Jul 022009
 

Triveni Shreenivasa Rao

 

ಕೃತಿ : ತುಳಸಿವನ
ಲೇಖಕಿ : ತ್ರಿವೇಣಿ ಶ್ರೀನಿವಾಸ ರಾವ್
ವಿಮರ್ಶೆ: ಮಧು ಕೃಷ್ಣಮೂರ್ತಿ 

 

ತ್ರಿವೇಣಿ ಶ್ರೀನಿವಾಸ ರಾವ್ ಬರೆದ ತುಳಸಿವನ ಎಂಬ ಶೀರ್ಷಿಕೆ ಉಳ್ಳ ಪುಸ್ತಕ ನನ್ನ ಕೈ ತಲುಪಿದಾಗ ಮನಸ್ಸಿನ ಆಳದೆಲ್ಲೆಲ್ಲೊ ಅಡಗಿದ್ದ ಚಿತ್ರ ಮೂಡಿಬಂದಿತು. ಅದು ಬೆಂಗಳೂರಿನಲ್ಲಿ ಬೆಂ. ವಾಹನ ನಿಲ್ದಾಣದ ಬಳಿ ಇರುವ ತುಳಸಿತೋಟ. ಈ ತೋಟದ ಬಳಿ ನಾನು ಅನೇಕ ಬಾರಿ ರಾಜಾಜಿನಗರದ ಕಡೆ ಹೋಗುವ ಬಸ್ಸಿಗಾಗಿ ಕಾದಿದ್ದೇನೆ. ಆಗೆಲ್ಲ ನಾನು ನನ್ನ ಬೆನ್ನ ಹಿಂದೆ ಇದ್ದ ತುಳಸಿತೋಟದ ಕಡೆ ಆಸಕ್ತಿಯಿಂದ ನೋಡುತ್ತಿದ್ದೆ. ಆ ಉದ್ಯಾನವನದ ವಿಶೇಷವೇನೆಂದರೆ ರಸ್ತೆಗಿಂತಲೂ ಅದು ತಗ್ಗಿನ ಭಾಗದಲ್ಲಿತ್ತು. ಇಳಿದು ಹೋಗಲು ಮೆಟ್ಟಲು ಇದ್ದವು. ಕೆಳಗಿಳಿದು ಹೋಗಿ ಉದ್ಯಾನವನದಲ್ಲೇನಿದೆ ಎಂದು ನೋಡಬೇಕು ಎಂದು ಅನೇಕ ಬಾರಿ ಅನಿಸಿದ್ದರು ಬೀಟಿ‌ಎಸ್ ಬಸ್ಸು ಹಿಡಿಯುವ ಸಾಹಸ ಹೆಚ್ಚಿನ ಆದ್ಯತೆ ಪಡೆದು ಅದಕ್ಕೆ ಅವಕಾಶ ನೀಡಿರಲಿಲ್ಲ. ನನಗೆ ಆ ಕೂತೂಹಲಕಾರಿ ಉದ್ಯಾನವನದ ಬಗ್ಗೆ ಮನಸಲ್ಲೆ ಇದ್ದ ರಮ್ಯ ಕಲ್ಪನೆ ತ್ರಿವೇಣಿ ಅವರ ತುಳಸಿವನ ಓದುವಾಗ ಮತ್ತೆ ಮೂಡಿಬಂದಿತು. 

