Jun 292009
 

Srivatsa Joshi

 

 

ಶ್ರೀವತ್ಸ ಜೋಶಿಯವರ ಎರಡು ಹೊತ್ತಗೆಗಳು:
ಇನ್ನೊಂದಿಷ್ಟು ವಿಚಿತ್ರಾನ್ನ
ಮತ್ತೊಂದಿಷ್ಟು ವಿಚಿತ್ರಾನ್ನ
ವಿಮರ್ಶೆ : ಶ್ರೀನಾಥ್ ಭಲ್ಲೆ, 

 

ಎಲ್ಲರಿಗೂ ನಮಸ್ಕಾರ.

ನನ್ನ ಹೆಸರು ಶ್ರೀನಾಥ್ ಭಲ್ಲೆ. ’ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ಸಂತೋಷವಾಗುತ್ತಿದೆ. ಆತ್ಮೀಯ ಮಿತ್ರರಾದ ಶ್ರೀವತ್ಸ ಜೋಶಿಯವರ ಪುಸ್ತಕಗಳನ್ನು ವಿಮರ್ಶಿಸಲು ಸಿಕ್ಕ ಅವಕಾಶಕ್ಕೆ ಇನ್ನೂ ಹೆಚ್ಚು ಸಂತೋಷವಾಗುತ್ತಿದೆ. ಮೊದಲ ಬಾರಿಗೆ ಇಂತಹ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅರಿತೋ ಅರಿಯದೆಯೋ ಆಗಬಹುದಾದ ತಪ್ಪುಗಳಿಗೆ ಅಡ್ವಾನ್ಸ್ ಆಗಿ ಕ್ಷಮೆ ಇರಲಿ. ಆರು ವರ್ಷಗಳ ಸಾಧನೆಯನ್ನು ಆರೇ ನಿಮಿಷಗಳಲ್ಲಿ ಹೇಳುವ ಪ್ರಯತ್ನ ಮಾಡುತ್ತೇನೆ. ವಿಚಿತ್ರಾನ್ನಗಳ ಸರಣಿಯುದ್ದಕ್ಕೂ ಲಘು ಹಾಸ್ಯ ಎದ್ದುಕಾಣುವುದರಿಂದ ನನ್ನ ವಿಮರ್ಶೆಯನ್ನೂ ಲಘು ಹಾಸ್ಯದಲ್ಲೇ ಕೊಂಡೊಯ್ಯುವ ಪ್ರಯತ್ನವನ್ನೂ ಮಾಡಿದ್ದೇನೆ.

ಸುದ್ದಿಯ ಹಸಿವಿಗೆ ಆಹಾರವೇ ವಿಚಿತ್ರಾನ್ನ. ಭೋಜನದ ಸವಿ ಎಷ್ಟಿದೆ ಎಂದರೆ, ವಿಚಿತ್ರಾನ ಎಂಬೋ ತಟ್ಟೆ ಖಾಲಿಯಾದ ಮೇಲೆ ಎರಡನೇ ಹಾಗೂ ಮೂರನೇ ಸರ್ವಿಂಗ್’ಗಾಗಿ ಓದುಗರನ್ನು ಆಹ್ವಾನಿಸಿ ಹಸಿವನ್ನು ಅಡಗಿಸಲು ಬಂದದ್ದು ’ಇನ್ನೊಂದಿಷ್ಟು ವಿಚಿತ್ರಾನ್ನ’ ಹಾಗೂ ’ಮತ್ತೊಂದಿಷ್ಟು ವಿಚಿತ್ರಾನ್ನ’. ಪುಸ್ತಕಗಳ ಉಪಶೀರ್ಷಿಕೆಯೇ ಹೇಳುವಂತೆ ಇವು ’ಲಗು ಬಗೆಯ’ ಹಾಗೂ ’ಬಗೆ ಬಗೆಯ’ ಬರಹಗಳ ಬುತ್ತಿ. ಜ್ಞ್ನಾನದ ಹಸಿವನ್ನು ತೀರಿಸಿಕೊಳ್ಳಲು ಎಲ್ಲಿಗೆ ಬೇಕಾದರೂ ಒಯ್ಯಬಹುದಾದ್ದರಿಂದ ಇವನ್ನು portable ಜ್ಞ್ನಾನ ಭಂಡಾರ ಎನ್ನಬಹುದು. ಇಷ್ಟಕ್ಕೂ ’ಇನ್ನೊಂದಿಷ್ಟು’, ’ಮತ್ತೊಂದಿಷ್ಟು’ ವಿಚಿತ್ರಾನ್ನಗಳಲ್ಲಿ ಏನಿದೆ ? ಎರಡೂ ಪುಸ್ತಕಗಳನ್ನು ಓದಿದ ಮೆಲೆ ಅನ್ನಿಸಿದ್ದು ’ಏನಿಲ್ಲ?’ ಅಂತ.

ಉದಾಹರಣೆಗೆ, ಈ ಸಮಾರಂಭಕ್ಕೆ ಬರುವಾಗ ’ಯಾವ ಡ್ರಸ್ ಹಾಕಿಕೊಳ್ಳಲಿ’ ಎಂದು ಯೋಚಿಸಿದಾಗ ’ಇನ್ನೊಂದಿಷ್ಟು ವಿಚಿತ್ರಾನ್ನದ ಇಪ್ಪತ್ತನೆಯ’ ಲೇಖನದಲ್ಲಿ ವಿಷಯ ಸಿಕ್ಕಿತು. ಡ್ರಸ್ ತೆಗೆದಿಟ್ಟುಕೊಂಡು ಸ್ನಾನಕ್ಕೆ ಹೋಗಿ ಮೈಗೆ ಪಿಯರ್ಸ್ ಸೋಪು ತಿಕ್ಕಿಕೊಳ್ಳುವಾಗ ಇದು ಯಾಕೆ ಪಾರದರ್ಶಕವಾಗಿದೆ ಅಂತ ಜೋಶಿ ಹೇಳಿದ್ದಾರೆ ಅನ್ನೋದು ನೆನಪಾಯ್ತು. ಹಾಡಿಕೊಂಡು ಜಳಕ ಮುಗಿಸಿದ ಮೇಲೆ, ಪಿಯರ್ಸ್ ಬಗ್ಗೆ ತಿಳಿದುಕೊಳ್ಳೋವಾಗ ನಾನೇಕೆ ಬಾತ್ ರೂಮ್ ಸಿಂಗರ್ ಅಂತಾನೂ ತಿಳಿದುಕೊಂಡೆ.

