May 052026
 

ಬರಹ_ಬಿಂಬ - ಪುಸ್ತಕ ಬಿಡುಗಡೆ

ಕನ್ನಡ ಸಾಹಿತ್ಯ ರಂಗ ಹಾಗೂ ಮಲ್ಲಿಗೆ ಕನ್ನಡ ಕೂಟ, ಡಲ್ಲಾಸ್ ಅವರ ಸಹಯೋಗದಲ್ಲಿ ಮೇ 1, 2 ಮತ್ತು 3ರಂದು ಆಯೋಜಿಸಲಾದ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಹಾಗೂ ಸಂಭ್ರಮದಿಂದ ಸಮಾಪ್ತಿಯಾಯಿತು. ಅಮೆರಿಕದಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಸಮ್ಮೇಳನವು ಸಾಹಿತ್ಯ, ಸಿನಿಮಾ, ಸಂಸ್ಕೃತಿ ಮತ್ತು ಮನರಂಜನೆಯ ಸೊಬಗಿನಿಂದ ವಿಶೇಷ ಮೆರುಗು ಪಡೆದಿತ್ತು.

ಈ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ಚಿತ್ರ ನಿರ್ದೇಶಕ, ಲೇಖಕ ಹಾಗೂ ಚಿಂತಕ ನಾಗತಿಹಳ್ಳಿ ಚಂದ್ರಶೇಖರ್ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು. ಈ ಬಾರಿಯ ಸಮ್ಮೇಳನದ ಪ್ರಮುಖ ವಿಷಯ ‘ಸಾಹಿತ್ಯ ಮತ್ತು ಸಿನಿಮಾ’ ಆಗಿದ್ದು, ಆ ವಿಷಯವನ್ನು ಆಧರಿಸಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ‘ಸಾಹಿತ್ಯ ಮತ್ತು ಸಿನಿಮಾ’ ಕುರಿತಾಗಿ ರಚಿಸಲಾದ ಲೇಖನಗಳ ಸಂಕಲನ ‘ಬರಹ ಬಿಂಬ’ ಕೃತಿ ಬಿಡುಗಡೆಯಾಯಿತು. ಜೊತೆಗೆ ಕಳೆದ ವರ್ಷ ನಿಧನರಾದ ಪತ್ರಕರ್ತ ಎಸ್.ಕೆ.ಶಾಮಸುಂದರ ಅವರ ಸ್ಮರಣಾರ್ಥ ‘ಶಾಮ್ ಡಾಟ್ ಕಾಮ್’ ಎಂಬ ಪುಸ್ತಕವನ್ನೂ ಅನಾವರಣಗೊಳಿಸಲಾಯಿತು.

ಸಮ್ಮೇಳನದ ಮೂರು ದಿನಗಳ ಅವಧಿಯಲ್ಲಿ ಸಾಹಿತ್ಯ ಮತ್ತು ಸಿನಿಮಾವನ್ನು ಕೇಂದ್ರವಾಗಿಟ್ಟುಕೊಂಡು ಹಲವು ವಿಚಾರಗೋಷ್ಠಿಗಳು, ಸಂವಾದಗಳು ಹಾಗೂ ವಿಶೇಷ ಉಪನ್ಯಾಸಗಳು ನಡೆದವು. ಅಮೆರಿಕನ್ನಡಿಗ ಲೇಖಕರ ಕಥೆಗಳನ್ನು ಆಧರಿಸಿದ ಕಿರುಚಿತ್ರಗಳ ಪ್ರದರ್ಶನವು ವಿಶೇಷ ಆಕರ್ಷಣೆಯಾಗಿತ್ತು. ಕನ್ನಡ ಸಿನಿಮಾಗಳ ಕುರಿತು ಆಯೋಜಿಸಲಾದ ಫಿಲ್ಮ್ ಕ್ವಿಜ್ ಕಾರ್ಯಕ್ರಮದಲ್ಲಿ ಹಿರಿಕಿರಿಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಚೈತನ್ಯ ತುಂಬಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಅಪಾರ ವೈವಿಧ್ಯತೆ ಕಂಡುಬಂತು. ಕನ್ನಡ ನಾಡಿನ ಪರಂಪರೆ, ಜನಪದ ಮತ್ತು ಚಲನಚಿತ್ರ ಸಂಗೀತವನ್ನು ಪ್ರತಿಬಿಂಬಿಸುವ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾದವು. ಮಕ್ಕಳು, ಯುವಕರು ಮತ್ತು ಮಹಿಳೆಯರು ನೀಡಿದ ನೃತ್ಯ ಪ್ರದರ್ಶನಗಳು ಸಭಿಕರಿಂದ ಭರ್ಜರಿ ಮೆಚ್ಚುಗೆ ಪಡೆದವು. ಸಂಗೀತ, ನೃತ್ಯ ಮತ್ತು ಮನರಂಜನೆಯ ಸಂಯೋಜನೆಯಾಗಿ ಸಮ್ಮೇಳನವು ಎಲ್ಲರಿಗೂ ಸ್ಮರಣೀಯ ಅನುಭವ ನೀಡಿತು.

ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರಿಗೂ ಮೂರು ದಿನಗಳ ಕಾಲ ಆತ್ಮೀಯತೆಯಿಂದ ರುಚಿಕರವಾದ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. ಕನ್ನಡದ ಸಾಂಪ್ರದಾಯಿಕ ಸವಿರುಚಿಗಳಿಂದ ಕೂಡಿದ ವಿವಿಧ ಬಗೆಯ ಆಹಾರ ಪದಾರ್ಥಗಳು ಎಲ್ಲರ ಮನ ಗೆದ್ದವು. ಆತಿಥ್ಯ ಮತ್ತು ಸ್ನೇಹಭಾವದಿಂದ ನೀಡಲಾದ ಊಟ ವ್ಯವಸ್ಥೆ ಸಮ್ಮೇಳನದ ವಿಶೇಷವಾಗಿತ್ತು.

ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಸಾಹಿತ್ಯ ಮತ್ತು ಸಿನಿಮಾ’ ವಿಷಯದ ಕುರಿತು ಆಶಯಭಾಷಣ ಮಾಡಿ, ಸಾಹಿತ್ಯ ಮತ್ತು ಚಲನಚಿತ್ರಗಳ ನಡುವಿನ ಆಪ್ತ ಸಂಬಂಧವನ್ನು ಮನೋಜ್ಞವಾಗಿ ವಿವರಿಸಿದರು. ಅವರ ಮಾತುಗಳು ಸಾಹಿತ್ಯಾಭಿಮಾನಿಗಳು ಮತ್ತು ಸಿನಿರಸಿಕರ ಮನಸ್ಸಿನಲ್ಲಿ ಹೊಸ ಚಿಂತನೆಗಳನ್ನು ಮೂಡಿಸಿ್ದವು.

ಮೂರು ದಿನಗಳ ಕಾಲ ಸಂಭ್ರಮ, ಸಾಹಿತ್ಯ ಚಟುವಟಿಕೆಗಳು, ಸಾಂಸ್ಕೃತಿಕ ವೈಭವ ಮತ್ತು ಆತ್ಮೀಯತೆಯ ವಾತಾವರಣದಲ್ಲಿ ನಡೆದ ಈ ಸಮ್ಮೇಳನವು, ಅದರ ಯಶಸ್ಸಿಗಾಗಿ ಶ್ರಮಿಸಿದ ವಿವಿಧ ಸಮಿತಿಗಳ ಸದಸ್ಯರು, ಸ್ವಯಂಸೇವಕರು ಹಾಗೂ ಸಹಯೋಗಿಗಳಿಗೆ ಧನ್ಯವಾದ ಸಲ್ಲಿಸುವ ಮೂಲಕ ಯಶಸ್ವಿಯಾಗಿ ಸಮಾರೋಪಗೊಂಡಿತು.

 Posted by at 9:05 PM