ತಮ್ಮ ಬೇರುಗಳೊಂದಿಗೆ ಸಂಪರ್ಕ ಕಳೆದುಕೊಂಡ ಅನಿವಾಸಿಗಳಿಗೆ ತುಳಸಿವನದಲ್ಲಿ ತ್ರಿವೇಣಿ ಅವರು ತಮ್ಮ ಅಗಾಧ ಭಾವಕೋಶದಿಂದ ತೆಗೆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಾರಂಭದ ಲೇಖನಗಳು ನಮ್ಮನ್ನು ಚಿಕ್ಕಮಗಳೂರಿನ ವಾತಾವರಣಕ್ಕೆ ಕರೆದೊಯ್ದು ತಾರೆಗಳ ತೋಟದಲ್ಲಿ ಬೇರೂರಿಸುವ ಮೂಲಕ ನಮ್ಮನ್ನು ಸ್ಥಿರವಾಗಿ ಪುಸ್ತಕದಲ್ಲಿ ಸ್ಥಾಪಿಸಿಬಿಡುತ್ತದೆ. ತ್ರಿವೇಣಿ ಅವರು ಈ ಸಂಕಲನದಲ್ಲಿ ಬರೆದಿರುವ ವಿಷಯಗಳ ಪಟ್ಟಿ ಬಹಳ ದೊಡ್ಡದು. ಬಾಲ್ಯದ ಜೀವನ, ಸಿನೆಮ, ಸಂಗೀತವಷ್ಟೇ ಇಲ್ಲ, ಸಾಹಿತ್ಯ, ರಾಜಕೀಯ, ಅಮೇರಿಕದ ಜೀವನ, ಕನ್ನಡ ಮತ್ತು ಹಿಂದಿ ಸಿನಿಮ, ಒಲವು ಮತ್ತು ಹಸನಾದ ಜೀವನಕ್ಕೆ ಬೇಕಾದ ಹಲವಾರು ಹಿತನುಡಿಗಳು ಈ ಸಂಕಲನದಲ್ಲಿ ಹೇರಳವಾಗಿ ಕಾಣಬಹುದು. ಇಷ್ಟೆಲ್ಲ ಅನುಭವಗಳನ್ನು ಪಡೆದಿರುವ ತ್ರಿವೇಣಿ ಅವರ ಜೀವನ ಪ್ರೀತಿ ಈ ಸಂಕಲನದಲ್ಲಿ ಪ್ರತಿಯೊಂದು ಲೇಖನದಲ್ಲೂ ಎದ್ದು ಕಾಣುತ್ತದೆ.

ಇಲ್ಲಿಯ ಲೇಖನಗಳಲ್ಲಿ ತ್ರಿವೇಣಿ ಅವರು ತಮ್ಮನು ಕಾಡುವ ಅನೇಕ ಬಾವನೆಗಳನ್ನು ಹೊರತಂದಿದ್ದಾರೆ.   ಶಿಕಾಗೊಗೆ ಮತ್ತೆ ವಸಂತ ಬಂದ ಲೇಖನದಲ್ಲಿ ನಿಸರ್ಗದ ಬಗ್ಗೆ ಕಾವ್ಯಮಯ ಬರಹವಿದ್ದರೆ ಅದರ ಹಿಂದೆಯೆ “ಬೆನ್ನು ತಟ್ಟಬೇಕಾದವರೆ ಬೆನ್ನಿಗೆ ಬರೆ” ಹಾಕಿದರೆ ಆಗುವ ಸಾತ್ವಿಕ ಸಿಟ್ಟಿನಿಂದ ಬರೆದ ಲೇಖನ ದಿಟ್ಟತನದಿಂದ ಕೂಡಿದೆ. ಯವ್ವನ್ನದ ಹುಚ್ಚು ಖೋಡಿಯ ಮನಸ್ಸಿನಲ್ಲಿ ಏಳುವ ನೂರಾರು ಭಾವನೆಗಳನ್ನು ಸರಳವಾಗಿ ಮತ್ತು ಮುಕ್ತವಾಗಿ ಚರ್ಚಿಸುವುದಷ್ಟೇ ಅಲ್ಲದೆ, ಅ ಭಾವನೆಗಳ ರಭಸಕ್ಕೆ ದುಡುಕಿ ತೇಲಿಹೋಗುವ ಯುವ ಪ್ರೇಮಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೊಸ ಸಂಸ್ಸೃತಿಯನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವುದನ್ನು ಕ್ರಿಸ್ಮಸ್ ಬಗೆಗಿನ ಲೇಖನದಲ್ಲಿ ಕಾಣಬಹುದು. ಕನಸುಗಾರ ರವಿಚಂದ್ರನ್ ಬಗ್ಗೆ ಬರೆದಿರುವ ಲೇಖನದಲ್ಲಿ, ತ್ರಿವೇಣಿಯವಗಿರುವ ಕನ್ನಡದ ಬಗೆಗಿನ ಭವ್ಯ ಕನಸ್ಸಿನ ಪರಿಚಯವಾಗುತ್ತದೆ.  ಎಲ್ಲಿಯೂ ಭೋದನೆ ಮಾಡದೆ ತಮ್ಮ ನಿಲುವುಗಳ ಬಗ್ಗೆ ಬರೆದಿರುವುದು ಮೆಚ್ಚಬೇಕಾದ ಅಂಶ.