ಜೋಶಿಯವರು ತಮ್ಮ ಲೇಖನಗಳಲ್ಲಿ ಹಲವಾರು ರೀತಿಯ ತಿಂಡಿ-ತಿನಿಸುಗಳ ರುಚಿ ತೋರಿಸಿದ್ದಾರೆ. ಚಿಕ್ಕಿ, ಬೇಗಲ್, ಬಜಗೋಳಿ, ಗೋಳಿಬಜೆ, ಹಲಸಿನ ಹಪ್ಪಳ ತಿನ್ನಿಸಿದ್ದು ಮಾತ್ರವಲ್ಲದೇ ಗಂಜಿ ಕುಡಿಸಿದ್ದಾರೆ… ಒಮ್ಮೆಯಂತೂ ಹುಲ್ಲು ತಿನಿಸಿದ್ದಾರೆ. ಕಾಕ್ ಟೈಲ್ ಬಗ್ಗೆ ಬರೆಯುವಾಗ ಜೋಶಿಯವರ ತಾವು ಯಾವ ಜೋಶ್’ನಿಂದಲೂ ಈ ಲೇಖನ ಬರೆದಿಲ್ಲ ಅಂತ ಹೇಳಿದ್ದಾರೆ. ನಾನೇನ ಹೇಳಹೊರಟಿದ್ದೀನಿ ಅನ್ನೋದು ಅರ್ಥವಾಗಬೇಕಾದರೆ ಅವರ ಲೇಖನಗಳನ್ನು ಓದಿಯೇ ತಿಳಿಯಬೇಕು.

ಹಲವಾರು ಬಾರಿ ಕೆಣಕಿ-ತಿಣುಕಿಸಿದ ರಸಪ್ರಶ್ನೆಗಳನ್ನು ಕೇಳಿ ವಿಜೇತರನ್ನು ಆರಿಸಿ ಬಹುಮಾನ ನೀಡಿದ್ದಾರೆ. ಒಂದು ಬಾರಿ ಸಚಿತ್ರ ರಸಪ್ರಶ್ನೆ ನೆಡೆಸುವುದರ ಮೂಲಕ ’ಜನಪದ ಜಾತ್ರೆ’ ಯನ್ನೇ ನೆಡೆಸಿದ್ದಾರೆ. ಹಲವಾರು ಹೊಸ ವಿಷಯಗಳ ಹಬ್ಬವೇ ಆಗಿತ್ತು ಆ ರಸಪ್ರಶ್ನೆ. ವೈಜ್ಞ್ನಾನಿಕ ವಿಚಾರಗಳನ್ನು ತಿಳಿಸುತ್ತ ಒಮ್ಮೆ, Telescope, Telegraph ಇನ್ನಿತರೇ “ಟೆಲಿ” ಬಗ್ಗೆ ಮಾತನಾಡುತ್ತ ದೂರವಾಣಿ ನಾಮಕರಣದಂತಹ ವಿಚಾರ ತಿಳಿಸಿದ್ದರು. ಮತ್ತೊಂದೆಡೆ ಕೊಕ್ಕರೆ ಹಾರಾಟದ ಏರೋ ಡೈನಾಮಿಕ್ಸ್ ತಿಳಿಸಿದ್ದಾರೆ. ಹಲವಾರು ಲೇಖನಗಳಲ್ಲಿ ಲಘು ಹಾಸ್ಯದ ಸವಿಯನ್ನು ಚೆನ್ನಾಗಿ ಹರಿಸಿದ್ದಾರೆ. ಉದಾಹರಣೆಗೆ ಹಜಾಮತ್-ಸೆ-ಹಜಾಮತ್ ತಕ್, ಪನ್’ಗಳು, ಮಜಾವಾಣಿ, ಆಂಗ್ಲ-ಕನ್ನಡ translation ವೈಪರೀತ್ಯ, ಹನುಮನಿಗೆ ಬರೆದ ಪತ್ರ ಹೀಗೇ ಸಾಗುತ್ತದೆ ಪಟ್ಟಿ.ಸ್ವಾರಸ್ಯಕರವಾದ ವಿಚಾರಗಳನ್ನು ತಿಳಿಸುವುದರಲ್ಲಿ ಜೋಶಿಯವರದು ಎತ್ತಿದ ಕೈ ಎಂದರೆ ಅದು ಅತಿಶಯೋಕ್ತಿಯಲ್ಲ.  ಎತ್ತಿದ ಕೈ ಇದ್ದರೆ ಟೈಪ್ ಹೇಗೆ ಮಾಡುತ್ತಿದ್ದರು ಎಂದು ಕೇಳಬೇಡಿ.

ಅಂಧಕಾರದ ಬಗ್ಗೆ ವಿಚಾರ ಮಾಡುತ್ತ Switzerland’ನ blind cow restaurant ಬಗ್ಗೆ ಹೇಳಿದ್ದಾರೆ. ಅದರಂತೆಯೇ ಡಾ| ಕೆಲ್ಲಿಯವರ ಕಥಾನಕ, Code Adam, Nostalgia, Murphy’s law, Global dimming, Nut-Bolt-Screw  ಇತ್ಯಾದಿ ಲೇಖನಗಳು.

