ನು ನೆನಪಿಗೆ ತಂದುಕೊಟ್ಟರು.

ತ್ರಿವೇಣಿ ಶ್ರೀನಿವಾಸ ರಾವ್ ನಿರ್ವಸಿಕೊಟ್ಟ “ಹೆಮ್ಮೆ ಬರಿಸುವವರು ನಮ್ಮ ಬರಹಗಾರರು” ಕಾರ್ಯಕ್ರಮದಲ್ಲಿ ಕಳೆದ ವಸಂತೋತ್ಸವದಲ್ಲಿ ಬಿಡುಗಡೆಯಾದ ರಂಗದ “ನಗೆಗನ್ನಡಂ ಗೆಲ್ಗೆ” ಪುಸ್ತಕವನ್ನೊಳಗೊಂಡು, ಒಟ್ಟೂ ಎಂಟು ಪುಸ್ತಕಗಳನ್ನು ವಿವಿಧ ಓದುಗರು ಅರ್ಥಪೂರ್ಣವಾಗಿ ವಿಮರ್ಶಿಸಿದರು. ವಿಮರ್ಶಿಸಿದ ಪುಸ್ತಕಗಳಲ್ಲಿ, ನಮ್ಮ ಶಿಕಾಗೋದವರೇ ಆದ ತ್ರಿವೇಣಿ ಶ್ರೀನಿವಾಸ ರಾವ್ “ತುಳಸೀವನ” ವೂ ಒಂದು.

ರವಿವಾರದ ರಸದೂಟದ ಬಳಿಕ “ಇಂದಿನ ಕನ್ನಡ ಬರಹಗಾರ್ತಿಯರು”  ವಿಷಯದ ಮೇಲೆ ಸಂವಾದ ಕಾರ್ಯಕ್ರಮ – ನಡೆಸಿಕೊಟ್ಟವರು ಶಶಿಕಲಾ ಚಂದ್ರಶೇಖರ್. ತುಂಬ ಸ್ವಾರಸ್ಯಕರವಾಗಿದ್ದ ಈ ಕಾರ್ಯಕ್ರಮದಲ್ಲಿ ವೀಣಾ ಶಾಂತೇಶ್ವರ್ ಮತ್ತು ವೈದೇಹಿ ಅವರ ಜೊತೆಯಲ್ಲಿ ನಳಿನಿ ಮೈಯ, ತ್ರಿವೇಣಿ ಶ್ರೀನಿವಾಸ ರಾವ್, ಜ್ಯೋತಿ ಮಹಾದೇವ್, ವಿಮಲಾ ರಾಜಗೋಪಾಲ್, ಹಾಗೂ ಮೀರಾ ಪಿ. ಆರ್.  ಅವರೂ ಭಾಗವಹಿಸಿದ್ದರು. ಅತಿ ಉತ್ಸಾಹದ ಶ್ರೋತೃಗಳಿಂದ ಬಂದ ಪ್ರಶ್ನೆಗಳು ವೈವಿದ್ಯಮಯವಾಗಿದ್ದರೆ, ಉತ್ತರಗಳೂ ಕೂಡ ಅಷ್ಟೇ ಸ್ವಾರಸ್ಯಮಯವೂ, ವಿಚಾರಾತ್ಮಕವೂ ಆಗಿದ್ದವು. ಕೊನೆಯದಾಗಿ ಕಾವೇರಿ ಸಂಘದ ಕನ್ನಡ ಕಲಿಯೋಣ ಶಾಲಾ ಮಕ್ಕಳ ವಿವಿಧ ವಿನೋದಾವಳಿ ಮತ್ತು ವಂದನಾರ್ಪಣೆಗಳೊಂದಿಗೆ, ವಸಂತೋತ್ಸವ ಕಾರ್ಯಕ್ರಮ ಮುಕ್ತಾಯವಾಯಿತು.

-ಶಂಕರ ಹೆಗ್ಗಡೆ

 Posted by at 1:20 AM