ನಿನ್ನ ಮನಸೇ ಮಾನಸ ಸರೋವರ ಎಂಬ ಲೇಖನ ಪುಟ್ಟಣನವರ ಚಿತ್ರದ ಕಲೆಗಾರಿಕೆಯ ಬಗೆಗಷ್ಟೇ ಅಲ್ಲದೇ ಮಾನಸಿಕ ಆರೋಗ್ಯದ ಬಗ್ಗೆ ಉತ್ತಮ ವಿಶ್ಲೇಶಣೆಯಾಗಿದೆ. ವಟಾರದ ಮನೆಯ ಜೀವನದ ಬಗ್ಗೆ ಬರೆದಿರುವ ಲೇಖನ ಜನಸಾಮಾನ್ಯನ ಜೀವನವನ್ನು ಪ್ರತಿಬಿಂಬಿಸುತ್ತದೆ. ತಮ್ಮ ಸ್ವಂತ ಅನುಭವದಿಂದ ನೆರೆಟ್ ಮಾಡಿರುವುದು ಬಹಳ ಆತ್ಮೀಯತೆಯಿಂದ ಕೂಡಿದೆ. ಈ ವಟಾರದ ಮನೆಯ ಬಗ್ಗೆ ಬರೆಯುವಾಗ ಲೇಖಕಿ ಗಣೇಶನ ಮಧುವೆ ಚಿತ್ರ ನೆನೆಪಿಸಿಕೊಳ್ಳುವುದು ಮತ್ತು ವಟಾರ ಜೀವನದ ಧ್ಯೇಯವೆಂಬಂತಿರುವ “ಎಲ್ಲ ಮನೆಗೂ ಒಂದೇ ಮೀಟರ್ ಎಲ್ಲರಿಗೊಂದೇ ನಲ್ಲಿ ವಾಟರ್” ಎಂಬ ಈ ಸಾಲು ಮಾತು ಹೇಳುವುದು ಖುಷಿ ಕೊಡುತ್ತದೆ.

ಹೆಣ್ಣಿನ ಜಡೆಯನ್ನು ವಸ್ತುವಾಗಿಟ್ಟುಕೊಂಡ  ಶಿವರುದ್ರಪ್ಪನವರ ಕವಿತೆ ಒಂದೆಡೆಯಾದರೆ ಲೇಖಕಿಯ ಬಾಲ್ಯದ ನೆನಪು ಇನ್ನೊಂದೆಡೆ. ಚಿಕ್ಕವರಾಗಿದ್ದಾಗ  ತ್ರಿವೇಣಿಯವರಿಗೆ ಎರಡು ಜಡೆ ಇರುವುದರಿಂದ ಅವರ ಪ್ರಾಥಮಿಕ ಶಾಲೆಯ ಗುರುಗಳು ಟುವೇಣಿ ಎಂದು ಕರೆದಿದ್ದ ವೃತ್ತಾಂತದಿಂದ ಓದುಗರಿಗೂ ತಮ್ಮ ಬಾಲ್ಯದ ನೆನೆಪುಗಳನ್ನು ಕೆದೆಕಿದ್ದಾರೆ. ಪ್ರೀತಿಯ ಬಗ್ಗೆ ವ್ಯಾಲಂಟೈನ್ಸ್ ದಿನದ ಬಗ್ಗೆ ಬರೆಯುವಾಗ ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ತ್ರಿವೇಣಿ ಈ ಮಾತನ್ನು ಉಲ್ಲೇಖಿಸುತ್ತಾರೆ. “ಓರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ, ಎಲ್ಲಾ ಸುಂದರವೆಂದು ನೋಡೊ ಒಳಗಣ್ಣೆ ಪ್ರೀತಿ”. ಇದು ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ನಾನು ಓದಿದ್ ಅತ್ಯಂತ ಸಮರ್ಪಕವಾದ ಉತ್ತರ.