ಮತ್ತೊಂದು ಕಡೆ ಜೋಶಿಯವರು ಹೇಳ್ತಾರೆ, ತಮಗೆ ಎಲ್ಲೆಲ್ಲಿಂದಲೋ ವಿಷಯಗಳನ್ನು ತಂದು ಅದಕ್ಕೊಂದು ಸಾಮಾನ್ಯ ವಿಷಯ ಹೊಂದಿಸಿ ಪೋಣಿಸುವುದು ಇಷ್ಟ ಎಂದು ತಿಳಿಸಿದ್ದಾರೆ. ಅದನ್ನು ಸಮರ್ಥನೆ ಮಾಡುವ ಒಂದು ಲೇಖನವೆಂದರೆ ಹೇಮಾಮಾಲಿನಿ-ಲಾಲೂ ಪ್ರಸಾದ್-ಗಾಂಧೀಜಿ-ಮಾವಿನಹಣ್ಣಿನ ಬಗ್ಗೆ ಬರೆದ ಲೇಖನ. ಬಹಳ ಸೊಗಸಾದ ಲೇಖನ ಇದು.

ತಾವು ಭೇಟಿ ನೀಡಿದ ಸ್ಥಳಗಳ ವೈಶಿಷ್ಟ್ಯದ ಬಗ್ಗೆ ಹಲವೆಡೆ ಬರೆದಿದ್ದಾರೆ. ಕಾರ್ಯನಿಮಿತ್ತ ಹೋದ ಪೋರ್ಟರಿಕೋ ಆಗಿರಬಹುದು ಅಥವಾ ಸ್ನೇಹಿತರು ಆಹ್ವಾನಿಸಿದ ಪದ್ಮನಾಭ ವ್ರತವೇ ಆಗಿರಬಹುದು. ಹಬ್ಬ ಹರಿದಿನಗಳ ಬಗ್ಗೆ ಮಾತನಾಡುತ್ತ ಮಹತ್ವ ಸಾರುವ ಕಥೆಯನ್ನೂ ವಿವರಿಸಿದ್ದಾರೆ. ಲಕ್ಶ್ಮೀ ಪೂಜೆ, ಮಂಗಳ ಗೌರಿ, ಶಿವರಾತ್ರಿ ಆಚರಣೆ, ಉಗಾದಿ, ದೀಪಾವಳಿ, ದೇವಳದ ಜಾತ್ರೆ ಹೀಗೆ. ಎಲ್ಲ ಲೇಖನಗಳೂ ಉತ್ತಮವಾಗಿದ್ದರೂ ನಾನಗೆ ಅತೀ ಮೆಚ್ಚುಗೆಯಾದವು ಅಂದರೆ ವೇದಾಧ್ಯಯನ ವಿಧಾನ, ವೃಷಭ ವಿಸರ್ಜಿತ, ಏಕವಚನ ನಾಮಾಮೃತ, ತಲ್ಲಣಿಸದಿರು ಕಂಡ್ಯ ವಲಸೆಗಾರ.

ಒಟ್ಟಾರೆ ಹೇಳಿದರೆ ’ಇನ್ನೊಂದಿಷ್ಟು ವಿಚಿತ್ರಾನ್ನ’ ಹಾಗೂ ’ಮತ್ತೊಂದಿಷ್ಟು ವಿಚಿತ್ರಾನ್ನ’ ಲೇಖನ ಸರಮಾಲೆಯಲ್ಲಿ ಉದಾತ್ತ ವಿಚರಗಳಿವೆ, ಚಿಂತನೆ ಇದೆ, ಹಾಸ್ಯ ಇದೆ, ರಸಪ್ರಶ್ನೆಗಳಿವೆ, ಖಾದ್ಯಗಳ ವಿಚಾರವಿದೆ, ಗಣಿತ ಇದೆ, ವಿಜ್ಞ್ನಾನ ಇದೆ, ದಾಸರ ಪದಗಳು ಹಾಗೂ ಸಿನಿಮಾ ಹಾಡುಗಳ ಭಂಡಾರವೇ ಇದೆ. ಬರೀ ತಮ್ಮದೇ ವಿಚಾರಗಳಲ್ಲದೇ ಓದುಗರು ಈ-ಮೈಲ್ ಗಳಲ್ಲಿ ಹಂಚಿಕೊಂಡ ವಿಚಾರಗಳನ್ನೂ ಲೇಖನದಲ್ಲಿ ಸೇರಿಸಿದ್ದಾರೆ.ಅಗಲವಾದ ಜ್ಞ್ನಾನಕ್ಕಿಂತ ಯಾವುದಾದರೂ ಒಂದು ವಿಷಯದಲ್ಲಿ ಆಳವಾದ ಜ್ಞ್ನಾನ ಇದ್ದಿದ್ದರೆ ಎಂದು ಚೆನ್ನಿತ್ತು ಎಂದು ಹೇಳುತ್ತ ನಮಗೂ ಒಮ್ಮೆ ಯೋಚನೆ ಮಾಡುವ ಹಾಗೆ ಮಾಡಿದ್ದಾರೆ. ಅದ್ಭುತ ವಿಚಾರಗಳನ್ನು ಪುಸ್ತಕ ರೂಪದಲ್ಲಿ ತಂದು ಎಲ್ಲರನ್ನೂ ರಂಜಿಸಿರುವ ಶ್ರೀವತ್ಸ ಜೋಶಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತ, ನನ್ನ ಮಾತು ಮುಗಿಸುತ್ತೇನೆ. ಹಾಗೂ ವಿಮರ್ಶೆ ಮಾಡುವ ಅವಕಾಶ ನೀಡಿದ ಕನ್ನಡ ಸಾಹಿತ್ಯ ರಂಗದ ಸಮಿತಿ ವರ್ಗದವರಿಗೂ ಅನಂತ ವಂದನೆಗಳು. 