ತ್ರಿವೇಣಿ ಅವರು ಇಲ್ಲಿ ಕೇವಲ ಹಳೆ ನೆನಪುಗಳನ್ನು ಮೆಲಕು ಹಾಕುತ್ತ ಹಿಂದಿನ ದಶಕದಲ್ಲಿ ತಟಸ್ತರಾಗಿಲ್ಲ. ಇಂದಿನ ಕನ್ನಡ ಚಲನಚಿತ್ರದ ಟ್ರೆಂಡಿಗೂ ಸ್ಪಂದಿಸಬಲ್ಲ ಆಸಕ್ತಿ ಮತ್ತು ಅರಿವು ತ್ರಿವೇಣಿ ಅವರಿಗೆ ಇರುವುದು ಸಂತಸದ ವಿಷಯ. ಜಿ‌ಎಸೆಸ್ ಕವಿತೆ, ಮೈಸೂರು ಮಲ್ಲಿಗೆ ಮತ್ತು ಲಕ್ಷ್ಮಿನಾರಾಯಣ ಭಟ್ಟರ ಕವಿತೆಗಳನ್ನು ಉಲ್ಲೇಖಿಸುವಷ್ಟೆ ಸುಲಭವಾಗಿ, ದರ್ಶನ್ ನಟನೆಯ ಇತ್ತೀಚಿನ ರೌಡಿ ಚಿತ್ರಗಳ ಬಗ್ಗೆಯೂ ವ್ಯಾಖ್ಯಾನ ನೀಡಿದ್ದಾರೆ. ಮೆಂಟಲ್ ಮಂಜ, ಮೆಜೆಸ್ಟಿಕ್, ಕರಿಯ ಸಿನಿಮಗಳ ಬಗ್ಗೆ ಬರೆಯುತ್ತ “ಮೀಟರಿನಲ್ಲಿ ಯಾರಿಗೈತೆ ನನ್ನ ಮುಂದೆ ಶಿಷ್ಯ.” ಎಂಬಂತ ಖತರ್ನಾಕ್ ಡೈಲಾಗುಗಳನ್ನೂ ಇಲ್ಲಿಯ ಲೇಖನದಲ್ಲಿ ನಾವು ಕಾಣಬಹುದು. 

ಮಾತು ಮನುಷ್ಯ ಜೀವಿಗಳ ನಡುವೆ ಇರಬೇಕಾದ ಒಂದು ಆರೋಗ್ಯಕರ ಪ್ರಕ್ರಿಯೆ. ಸಂತೋಷ ಹಂಚಿಕೊಂಡಾಗ ಇಮ್ಮಡಿಯಾಗುವುದು ಮತ್ತು ಸಂಕಟದ ಹೊರೆ ಕಡಿಮೆಯಾಗುವುದು ತಿಳಿದ ವಿಷಯ. ಬರಿ ಮಾತಷ್ಟೇ ಅಲ್ಲದೆ ಹರಟೆಯ ಅಗತ್ಯವನ್ನೂ ತೋರಿಸುವ ಲೇಖನದಲ್ಲಿ ಮತ್ತೆ ಲೇಖಕರು ಅನೇಕ ಉದಾಹರಣೆಗಳನ್ನು ನೀಡಿರುವುದು ನೆನೆಪನ್ನು ಕೆದಕುತ್ತದೆ. ಹಬ್ಬ ಹರಿದಿನಗಳಲ್ಲಿ ಊಟವಾದ ನಂತರೆ ಅಥಿತಿಗಳೊಂದಿಗೆ ಒಂದೆಡೆ ಕಲೆತು ತಾಂಬೂಲ ಮೆಲ್ಲುತ್ತ ಪಟ್ಟಾಂಗಕ್ಕೆ ರಂಗೇರಿಸುವುದು, ಹಳ್ಳಿಗಳಲ್ಲಿ ಕಾಣಬಹುದಾದ ಸೋಮಾರಿ ಕಟ್ಟೆ, ಎ. ಎನ್ ಮೂರ್ತಿರಾಯರ ಹರಟೆಯ ಪ್ರಬಂಧಗಳು ಮತ್ತು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಎ. ಎಸ್ ಮೂರ್ತಿಯವರ “ಮನೆ ಮಾತಿನಲ್ಲಿ” ಎಡವಟ್ಟಿನ ಈರಣ್ಣ “ಕಾಪಿ ಓ ಮರ್ತೆ ಬಿಟ್ಟೆ” ಎಂದು ಕಾರ್ಯಕ್ರಮ ಮುಕ್ತಾಯವಾಗುದು ಸುಖ ಎಲ್ಲಾರಿಗು ಎಲ್ಲೈತವ್ವ ಲೇಖನದಲ್ಲಿ ಸುಖ ಎಂದರೇನು ಎಂಬ ಗಂಭೀರ ವಿಷಯದ ಬಗ್ಗೆ ಸ್ಪಷ್ಟವಾದ ಕಲ್ಪನೆ ಇಲ್ಲದೆ ಸುಖದ ಹುಡುಕಾಟ ನಿರಂತರವಾಗಿರುವುದನ್ನು ವಿವರಿಸುತ್ತಾರೆ. ಅನಿವಾಸಿಗಳನ್ನು ಕಾಡುವ ಈ ಸುಖ ಇಲ್ಲದಿರುವಿಕೆಗೆ ಬರುವ ಪ್ರತಿಕ್ರಿಯೆ “ಕೂತು ತಿಂದರೂ ಕರಗದಷ್ಟು ಇರೋವಾಗ ನಿಂಗೇನು ಧಾಡಿ”. ಆದರೆ ಪಾದರಕ್ಷೆ ತೊಟ್ಟವನಿಗೆ ಅದು ಎಲ್ಲಿ ಕಚ್ಚುತ್ತಿದೆ ಎಂಬ ಅರಿವಿರುವುದು ಎಂದು ಹೇಳಿರುವುದು ಸತ್ಯವೆನಿಸುತ್ತದೆ.