ಈವರೆಗಿನ ನನ್ನ ಮಾತನ್ನು ಕೇಳಿ ನಿಮಗೆ ಆಕಳಿಕೆ ಬಂದಿದ್ದರೆ ಅದು ಯಾಕೆ ಎಂದು ತಿಳಿದುಕೊಳ್ಳಲು ’ಇನ್ನೊಂದಿಷ್ಟು ವಿಚಿತ್ರಾನ್ನದ’ ಇಪ್ಪತ್ತೊಂಬತ್ತನೆಯ ಲೇಖನ ಓದಿ.

ನಾನಿನ್ನು ಬರಲೇ ?

 

 Posted by at 7:14 PM
Jun 292009
 

Vishwanath Hulikal ೧. ಮೂಲ ಕೃತಿ: `Men are from Mars, Women are from Venus’
 ಆಂಗ್ಲ ಮೂಲ ಲೇಖಕ: ಡಾ. ಜಾನ್ ಗ್ರೇ
 ಕನ್ನಡ ಅನುವಾದ: ‘ಆತ ಮಂಗಳ ಲೋಕದಿಂದ, ಈಕೆ ಶುಕ್ರ ಲೋಕದಿಂದ’
 ಅನುವಾದಕರು: ವಿಶ್ವನಾಥ್ ಹುಲಿಕಲ್
 ಪ್ರಕಟಣೆ: ಕಾವ್ಯಾಲಯ ಪ್ರಕಾಶಕರು, ಮೈಸೂರು
 ಪ್ರಕಟಿತ ವರ್ಷ: ೨೦೦೯.

 

Men are from from Mars, Women are from Venus  ಎಂಬ ಪುಸ್ತಕವು ಕಳೆದ ದಶಕದಲ್ಲಿ ಮಾನವೀಯ ಸಂಬಂಧಗಳ ಬಗ್ಗೆ ಪ್ರಕಟವಾದ ಪುಸ್ತಕಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಖ್ಯಾತಿಯನ್ನು ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಪುಸ್ತಕವು ವಿಶ್ವದ ೪೦ ಭಾಷೆಗಳಿಗೆ ಅನುವಾದವಾಗಿ, ಒಟ್ಟು ೩ ಕೋಟಿಗಿಂತ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ.

 ಈ ಪುಸ್ತಕ ಡಾ|| ಜಾನ್ ಗ್ರೇ ಅವರ ೭ ವರ್ಷಗಳ ಅವಿಶ್ರಾಂತ ಸಂಶೋಧನೆಯ ಫಲ. ಈ ಅವಧಿಯಲ್ಲಿ ಅವರು ೨೫೦೦೦ಕ್ಕೂ ಹೆಚ್ಚಿನ ಜನರನ್ನು ತಮ್ಮ ಸೆಮಿನಾರ್ ಗಳಲ್ಲಿ ಸಂದರ್ಶಿಸಿದ್ದಾರೆ. ಇದರಿಂದ ಅವರಿಗೆ ಗಂಡು-ಹೆಣ್ಣುಗಳು ಹೇಗೆ ಮೂಲಭೂತವಾಗಿ ಭಿನ್ನರು ಎಂಬುದನ್ನು ಅವರು ಆಳವಾಗಿ ಅರಿತುಕೊಂಡು, ನಿರ್ದಿಷ್ಠವಾಗಿ ವ್ಯಖ್ಯಾನಿಸಲು ಸಾಧ್ಯವಾಗಿದೆ. ಈ ತೆರನಾದ ತಿಳುವಳಿಕೆಯಿಂದ, ಸ್ತ್ರೀ-ಪುರುಷರ ಮಧ್ಯದ ಸಂಬಂಧ ಮತ್ತು ಸಂಪರ್ಕವನ್ನು ನೂತನ ವಿಧಾನಗಳಿಂದ ಸುಧಾರಿಸಲು ಅನುಕೂಲವಾಗಿದೆ. ಗಂಡು-ಹೆಣ್ಣುಗಳ ಮಧ್ಯೆ ಸಂಬಂಧವನ್ನು ಉತ್ತಮಪಡಿಸಬೇಕಾದರೆ, ಇವರಿಬ್ಬರ ನಡುವಣ ಮೂಲಭೂತ ವ್ಯತ್ಯಾಸಗಳನ್ನು ಮೊದಲು ಅರಿತುಕೊಳ್ಳಬೇಕು. ಈ ಬಗೆಯ ತಿಳುವಳಿಕೆಯಿಂದ ಆತ್ಮಾಭಿಮಾನ ಮತ್ತು ವೈಯಕ್ತಿಕ ಘನತೆ ಹೆಚ್ಚುತ್ತದೆ. ಅಷ್ಟೇ ಅಲ್ಲದೆ, ಪರಸ್ಪರ ವಿಶ್ವಾಸ, ನಂಬಿಕೆ, ವೈಯಕ್ತಿಕ ಜವಾಬುದಾರಿ, ಸಹಕಾರ ಮತ್ತು ಪ್ರೀತಿಯೂ ಅಧಿಕವಾಗುತ್ತದೆ.

 ಪ್ರಸ್ತುತ ಆಧುನಿಕ ಕಾಲದ ಸ್ತ್ರೀ-ಪುರುಷರ ನಡುವೆ ಪ್ರೀತಿಪೂರ್ವಕ ಸಂಬಂಧ ಸ್ಥಾಪನೆಗೆ, ಈ ಪುಸ್ತಕ ನೇರವಾಗಿ ನೆರವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ, ಇದರಲ್ಲಿ ವಿವರಿಸಿರುವ ಪ್ರತಿಯೊಂದು ಪ್ರಾಯೋಗಿಕ ಸಲಹೆಯನ್ನೂ ಅತ್ಯಂತ ವ್ಯಾಪಕ ಪರೀಕ್ಷೆಗೆ ಗುರಿಪಡಿಸಲಾಗಿದೆ. ಡಾ|| ಜಾನ್ ಗ್ರೇ ಪ್ರಶ್ನಿಸಿದ ೨೫೦೦೦ ವ್ಯಕ್ತಿಗಳಲ್ಲಿ, ಪ್ರತಿಶತ ೯೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪುಸ್ತಕದಲ್ಲಿ ವಿವರಿಸಿರಿವ ವ್ಯಕ್ತಿಗಳ ಜೊತೆ ತಮ್ಮನ್ನು ಉತ್ಸಾಹದಿಂದ ಗುರುತಿಸಿಕೊಂಡಿದ್ದಾರೆ. ಗಂಡು-ಹೆಣ್ಣುಗಳ ಮಧ್ಯೆ, ಅವರೀರ್ವರ ಭಿನ್ನತೆಯಿಂದಾಗಿ ಉದ್ಭವಿಸುವ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿ, ಅವನ್ನು ನಿವಾರಿಸಲು ಅನುಷ್ಠಾನಗೊಳಿಸಬಹುದಾದಂತಹ ಪ್ರಾಯೋಗಿಕ ಸಲಹೆಗಳನ್ನು ನೀಡಲಾಗಿದೆ. ಆದ್ದರಿಂದಲೇ ಈ ಪುಸ್ತಕಕ್ಕೆ ಮಹತ್ವ ಹೆಚ್ಚಾಗಿದೆ. 

ಈ ಪುಸ್ತಕದಲ್ಲಿ ವಿವರಿಸಿರುವ ಪ್ರಾಯೋಗಿಕ ಸಲಹೆಗಳು ಯಾವ ದೇಶದ ಜನರಿಗೂ ಅನ್ವಯಿಸುವಂತಹುದು. ಗಂಡು-ಹೆಣ್ಣುಗಳ ಮಧ್ಯೆ ಉದ್ಭವಿಸುವ ಸಮಸ್ಯೆಗಳು ಪರಿಹಾರವಾದರೆ, ಈ ಸಂಸಾರ ಸುಖಮಯವಾಗಿರುತ್ತದೆ. ಅವರಿಬ್ಬರ ನಡುವೆ ಸಂಘರ್ಷಗಳೇ ಉಗಮಿಸದಿದ್ದರೆ, ಅದಕ್ಕಿಂತ ಹೆಚ್ಚಿನ ಸಂತೋಷ ಎಲ್ಲಿದೆ? ಈ ಪುಸ್ತಕದ ಪ್ರಯೋಜನವನ್ನು ತಮ್ಮ ಕನ್ನಡ ನಾಡಿನ ಬಾಂಧವರಿಗೆ ತಲುಪಿಸಬೇಕೆಂಬ ಚಡಪಡಿಕೆಯೇ ನನ್ನನ್ನು ಈ ಪುಸ್ತಕದ ಅನುವಾದಕ್ರಿಯೆಗೆ ಪ್ರೇರೇಪಿಸಿತು.

 

(ಇದೇ ಪುಸ್ತಕ ಕನ್ನಡ ಜಾಗತಿಕ ಜಾಲತಾಣದಲ್ಲಿ http://ThatsKannada.OneIndia.in/column/hulikal  ಸೆಪ್ಟೆಂಬರ್ ೧೬, ೨೦೦೫ ರಿಂದ ಮೇ ೧೧, ೨೦೦೭ ರವರೆಗೆ ಸಾಪ್ತಾಹಿಕ ಧಾರಾವಾಹಿಯಾಗಿ ಅಂಕಣವಾಗಿ ಪ್ರಕಟಗೊಂಡಿದೆ.)

೨. ಮೂಲ ಕೃತಿ:  ‘Story of Civilization’
ಆಂಗ್ಲ ಲೇಖಕ: ವಿಲ್ ಡ್ಯೂರಂಟ್
ಕನ್ನಡ ಅನುವಾದ ‘ನಾಗರೀಕತೆಯ ಕಥೆ’ (ಸಂಪುಟ ೩) – ಸೀಸರ್ ಮತ್ತು ಕ್ರಿಸ್ತ
ಅನುವಾದಕರು: ವಿಶ್ವನಾಥ್ ಹುಲಿಕಲ್, ಶಶಿಕಲ ರಾಜ, ಮೀರಾ ಮೂರ್ತಿ, ಶ್ರೀಧರ ಮೂರ್ತಿ, ಮಾಗಳದ.
ಪ್ರಧಾನ ಸಂಪಾದಕರು: ಡಾ|| ಎಲ್. ಎಸ್. ಶೇಷಗಿರಿರಾವ್
ಪ್ರಕಟಣೆ:  ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು
ಪ್ರಕಟಿತ ವರ್ಷ: ೨೦೦೮.

 

 Posted by at 6:43 PM
Jun 292009
 

Nag Aital 

ಆಹಿತಾನಲ (ನಾಗ ಐತಾಳ)ರ ಎರಡು ಹೊತ್ತಗೆಗಳು:
“ಕಾದೇ ಇರುವಳು ರಾಧೆ”- ಕಾದಂಬರಿ
“ಒಂದಾನೊಂದು ಕಾಲದಲ್ಲಿ”- ಕಟ್ಟು ಕಥೆಗಳ ಸಂಗ್ರಹ
ವಿಮರ್ಶೆ – ಜ್ಯೋತಿ ಮಹಾದೇವ

 