ತ್ರಿವೇಣಿ ಅವರ ಈ ಸಂಕಲನದಲ್ಲಿ ಲೇಖಕಿ ತಾನು ಕಂಡ ಜೀವನದ ಅನುಭವಗಳನ್ನನ್ನು ಹಂಚಿಕೊಂಡಿದ್ದಾರೆ.  ಅಷ್ಟಲ್ಲದೆ ಆಧುನಿಕ ಬೆಳವಣಿಗೆಗಳೊಂದಿಗೆ ಹೊಂದಿಕೊಳ್ಳುವ ಮನೋಭಾವ ಮತ್ತು ಆಶಾವಾದ ಈ ಲೆಖನಗಲ್ಲಿ ವ್ಯಕ್ತವಾಗಿದೆ.  ಇಲ್ಲಿ ಕಾಣುವ ಒಂದು ಕೊರತೆ ಏನೆಂದರೆ ಅನೇಕ ಲೇಖನಗಳು ಅವೇ ವಿಷಯಗಳನ್ನು ಪುನರಾವರ್ತನೆಗೊಳ್ಳುತ್ತಿದೆಯೊ ಎನಿಸುತ್ತದೆ.  ಒಂದೇ ಪುಸ್ತಕಕ್ಕೆ ೬೭ ಲೇಖನಗಳು ತುಸು ಜಾಸ್ತಿಯಾದಂತಿದೆ. ಹದಿನೈದಿಪ್ಪತ್ತು ಲೇಖನಗಳಿರುವಂತಾದರೆ ತುಳಸಿವನ  ಹೆಚ್ಚು ಆಕರ್ಷಕವಾಗಬಹು. ತ್ರಿವೇಣಿಯವರೆ ಬರೆದ ಈ ಕವಿತೆ ಈ ಸಂಕಲನದಲ್ಲಿದ್ದು ಅನೇಕ ಲೇಖನಗಳಿಗೆ ತಳಹದಿಯಾಗಿದೆ ಎಂದೆನಿಸುತ್ತದೆ. ಆ ಕವಿತೆ ಇಲ್ಲಿದೆ :-

ಇನಿಯ, ನನ್ನ ಕಣ್ಣುಗಳು
ವಿಕಸಿತ ಕಮಲವಲ್ಲ,
ಪ್ರಶಾಂತ ತಿಳಿಗೊಳವಲ್ಲ,
ಮಿನುಗುವ ನಕ್ಷತ್ರಗಳಲ್ಲ,
ಫಳಗುಟ್ಟುವ ಮೀನೂ ಅಲ್ಲ,
ಅದು ಕೇವಲ ನಿನ್ನೊಲವ
ಪ್ರತಿಫಲಿಸುವ
ಕನ್ನಡಿ ಮಾತ್ರ”

 Posted by at 6:45 PM