ಆಹಿತಾನಲ ಎನ್ನುವ ಕಾವ್ಯನಾಮದ ನಾಗ ಐತಾಳರದು ಬಹಳಷ್ಟು ಜೀವನಾನುಭವವುಳ್ಳ ಸಮೃದ್ಧ ಬರವಣಿಗೆ. ಉಡುಪಿ ಸಮೀಪದ ಕೋಟದಿಂದ ಆರಂಭವಾದ ಇವರ ಜೀವನ ಪಯಣ, ಬೆಂಗಳೂರು, ಲಾಸ್ ಏಂಜಲಿಸ್, ಶಿಕಾಗೋ, ನ್ಯೂ ಜೆರ್ಸಿ ಮುಂತಾದ ಕಡೆಗಳಲ್ಲೆಲ್ಲ ಸುತ್ತಾಡಿ ಸಾಗುತ್ತಿದೆ. ಜೀವರಸಾಯನ ಶಾಸ್ತ್ರದಲ್ಲಿ ಅಧ್ಯಯನ, ಸಂಶೋಧನ ವೃತ್ತಿಯಾಗಿದ್ದು, ಈಗ ನಿವೃತ್ತರಾದ ಮೇಲೆ ಪ್ರವೃತ್ತಿಯಾಗಿದ್ದ ಬರವಣಿಗೆಯನ್ನೇ ಪೂರ್ಣಪ್ರಮಾಣದಲ್ಲಿ ಕೈಗೆತ್ತಿಕೊಂಡಿದ್ದಾರೆ. ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ, ಕಾದೇ ಇರುವಳು ರಾಧೆ, ಒಂದಾನೊಂದು ಕಾಲದಲ್ಲಿ- ಕಟ್ಟುಕಥೆಗಳ ಸಂಗ್ರಹ; ಪ್ರಬಂಧ ಸಂಕಲನ- ಕಲಬೆರಕೆ – ಇವರ ಸ್ವಂತ ಪ್ರಕಟಿತ ಕೃತಿಗಳು. ಕಾರಂತ ಚಿಂತನ- ಕಡಲಾಚೆಯ ಕನ್ನಡಿಗರಿಂದ, ಕುವೆಂಪು ಸಾಹಿತ್ಯ ಸಮೀಕ್ಷೆ, ಯದುಗಿರಿಯ ಬೆಳಕು (ಪು.ತಿ.ನ. ಅವರ ಜೀವನ, ಸಾಹಿತ್ಯದ ಬಗ್ಗೆ), ಕನ್ನಡದಮರ ಚೇತನ (ಮಾಸ್ತಿಯವರ ಜೀವನ, ಸಾಹಿತ್ಯದ ಬಗ್ಗೆ), ಗೆಲುವಿನ ಚಿಲುಮೆ ರಾಜರತ್ನಂ- ಇವರ ಸಂಪಾದಿತ ಕೃತಿಗಳು. ಕನ್ನಡ ಸಾಹಿತ್ಯ ರಂಗದ ಪ್ರಕಟಣೆಗಳಾದ ಆಚೀಚೆಯ ಕತೆಗಳು ಮತ್ತು ನಗೆಗನ್ನಡಂ ಗೆಲ್ಗೆ- ಇವುಗಳಿಗೂ ಸಹಸಂಪಾದಕರಾಗಿದ್ದರು.

ಈಗ ಇಲ್ಲಿ ನಾನು ಒಳನೋಟ ಹರಿಸುತ್ತಿರುವ ಎರಡು ಕೃತಿಗಳು ವಿಶಿಷ್ಟವಾದವು. ಮೊದಲನೆಯದು ಐತಾಳರ ಚೊಚ್ಚಲ ಕಾದಂಬರಿ- ಕಾದೇ ಇರುವಳು ರಾಧೆ.

ಕೃಷ್ಣ-ರಾಧೆಯರ ಪ್ರೇಮಗಾಥೆ ನಮಗ್ಯಾರಿಗೂ ಹೊಸದಲ್ಲ. ಅದು ಪ್ರೇಮಿಗಳಿಗೆ ಸ್ಫೂರ್ತಿ ನೀಡುವ ಸ್ಥೈರ್ಯ ಕೊಡುವ ಶಕ್ತಿಯುಳ್ಳದ್ದು. ಭೌತಿಕ ಪ್ರೇಮಕಥೆಗಳಾದ ರೋಮಿಯೋ ಜೂಲಿಯೆಟ್, ಲೈಲಾ ಮಜನೂ, ಸಲೀಂ ಅನಾರ್ಕಲಿ, ಅಥವಾ ಪುರಾತನ ಗ್ರೀಕ್ ಕಥಾನಕದ ಪೈರಮಿಸ್ ಮತ್ತು ಥೆಸ್ಬಿ, ಮುಂತಾದವರುಗಳಂತೆ ಅಲ್ಲದೆ, ಈ ಜೋಡಿ ಸದಾ ನಮ್ಮೆಲ್ಲರ ಹೃದಯಗಳಲ್ಲಿ ನೆಲೆಸಿರುವಂಥದ್ದು. ರಾಧೆಯ ಪ್ರೀತಿಯಿಂದಲೇ ಪವಾಡಪುರುಷ ಕೃಷ್ಣನೂ ರಾಧಾಕೃಷ್ಣನಾಗಿಬಿಟ್ಟ. ಇಂಥ ಗಾಥೆಯನ್ನು ಐತಾಳರು ರಾಧೆಯೆಡೆಗೆ ಮೃದುನೋಟವಿಟ್ಟುಕೊಂಡು ಹೊಸದೊಂದು ಕೋನದಿಂದ ಬರೆದಿದ್ದಾರೆ. ತಮ್ಮ ಅರಿಕೆಯಲ್ಲಿ, ಸಾಮಾನ್ಯವಾಗಿ ಪ್ರಚಲಿತವಿರುವ ಕಥೆಗಳಿಗಿಂತ ಈ ಕಥನ ಹೇಗೆ ಭಿನ್ನವೆಂಬುದನ್ನು ಹೇಳಿಕೊಂಡಿದ್ದಾರೆ. ಕೃಷ್ಣಕಥೆಯಾದ ಭಾಗವತದಲ್ಲಿಯೇ ಇಲ್ಲದ ರಾಧೆ ಬಹುಶಃ ಜಯದೇವ ಕವಿಯ ಕಲ್ಪನೆಯಿರಬೇಕು ಎನ್ನುವುದು ಅಭಿಮತ. ಅಂಥ ಬಹುಪ್ರತೀತ ಕಲ್ಪನೆಯನ್ನು ಇನ್ನಷ್ಟು ಕಲ್ಪನೆಯ ಚಿತ್ತಾರಗಳಿಂದ ಐತಾಳರು ಅಂದಗೊಳಿಸಿದ್ದಾರೆ. ಗೋವಳ ಜನಾಂಗದ ಜನಜೀವನದ ಚಿತ್ರಣ ಕಟ್ಟಿಕೊಡುತ್ತಾ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ನಿಲ್ಲಿಸುತ್ತಾರೆ.

ಗೋಕುಲದ ತುಂಟ ಕೃಷ್ಣ ಇವರ ಕಥೆಯಲ್ಲಿ ರಾಸಲೀಲೆಯಾಡುವ ಎಳೆಯ ಹದಿ ವಯಸ್ಸಿನ ಪೋರನೇ. ಹಾಲು ಬೆಣ್ಣೆ ಕದಿಯುವ, ಚಿಣ್ಣಿ-ದಾಂಡು ಆಡುವ ಕೊಳಲೂದಿ ದನಗಳನ್ನು ಕರೆಯುವ ಈ ಬಾಲಕೃಷ್ಣ ಹದಿಮೂರು ಹದಿನಾಲ್ಕು ವಯಸ್ಸಿನ ತರುಣ. ಅಂತೆಯೇ ಇಲ್ಲಿಯ ರಾಧೆಯೂ. ಅಂದಿನ ಕಾಲಕ್ಕೆ ತಕ್ಕಂತೆ, ಹೆತ್ತವರ ಕಣ್ಣಲ್ಲಿ ಮದುವೆಯ ವಯಸ್ಸಿಗೆ ಬಂದಿದ್ದ, ಮನೆಗೆಲಸ ಎಲ್ಲವನ್ನೂ ಚುರುಕಾಗಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದ ಹನ್ನೊಂದು-ಹನ್ನೆರಡರ ತರುಣಿ. ಇವರಲ್ಲಿ ಸಹಜವಾಗಿಯೇ ಅನುರಾಗ ಮೂಡುವಂತೆ ಸನ್ನಿವೇಶಗಳು ಹೆಣೆದುಕೊಳ್ಳುತ್ತವೆ. “ನಾನೇನೂ ನನ್ನಮ್ಮನಿಗೆ ಬಾಯಲ್ಲಿ ಬ್ರಹ್ಮಾಂಡವನ್ನು ತೋರಲಿಲ್ಲ; ನಾ ತಿಂದಿದ್ದ ಮಣ್ಣಿನ ಮುದ್ದೆ ದೊಡ್ಡದಾಗಿಯೇ ಇತ್ತು, ಅದು ಅವಳಿಗೆ ವಿಶ್ವದಂತೆ ತೋರಿತ್ತು. ಮಣ್ಣಿನಿಂದಲೇ ಬ್ರಹ್ಮಾಂಡವಲ್ಲವೆ?” ಅನ್ನುವ ತರುಣನ ಸಹಜ ಮಾತುಗಾರಿಕೆಗೆ ರಾಧೆಯಂತೆಯೇ ನಾವೂ ಬೆರಗಾಗಬಹುದು. “ಮೃಣ್ಮಯವೀ ಜಗತ್- ಅನ್ನುವ ಸತ್ಯವನ್ನು ಎಷ್ಟು ಸರಳವಾಗಿಯೇ ತೋರಿಸಿದ್ದಾರೆ” ಎಂದು ತಲೆದೂಗಬಹುದು. ಭೈರಪ್ಪನವರ ಪರ್ವದ ಕೃಷ್ಣನಂತೆಯೇ ಈತನ ಮಾನವೀಯ ಗುಣಗಳನ್ನು ಸುಲಭವಾಗಿ ಗುರುತಿಸಿ ಕಂಡುಕೊಳ್ಳಬಹುದು.

ಕೊನೆಯಲ್ಲಿ ಗೋಕುಲ ತೊರೆಯುವ ಕೃಷ್ಣನ ತುಮುಲ, ತದನಂತರ ರಾಧೆಯ ಅಳಲು ಓದುಗರ ಮನ ಕರಗಿಸುತ್ತವೆ. ಇದೇ ಹಿನ್ನೆಲೆಯಾಗಿರಿಸಿಕೊಂಡು ಹಲವಾರು ಕವಿತೆಗಳು ಬೇರೆ ಬೇರೆ ಕವಿಗಳಿಂದ ಬಂದಿದ್ದರೂ, ಗದ್ಯರೂಪದಲ್ಲಿ ರಾಧೆಯ ಕಡೆಗೊಂದು ನೋಟವಿಟ್ಟ ಈ ಕಾದಂಬರಿ, ಪುಟ್ಟ ಊರೊಂದರ ಯಾವುದೇ ರಾಧೆಯ, ಯಾವುದೇ ಕೃಷ್ಣನ ಕಥೆಯೂ ಆಗಬಹುದು ಎನ್ನುವಷ್ಟು ಆಪ್ತವಾಗುತ್ತದೆ.

ಕಾದಂಬರಿಯಲ್ಲಿ ದೋಷಗಳೇ ಇಲ್ಲವೆಂದಲ್ಲ. ಒಂದೆರಡು ಕಡೆ ಕಥನ ಬರಹಗಾರನ ಲೇಖನಿಯಿಂದ ಹಾರಿ ಆತನ ವೈಚಾರಿಕತೆಯ ಹಳಿಗೆ ಸಿಕ್ಕುತ್ತದೆ. ಸರಳವಾದ ನಿರೂಪಣೆಯಲ್ಲಿ ಲೇಖಕನ ಒಗ್ಗರಣೆಯೂ ಒಮ್ಮೊಮ್ಮೆ ಬೆರೆತಿದೆ. ಅಂತಹ ಒಂದು ಪ್ರಸಂಗ ಎರಡನೆಯ ಅಧ್ಯಾಯದ ಕೊನೆಯ ವಾಕ್ಯಗಳಲ್ಲಿ ಬರುತ್ತದೆ. ಸರಾಗವಾಗಿ ಸಾಗುತ್ತಿದ್ದ ನಿರೂಪಣೆಯಲ್ಲಿ ಲೇಖಕನ ವೈಚಾರಿಕತೆಯ ವಿವರಣೆ ನುಸುಳಿದೆ. ಅದು ಓದುಗನನ್ನು ಕಥನದಿಂದ ವಿಶ್ಲೇಷಣೆಯ ನೆಲೆಗೆ ಒಯ್ಯುತ್ತದೆ. ಸಹಜ-ಸರಳ ಕಥಾನಕದಲ್ಲಿ ಲೇಖಕನ ಮುಖ ಕಾಣುವುದು ನನಗೆ ಸರಿಕಾಣಲಿಲ್ಲ. ಹಾಗೇನೇ ಹನ್ನೊಂದರ ಬಾಲೆಯನ್ನು ಮೈ ತುಂಬಿಕೊಂಡ ಪ್ರೌಢ ತರುಣಿಯಂತೆ ಚಿತ್ರಿಸಿದ್ದೂ ಸಮಂಜಸವೆಂದು ನನಗನಿಸಲಿಲ್ಲ.

ಐತಾಳರ ಇನ್ನೊಂದು ಪುಸ್ತಕ- ಒಂದಾನೊಂದು ಕಾಲದಲ್ಲಿ- ಕಟ್ಟು ಕಥೆಗಳ ಸಂಗ್ರಹ. ಇದರ ಬಗ್ಗೆ ಹೆಚ್ಚು ಹೇಳುವುದೇ ಬೇಕಾಗಿಲ್ಲ. ಶ್ರೀಯುತ ರಾಜಗೋಪಾಲರ ತಾಯಿಯವರಿಗೆ ಡಿ.ವಿ.ಜಿ.ಯವರು ಹೇಳಿದ್ದಂತೆ, ಮಕ್ಕಳಿಗೆ ಕಥೆ ಹೇಳುವಂಥ ದೇವರು ಮೆಚ್ಚುವ ದೊಡ್ಡ ಕೆಲಸವನ್ನು ಐತಾಳರು ಮಾಡಿದ್ದಾರೆ. ಈ ಕಥೆಗಳನ್ನು ಓದುತ್ತಿದ್ದಂತೆ ನಮ್ಮನ್ನು ನಮ್ಮ ಅಜ್ಜಿ-ಅಜ್ಜನ ಮನೆಯ ಪಡಸಾಲೆಗೋ ಜಗಲಿಗೋ ಕೊಂಡೊಯ್ಯುವ ಕಾಲಮಾಂತ್ರಿಕ ಶಕ್ತಿ ಇಲ್ಲಿನ ಕಥೆಗಳಿಗಿವೆ. ಇಂದಿಲ್ಲಿ ಸೇರಿರುವ ನಾವೆಲ್ಲರೂ ಮನೆಯಲ್ಲಿ ಚಿಕ್ಕ ಮಕ್ಕಳು ಅಥವಾ ಮೊಮ್ಮಕ್ಕಳನ್ನು ಹೊಂದಿರುವವರೇ. ನಾವೆಲ್ಲರೂ ನಮ್ಮ ಮನೆಯ ಪುಟಾಣಿಗಳಿಗೆ ಹೇಳಬೇಕಾದ ಕಥೆಗಳ ಅಮೂಲ್ಯ ಸಂಗ್ರಹ ಇದೆಂದು ನನ್ನ ಅಭಿಮತ. ಮಕ್ಕಳ ಕೋಣೆಯ ಪುಸ್ತಕ ಕವಾಟಿನಲ್ಲಿ ಇದರದೊಂದು ಪ್ರತಿಯಿರಲಿ. ಮಲಗುವ ಮುನ್ನ ಮಕ್ಕಳಿಗೆ ಒಂದಾದರೂ ಕಥೆಯನ್ನು ಈ ಪುಸ್ತಕದಿಂದ ಓದಿ ಹೇಳಿ. ಆಗಲೇ ಇದಕ್ಕೆ ಸಂಪೂರ್ಣ ಅರ್ಥ ದೊರಕುತ್ತದೆ.

ಹಿರಿಯರಾದ ಐತಾಳರ ಎರಡು ಕೃತಿಗಳನ್ನು ಓದಿ ನಿಮ್ಮೊಡನೆ ನನ್ನ ಅಭಿಪ್ರಾಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಕನ್ನಡ ಸಾಹಿತ್ಯ ರಂಗದ ಪದಾಧಿಕಾರಿಗಳಿಗೆ ನಮನಗಳು. ತನ್ನ ಕಾರ್ಯಕ್ರಮದಲ್ಲಿ ನಾನು ಇರಲೇಬೇಕೆಂದು ಪಟ್ಟು ಹಿಡಿದು ನನ್ನನ್ನು ಒಪ್ಪಿಸಿ ಈ ಕೆಲಸ ನನಗೆ ಅಂಟಿಸಿದ ಗೆಳತಿ ತ್ರಿವೇಣಿಗೂ ನನ್ನ ಅನಂತ ವಂದನೆಗಳು. ಕೇಳಿದ ನಿಮಗೆಲ್ಲ ಧನ್ಯವಾದಗಳು.

 

 Posted by at 6:24 PM